ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನೇ ಪದೇ ಪದೇ ಕಣ್ಮುಂದೆ ಬರ್ತಿದ್ದಾನೆ..

renuka ramanand

ರೇಣುಕಾ ರಮಾನಂದ 

ಗಣಪನ ಹಬ್ಬಕ್ಕೆ ಹೊಸಬಟ್ಟೆ ಕೊಡಿಸಲು ತುಂಡುಭೂಮಿ ರೈತ ಅಪ್ಪನ ಹತ್ತಿರ ದುಡ್ಡಿರುತ್ತಿರಲಿಲ್ಲ…

ಜೊತೆಯಲ್ಲಿ ಓದುವ ಎಲ್ಲರೂ ಸಂಜೆ ಬಗೆಬಗೆಯ ಬಣ್ಣದ ಅಂಗಿ ತೊಟ್ಟು ಊರಕೇರಿಯಲ್ಲಿ ಕೂರಿಸಿದ ಗಣಪನ ನೋಡಲು ಗುಂಪುಗೂಡಿ ಹೋಗುವಾಗ ನನಗೊಬ್ಬಳಿಗೆ ಅವರ ಜೊತೆ ಹಳೆ ಅಂಗಿ ತೊಟ್ಟು ಹೋಗಲು ಸತ್ತುಹೋಗುವಷ್ಟು ಬೇಸರ, ನಾಚಿಕೆ, ಕೀಳರಿಮೆ ಎಲ್ಲವೂ ಆಗುತ್ತಿತ್ತು….

ganesha2ಹಾಗಾಗಿ ಅವ್ವ ಅಪ್ಪನ ಸಂಬಂಧಿಕರು ಯಾರಾದರೂ ಮನೆಗೆ ಬಂದಾಗ ಕೊಟ್ಟ ಐದೋ ಹತ್ತೋ ರೂಪಾಯಿ ಕೂಡಿಟ್ಟು ಇಟ್ಟು… ಸ್ಕೂಲಿಗೆ ಹೋಗೋ ದಾರಿಯಲ್ಲಿರೋ ಕಡ್ಲೆ ,ಪೆಪ್ಪರಮೆಂಟು ಅಂಗಡಿಗಳು ಕೈಬೀಸಿ ಕರೆದರೂ ಅಲ್ಲೆಲ್ಲೂ ನಿಲ್ಲದೇ, ಉಳಿದವರು ಕೊಂಡು ಮೆಲ್ಲುವ ತಿಂಡಿಗಳನ್ನು ಕಡೆಗಣ್ಣಲ್ಲೂ ನೋಡದೇ ನನ್ನ ದುಡ್ಡು ಕೂಡಿಸೋ ಕ್ರಿಯೆಯನ್ನು ಜಾರಿಯಲ್ಲಿಟ್ಟು ಗಣಪತಿ ಹಬ್ಬಕ್ಕೊಂದು ಹೊಸ ಅಂಗಿ ಕೊಳ್ಳುತ್ತಿದ್ದೆ…

ಸಂಜೆ ಎಲ್ಲರ ಜೊತೆಗೂಡಿ ಊರಲ್ಲಿನ ಐದಾರು ಗಣಪನ ದರುಶನ ಮಾಡಿ ಕೈಗೆ ಬೀಳೋ ಕಡಲೆಹುಡಿಯ ಪ್ರಸಾದ ಮೆದ್ದು, ಕೂರಿಸಿದ ಮನೆಯವರು ತಾಸುಗಟ್ಟಲೆ ಉಮೇದಿಯಿಂದ ಬಾರಿಸುವ ಗುಮಟೆ ಪಾಂಗು, ಡೋಲಕಿಗಳನ್ನು ಕ್ಷಣಹೊತ್ತು ನಿಂತು ನೋಡಿ (ಮೈಕಾಸುರನ ಹಾವಳಿ ಕಮ್ಮಿ ಇತ್ತು) ಚಂದ್ರನೆಲ್ಲಾದರೂ ಕಣ್ಣಿಗೆಬಿದ್ದರೆ ಎಂದು ಹೋಗಿಬರುವವರೆಗೂ ತಗ್ಗಿಸದ ತಲೆ ಎತ್ತದೇ ಮನೆಗೆ ಬರುತ್ತಿದ್ದೆ.

ಗಣಪನಿಗಿಂತಲೂ ಅವನ ಎಡಬಲಕ್ಕೆ ಕೂರಿಸಿದ ಪೌರಾಣಿಕ ಪ್ರತಿಮೆಗಳ ವಣ೯ನೆಯನ್ನು ಅವ್ವನೊಂದಿಗೆ ಮಾಡುತ್ತ ಉಂಡು ನಿದ್ದೆಹೋಗುತ್ತಿದ್ದೆ…

ಹೊಸ ಅಂಗಿ ದೀಪಾವಳಿಗೆಂದು ಟ್ರಂಕು ಸೇರುತ್ತಿತ್ತು….

ಐದಾರು ದಿನಗಳವರೆಗೂ ಶಾಲೆಯದಾರಿಯಲ್ಲಿ ಗಣಪನ ಹೊರತು ಇನ್ಯಾವ ಚಚೆ೯ಗಳೂ ನಮ್ಮೆಲ್ಲ ಸಹಪಾಠಿಗಳ ಮಧ್ಯೆ ನಡೆಯುತ್ತಿರಲಿಲ್ಲ.. ಕಷ್ಟದಲ್ಲೂ ಚಿಕ್ಕಪುಟ್ಟ ಸಂಗತಿಗಳನ್ನು ಅನುಭವಿಸಿ ಸಂಭ್ರಮಿಸುತ್ತಿದ್ದವು…..

ಈಗಲೂ ಅದೇ ಗಣಪ… ಸಾವಿರಪಟ್ಟು ಅಬ್ಬರದಿಂದ ಪೂಜೆಗೊಳ್ಳುತ್ತಿದ್ದಾನೆ… ಆದರೆ ಯಾಕೋ ನನಗೆ ಅಂದಿನ ಗಣಪನದೇ ಎಚ್ಚರ.. ಅವನೇ ಪದೇ ಪದೇ ಕಣ್ಮುಂದೆ ಬರ್ತಿದ್ದಾನೆ….

‍ಲೇಖಕರು Admin

5 September, 2016

1 Comment

  1. Anonymous

    ಉತ್ತಮ ಬರಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading