ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲ್ಲೊ೦ದು ಲೋಕವು೦ಟು, ಇಲ್ಲೊ೦ದು ದಾರಿ ಉ೦ಟು..

ಡಾ ಎನ್ ಜಗದೀಶ್ ಕೊಪ್ಪ ಅವರು ನಿನ್ನೆ ಬರೆದಿದ್ದ ’ನನ್ನ ನೋವುಗಳಿಗೆ ಮದ್ದುಗಳಿಲ್ಲ’ ಕವನ ಓದಿದ ಮಹದೇವ್ ಹಡಪದ್ ಅದರ ಬಗ್ಗೆ ತಮ್ಮ ಅಭಿಪ್ರಾಯ ಕಳುಹಿಸಿದ್ದರು.  ಅದು ಕೇವಲ ಒ೦ದು ಪ್ರತಿಕ್ರಿಯೆಯಲ್ಲ, ಅದರಲ್ಲಿ ಅವರು ಹ೦ಚಿಕೊ೦ಡ ಘಟನೆಗಳನ್ನು ಅವಧಿಯ ಓದುಗರು ಓದಲಿ ಎ೦ದು ಅದನ್ನು ಇಲ್ಲಿ, ಪ್ರಕಟಿಸುತ್ತಿದ್ದೆವೆ.

– ಮಹದೇವ್ ಹಡಪದ್

ಪ್ರೀತಿಯಿಂದ ಬದುಕು ಸಂತೃಪ್ತಿ ಪಡೆಯಿತು ನೋವೆಂಬ ಮದ್ದನ್ನೇ ತನ್ನದಾಗಿಸಿಕೊಂಡಿತು ಕೊನೆಗೆ ಮದ್ದಿಲ್ಲದ ನೋವನ್ನೇ ಪಡೆಯಿತು ಅದೇ ಧಾರವಾಡದ ಕಡಪಾ ಮೈದಾನದ ಮುಂದಿನ ಪುಟಪಾತ್ ಮೇಲೆ, ನಾಲ್ಕು ವರ್ಷದ ಹಿಂದೆ (ಆ ದಿವಸ ನಾನು ಕಿತ್ತೂರಿನ ಹತ್ತಿರದ ಬೀಡಿ ಗ್ರಾಮಕ್ಕೆ ಹೋಗಲು ತಯಾರಾಗಿ ಬಂದಿದ್ದೆ, ಶಾರದಾ ದಾಬಡೆಯವರು ಬರುವುದನ್ನು ಕಾಯುತ್ತ ನಿಂತಿದ್ದಾಗ…) ನಾನೊಂದು ದೃಶ್ಯ ಕಂಡಿದ್ದೆ. ಹೊಟ್ಟೆಯನ್ನು ನೆಲಕ್ಕಂಟಿಸಿ ಕಂವುಚಿ ಮಲಗಿದ್ದ ಒಬ್ಬ ಮಾನಸಿಕ ಅಸ್ವಸ್ಥ ಹೆಣಮಗಳು ಯಾರೋ ಕೊಟ್ಟು ಹೋಗಿದ್ದ ದೋಸೆ ಒಂದನ್ನು, ತನ್ನಂತೆ ಹಸಿದುಕೊಂಡು ಜುಬ್ಲೀ ಸರ್ಕಲ್ಲಿನ ಆ ಮೂಲೆ ಈ ಮೂಲೆ ತಿರುಗುತ್ತಿದ್ದ ನಾಯಿಗೆ ಸಮಪಾಲು ಮಾಡಿ ಹಾಕಿ ತಾನೂ ತಿನ್ನುತ್ತಿದ್ದಳು. ಮತ್ತೊಂದು ಸಲ ಧಾರವಾಡ ರಂಗಾಯಣ ಸುರುವಾತಿಗೆ ನಾನೂ ಅಲ್ಲಿ ಸ್ವಿಡಿಷ್ ಪ್ರಾಜೆಕ್ಟನಲ್ಲಿ ಕೆಲಸಮಾಡುತ್ತದ್ದಾಗ -ಅದೇ ಊರಿನ ಕಾಲೇಜು ವಿದ್ಯಾರ್ಥಿಗಳು ಹೇಮಾಮಾಲಿನಿ ಎಂದು ಕಾಡಿಸುವ ಮೋಡಕಾ ಆಯುವ ಹುಚ್ಚಿಯೊಬ್ಬಳು ಬಸವರಾಜ ರಾಜಗುರು ಬಯಲು ರಂಗಮಂದಿರದ ಹಿಂದಿನ ಅಕ್ಕಮಹಾದೇವಿ ಕಲ್ಯಾಣಮಂಟಪದ ಒಂದು ಮೂಲೆಯಲ್ಲಿ ಚಳಿಗೆ ಗಡಗಡ ನಡಗುತ್ತ ಕುಳಿತಿದ್ದಳು. ಆಗ ಅಲ್ಲಿಗೆ ಮಾನಸಿಕ ಅಸ್ವಸ್ಥ ತಾಯಿಯೊಬ್ಬಳು ತನ್ನ ಎರಡು ಎಳೆ ಕಂದಮ್ಮಗಳನ್ನು ಕರೆದುಕೊಂಡು ಬಂದಿದ್ದಳು. ಆ ಮಕ್ಕಳು ಚಳಿಗೆ ನಡಗುವುದನ್ನು ನೋಡಿದ ಈ ಹೇಮಾಮಾಲಿನಿ ತನ್ನ ಮೈಮೇಲಿದ್ದ ಶರ್ಟ ಬಿಚ್ಚಿಕೊಟ್ಟಿದ್ದಳು. (ನಂತರ ಹೆಗ್ಗೊಡಿನ ಜೀವನ್ ತನ್ನ ಹಳೆಯ ಶರ್ಟನ್ನ ಹೇಮಾಮಾಲಿನಿಗೆ ಕೊಟ್ಟ) ಈ ಎರಡು ಘಟನೆ ನನ್ನನ್ನ ಆಗಾಗ್ಗೆ ಕಾಡುತ್ತವೆ ಸಾರ್. ನಿಮ್ಮ ಲೇಖನ ಓದಿದ ಮೇಲೆ ಆ ಎರಡು ಕತೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಆದರೆ ವ್ಯವಸ್ಥೆಯ ಅಹಂಕಾರದ ಜೊತೆಗಿರುವ ನಾವು ನೂರೆಂಟು ತೆರನಾಗಿ ಯೋಚಿಸಿ ನಮ್ಮಲ್ಲಿದ್ದದ್ದನ್ನು ಹಂಚಿಕೊಳ್ಳುತ್ತೇವೆ. ಆದರೆ ಆ ಇಬ್ಬರು ಮಾನಸಿಕರು ಮದ್ದಿಲ್ಲದ ನೋವನ್ನೆ ಪಡೆದವರು ಎಂಥಾ ಉದಾತ್ತ ಸಜ್ಜನರು ಅಲ್ಲವಾ ?]]>

