ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಊರು ಬದಲಾಯಿಸೋದಿದೆಯಲ್ಲ, ಲೇಖಕನಿಗೆ ಅದು ಮುಖ್ಯ

ಕುಂ ವೀರಭದ್ರಪ್ಪ

kum vi in dhotiನಾನಿದ್ದ ಹಳ್ಳಿಗಳ ಕಡೆ ಗೌಡರು ಯಾವತ್ತೂ ಸುಳ್ಳು ಹೇಳೋದಿಲ್ಲ ಅನ್ನೋ ನಂಬಿಕೆ ಜನರಲ್ಲಿತ್ತು. ಅಲ್ಲಿ ಒಂದು ಚಪ್ಪರ ಚೆನ್ನಪ್ಪನ ಗುಂಡು ಅಂತ ಇತ್ತು. ಸುಮಾರು 200 ಕೆ.ಜಿ. ತೂಕದ್ದು. ಅದನ್ನು ಎತ್ತಿದವರಿಗೆ ಬೆಳ್ಳಿ ಕಡಗ ಬಹುಮಾನ ಅನ್ನೋ ಸವಾಲು ಅಲ್ಲಿತ್ತು. ಆ ಕಡಗ ಗೌಡರ ಹತ್ರ ಇತ್ತು. ಆದವಾನಿಗೆ ನಾನು ಹೋಗಿದಾಗ ಅಲ್ಲೊಬ್ಬ ಹುರುಳಿ ಚೀಲ ಎತ್ತಿದ್ದನ್ನ ನೋಡಿ ಅವನನ್ನು ಗುಂಡು ಎತ್ತಲು ಕರೆದುಕೊಂಡು ಬಂದೆ. ಅವನು ಅದಕ್ಕೆ ಎಣ್ಣೆ ಸವರಿ ಒಂದೇ ಸರ್ತಿಗೆ ಎತ್ತಿಬಿಟ್ಟ. ಎತ್ತಿಕೊಂಡು ಊರೆಲ್ಲ್ ಒಂದು ಸುತ್ತು ಬಂದ. ಆಗ ನಾನು ಹೇಳ್ದೆ- ಗೌಡ್ರೆ ಕೊಡಿ ಮತ್ತೆ ಬೆಳ್ಳಿ ಕಡಗ ಅಂತ. ಆಗ ಗೌಡ್ “ಯಾವ ಕಡಗ? ನಂಗೆ ಗೊತ್ತೇ ಇಲ್ಲ” ಅಂದುಬಿಟ್ಟ. ಜನ “ಓ ಗೌಡ್ರು ಸುಳ್ಳು ಹೆಳ್ಬಿಟ್ರು” ಅಂತಂದುಕೊಂಡ್ರು. ಗೌಡರಿಂದ ಸುಳ್ಳು ಬಂದದ್ದೇ ಆ ಊರಿನ ನಕ್ಷೇನೇ ಬದಲಾಗೋಯ್ತು. ಸುಳ್ಳು ಹೇಳೋರು ನಮ್ಮನ್ನಾಳ್ತಾ ಇದಾರೆ ಅಂತ ಜನ ಅಂದ್ಕೊಂಡ್ರು. ಅಲ್ಲಿಂದಾಚೆಗ ಗೌಡ್ರು ಏನು ಕೊಟ್ರೂ ಈಸ್ಕೋಳ್ಳುದು ಬಿಟ್ರು. ಕಾಳು ಬೇಡ, ದುಡ್ಡು ಕೊಡು ಅಂತ ಬೇಡಿಕೆಗಳನ್ನ ಇಡೋಕೆ ಶುರು ಮಾಡಿದ್ರು. ಬಹುಜನರಾಗಿದ್ದ ಶೂದ್ರರು ಗೌಡರ ವಿರುದ್ಧ ಎಲಕ್ಷ್ನ್ನಿನಲ್ಲಿ ನಿಂತು ಗೆದ್ದೂಬಿಟ್ರು. ಆ ಕಥೆ ಬರ್ದು ನಾನು ಐವತ್ತು ರೂಪಾಯಿ ತಗೊಂಡಿರಬಹುದು. ಆದ್ರೆ ಒಂದು ಊರನ್ನ ಬದಲಾಯಿಸೋದು ಇದೆಯಲ್ಲ, ಅದು ಲೇಖಕನಿಗೆ ಬಹಳ ಮುಖ್ಯ.

