ಎಲ್ಲೊ ಇರುವ ತೇಜಸ್ವಿಯವರ ಆತ್ಮ ಸಂತಸದಿಂದ ಮಗ್ಗಲು ಬದಲಿಸಿ ನಕ್ಕಂತಾಗಲಿ . . . . ಡಾ. ಕಿರಣ್.ಎಂ ಗಾಜನೂರು ಸುಮ್ಮನೆ ಅಂದುಕೊಳ್ಳಿ ಸಂಜೆ ಕಾಡ ಹಾದಿಯಲ್ಲಿ ನೀವು, ನಿಮ್ಮ ಏಳು ಎಂಟು ವರ್ಷದ ಮಗು ನಡೆಯುತ್ತಿರುವಾಗ ಧುತ್ತನೆ ಮೊಲಗಳ ಹಿಂಡೊಂದು ನಿಮ್ಮ ಎದುರಿಗೆ ಹಾದು ಹೋದರೆ ನಿಮ್ಮ ಮಗುವಿಗೆ ಆಗುವ ರೋಮಾಂಚನ ಹೇಗಿರಬಹುದು, ಮಲೆನಾಡಿನ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುವಾಗ ಇದ್ದಕ್ಕಿಂದಂತೆ ನಾಲ್ಕು ಜಿಂಕೆಗಳ ಗುಂಪು ರಸ್ತೆಯಾಚೆ ಜಿಗಿದರೆ ಆಗುವ ನಿಮಗೆ ಸಿಗುವ ಅನುಭೂತಿ ಹೇಗಿರಬಹುದು, ರಸ್ತೆಯಲ್ಲಿ ನಿಮ್ಮ ಕಾರಿಗೆ ಆನೆ ಅಡ್ಡ ಬಂದರೆ ಆ ಕ್ಷಣದಲ್ಲಿ ನಿಮಗೆ ಆಗುವ ಭಯ! ಅದರ ಕಾಲಲ್ಲಿ ಸರಪಳಿ ನೋಡಿ ಅದು ಸಾಕಿದ ಆನೆ ಎಂದು ತಿಳಿದಾಗ ನಿಮಗಾಗುವ ಸಮಾಧಾನ ಎಂತದ್ದು ಎಂದು.. ಪ್ರಕೃತಿ ಮತ್ತು ಮನುಷ್ಯನ ಸಂಬಂಧವೇ ಹೀಗೆ ಇದೊಂದು ಅದ್ಬುತ ಪ್ರಕೃತಿಯೊಳಗಿನ ನಿಶ್ಯಬ್ದ, ನಿಗೊಢ, ರಹಸ್ಯ, ರೊಮಾಂಚನ ಜಗತ್ತು ಮನುಷ್ಯನಿಗೆ ಎಂದಿಗೂ ಸವಾಲೇ? ಒಮ್ಮೆ ನಾನು ನನ್ನ ಬಾಲ್ಯಕ್ಕೆ ಹಿಂದುರಿಗಿ ನೋಡಿದರೆ ಮನದ ನೆನಪಿನ ಹಂದರದಲ್ಲಿ ನೂರಾರು ನೆನಪುಗಳು ಪ್ರಕೃತಿ, ಪರಿಸರದೊಂದಿಗೆ ಹೊಂದಿಕೊಂಡಂತಿವೆ. ನನಗೆ ನಮ್ಮ ಮನೆ ಕಿಟಕಿಯಲ್ಲಿ ಗೊಡು ಕಟ್ಟಿದ ಗುಬ್ಬಚ್ಚಿ, ನಮ್ಮ ನುಗ್ಗೆ ಮರಕ್ಕೆ ಪ್ರತಿ ವರ್ಷ ಬಂದು ಹತ್ತಿಕೊಳ್ಳುತ್ತಿದ್ದ ಕಂಬಳಿ ಹುಳುಗಳ ಗುಂಪು, ಮಳೆಗಾಲದಲ್ಲಿ ಶಾಲೆಗೆ ಹೋಗುವ ದಾರಿ ಪಕ್ಕದ ಕೆರೆ ನೀರಿನಲ್ಲಿ ತೇಲುವ ಆಮೆ, ಏಡಿ, ನಾವು ಹೊಳೆಗೆ ಹೋಗುತ್ತಿದ್ದಾಗ ಹಿಡಿಯುತ್ತಿದ್ದ ಕಲ್ಲು ಕುರಿಕಿ ಮಿನು (ಮೀನಿನ ಒಂದು ಜಾತಿ) ಕಾಡಿನಲ್ಲಿ ಕೈಗೆ ಸಿಕ್ಕ ವಸ್ತುಗಳನ್ನು ಹಾಕಿ ನಾವೇ ಮಾಡಿಕೊಂಡು ತಿನ್ನುತ್ತಿದ್ದ ಊಟದ ರುಚಿ, ಹೊಳೆದಾಟಲು ಎಮ್ಮೆಯ ಬಾಲ ಹಿಡಿದು ನೀರಿಗೆ ಹಾರುತ್ತಿದ್ದ ರೀತಿ, ಇವೆಲ್ಲ ಇನ್ನೂ ನನ್ನ ನೆನಪಿನಂಗಳದಲ್ಲಿ ಹಚ್ಚ ಹಸಿರಾದ ಹೆಜ್ಜೆ ಗುರುತುಗಳಾಗಿವೆ. ಇಂದು ಮಲೆನಾಡಿನ ಆ ನಿಗೂಢ, ನಿಶಬ್ದ, ರೋಮಾಂಚಕ, ಅರಣ್ಯಗಳು ಇಲ್ಲ! ಅದಕ್ಕೆ ಕಾರಣ ಮನುಷ್ಯನ ಕ್ರೌರ್ಯ, ಇದೆಲ್ಲ ಯಾಕೆ ಹೇಳಿದೆ ಅಂದರೆ ನಿನ್ನೆ ಲೈಬ್ರರಿಯ ಕನ್ನಡ ವಿಭಾಗದಲ್ಲಿ ಸುಮ್ಮನೆ ಪುಸ್ತಕಕ್ಕಾಗಿ ಅಲೆಯುತ್ತಿದ್ದಾಗ ಕೈಗೆ ಸಿಕ್ಕ ಪುಸ್ತಕವೇ ಕೆ.ಪಿ. ಪೊರ್ಣಚಂದ್ರ ತೇಜಸ್ವಿಯವರ ‘ಪರಿಸರದ ಕಥೆ’. ಪುಸ್ತಕದ ಶೀರ್ಷಿಕೆ ಅಷ್ಟಾಗಿ ಆಸಕ್ತಿ ಕೆರಳಿಸದಿದ್ದರೂ ತೇಜಸ್ವಿಯವರದು ಚೆನ್ನಾಗಿರಬಹುದು ಎಂದು ಓದಲು ಕುಳಿತಾಗ ಇಡೀ 144 ಪುಟಗಳನ್ನು ಒಂದೇ ಗುಕ್ಕಿನಲ್ಲಿ ಓದಿಸಿಕೊಂಡಿತು. ಆಮೇಲೆ ಅನ್ನಿಸಿದ್ದು, ಅದು ಕಥೆಯ, ಅವರೇ ಎಲ್ಲೋ ಎದುರಿಗೆ ನಿಂತು ಹೇಳುತ್ತಿರುವಂತೆ ಭಾಸವಾಗುವ ಭಾವವ ಅಥವಾ ಮಲೆನಾಡಿನ ಕಾಡಿನ ವೈಚಿತ್ರವ ಎಂಬ ಪ್ರಶ್ನೆಗಳು ಮನದಲ್ಲಿ ಉಳಿದುಕೊಂಡವು ಮೂಡಿಗೆರೆಯಲ್ಲಿ ಕಾಫಿ ತೋಟ ಮಾಡುವ ಸಲುವಾಗಿ ಬಂದ ತೇಜಸ್ವಿಯವರು ತಮ್ಮ ಮತ್ತು ತಮ್ಮ ಸುತ್ತಲಿನ ಪ್ರಕೃತಿ ಮತ್ತು ಪರಿಸರದ ನಡುವಿನ ಸಂಬಂಧವನ್ನು ಅಕ್ಷರ ರೊಪದಲ್ಲಿ ಕಟ್ಟಿಕೊಟ್ಟ ಉತ್ತಮ ಕೃತಿ ಅದು. ಅದರಲ್ಲಿ ಅವರು ಎದುರುಗೊಳ್ಳುವ ಸನ್ನಿವೇಶಗಳು ಅದನ್ನು ವಿವರಿಸಿವ ಅವರ ವೈಚಾರಿಕಥೆ ಆ ಮೂಲಕ ಅವರಿಗೆ ದೊರೆಯುವ ಉತ್ತರ, ಕೆಲವೂಮ್ಮ ಪ್ರಶ್ನೆಗಳಾಗಿಯೇ ಉಳಿಯುವ ಪ್ರಶ್ನೆಗಳು ಎಲ್ಲವನ್ನೂ ಅತ್ಯಂತ ಪ್ರೀತಿಯಿಂದ ಚಿತ್ರಿಸಿದ್ದಾರೆ. ಈ ಪುಸ್ತಕಲ್ಲಿ ಅವರ ಜೊತೆ ಇರುವ ಕಿವಿ (ಅವರ ಸಾಕು ಬೇಟೆ ನಾಯಿ) ಮಾರ, ಮಾಸ್ತಿ, ಬೈರ, ಶ್ರೀರಾಮ ಎಲ್ಲರೂ ಮನುಷ್ಯನ ಒಂದೊಂದು ಭಾವದ ಪ್ರತಿನಿಧಿಗಳಂತೆ ಕಾಣುತ್ತಾರೆ ಒಟ್ಟಾರೆ ಮನುಷ್ಯ ಇಂದು ನಗರೀಕರಣ, ನಾಗರೀಕರಣದ ಹೆಸರಿನಲ್ಲಿ ಪ್ರಕೃತಿಯ ನಡುವಿನ ಗಾಢ ಮತ್ತು ವಿವರಿಸಲಾಗದ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಇಂದು ಒಂದು ಮಗುವಿಗೆ ಕಾಡಿನ ಬಗ್ಗೆ ಅದರಲ್ಲಿನ ಪ್ರಾಣಿಗಳ ಬಗ್ಗೆ ಪುಸ್ತಕದಲ್ಲಿ ಹೇಳುವ ಸನ್ನಿವೇಶ ಬಂದಿದೆ. ಕಡೇ ಪಕ್ಷ ಇಂದು ಈ ರೀತಿಯ ಪುಸ್ತಕಗಳಾದರೂ ಇವೆ. ಇನ್ನು ಹತ್ತು ಹದಿನೈದು ವರ್ಷಗಳಲ್ಲಿ ಅವು ನಮ್ಮಿಂದ ಮರೆಯಾಗುತ್ತವೆ ಕಾಡೇ ಇಲ್ಲದ ಮೇಲೆ ಅದರಲ್ಲಿ ಬದುಕುವವರಾರು ಕಾಡಿನ ಬಗ್ಗೆ ಬರೆಯುವವರಾರು. ಮಾನವನ ಜೀವನ ಮತ್ತು ಪರಿಸರದ ನಡುವಿನ ಸಂಬಂಧ ನಿಜವಾಗಲು ಅದ್ಬುತ ಆ ಸಂತೋಷ, ಸಂಭ್ರಮ, ರೊಮಾಂಚನ ಎಷ್ಟು ಹಣಕೊಟ್ಟರು ಸಿಗಲಾರದು. ನಿಮ್ಮ ಮಗು ಬೇಲಿಯಲ್ಲಿನ ಓತಿಕ್ಯಾತ, ಇದ್ದಕ್ಕಿಂದಂತೆ ಎದುರಾಗಿ ಮಾಯವಾಗುವ ಮೊಲ, ಜಿಂಕೆ, ಭಯ ಹುಟ್ಟಿಸುವ ಆನೆ, ಇವುಗಳಿಗೆ ರೋಮಾಂಚನಗೊಂಡಷ್ಟು ಬೇರಾವುದಕ್ಕೂ ರೋಮಾಂಚನಗೊಳ್ಳಲು ಸಾಧ್ಯವಿಲ್ಲ. ಒಂದು ಮಗುವಿನ ಸರ್ವತೋಮುಖ ಬೆಳವಣಿಗೆ ಅದರ ಸುತ್ತಲಿನ ಪರಿಸರವನ್ನು ಅವಲಂಬಿಸಿದೆ ಎಂದು ತಿಳಿದವರು ಹೇಳುತ್ತಾರೆ. ಆ ಉತ್ತಮ ಪರಿಸರ ನಿರ್ಮಿಸಿಕೊಡುವ ಕರ್ತವ್ಯ ನಮ್ಮ ಮೇಲಿದೆ. ಅದರ ಮೊದಲ ಪ್ರಯತ್ನವಾಗಿ ಕೆ.ಪಿ. ಪೂರ್ಣಚಂದ್ರ ತೆಜಸ್ವಿಯವರ ಪರಿಸರದ ಕಥೆ ಪುಸ್ತಕ ಮನೆಗೆ ತಂದು ನಿಮ್ಮ ಮಕ್ಕಳ ಕೈಗೆ ಕೊಡಿ. ಒಮ್ಮೆ ಓದಿ ರೋಮಾಂಚನಗೊಳ್ಳಲಿ, ಆಶ್ಚರ್ಯಗೊಳ್ಳಲಿ ಪ್ರಕೃತಿ ಮತ್ತು ಪರಿಸರದ ಬಗ್ಗೆ ಜಾಗೃತರಾಗಲಿ. ನಾವು ಇಂದು ನಾಗರಿಕಥೆಯ ಹೆಸರಿನಲ್ಲಿ ಕಾಡಿನ ನಿಜವಾದ ಅನುಭವಗಳನ್ನು ಮಕ್ಕಳಿಗೆ ಕೊಡಲಾಗದಷ್ಟು ದೂರ ಬಂದಿದ್ದೆವೆ. ಕೊನೆ ಪಕ್ಷ ಆ ಅನುಭವಗಳ ಪುಸ್ತಕ ರೂಪವನ್ನಾದರು ನೀಡುವ. ಪುಟ್ಟ ಮಗುವಿನ ಕೈಯಲ್ಲಿ ಪರಿಸರದ ಪುಸ್ತಕ ನೋಡಿ ಎಲ್ಲೊ ಇರುವ ತೇಜಸ್ವಿಯವರ ಆತ್ಮ ಸಂತಸದಿಂದ ಮಗ್ಗಲು ಬದಲಿಸಿ ನಕ್ಕಂತಾಗಲಿ.]]>
ಜಿ ಎಚ್ ನಾಯಕ ನೆನಪು: ನನ್ನೊಳಗಿನ ತೇಜಸ್ವಿ..
ತುಂಬ ಚೆನ್ನಾಗಿತ್ತು. ಇಂದು ತೇಜಸ್ವಿಯವರು ಇಲ್ಲದಿದ್ದರೂ ಅವರ ಪುಸ್ತಕಗಳು ಪ್ರಕೃತಿ ಹಾಗು ನಮ್ಮ ನಡುವೆ ಎಂದೆಂದಿಗೂ ಶಾಶ್ವತ ….
ಅವರ ಕಥೆಗಳನ್ನೂ ಓದುತ್ತಿದ್ದರೆ ಪ್ರತಿ ಸನ್ನಿವೇಶಗಳು ನಮ್ಮ ನಡುವೆ ಹಾದು ಹೋಗುತ್ತವೆ .