ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ‘ಜಡಭರತ’ರು..

‘ಜಡಭರತ’ ಎಂದೇ ಹೆಸರಾಗಿದ್ದ ಜಿ ಬಿ ಜೋಶಿ ಚಿರಪರಿಚಿತ.

‘ಮನೋಹರ ಗ್ರಂಥ ಮಾಲಾ’ದ ಮೂಲಕ ಅಪಾರ ಓದುಗರನ್ನು ಸೃಷ್ಟಿಸಿದ, ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಬರಹಗಾರರನ್ನು ಹುಟ್ಟು ಹಾಕಿದ ಕೀರ್ತಿ ಇವರದ್ದು.

ಈ ತಿಂಗಳ ೨೯ ರಂದು ಜಿ ಬಿ ಜೋಶಿಯವರ ಜನ್ಮದಿನ. 

ಮನೋಹರ ಗ್ರಂಥಮಾಲೆ ಈ ಸಂದರ್ಭದಲ್ಲಿ ಜಿ ಬಿ ಜೋಶಿಯವರ ೧೧೭ನೆಯ ಸ್ಮರಣೆ ದಿನವನ್ನು ಹಮ್ಮಿಕೊಂಡಿದೆ.

ಈ ಸಂದರ್ಭದಲ್ಲಿ ಅವರ ಸಮೀಪದ ಬಂಧು ರಮೇಶ ಪವ೯ತೀಕರ ಜಿ ಬಿ ಯವರನ್ನು ಕಂಡ ಆತ್ಮೀಯ ಚಿತ್ರಣ ಇಲ್ಲಿದೆ-

ರಮೇಶ ಪವ೯ತೀಕರ

ನಮ್ಮ ಹಾಗೂ ಜಿ ಬೀ ಜೋಶಿ ಮನೆತನಗಳ ಸಂಬಂಧ ಅನತಿಕಾಲದ್ದು. ಅವರನ್ನು ಮಾಮಾ ಎಂದೇ ಕರೆಯುತ್ತಿದ್ದೆವು. ನನಗೆ ಗೊತ್ತಿದ್ದ ಮಟ್ಟಿಗೆ ಅವರು ನಮ್ಮ ಅವಿಭಕ್ತ ಕುಟುಂಬದ ದೊಡ್ಡಮನೆಯಲ್ಲಿ ಸುಮಾರು ಕಾಲ ವಿದ್ಯಾಭ್ಯಾಸಕ್ಕೆಂದು ಉಳಿದಿದ್ದರಂತೆ. (ಬಾಗಲಕೋಟಿಯಲ್ಲಿ).

ನಮ್ಮಪ್ಪ ಹಾಗೂ ಕಕ್ಕಂದಿರಗಳಿಗೆ ಆಪ್ತರು. ಒಂದು ರೀತಿಯ ಬಿಡಲಾರದ ನಂಟು ಮತ್ತು ಋಣಾನುಬಂಧ. ನಮ್ಮಪ್ಪ ಮಾಮಾನಿಗೆ ಜಿಬೀ ಎಂತಲೂ ಹಾಗೂ ಅವರು ನಮ್ಮ ತಂದೆಗೆ ಭೀಮರಾಯರೇ ಅಂತಾ ಸಂಬೋಧಿಸುತ್ತಿದ್ದರು. ಎರಡೂ ಮನೆತನದ ಸಂಬಂಧ ಸುಮಾರು 80-90 ವರ್ಷಗಳದ್ದು. ಮಾಮಾನ ಮಗ ರಮಾಕಾಂತ ಮತ್ತು ನನ್ನ ಅಣ್ಣಂದಿರುಗಳು ಸಮಕಾಲೀನರೂ ಹೌದು.

ಮಾಮಾ ಹಾಗೂ ರಮಾಕಾಂತ ಪುಸ್ತಕಗಳನ್ನು ಹಂಚಲು ರಟ್ಟೀಹಳ್ಳಿ ಹಾಗೂ ರಾಣಿಬೆನ್ನೂರಿಗೆ ಬಂದಾಗ ಅವರ ವಾಸ್ತವ್ಯ ರಟ್ಟೀಹಳ್ಳಿಯ ನಮ್ಮ ಮನೆಯಲ್ಲಿ. ಮಾಮಾ ಅಥವಾ ರಮಾಕಾಂತ ಯಾರ ಮನೆಗೂ ಬರಿಗೈನಿಂದ  ಹೋದದ್ದಿಲ್ಲ. ಏನಾದರೂ ಕೊಟ್ಟೇ ಊಟ ಮಾಡುವ ಸ್ವಾಭಿಮಾನದ ಜಾಯಮಾನ. ನಾವು ಕೊಂಡುದಕ್ಕಿಂತ ಕೊಟ್ಟದ್ದು ಕಡಿಮಿಯಾಗಬಾರದೆಂಬ ಸಿದ್ಧಾಂತ.