ದಲಿತ ಹುಡುಗರಿಗೆ ಹೆಸರೇ ಇರಲಿಲ್ಲ

ನಾನಿದ್ದ ಹಳ್ಳಿಗಳಲ್ಲಿ ಸ್ಕೂಲ್ ನಡೆಯುತ್ತಿದ್ದುದು ದೇವಸ್ಥಾನಗಳಲ್ಲಿ. ಅಲ್ಲಿಗೆ ಬಸ್ ಬರದೆ ಇರೋ ಹಾಗೆ ಅಲ್ಲಿನ ಜಮೀನ್ದಾರ್ರು ನೋಡ್ಕೊಳ್ತಿದ್ರು. ನಾನು ನಮ್ಮ ಸರ್ಕಾರಿ ಶಾಲೆಯನ್ನ ಹರಿಜನರ ಕೇರಿಗೆ ತೆಗೆದುಕೊಂಡು ಹೋದೆ. ಅಲ್ಲಿ ಸುಮಾರು 120 ಮಕ್ಕಳನ್ನು ಶಾಲೆಗೆ ಸೇರಿಸ್ಕಂಡ್ವಿ. ಅಲ್ಲಿ ಮಕ್ಕಳಿಗೆ ಹಸರೇ ಇರಲಿಲ್ಲ. ಕೊಕ್ಕ, ಬುಕ್ಕ, ಡುಮ್ಮ, ಗೊಣ್ಣಿ ಹಿಂಗೆಲ್ಲ ಕರೀತಿದ್ರು. ಒಳ್ಳೆ ಹೆಸ್ರು ಇಟ್ರೆ ಗೌಡ ಎಲ್ಲಿ ಸಿಟ್ಟಾಗ್ತನೋ ಅನ್ನೋ ಭಯ. ನಾನು ಒಬ್ಬನಿಗೆ ಸತೀಶ ಅಂತ ಹೆಸರಿಟ್ಟೆ. ಮಾರನೇ ದಿನ ಅವರಪ್ಪ ಬಂದು “ಸಾ, ಆ ಹೆಸ್ರು ಕರೆಯೋಕೆ ನಂಗೆ ನಾಚ್ಕೆ… ನನ್ನ ಹೆಂಡ್ತೀನೂ ನಾಚ್ಕೊತಾಳೆ” ಅಂದ! ಚಂದ್ರ ಅನ್ನೋನೊಬ್ಬ ನನ್ನ ಹೊಸ ಅಂಗಿ ಕೇಳ್ದ. “ನೀನು ಗೌಡನ ಎದುರಿಗೆ ಹಾಕ್ಕೊಂಡು ತಿರುಗಾಡೋದಾದ್ರೆ ಕೊಡ್ತೀನಿ” ಅಂದೆ. ಆಯ್ತು ಅಂತ ಹೇಳಿ ಈಸ್ಕೊಂಡು ಹೋದ. ಅವನ ಜೀವಮಾನದಲ್ಲಿ ಹಾಕ್ಕೊಳ್ಲಿಲ್ಲ. ಗೋಣಿಚೀಲದೊಳಗಿಟ್ಟು ಕಂಕುಳಲ್ಲಿಟ್ಕೊಂಡು ತಿರುಗಾಡೋನು… ಅಂಥಾ ಜೀವನ ಆ ಹಳ್ಳಿಗಳಲ್ಲಿ ಆಗ.

 

‍ಲೇಖಕರು admin

19 November, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading