
ಟಿ ಕೆ ಗಂಗಾಧರ ಪತ್ತಾರ್
“ಅಡಿಕ್ಟ್” ಅನ್ನುವಷ್ಟರ ಮಟ್ಟಿಗೆ ಲಂಕೇಶ ಪತ್ರಿಕೆಯ ಹುಚ್ಚು ಹಿಡಿದ ದಶಕಗಳವು. ಒಮ್ಮೆ ನನ್ನ ಪ್ರತಿ ಕಾಯ್ದಿರಿಸದೇ ಇತರರಿಗೆ ಕೊಟ್ಟಿದ್ದಾಗ ಪೇಪರ್ ಅಂಗಡಿಯವನನ್ನು ಕಾಲರ್ ಹಿಡಿದು ಹಿಗ್ಗಾ-ಮುಗ್ಗಾ ಜಗ್ಗಾಡಿ ಹೊಡೆದಿದ್ದೆ. ಲಂಕೇಶ್ ದಂತಕತೆಯಾಗಿ ನಮ್ಮನ್ನು ಕನಸಾಗಿ ಕಾಡುತ್ತಿದ್ದರು.
“ಅವ್ವ” ಕವಿತೆಯಿಂದ ನಮ್ಮನ್ನು ಸೆರೆ ಹಿಡಿದಿದ್ದ ಲಂಕೇಶ್ ನಮಗೆ ದಂತ ಗೋಪುರದ ಮಾಯದ ವ್ಯಕ್ತಿಯಾಗಿದ್ದರು. ಮುಂದಿನ ಜನ್ಮದಲ್ಲಾದರೂ ಅಂತಹ ಮೇಷ್ಟ್ರನ್ನು ಕಣ್ಣಾರೆ ಕಾಣುವ ಭಾಗ್ಯ ಸಿಗಲಿ ಎಂದು ಕನಸು ಕಾಣುತ್ತಿದ್ದೆ. ಆದರೆ ಇದೇ ಜನ್ಮದಲ್ಲಿಯೇ ಅವರನ್ನು ಕಾಣುವ ಅವಕಾಶ ಸಿಕ್ಕಾಗ ನಾನು ಈ ನೆಲದ ಮೇಲೆಯೇ ಇರಲಿಲ್ಲ.
28-08-1979ರ “ಸುಧಾ”ದಲ್ಲಿ ನನ್ನ ಸಣ್ಣ ಕತೆ ಅಚ್ಚಾಗಿ “ಗಿರಿಜಾಂಬ ಮೂವೀಸ್”ನವರು ಅದನ್ನು ಆಧರಿಸಿ ಸಿನಿಮಾ ತೆಗೆಯುತ್ತೇವೆಂದಾಗ ನಾನು ಮೂಕನಾಗಿದ್ದೆ. ಹಾಗೂ-ಹೀಗೂ ಅದಕ್ಕೆ ಅನುಮತಿ ಕೊಟ್ಟಾಗ ನನಗೆ ಸಿಕ್ಕ ಸಂಭಾವನೆ ಕೇವಲ ಐನೂರು ರೂಪಾಯಿ.
ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಕ್ಲರ್ಕ್ ಆಗಿದ್ದ ನಾನು ಪ್ರಥಮ ಎಂ.ಬಿ.ಬಿ.ಎಸ್.ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಕರ್ತವ್ಯಕ್ಕಾಗಿ 1983ರಲ್ಲಿ ಒಂದುವಾರ ಬೆಂಗಳೂರಲ್ಲಿರಬೇಕಾಯ್ತು. ಬಿ.ಟಿ.ಲಲಿತಾನಾಯಕರ ತಂಗಿ, ನನ್ನ ಮಿತ್ರ ಕೊಪ್ಪಳ-ಭಾಗ್ಯನಗರದ ಪ್ರಹ್ಲಾದ ಬೆಟಗೇರಿಯ ಪತ್ನಿ-ಬಿ.ಟಿ.ವಿಜಯಲಕ್ಷ್ಮಿ ಲಂಕೇಶ ಪತ್ರಿಕೆ ವರದಿಗಾರ್ತಿ. ನಾನು ತಂಗಿದ್ದು ಅವರ ಮನೆಯಲ್ಲಿ.
