ದತ್ತು ಕುಲಕರ್ಣಿ
**
ಆಸ್ಟ್ರೇಲಿಯಾದ ಸಿಡ್ನಿ ಮತ್ತು ಬ್ರಿಸ್ಬೇನ್ ನಗರಗಳಲ್ಲಿ ಸುರೇಂದ್ರನಾಥ್ ಅವರ ನಾಟಕ ‘ಕಾಂತ ಮತ್ತು ಕಾಂತ’ ಇದರ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಅದರಂತೆ ಮೊನ್ನೆ ಅಂದರೆ ಇದೇ ಮೇ 25 ರಂದು ಶನಿವಾರ ಸಿಡ್ನಿಯ ಎರ್ಮಿಂಗಟನ್ ಕಮ್ಯುನಿಟಿ ಹಾಲಿನಲ್ಲಿ ಈ ನಾಟಕವನ್ನು ನೋಡುವ ಅವಕಾಶ ನನಗೆ ಸಿಕ್ಕಿತ್ತು. ಮುಖ್ಯಮಂತ್ರಿ ಚಂದ್ರು ಮತ್ತು ಸಿಹಿ ಕಹಿ ಚಂದ್ರು ಎಂಬ ದೈತ್ಯ ಪ್ರತಿಭೆಗಳು ತಮ್ಮ ಸಹಜ ಅಭಿನಯದ ಮೂಲಕ ಸಿಡ್ನಿ ಕನ್ನಡಿಗರಿಗೆ ಈ ಒಂದು ಹೊಸ ರಂಗ ಅನುಭವವನ್ನು ಕಟ್ಟಿಕೊಟ್ಟರು. ನಿರ್ದೇಶಕ ಸೂರಿ ಅವರು ತಮ್ಮ ಪ್ರಭುದ್ಧ ರಚನೆ-ನಿರ್ದೇಶನದೊಂದಿಗೆ ನಾಟಕದಲ್ಲಿಯ ಒಂದು ಪಾತ್ರವನ್ನು ನಿರ್ವಹಿಸಿದ್ದು ವಿಶೇಷವಾಗಿತ್ತು. ಇಬ್ಬರು ಪ್ರಬುದ್ಧ ನಟರು ಯಾವ ಯಾವುದೋ ಕಾರಣಗಳಿಂದ ಬೇರೆ ಬೇರೆಯಾಗಿ ಮತ್ತೆ ತಮ್ಮ ಇಳಿ ವಯಸ್ಸಿನಲ್ಲಿ ಭೇಟಿಯಾಗಿ ತಮ್ಮ ತಮ್ಮ ಅಹಂಗಳನ್ನ ಕಳಚಿಕೊಂಡು ಮುಕ್ತರಾಗುವುದು ನಾಟಕದ ಕಥಾ ಹಂದರ.
ಇದರ ಮೂಲಕ ಮನುಷ್ಯನ ಇಳಿ ವಯಸ್ಸಿನಲ್ಲಿ ಕಾಡುವ ಮರೆವು, ಸಿಟ್ಟು, ಸೆಡವು, ಅಸಹಾಯಕತೆ ಹಾಗೆಯೇ ಇವುಗಳ ನಡುವೆ ಎದ್ದು ನಿಲ್ಲುವ ಅಹಂ ಮತ್ತು ಸ್ವಾಭಿಮಾನದ ಗೋಡೆಗಳಂತಹ ಸಂಕೀರ್ಣ ಭಾವಗಳನ್ನ ಹಾಸ್ಯದ ಮೂಲಕ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು. ಹಾಸ್ಯ ಅಭಿನಯಕ್ಕಾಗಿ ಪ್ರಸಿದ್ಧರಾಗಿರುವ ಮುಖ್ಯಮಂತ್ರಿ ಚಂದ್ರು ಮತ್ತು ಸಿಹಿಕಹಿ ಚಂದ್ರು ತಮ್ಮ ಪಾತ್ರಗಳಿಗೆ ಜೀವ ತುಂಬಿ ನಿರ್ವಹಿಸಿದರು. ಹಾಗೆಯೇ ಇವರ ನಡುವೆ ಕೊಂಡಿಯಾದ ಪಾತ್ರವನ್ನು ಸೂರಿ ಅವರು ನಿರ್ವಹಿಸಿದರು. ನಾಟಕದಲ್ಲಿ ಫ್ಲಾಶ್ ಬ್ಯಾಕ್ ನಲ್ಲಿ ನಡೆಯುವ ಘಟನೆಗಳನ್ನು ರಂಗದ ಮೇಲೆಯೇ ಸ್ತಬ್ಧಗೊಳಿಸಿ ಕೆಲ ಪಾತ್ರಗಳನ್ನ ಮಾತ್ರ ಫ್ಲಾಶ್ ಬ್ಯಾಕ್ ಗೆಕಳಿಸಿ ಮತ್ತೆ ವರ್ತಮಾನಕ್ಕೆ ಕರೆತರುವ ತಂತ್ರವನ್ನು ಉಪಯೋಗಿಸಿದ್ದು ಬಹಳ ಪರಿಣಾಮಕಾರಿಯಾಗಿತ್ತು. ಬೆಳಕು ಮತ್ತು ಧ್ವನಿ ಸಿಸ್ಟಮ್ ಗಳನ್ನು ಇನ್ನೂ ಚೆನ್ನಾಗಿ ನಿರ್ವಹಿಸಬಹುದಿತ್ತು ಎನ್ನುವ ಕೊರತೆ ಇದ್ದರೂ ನಾಟಕ ಚೆನ್ನಾಗಿ ಮೂಡಿ ಬಂದು ಸಿಡ್ನಿ ಕನ್ನಡಿಗರು ಈ ಹೊಸ ನಾಟಕವನ್ನು ನೋಡಿ ಆನಂದಿಸಿದರು.
0 ಪ್ರತಿಕ್ರಿಯೆಗಳು