ಇದು, ಪ್ರಸಿದ್ಧ ರಷ್ಯನ್ ಲೇಖಕ ದಾಸ್ತೊಯೆವ್ ಸ್ಕಿ ಸಾವಿನ ಬಾಯಲ್ಲಿ ಹೋಗಿ ನಿಂತಿದ್ದ ಕಥೆ. ಇನ್ನೇನು ಧಡಲ್ ಎಂದು ಗುಂಡು ಸಿಡಿಯುವುದಿತ್ತು. ಅಷ್ಟು ಹೊತ್ತಿಗೆ ಸರಿದು ಹೋಯಿತು ಸಾವಿನ ತೆರೆ. ತೆರೆದುಕೊಂಡಿತ್ತು ಬದುಕು ಮತ್ತೆ.
೧೮೪೯ ಯುರೋಪಿನಲ್ಲಿ ಕ್ರಾಂತಿಗಳ ವರ್ಷ. ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಬಂದದ್ದೂ ಆ ಹೊತ್ತಿನಲ್ಲೇ. ದಾಸ್ತೊಯೆವ್ ಸ್ಕಿಗೆ ಕ್ರಾಂತಿಯ ಬಗ್ಗೆ ಚರ್ಚೆ ನಡೆಸುತ್ತಿದ್ದ ಪೆಟ್ರಶೆವ್ ಸ್ಕಿಯ ಪರಿಚಯವಿತ್ತು. ಆ ವರ್ಷದ ಏಪ್ರಿಲ್ ನಲ್ಲಿ ದಾಸ್ತೊಯೆವ್ ಸ್ಕಿ ಮತ್ತು ಇತರ ೩೩ ಮಂದಿ ಪೆಟ್ರಶೆವ್ ಸ್ಕಿಯ ನಿಕಟವರ್ತಿಗಳ ದಸ್ತಗಿರಿಯಾಯಿತು. ಕ್ರಾಂತಿಕಾರಕ, ಸಂಚುಗಾರ ಎಂದು ದಾಸ್ತೊಯೆವ್ ಸ್ಕಿಯ ವಿರುದ್ಧ ತೀರ್ಪು ಬಂತು. ಆಗ ಮರಣ ದಂಡನೆ ವಿಧಿಸಲ್ಪಟ್ಟ ೨೧ ಜನರಲ್ಲಿ ದಾಸ್ತೊಯೆವ್ ಸ್ಕಿಯೂ ಒಬ್ಬ.
ಡಿಸೆಂಬರ್ ೨೨. ಎಲ್ಲ ಆಪಾದಿತರನ್ನು ಬಂದೂಕು ಗುರಿ ಹಿಡಿದ ಸೈನಿಕರ ಮುಂದೆ ನಿಲ್ಲಿಸಲಾಯಿತು. ಇನ್ನೇನು ಆ ಸೈನಿಕರು ಹಿಡಿದ ಬಂದೂಕಿನ ನಳಿಗೆಗಳಿಂದ ಗುಂಡು ಸಿಡಿಯಬೇಕು. ಅದಕ್ಕಾಗಿ ಆಜ್ಞೆ-ಸೇನಾಪತಿಯ ಒಂದು ಪುಟ್ಟ ಸಂಜ್ಞೆ ಹೊರಬೀಳುವುದಷ್ಟೇ ಬಾಕಿಯಿತ್ತು.
ಅಷ್ಟರಲ್ಲಿ ಧಾವಿಸಿ ಬಂದಿದ್ದ ಆ ದೂತ. ಅವನು ತಂದ ಸಂದೇಶ ಮರಣದಂಡನೆಗೆ ಒಳಗಾಗಬೇಕಿದ್ದವರ ಪರವಾಗಿತ್ತು. ಗುಂಡು ಸಿಡಿಯಲಿಲ್ಲ.
ಹಾಗೆ ಆ ಅಷ್ಟು ಮಂದಿ ಸಾವಿಗೆದುರಾಗಿ ನಿಂತ ಕ್ಷಣ, ಅನಂತರ ಸಾವು ಬೆನ್ನು ಹಾಕಿ ಹೋದ ಘಳಿಗೆ ಅದೆಂಥ ಅನುಭವವಿರಬಹುದು ಎಂದು ಊಹಿಸಿಕೊಂಡರೇ ತಲ್ಲಣವಾಗದಿರದು. ಆ ಅನುಭವದಿಂದ ಕೈದಿಯೊಬ್ಬ ಹುಚ್ಚನೇ ಆದ ಎನ್ನುತ್ತದೆ ಇತಿಹಾಸ. ಈ ಘಟನೆಯ ಕೆಲವೇ ಗಂಟೆಗಳ ನಂತರ ದಾಸ್ತೊಯೆವ್ ಸ್ಕಿ ತನ್ನ ಸೋದರ ಮಿಹೇಲ್ ನಿಗೆ ಆ ಅನುಭವವನ್ನು ಪತ್ರದಲ್ಲಿ ಬರೆದದ್ದಿದೆ. ಸಾವಿನ ಬಾಯಲ್ಲಿ ಹೋಗಿ ನಿಂತು ಮತ್ತೆ ಬದುಕಿಗೆ ಮರಳಿದ ಪರಿಯನ್ನು ಮುಂದೆಯೂ ಆತ ಮತ್ತೆ ಮತ್ತೆ ತನ್ನ ಬರಹದಲ್ಲಿ ಹೇಳಿದ್ದಾನೆ.
0 ಪ್ರತಿಕ್ರಿಯೆಗಳು