ಎಕ್ಕುಂಡಿ ಬೊಚ್ಚು ಬಾಯಿಯ ತುಂಬಾ ನಗೆ ಬೀರುತ್ತಾ ನಮ್ಮೆದುರು ಇದ್ದಾರೆ ಎಂದೇ ಅನಿಸುತ್ತಿದೆ. ಬಂಕಿಕೊಂಡ್ಲದ ಶಾಲಾ ಮಾಸ್ತರ್ ಆಗಿದ್ದ ಎಕ್ಕುಂಡಿ ಹಾಲಕ್ಕಿ ಒಕ್ಕಲಿಗರ ಎದೆಯಾಳದಿಂದ ಚಿಮ್ಮುತ್ತಿದ್ದ ಹಾಡುಗಳಿಗೆ ಕಿವಿಯಾದರು. ಅವರ ತಲ್ಲಣಗಳಿಗೆ ಬೆಂದರು. ಎಕ್ಕುಂಡಿ ಕಾವ್ಯ ಲೋಕದೊಳಕ್ಕೆ ನಡೆದು ಬಂದದ್ದು ಹೀಗೆ. ದುಃಖದ ಸರಮಾಲೆ ಹೊತ್ತು. ನೊಂದವರ ನಿಟ್ಟುಸಿರುಗಳ ಮೆರವಣಿಗೆ ಮಾಡಿಸುತ್ತಾ…
ಸುಬ್ಬಣ್ಣ ರಂಗನಾಥ ಎಕ್ಕುಂಡಿ ಈಗಿಲ್ಲ. ಆದರೆ ಈಗಲೂ ಮತ್ತೆ ಮತ್ತೆ ನೆನಪಾಗುವ ಅವರ ಕವಿತೆಗಳಿವೆ. ಎಕ್ಕುಂಡಿ ಅವರ ಎಲ್ಲಾ ಕವಿತೆಗಳನ್ನು ಗೊಂಚಲಾಗಿ ಮಾಡಿ ನಮ್ಮ ಕೈಗಿಡುವ ಉತ್ಸಾಹಕ್ಕೆ ‘ಸಂಚಯ’ದ ಪ್ರಹ್ಲಾದ್ ಮುಂದಾಗಿದ್ದಾರೆ.
ಇತ್ತೀಚೆಗೆ ಸಂಚಯ ಸಾಹಿತ್ಯ ಪತ್ರಿಕೆ ೭೫ ನೆ ಸಂಚಿಕೆಯಾಗಿ ಕಾಲಿಟ್ಟಿತು. ಅದನ್ನು ಡಿ ವಿ ಪ್ರಹ್ಲಾದ್ ೭೫ ಕವಿಗಳ ಕವಿತಾ ಗುಚ್ಚ ನೀಡುವುದರ ಮೂಲಕ ಅರ್ಥಪೂರ್ಣವಾಗಿಸಿದರು. ಪ್ರಹ್ಲಾದರು ಪುಸ್ತಕ ತರುವಲ್ಲಿ ತೋರುವ ಅಚ್ಚುಕಟ್ಟುತನ ಎಂತವರನ್ನೂ ನಿಬ್ಬೆರಗಾಗಿಸುತ್ತದೆ.
ಎಕ್ಕುಂಡಿ ಅವರ ಸಮಗ್ರ ಕಾವ್ಯವೂ ಹಾಗೆಯೇ ಸುಂದರವಾಗಿ, ಇದು ನಮ್ಮ ಮನೆಯಲ್ಲಿರಬೇಕು ಎನ್ನುವಂತೆ ಖಂಡಿತಾ ತರುತ್ತಾರೆ. ೫೦೦ ಪುಟಗಳ ಈ ಪುಸ್ತಕವನ್ನು ಒಬ್ಬ ಉತ್ಸಾಹಿ ತರುವುದು ಸುಲಭವಲ್ಲ. ಇದಕ್ಕೆ ನಾವೆಲ್ಲಾ ಕೈ ಜೋಡಿಸಿದರೆ ಹೇಗೆ. ತಾಖತ್ತಿರುವ ಹಾಗೂ ಅಂತಃಕರಣವಿರುವ ನೀವು ಖಂಡಿತಾ ಅದಕ್ಕೆ ನೆರವಾಗಬಲ್ಲಿರಿ. ಧನ ಸಹಾಯ ಮಾಡಿ ಇಲ್ಲವೇ ಈಗಲೇ ಎಕ್ಕುಂಡಿ ಪುಸ್ತಕದ ಸಾಕಷ್ಟು ಪ್ರತಿಗಳಿಗೆ ಮುಂಗಡ ಕೊಡಿ. ೩೫೦ ರೂ. ನ ಈ ಪುಸ್ತಕ ಪ್ರಕಟನಾಪೂರ್ವವಾಗಿ ೨೫೦ ಕ್ಕೆ ಸಿಗುತ್ತದೆ.
ಸಂಪರ್ಕಿಸಿ:
ಡಿ ವಿ ಪ್ರಹ್ಲಾದ್
ಸಂಚಯ
೧೦೦, ಎರಡನೆ ಮುಖ್ಯ ರಸ್ತೆ, ಬನಶಂಕರಿ ಮೂರನೇ ಹಂತ
ಮೂರನೇ ಘಟ್ಟ, ಬೆಂಗಳೂರು-೫೬೦೦೮೫
ದೂರವಾಣಿ: ೯೮೪೪೦ ೬೩೫೧೪





0 Comments