ನಾಗರಾಜ ಹರಪನಹಳ್ಳಿ
-1-
ಎರಡು ಬಾಗಿಲು ಮುಚ್ಚಿದವು
ಇಷ್ಟೇ ತೆರೆದ ಕಿಟಕಿಗಳು
ಅಲ್ಲಿ ಶಬ್ದಗಳು
ಮೊಳೆಯಲಿಲ್ಲ
-2-
ಬಾಗಿಲಿಲ್ಲದ ಊರಲ್ಲಿ
ಬೀಗಗಳು ಕಳೆದು ಹೋಗಿವೆ
ಶಬ್ದಗಳ ಕಳಕೊಂಡವರು
ದಿಕ್ಕು ದಿಶೆಯಿಲ್ಲದೇ
ನಡೆಯುತ್ತಿದ್ದಾರೆ
ಎಂದೂ ಸಿಗದ ಕೊನೆಗೆ
-3-
ಕಾಲಿಲ್ಲದವರನ್ನು
ಕೈಯಿಲ್ಲದವರು ಕುಣಿಸಿದರು
ಅನಾಥ ಬೀದಿಗಳಲ್ಲಿ
ಮೆದುಳಿಲ್ಲದವರನ್ನು
ಕಣ್ಣಿಲ್ಲದವರು ಕೂಗಾಡಿಸಿದರು
ಹೃದಯ ಕಳೆದುಕೊಂಡ
ದೊರೆಯ ಮಹಲಿನ ಮುಂದೆ
-4-
ಮುಗಿಲ
ದುಃಖ
ಭೂಮಿಯ
ಬಾಯಾರಿಕೆ
ಮುಗಿಯುವಂತಹದ್ದಲ್ಲ
-5-
ಭಾವನೆಗಳಿಂದ ಬಿಡಿಸಿದ ಬಣ್ಣದ ಚಿತ್ರಕ್ಕೆ
ಯಾರೋ ಕಲ್ಲು ಎಸೆದರು
ಆಗ ತಾನೆ ಮೂಡಿದ ಕಾಮನ ಬಿಲ್ಲ
ನೋಡಿ ಸಹಿಸದಾದರು
ಬದುಕಿನ ಚಿತ್ರವ ಕೆಡಿಸಿದರು
ಆದರೂ
ಭಾವದ ರೇಖೆಗಳು ಅಳಲಿಲ್ಲ
ಎಂದಾದರೊಂದು ದಿನ ಕೂಡಬಹುದು
ಚಿತ್ರಕ್ಕೆ ಅರ್ಥ ಹುಟ್ಟಬಹುದೆಂದು
ಅವರು
ಕಾದು ಕುಳಿತರು
ವಿರಹದ ನೋವು ಹೊದ್ದು
-6-
ಮನಸ್ಸು ಖಾಲಿ ಖಾಲಿಯಾಗಿದೆ
ಆಕೆಯ ಹೆಜ್ಜೆ ಗೆಜ್ಜೆ ಸದ್ದು ಕೇಳದೇ
ಹರಿವ ನದಿಗೂ ಕಳೆಯಿಲ್ಲ
ಸಮುದ್ರ ಸೇರಿಯೂ ಸಂಭ್ರಮಿಸದ ಆಕೆಯಂತೆ
-7-
ಹಿಡಿಯಷ್ಟು ಬದುಕಿನಲ್ಲಿ
ಕಡಲಿನ ಪ್ರೀತಿಯ ಅರಿಯಲಾಗಲಿಲ್ಲ
ದಿನವೂ ಸೂರ್ಯ ಬೆಳಗಿದರೂ
ಮನುಷ್ಯ ಮನದ
ಕತ್ತಲು ಅಳಿಸಲಿಲ್ಲ
ಚೆನ್ನಾಗಿದೆ
ನಾಗರಾಜ ಹರಪನಹಳ್ಳಿ ಅವರ ಕವಿತೆ ಮನೋಜ್ಞವಾಗಿದೆ.ಮನುಷ್ಯನ
ಮನದ ಕತ್ತಲೆಯನ್ನು ಅಳಿಸಲು ಯತ್ನಿಸುತ್ತಿದೆ.