ಪ್ರಕಾಶಕರಾಗಿ, ಸಂಪಾದಕರಾಗಿ, ನಾಟಕಕಾರನಾಗಿ, ಬರಹಗಾರರಾಗಿ, ರಂಗಕಲಾವಿದರಾಗಿ ಇಡೀ ಸಾಹಿತ್ಯ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಅಪಾರ. ಎಷ್ಟೋ ಸಾಹಿತಿಗಳನ್ನು ಸೃಷ್ಟಿಸಿ, ಬೆಳಸಿ, ಸಲಹೆ-ಸೂಚನೆ ಕೊಟ್ಟು ಅವರುಗಳಿಗೆ ಪ್ರಶಸ್ತಿ, ಮನ್ನಣೆ, ಪ್ರಚಾರ, ಕೀರ್ತಿಯನ್ನೂ ತಂದು ಕೊಡುವ ನಿಟ್ಟಿನಲ್ಲಿ ಸಾಹಿತ್ಯದ ಒಲವನ್ನು, ರುಚಿಯನ್ನು ಉಣಿಸಿದ್ದಾರೆ ಅಂದರೆ ತಪ್ಪಾಗಲಾರದು. ಓದುಗರ ಬಹುದೊಡ್ಡ ಸಂಖ್ಯೆಯನ್ನೇ ಹುಟ್ಟು ಹಾಕಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅನೇಕರನ್ನು ಪರಿಚಯಿಸಿದವರೇ ಇವರು.

ಮಾಮಾನ ಸಂಪರ್ಕದಲ್ಲಿ ಬಂದ ಸಾಮಾನ್ಯರೂ, ಸಾಹಿತ್ಯಾಸಕ್ತಿ ಇಲ್ಲದವರೂ ಇವರ ಮಾತಿಗೆ ಬೆಲೆ ಕೊಟ್ಟು, ಆದರಾತಿಥ್ಯಕ್ಕೆ ಸಿಲುಕಿ ಬರಹಗಾರರಾಗಿ ಒಳ್ಳೆಯ ಸಾಹಿತ್ಯ ರಚಿಸಿದ್ದೂಉಂಟು. ಮಾಮಾನ ಮಾತು ವಿರಳ. ಮಾತಿಗಿಂತ ಮೌನವೇ ಹೆಚ್ಚು. ಮೌನದಿಂದಲೇ ಕಾರ್ಯಸಿದ್ಧಿ. ಎಲ್ಲರನ್ನೂ ಕೆಲಸಕ್ಕೆ ಹಚ್ಚಿ, ಕೆಲಸತೆಗೆದುಕೊಳ್ಳುವ ಕಾರ್ಯವೈಖರಿ ಅವರ ಅಗಾಧ ಶಕ್ತಿ. ಜೊತೆಗೆ ಹೊಸದನ್ನು ಸೃಷ್ಟಿಸುವ ಕೌಶಲ್ಯ. ಒಮ್ಮೆ ಒಬ್ಬರು ಅಟ್ಟಕ್ಕೆ ಬಂದಾಗ ನಾನೂ ಬರಹಗಾರ ಆಗಬೇಕೆಂಬ ಆಸೆ ಅಂದದ್ದಕ್ಕೆ-“Unless u start writing, how can u become a writer?” ಅಂದದ್ದುಂಟು.

ಕಾರ್ಯ ಸಾಧನೆ, ದೂರದ ದೃಷ್ಟಿ, ಸಂಯಮ ಹಾಗೂ ಯಶಸ್ಸನ್ನು ಕಂಡಾಗ, ಮಾಜಿ ಪ್ರಧಾನಿ ಶ್ರೀ ಪಿ ವಿ.ನರಸಿಂಹರಾವರ ನೆನಪಾಗಿ, ಅವರಲ್ಲಿ ಹಾಗೂ ಇವರಲ್ಲಿ ಸಾಮ್ಯವನ್ನು ಕಂಡಿದ್ದೇನೆ.

ಒಮ್ಮೆ ಅಟ್ಟಕ್ಕೆ ಬಂದ ವ್ಯಕ್ತಿ, ಇವರಿಂದ ನುಸುಳಿದ್ದು ವಿರಳ. ಒಂದಿಲ್ಲೊಂದು ಸಾಹಿತ್ಯಿಕ ಸಾಧನೆಗೆ ಎಡೆಮಾಡಿಕೊಟ್ಟಿದ್ದಾರೆ. ಅಜ್ಜನ ಈ ಎಲ್ಲ ಗುಣವಿಶೇಷಗಳು, ಮೊಮ್ಮಗ ಶ್ರೀ ಸಮೀರನಲ್ಲಿ. ಹಾಸುಹೊಕ್ಕಾಗಿವೆ. ಅಜ್ಜನಲ್ಲಿದ್ದ ಚುಂಬಕ ಶಕ್ತಿ ಮೊಮ್ಮಗನಿಗೂ ಬಂದಿದೆ.

ಶ್ರೀ ಜಿ ಬಿ. ಜೋಶಿಯವರಿಗೆ ಪದ್ಮಶ್ರೀ ಪ್ರಶಸ್ತಿಯನ್ನೊಳಗೊಂಡು, ಇನ್ನೂ ಹಲವು ಪ್ರಶಸ್ತಿಗಳು ಸಿಕ್ಕಿದ್ದರೂ, ತಮ್ಮಬಗ್ಗೆ ಎಂದೂ ಹೇಳಿಕೊಂಡದ್ದು ನಾನಂತೂ ಕಾಣೆ.

। ಫೇಸ್ ಬುಕ್ ನಲ್ಲಿ ಈ ಮೊದಲು ಪ್ರಕಟವಾಗಿದೆ ।

ಚಿತ್ರಗಳು ಕೃಪೆ: ಡೆಕ್ಕನ್ ಹೆರಾಲ್ಡ್

 

‍ಲೇಖಕರು avadhi

28 July, 2020

2 Comments

  1. Vasundhara k m

    ಬರಹ ಚೆನ್ನಾಗಿದೆ. ಜಿ. ಬಿ ಜೋಶಿಯವರ ಕುರಿತು ಆತ್ಮೀಯ ಭಾವನೆಗಳಿಂದ ಕೂಡಿದೆ.

  2. Prajna Mattihalli

    Happy to read about a legend. Well written article

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading