ವಿದ್ಯಾಭ್ಯಾಸಕ್ಕಾಗಿ ಪರಶುರಾಮನಲ್ಲಿಗೆ ಹೋದ ಕರ್ಣ ತನ್ನ ಹುಟ್ಟಿನ ವಿಚಾರವನ್ನು ಮರೆಮಾಚಿದ್ದ. ಒಂದಿನ ಕರ್ಣನ ತೊಡೆಯ ಮೇಲೆ ತಲೆಯಿಟ್ಟು ಪರಶುರಾಮ ನಿದ್ದೆ ಹೋಗಿದ್ದಾಗ ದುಂಬಿಯ ರೂಪದಲ್ಲಿ ಬಂದ ದೇವೇಂದ್ರ, ಕರ್ಣನ ತೊಡೆಯನ್ನೇ ಕೊರೆದ. ಗುರುವಿಗೆ ನಿದ್ರಾಭಂಗವಾಗಬಾರದೆಂದು ಕರ್ಣ ಆ ನೋವನ್ನು ಸಹಿಸಿಕೊಂಡ. ಅಲ್ಲೇ ಎಡವಟ್ಟಾಯಿತು. ಎಚ್ಚರವಾದ ನಂತರ ಪರಶುರಾಮ, ಕರ್ಣನ ತೊಡೆಯಿಂದ ನೆತ್ತರು ಸೋರುತ್ತಿರುವುದನ್ನು ನೋಡಿದ. ಇಂಥ ನೋವನ್ನು ಸಹಿಸಿಕೊಂಡಿದ್ದಾನೆಂದ ಮೇಲೆ ಆತ ಕ್ಷತ್ರಿಯನೇ ಎಂಬುದು ಖಚಿತವಾಯಿತು. ಶಾಪವಿತ್ತ. ವಿದ್ಯೆ ವ್ಯರ್ಥವಾಯಿತು.
ಕರ್ಣ ಇಷ್ಟೊಂದು ಗಟ್ಟಿಗನಾದರೆ, ಸಣ್ಣದೊಂದು ನೋವನ್ನು ಕೂಡ ಸಹಿಸಲಾಗದವರೂ ರಾಜವಂಶದಲ್ಲಿದ್ದರೆಂಬುದಕ್ಕೆ ಪುರಾಣದಲ್ಲಿ ಉದಾಹರಣೆಗಳು ಸಿಗುತ್ತವೆ.
ಅಂಥ ಒಬ್ಬನೆಂದರೆ “ಜಂತು”. ಆತ ಸೋಮಕ ಎಂಬ ರಾಜನ ಪುತ್ರ. ಒಮ್ಮೆ ಆತನನ್ನು ಇರುವೆಯೊಂದು ಕಚ್ಚಿತಂತೆ. ಆ ನೋವನ್ನು ತಡೆಯಲಾರದೆ ಆತ ಅಳತೊಡಗಿದನಂತೆ. ಇರುವೆ ಕಚ್ಚಿದ್ದಕ್ಕೇ ಅಳುವವನನ್ನು ನೋಡಿ ಆತ ನಿಷ್ಪ್ರಯೋಜಕನೆಂದು ಬಗೆದ ರಾಜ, ಆತನನ್ನೇ ಯಜ್ಞಪಶುವನ್ನಾಗಿ ಅಗ್ನಿಗೆ ಆಹುತಿ ಕೊಟ್ಟನೆಂದು ಪುರಾಣದಲ್ಲಿ ಬರುತ್ತದೆ.
0 ಪ್ರತಿಕ್ರಿಯೆಗಳು