ಕೊಯ್ಯಗುರ್ರಂ(ಮರಗುದುರೆ)
ನಗ್ನಮುನಿಯವರ ಕವನದ ಅನುವಾದದ ಪ್ರಯತ್ನ…
ಅಜ್ಜೀಮನೆ ಗಣೇಶ
ಸಾಗರವೇ ನೆನಪಿದೆಯೇ,,
ತೀರದಲಿ ಅಲೆಯುತ್ತಿದ್ದ
ಬಾಲ್ಯದಲ್ಲಿ
ಥೇಟು ಜೂಲು ನಾಯಿ ಹಾಗೆ
ಕಾಲು ಸುತ್ತುತ್ತಿದ್ದೆ ,
ನೆನಪಿಸಿಕೋ,
ಆ ಅಲೆಗಳು
ಕಾಲು ನೆಕ್ಕುವಾಗ
ನಿನ್ನನ್ನು ಅಮಾಯಕ ಪ್ರಾಣಿ ಎನಿಸಿದ್ದೆ ..
ಮೈದಡವಿ ಮದ್ದಾಡ ಬೇಕೆಂದಿದ್ದೆ,
ಮೂಕ ಬೋರ್ಗೆರತವನು
ಸಂತೈಸಿ
ಲಾಲಿ ಹಾಡಬೇಕೆಂದಿದ್ದೆ,
ನಿಜ,
ಸಮುದ್ರದ ಸ್ನೇಹಿತನಾಗಬಯಸಿದ್ದೆ.
ಆದ್ರೆ……
ಸಮುದ್ರವೆದ್ದ ಸಮಯ
ರವಿಚಂದ್ರರೇ ಕ್ಷುದ್ರರಾದ ಕ್ಷಣ
ಅರಿಯಲಾಗಲಿಲ್ಲ ನನಗೆ,
ಅಲೆಗಳ ಕ್ರೂರತನವನ್ನಾ!
ಕಡಲ್ಗಾಳಿಯ ಹರಿತವನ್ನಾ!
ಕಣ್ಣೀರಿನ ರಾಜಕೀಯವನ್ನಾ!
ಸರ್ವನಾಶ…!
ಅಲ್ಲದೇ ಮತ್ತೇನು
ನಿಸರ್ಗ ನಂಬಿದ ಜೀವಕೋಟಿ
ಕಳೇಬರಗಳಾಗಿ ತೇಲಿದ ಆ ಹೊತ್ತು…
ಹೊತ್ತಿನ ತುತ್ತಿಗೆ, ಹತ್ತೂರು ಸುತ್ತಿದವರಲ್ಲಿ
ಉಸಿರು ತೆತ್ತಿದವರೆಷ್ಟೋ..
ಅಡ್ಡಿಯಿಲ್ಲ
ಹೆಣಗಳಿಗೆ ಅಡ್ರೆಸ್ ಇದ್ದರೇನು
ಇಲ್ಲದಿದ್ದರೇನು ,
ನೆರಳಿಟ್ಟ ವಟವೃಕ್ಷ ಉರುಳಿಬಿದ್ದರೂ
ಬಿರುಗಾಳಿಗೆ ಗುಬ್ಬಿ ತರಗೆಲೆಯಂತಾದರೂ
ಕರೆಂಟು ಕಂಬಗಳೆಲ್ಲಾ ಛಿದ್ರವಾದರೂ
ಪರವಾಗಿಲ್ಲ…
ಜಲಸುಳಿಯ ಪ್ರಳಯಕ್ಕಳಿದು
ಹಳಿದ ಇಳೆಯ ಆರ್ತನಾದದ
ಕಹಳೆ,
ಅದ್ಯಾವ ಮರಣದಳಿವಿನ
ದ್ವೀಪದಲ್ಲುಳಿಯಿತೋ…?
ನೀರಿನಲುಗಿಗೆ
ಕೊರಳನೊಡ್ಡಲಾಗದೇ
ರೆಪ್ಪೆಯ ರೆಕ್ಕೆಗಳು ಬಡಿಯುತ್ತ
ಹೋರುತ್ತಿದ್ದ ತೋಳಿನ
ತೆಕ್ಕೆಯೇ ಮುರಿದು ಬಿದ್ದು ಸೋತಿತ್ತು..
ಬಾಯ್ತೆರದ ಮೃತ್ಯುವಿನೆದುರು
ಸಮಾನವಾಗಿ ತೇಲುತ್ತಿತ್ತು
ಸತ್ತ ಸಮಸ್ತ ಸೃಷ್ಟಿ ಸಂಕುಲಗೆಳೆಲ್ಲಾ
ಬದುಕಿಗೆ ಹೆಗಲು ಕೊಟ್ಟು
ಬುಜದ ಮೇಲಿಟ್ಟ ಕೈಗಳ
ಅಲಕ್ಷ್ಯ ಅಹಂಕಾರದ ಸಾಕ್ಷಿಯಾಗಿ
ಆದರೂ ತೊಂದರೆಯಿಲ್ಲ..
ಕೊಳೆವ ಕಳೆಬರಹಗಳಿಗೆ
ಸಮಜಾಯಿಷಿ ಬೇಕಿಲ್ಲ…
ಮೊನಚಾದ ಸುಂದರ ಕವಿತೆ. ಅನುವಾದ ಅನಿಸದಷ್ಟು ಸಹಜವಾಗಿದೆ.
“ಅಲೆಗಳು ಕಾಲು ನೆಕ್ಕುವಾಗ……” ಈ ಒಂದು ಸಾಲೆ ಇಡೀ ಕವನ ಹಿಡಿದಿಟ್ಟಂತಿದೆ. ಅದೆಷ್ಟು ಸುಂದರವಾದ ಸಾಲು. ಹೃದಯದಲ್ಲಿ ಹೇಳಲಾರದ ಉದ್ವೇಗ. ಬರೆದುಬಿಡಲೆ ನಾನೊಂದು ಸಾಲು ಅನ್ನುವಂತಾಗಿದೆ!
ಅಲೆಗಳು ಕಾಲು ನೆಕ್ಕುವಾಗ
ಕಚಗುಳಿಯಾಗುತ್ತಿದೆ
ತಂಪನೆಯ ಅನುಭವದಲ್ಲಿ
ಮನ ಕಳೆದು ಹೋಗುತ್ತಿದೆ
ಭೋಗ೯ರೆಯುವ ನಾದಕ್ಕೊಂದು
ಸ್ವರ ಸೇರಿಸಿ ಸಮುದ್ರ ರಾಜನ
ಕೂಗಿ ಕರೆಯುವ ಬಯಕೆ
ನಾಭಿಯಿಂದ ಉದ್ಭವಿಸುವುದು
ಸಂತಸದ ಅಲೆಗಳು
ನಿನ್ನಲೆಗಳ ಜೊತೆ ಬೆರೆತು
ತನು ರಂಗಾಗಿದೆ.