ಹೀಗಾಗಿ ವಿಜಯಲಕ್ಷ್ಮಿ ನನ್ನನ್ನು ಲಂಕೇಶ ದರ್ಶನಕ್ಕೆ ಕರೆದೊಯ್ದರು. ಅದೊಂದು ಮರೆಯಲಾಗದ ಮಧುರ ಅನುಭವ. ನನ್ನಂತಹ ಅನನುಭವಿ ಕಿರಿಯ ಬರಹಗಾರನನ್ನು “ಅಧ್ಯಾಪನ-ಕವನ-ಲೇಖನ-ಕಥೆ-ಕಾದಂಬರಿ-ಪತ್ರಿಕೋದ್ಯಮದ ದೈತ್ಯ ಪ್ರತಿಭೆ” ತನ್ನೆದುರು ಕಾಲುಗಂಟೆ ಕೂಡಿಸಿಕೊಂಡು ಮಾತಾಡಿಸಿತೇ ಎಂದು ಈಗಲೂ ವಿಸ್ಮಯವಾಗುತ್ತಿದೆ.
ಮುಂದೆ ಒಂದೇ ವಾರದಲ್ಲಿ ಲಂಕೇಶ ಪತ್ರಿಕೆಯಲ್ಲಿ “ಕತೆಗಾರರಿಗೆ ಪಂಗನಾಮ”ಶೀರ್ಷಿಕೆಯಡಿ “ಲಕ್ಷಗಟ್ಟಲೆ ಸಂಭಾವನೆಯ ವಿಷ್ಣುವರ್ಧನ-ಮಾಧವಿ-ಬಿ.ಸರೋಜಾದೇವಿಯವರಂತಹ ಗಣ್ಯ ತಾರಾಗಣದ ಸಿನಿಮಾ ಮೂಲಕಥೆಯ ಲೇಖಕನಿಗೆ ಕೇವಲ ಐದುನೂರು ರೂಪಾಯಿಕೊಟ್ಟು ವಂಚಿಸಿದ್ದಾರೆ”ಎಂದು ಬರೆಸಿಬಿಟ್ಟರು-ಲಂಕೇಶ.
ಆ ವರದಿ ಬಂದ ಎರಡೇ ವಾರದಲ್ಲಿ ಮುದ್ದಾಂ ಬಳ್ಳಾರಿಯ ನನ್ನ ಮುರುಕು ಗುಡಿಸಲಂತಿದ್ದ ಬಾಡಿಗೆ ಮನೆಗೆ ಬಂದ ನಿರ್ಮಾಪಕಿ ಒಂದೂವರೆ ಸಾವಿರ ರೂಪಾಯಿ ಕೊಟ್ಟದ್ದು ಈಗ ಕಥೆ. ಇಂತಹ ಲಂಕೇಶರನ್ನು ಮರೆಯಲಾದೀತೇ?.
ಆಗ (1983) ಐನೂರು-ಒಂದೂವರೆ ಸಾವಿರಗಳೇ ಬಹುದೊಡ್ಡ ಮೊತ್ತವೆಂದು ಬೇರೆ ಹೇಳಬೇಕಿಲ್ಲ.
ಇಲ್ಲಿರುವ ಫೋಟೋ ಬಗ್ಗೆ –
ಕವಿತಾ ಲಂಕೇಶ್ ಬಗ್ಗೆ ನಾನು ಮಾಡುತ್ತಿರುವ ಸಾಕ್ಷ್ಯಚಿತ್ರಕ್ಕೆ ಹಳೆಯ ಫ಼ೋಟೋಗಳನ್ನು ಸಂಗ್ರಹಿಸುತ್ತಿದ್ದಾಗ ಸಿಕ್ಕ ಒಂದು ಅಪರೂಪದ ಫ಼ೋಟೋ… ಲಂಕೇಶ್ ಮತ್ತು ಇಂದಿರಾ
-ಪ್ರತಿಭಾ ನಂದಕುಮಾರ್





ಕಾಮೆಂಟ್ ಕಾಲಮ್ಮಿನಲ್ಲಿ ಪೋಸ್ಟ್ ಮಾಡಿದ ನನ್ನ ನೆನಪಿನ ಕಿರು ಬರಹವನ್ನು ಮೇನ್ ಕಾಲಮ್ಮಿನಲ್ಲಿ ಪೇಸ್ಟ್ ಮಾಡಿದ ಅವಧಿಗೆ ಅಭಿನಂದನೆಗಳು