
ಮ ಶ್ರೀ ಮುರಳಿಕೃಷ್ಣ
ಬಹುಮುಖಿ ವ್ಯಕ್ತಿತ್ವದ ಡಾ. ವಿಠ್ಠಲ್ ಭಂಡಾರಿ ಅಧ್ಯಾಪನದ ಜೊತೆಗೆ ಸಮಸಮಾಜದ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಾಂಸ್ಕೃತಿಕ ರಂಗದಲ್ಲಿ(ಸಮುದಾಯದ ಮೂಲಕ) ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ನಮ್ಮ ಸಂವಿಧಾನವನ್ನು ಎತ್ತಿ ಹಿಡಿಯುವ ‘ಸಂವಿಧಾನ ಓದು‘ ಅಭಿಯಾನದಲ್ಲಿ ತೊಡಗಿ ನಮ್ಮ ರಾಜ್ಯಾದ್ಯಂತ ಸುತ್ತಾಡುತ್ತಿದ್ದರು. ಉತ್ತರ ಕನ್ನಡದ ಜಿಲ್ಲೆಯಲ್ಲಿ ‘ಸಹಯಾನ ಕೆರೆಕೋಣ‘ ಎಂಬ ಸಂಘಟನೆಯನ್ನು ಪ್ರಾರಂಭಿಸಿ, ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಇವರ ತಂದೆ ಆರ್ ವಿ ಭಂಡಾರಿ, ಜನಪರ, ಮಾರ್ಕ್ಸ್ ವಾದಿ ವಿದ್ವಾಂಸರಾಗಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ ‘ಸಬಾಲ್ಟ್ರನ್ ಅಧ್ಯಯನ’ ಕೃತಿಗಳ ಪ್ರಕಟನೆಯ ಬೃಹತ್ ಯೋಜನೆಯ ರೈತ- ಕಾರ್ಮಿಕ ಸಂಪುಟದ ಇಬ್ಬರು ಸಂಪಾದಕರಲ್ಲಿ ವಿಠ್ಠಲ್ ಒಬ್ಬರಾಗಿದ್ದರು. ನನ್ನ ಒಂದು ಲೇಖನ ಅದರಲ್ಲಿ ಅಡಕವಾಗಿತ್ತು. ಆ ಸಂದರ್ಭದಲ್ಲೇ ನಾನು ಅವರನ್ನು ಪ್ರಥಮ ಬಾರಿಗೆ ಭೇಟಿ ಮಾಡಿದ್ದು. ಕಳೆದ ವರ್ಷ ‘ಜನಶಕ್ತಿ ಮೀಡಿಯಾ’, ‘ಸಮುದಾಯ’ ಮತ್ತು ‘ಸಹಯಾನ ಕೆರೆಕೋಣ’ ವತಿಯಿಂದ ‘ಪಿಚ್ಚರ್ ಪಯಣ’ ಎಂಬ ಸಿನಿಮಾ ಕುರಿತ ವಿಶೇಷ ಸರಣಿ ಕಾರ್ಯಕ್ರಮ ಶುರುವಾಯಿತು. ಇದರ ರೂವಾರಿ ವಿಠ್ಠಲ್ ಆಗಿದ್ದರು.

ನಾನು ಈ ಕಾರ್ಯಕ್ರಮದಲ್ಲಿ ನಾಲ್ಕು ಸಿನಿಮಾಗಳ ಬಗೆಗೆ ಮಾತನಾಡಿದ್ದೇನೆ. ಈ ಕಾಲಾವಧಿಯಲ್ಲಿ ನಾವು ಹೆಚ್ಚಿನ ಸಂಪರ್ಕದಲ್ಲಿದ್ದೆವು. ಇಂದು ಮಧ್ಯಾಹ್ನ, ನಾನು ಅವರ ಪತ್ನಿ ಸಂಗಾತಿ ಯಮುನಾರ ಬಳಿ ವಿಠ್ಠಲ್ ರ ಆರೋಗ್ಯದ ಬಗೆಗೆ ವಿಚಾರಿಸಿದ್ದೆ. ಈಗ ಅವರಿಲ್ಲ… ಕೊರೋನಾ ಮತ್ತೊಂದು ಬಲಿಯನ್ನು ಪಡೆದುಕೊಂಡಿದೆ…
ವಿಠ್ಠಲ್ ರ ಅಕಾಲಿಕ ಮರಣ ನನ್ನನ್ನು ತುಂಬ ವಿಹ್ವಲಗೊಳಿಸಿದೆ. ನನ್ನ ಸಂತಾಪಗಳು.. ಅವರಿಗೆ ಅಂತಿಮ ನಮನಗಳು..






ವಿಠ್ಠಲ್ ಅವರ ಸಮಾಜಮುಖಿ ಚಿಂತನೆ, ಸಂಘಟನೆ ಈ ದುರಿತ ಕಾಲದಲ್ಲಿ ಬಹಳ ಅಗತ್ಯವಾಗಿತ್ತು. ಆದರೇನು ಮಾಡುವುದು? ಜನಸಾಮಾನ್ಯರು ನಾವು ಭ್ರಷ್ಟ ವ್ಯವಸ್ಥೆಯಲ್ಲಿರುವವರು. ವೈದ್ಯಕೀಯ ಸೌಲಭ್ಯವನ್ನು ಒದಗಿಸದೆ ಆಗುತ್ತಿರುವ ಸಾವುಗಳು, ಸರ್ಕಾರ ಮಾಡುತ್ತಿರುವ ಕಗ್ಗೊಲೆಗಳು. ವಿಠ್ಠಲ್ ರವರ ನಿಮ್ಮ ಸಾಂಗತ್ಯದ ಪರಿಚಯ ಓದಿ, ಅವರನ್ನು ಕಳೆದುಕೊಂಡ ನಿಮ್ಮ ನೋವಿನಲ್ಲಿ ನಾವುಗಳು ಪಾಲುದಾರರಾಗಿದ್ದೇವೆ…ಸಾರ್…