-ಜಿ ಎನ್ ಮೋಹನ್
ಇವರು ಗೋಪಾಲ ವಾಜಪೇಯಿ. ಇವರು ಬರೆದ ನಾಟಕವನ್ನು ನೋಡುತ್ತಾ, ಇವರು ಸಿನೆಮಾಗಳಿಗೆ ಬರೆದ ಭಿನ್ನ ಹಾಡುಗಳನ್ನು ಕಿವಿದುಂಬಿಕೊಂಡು ಬೆಳೆದವನು ನಾನು. ಗೋಪಾಲ ವಾಜಪೇಯಿ ‘ದೊಡ್ಡಪ್ಪ’ ಬರೆದಾಗ, ‘ಸಂತ್ಯಾಗ ನಿಂತಾನ ಕಬೀರ’, ‘ಧರ್ಮಪುರಿಯ ಶ್ವೇತ ವೃತ್ತಾಂತ..’ ಹೀಗೆ ನಾಟಕಗಳನ್ನು ಅನುವಾದಿಸುತ್ತಾ ಹೋದಾಗ ಅವರನ್ನು ಬೆರಗಿನಿಂದ ನೋಡಿದವನು ನಾನು. ಅಂತಹ ವಾಜಪೇಯಿಯವರೊಡನೆ ಕೆಲಸ ಮಾಡುವ ಅವಕಾಶ ಕೂಡಿಬಂದಾಗ ನಾನು ಸಂತಸಗೊಂಡಿದ್ದೆ. ಈಟಿವಿ ಚಾನಲ್ ನ ನ್ಯೂಸ್ ವಿಭಾಗದ ಮುಖ್ಯಸ್ಥನಾಗಿ ನಾನು ರಾಮೋಜಿ ಫಿಲಂ ಸಿಟಿಗೆ ಹೋದಾಗ ಅಲ್ಲಿ ಮನರಂಜನಾ ವಿಭಾಗದಲ್ಲಿ ವಾಜಪೇಯಿ ಅವರು ಇದ್ದರು. ಎಷ್ಟು ಸರಳ ಬದುಕಿನ, ಮೆಲು ಮಾತಿನ, ಕಾಳಜಿಯ ಹೃದಯದ ವಾಜಪೇಯಿ ಅವರ ಸನಿಹದಲ್ಲಿದ್ದೆ ಎಂಬುದು ನನಗೆ ಖುಷಿಯ ವಿಷಯವೇ.
ಅಲ್ಲಿದ್ದಾಗ ನಾನು ಓದಿದ ಪುಸ್ತಕಗಳು ಅವರ ಕೈಗೂ, ಅವರ ಭಂಡಾರದಲ್ಲಿದ್ದ ಪುಸ್ತಕಗಳು ನನಗೂ, ನಾನು ಮಾಡಿದ ಕಾರ್ಯಕ್ರಮಗಳನ್ನು ಮೆಚ್ಚುತ್ತ ಅವರೂ, ಅವರು ‘ನಾಗಮಂಡಲ’ಕ್ಕೆ ಬರೆದ ಹಾಡುಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾ ಬದುಕು ಸಾಗಿಸಿದೆವು.
ಅಂತಹ ವಾಜಪೇಯಿ ಅವರು ಒಮ್ಮೆ ಫೋನ್ ಮಾಡಿ ನನ್ನ ಪುಸ್ತಕವೊಂದು ಮುದ್ರಣವಾಗಬೇಕು ಎಂದರು. ರಂಗಭೂಮಿಯಲ್ಲಿ ಸುದ್ದಿ ಮಾಡಿದ ಭೀಷಂ ಸಹಾನಿ ಅವರ ‘ಕಬೀರ ಖಡಾ ಬಜಾರ್ ಮೇ’ ನಾಟಕ ‘ಸಂತ್ಯಾಗ ನಿಂತ್ಯಾನ ಕಬೀರ’ ಆಗಿ ಅನುವಾದಗೊಂಡಿತ್ತು. ನಾಟಕದ ಸ್ಕ್ರಿಪ್ಟ್ ಅನ್ನು ಅವರು ಥೇಟ್ ಆ ಕಬೀರನಂತೆಯೇ ೨೨ ವರ್ಷಗಳ ಕಾಲ ಕೈನಲ್ಲಿ ಹಿಡಿದು ಪ್ರಕಾಶನದ ಸಂತೆಯಲ್ಲಿ ಮಾರ್ಗ ತಿಳಿಯದೆ ನಿಂತಿದ್ದರು.
ಅದು ಗೊತ್ತಾಗಿ ನಾನೂ ಅವರೂ ಸೇರಿ ನವಕರ್ನಾಟಕವನ್ನು ಸಂಪರ್ಕಿಸಿದೆವು. ಆ ವೇಳೆಗಾಗಲೇ ಟಿ ಎಸ್ ಲೋಹಿತಾಶ್ವ ಅವರು ನಾಟಕವನ್ನು ಅನುವಾದಿಸಿ ಪ್ರಕಟಿಸಿದ್ದರು. ಹಾಗಾಗಿ ನವಕರ್ನಾಟಕ ಅಷ್ಟೇನೂ ಉತ್ಸಾಹ ತೋರಿಸಲಿಲ್ಲ. ನಂತರ ನಾವಿಬ್ಬರೂ ಆ ವೇಳೆಗೆ ಪರಿಚಿತರಾಗಿದ್ದ ಎಂ ಬೈರೇಗೌಡರ ಬೆನ್ನು ಬಿದ್ದೆವು. ಈಗ ಆ ಪುಸ್ತಕವೂ ಅದರೊಂದಿಗೆ ಬ್ರೆಕ್ಟ್ ನ ‘ಕಕೇಷಿಯನ್ ಚಾಕ್ ಸರ್ಕಲ್ ‘ ಆಧರಿಸಿದ ‘ಧರ್ಮಪುರಿಯ ಶ್ವೇತ ವೃತ್ತಾಂತ’ವೂ ಪ್ರಕಟವಾಗುತ್ತಿದೆ.
ಈ ಸಂತಸದ ಘಳಿಗೆ ಇಲ್ಲಿದೆ. ಟಿ ಎಸ್ ನಾಗಾಭರಣ, ಗುಡಿಹಳ್ಳಿ ನಾಗರಾಜು ಇಬ್ಬರೂ ವೇದಿಕೆಯಲ್ಲಿದ್ದರು. ಯಾಕೋ ಗೊತ್ತಿಲ್ಲ್ಲ ಅವರು ನನ್ನನ್ನೂ ಜೊತೆಗೆ ಸೇರಿಸಿಕೊಂಡರು.
–
ಗೋಪಾಲ ವಾಜಪೇಯಿ ಅವರು ಎಲ್ಲಾ ಚಿತ್ರ ಗೀತೆಗಳನ್ನು ಬರೆದಿರುವುದು ಗೋಪಾಲ ಯಾಗ್ನಿಕ್ ಅನ್ನುವ ಹೆಸರಿನಲ್ಲಿ. ಅವರು ಯಾಗ್ನಿಕ್ ಹೇಗಾದರು..?
ಎ ಆರ್ ಮಣಿಕಾಂತ್ ಬರೆದ ಸ್ವಾರಸ್ಯಕರ ಬರಹ ನಾಳೆ ನಿಮಗಾಗಿ






I am veryhappy to see Shri Gopal Wajapeyee (who is related to me) and his recent Drama”Santyag Nintaan Kabeer”, which is an excellent work. I look forward for more publicatios in Literature and Dramas by him. I pray God to bless and enable Shri Gopal Wajapeyee to come out with finest works.