‍ಲೇಖಕರು G

5 July, 2012

3 Comments

  1. Gopal Wajapeyi

    ನೀವು ‘ಚಿತ್ರಿಸಿದ’ ಎರಡೂ ಪ್ರಸಂಗಗಳು ನನ್ನ ಮನ ಕಲಕಿದವು ಮಹಾದೇವ…
    ಕಣ್ಣು ಇದ್ದವರು ಕಳ್ಳು ಇದ್ದವರು ಕಣ್ಣೀರು ಮಿಡಿಯುತ್ತಾರೆ, ಕೈಲಾದ ನೆರವು ನೀಡುತ್ತಾರೆ.
    ಅವೇ ಇಲ್ಲದವರು ತಿರುವಿಕೊಂಡು ಓಡಾಡುತ್ತಾರೆ.

  2. armanikanth

    ಸಮಾಜದ ದೃಷ್ಟಿಯಲ್ಲಿ ಮಾನಸಿಕ ಅಸ್ವಸ್ಥ ಅನ್ನಿಸಿಕೊಂಡವರು ಮೆರೆದ ಮಾನವೀಯ ಅಂತಕರಣ ಮಾತಿಗೆ ನಿಲುಕದ್ದು…
    ಲೇಖನ ಓದಿ ಕಣ್ತುಂಬಿ ಬಂತು..
    ಮಣಿಕಾಂತ್.ಎ.ಆರ್..

  3. Ramesh Aroli

    Dear Hadapad,
    ನೀವು ಹೆಸರಿಸಿರುವ ಹೇಮಾ ಮಾಲಿನಿಯನ್ನು ನಾನು ಕೆ.ಸಿ.ಡಿ ಕಾಲೇಜಿನ ಮುಂಭಾಗದ ಗೂಡಂಗಡಿಯಲ್ಲಿ ಆಕೆ ರದ್ದಿ ಆಯೋಕೆ ಬಂದು ನಾಷ್ಟ ಮಾಡಬೇಕಾದರೆ ದಿನಾಲು ನೋಡುತಿದ್ದೆ. ಯಾವತ್ತು ಯಾರ ಮುಂದೇನೂ ಕೈ ಚಾಚುತ್ತಿದ್ದಿಲ್ಲ. ಪ್ರೀತಿಯಿಂದ ಮಾತಾಡಿಸಿದರೆ “ಆರಾಮದೀರಿ” ಅಂತ ಮಾತು ಶುರು ಮಾಡುತ್ತಿದ್ದಳು. ಆಕೆ ತುಂಬ ಪ್ರತಿಭಾವಂತೆ, rank student ಆಗಿದ್ದಳಂತೆ. ಲವ್ failure ಆಕೆಯನ್ನು ಈ ಸ್ಥಿತಿಗೆ ತಂದಿದೆ ಅಂತ ಆ ಗೂಡಂಗಡಿ ಮಾಲಕರು ಹೇಳುತಿದ್ದರು. ಯಾವ ಪುಸ್ತಕಗಳು ಹೇಳದ, ಯಾವ ಮಾಸ್ತಾರರಿಗೂ ತಿಳಿಯದ ಕತೆಗಳಿವು. ಆಪ್ತ ಬರಹ ಹಿಡಿಸಿತು.
    ರಮೇಶ ಅರೋಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading