ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳಸುವುದಕ್ಕೆ ಇರುವ ಅಂಕಣ.
ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು ಎಂಬುದು ನಮ್ಮ ಆಶಯ
ಮಠಗಳಿಗೆ ದುಡ್ಡು ಚೆಲ್ಲುವ ಯಡಿಯೂರಪ್ಪನವರ ಅತ್ಯುತ್ಸಾಹ ಈ ಸಲವೂ ಮುಂದುವರೆದು ಇದು ಅವರ ಸರ್ಕಾರದ ಹೊಸ ಆರ್ಥಿಕ ನೀತಿಯಾಗತೊಡಗಿದೆ. ಇದು ಯಡಿಯೂರಪ್ಪನವರ ಕಾಯಿಲೆಯೋ ಅಥವಾ ಖಯಾಲಿಯೋ ಗೊತ್ತಾಗಬೇಕಿದೆ. ಇಷ್ಟಕ್ಕೂ ಅಷ್ಟೊಂದು ದುಡ್ಡು ಪಡೆವ ಮಠಗಳು ಮಾಡುವ ಘನಕಾರ್ಯವಾದರೂ ಏನು? ಅವೇ ಪುರೋಹಿತಸಾಹಿ, ವೈದಿಕ ಆಚರಣೆಗಳಲ್ಲಿ ಕಾಲ ಕಳೆಯುತ್ತಾ ದಲಿತರನ್ನು ತಮ್ಮ ಮಠ ಮಂದಿರಗಳಿಂದ ಇನ್ನಷ್ಟು ದೂರವಿಡುವ ಹೊಸ ಬಗೆಯ ಸಂಶೋದನೆಗಳಲ್ಲಿ ತೊಡಗಿಕೊಳ್ಳುವುದು ತಾನೇ.
ಕೆಲಸಕ್ಕೆ ಬಾರದ ಮಠಗಳಿಗೆ ಸುರಿಯುವ ದುಡ್ಡನ್ನು ಹಸಿರು ಕಾರ್ಡ್ ಸಿಕ್ಕರೆ ಮಾತ್ರ ಬದುಕಲು ಸಾದ್ಯ ಎಂದುಕೊಂಡಿರುವ ಬಡವರ ಅನ್ನದ ತಟ್ಟೆಗಳಿಗಾದರು ಹಾಕಬಾರದಿತ್ತೆ. ಕಡು ಬಡವನ ಪಾಲಿನ ಅನ್ನವನ್ನು ಉಣ್ಣಲು ಕುಳಿತಿರುವ ಈ ಮಠಾಧಿಪತಿಗಳಿಗಾದರೂ ಇಂಥ ಹಣವನ್ನು ನಿರಾಕರಿಸಬೇಕೆಂಬ ಕನಿಷ್ಠ ಸೌಜನ್ಯ ತಮ್ಮೊಳಗೆ ಹುಟ್ಟಿಕೊಳ್ಳದಿರುವುದು ದುರಂತ.
ಇನ್ನು ಮೊನ್ನೆ ಶಿವರಾತ್ರಿ ಹಬ್ಬದಂದು ಸರ್ಕಾರ ಗಂಗಾಜಲವನ್ನು ಇಡೀ ನಾಡಿನ ಮನೆ ಮನೆಗೂ ತಲುಪಿಸುವ ಸಾಹಸಕ್ಕೆ ಕೈ ಹಾಕಿತು. ಅರೆ ಸುಟ್ಟ ಹೆಣಗಳನ್ನು, ಕೊಳೆತ, ಅನಾಥ ಶವಗಳನ್ನು ಗಂಗಾನದಿಗೆ ತೇಲಿಬಿಡುವ ಎಗ್ಗಿಲ್ಲದ ಪುಣ್ಯ ಕಾರ್ಯಗಳ ಬಗ್ಗೆ ಈ ಘನ ಸರ್ಕಾರಕ್ಕೆ ಅಂಥ ಅರಿವಿರಲ್ಲಿಲ್ಲವೆಂದು ಕಾಣುತ್ತದೆ. ದೆಹಲಿಯ M.C.ಮೆಹ್ತಾರಂತಹ ವಕೀಲರು ಗಂಗಾನದಿಯನ್ನು ಶುದ್ಧಿಕರಿಸಿ ಎಂದು ಸುಪ್ರೀಂ ಕೋರ್ಟ್ ನಲ್ಲಿ ಹತ್ತಾರು PIL(Public Interest Litigation) ಕೇಸು ಜಡಿದು ಅಲೆಯಬೇಕಿರಲ್ಲಿಲ್ಲ.
ತೀರ್ಥ ಪವಿತ್ರ ಎಂಬ ಕಾರಣಕ್ಕೆ ಯಾವ ಮೂರ್ಖನು ಗಟಾರದೊಳಕ್ಕೆ ತನ್ನ ಬೊಗಸೆಯೊಡ್ದಲಾರ. ಇನ್ನಾದರು ಯಡಿಯೂರಪ್ಪನವರ ಘನಸರ್ಕಾರ ಇಂಥ ಅಡ್ಡಕಸುಬಿ ಕೃತ್ಯಗಳಿಂದ ಹೊರಬಂದು ಈ ಮಣ್ಣಿನ ಜನರ ನಿಜವಾದ ಕಷ್ಟಗಳಿಗೆ ಸ್ಪಂದಿಸಲಿ.





ವೈಷ್ಣವ ಮತ್ತು ಶಿವ ಇದರ ಕುರಿತು ವಿಚಾರ ಸಂಘರ್ಷ ನಡೆಯಬೇಕಾಗಿತ್ತು. ಆದರೆ ಇಂದು ಲಿಂಗಾಯತರು ಕೂಡ ಪುರೋಹಿತಶಾಹಿಯ ಅಂಧಾಚರಣೆಗಳಿಗೆ ಮಾರು ಹೋಗಿರುವುದರಿಂದ ಬಸವಣ್ಣನವರ ತತ್ವಗಳು ಮಸುಕಾಗಿವೆ. ಇದೇ ಕಾರಣಕ್ಕೆ ಮಠಗಳು ಹುಟ್ಟಿಕೊಳ್ಳುತ್ತಿವೆ.ಅಲ್ಲಿಂದ ತತ್ತಿಗಳೊಡೆದು ಮರಿ ಸ್ವಾಮಿಗಳ ಜನನವಾಗುತ್ತಿದೆ.ಇದಕ್ಕೆ ಯಡಿಯೂರಪ್ಪ ಅಂಥವರು ಬಜೆಟ್್ನಲ್ಲಿ ಹಣ ನೀಡಿ ಸಹಕರಿಸುತ್ತಾರೆ.ಇದೇ ಸ್ಥಿತಿ ಹೀಗೆ ಮುಂದುವರಿದರೆ ಬಡವರೊಳಗಡಲ ಬಡಬಾಗ್ನಿ ಯಾರನ್ನೂ ಬಿಡುವುದಿಲ್ಲ.
ಪ್ರಭುತ್ವ, ಅಧಿಕಾರಶಾಹಿ ಹಾಗೂ ಮಠಗಳ ಹಿಡಿತದಿಂದ ನಮ್ಮನ್ನು ಎಲ್ಲಿಯ ವರೆಗೆ ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ನಾವು ಸ್ವತಂತ್ರರಲ್ಲ. ಸ್ವತಂತ್ರವಾಗಿ ಯೋಚಿಸಲು, ಅಭಿವ್ಯಕ್ತಿಸಲು ಸಾಧ್ಯವಿಲ್ಲ. ಇಂತಹ ಕಠೋರ ವ್ಯವಸ್ಥೆಯ ನಡುವೆ ಸಿಲುಕಿರುವ ಪ್ರಜಾತಂತ್ರವಾದಿ ವರ್ಗ ಹಾಗೂ ಇದ್ಯಾವುದನ್ನೂ ಅರಿಯದ ಶ್ರೀಸಾಮಾನ್ಯ ವರ್ಗವೊಂದು ಉಸಿರು ಗಟ್ಟಿದ ವಾತಾವರಣದಲ್ಲಿ ಜೀವಿಸುತ್ತಿದೆ.ಇದೊಂದು ರೀತಿಯ ಮಠ-ಪೀಠ ಪ್ರಭುತ್ವದ ಅಘೋಷಿತ ತುರ್ತು ಪರಿಸ್ಥಿತಿ. ಇಲ್ಲಿ ಬಾಯ್ಬಿಟ್ಟರೆ ಮುಚ್ಚುವ ಕೈಗಳೇ ಹೆಚ್ಚು, ನಡೆನೋಡುವಂತಿಲ್ಲ. ಮಠಾಧೀಶರನ್ನು ಎದುರು ಹಾಕಿಕೊಂಡ ಅದೆಷ್ಟೋ ಜೀವಗಳು ಮಣ್ಣಾಗಿ ಹೋಗಿವೆ.ಮಠಗಳಿರುವ ಕಡೆ ರೈತರು ಜಮೀನು ನೀಡದಿದ್ದಾಗ ಸ್ವಾಮಿಗಳೆಂಬ ಸಾಧುಗಳು ಕಣ್ಣು ಬಿಟ್ಟು ಭಸ್ಮ ಮಾಡಿಲ್ಲವೆಂದು ಹೇಗೆ ಹೇಳುವುದು.ಭವತೀ ಭಿಕ್ಷಾಂದೇಹಿ ಎನ್ನುವ ಸ್ವಾಮಿಗಳ ಲಲಾಟದ ಮೇಲೆ ರಾರಾಜಿಸುತ್ತಿರುವುದೇ ಆ ಭಸ್ಮ. ಅದು ಶಿವನದ್ದಲ್ಲ ರೈತನ ಹೆಣದ್ದು.
– ಸಿದ್ಧಮುಖಿ