ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ

ಚಿತ್ರಗಳು: ಮಹೇಶ್

—-

ಲಾಬಿಗಳ ನಡುವೆ `ಅಮ್ಮ ಪ್ರಶಸ್ತಿ’ ಪಾರದರ್ಶಕ: ಸಿದ್ದರಾಮಯ್ಯ ಶ್ಲಾಘನೆ

ಸೇಡಂ, ನ.೨೬- ನಾಡೋಜದಿಂದ ಹಿಡಿದು ನೃಪತುಂಗ ಪ್ರಶಸ್ತಿಯವರೆಗೂ ಲಾಬಿಗೆ ಒಳಗಾಗುತ್ತಿರುವುದು ನೋವಿನ ಸಂಗತಿ. ಆದರೆ, ಪಾರದರ್ಶಕ ಆಯ್ಕೆಮಾಡುವ ಮೂಲಕ ಅಮ್ಮ ಪ್ರಶಸ್ತಿ ಮಾದರಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರೂ ಆಗಿರುವ ಸಂಸ್ಕೃತಿ ಚಿಂತಕರಾದ ಶ್ರೀ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ಸೇಡಂ ಪಟ್ಟಣದ ಐತಿಹಾಸಿಕ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ರವಿವಾರ ಸಂಜೆ ಆಯೋಜಿಸಿದ್ದ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನವು ಕೊಡಮಾಡುವ ೨೩ನೇ ವರ್ಷದ ರಾಜ್ಯ ಮಟ್ಟದ `ಅಮ್ಮ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಸಾಹಿತಿಗಳಾದವರು ಪ್ರಶಸ್ತಿಗಾಗಿ ಬರೆಯಬಾರದು. ಸಮಾಜದ ಬದಲಾವಣೆಗಾಗಿ ಸಾಹಿತ್ಯ ರಚನೆಯಾಗಬೇಕು ಎಂದರು.

ಶಾಸನ ತಜ್ಞರಾದ ಡಾ.ದೇವರಕೊಂಡಾರೆಡ್ಡಿ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪನೆಯ ಅಗತ್ಯವಿದೆ. ಆ ಮೂಲಕ ಇಲ್ಲಿಯ ಪ್ರತಿಭೆಗಳಿಗೆ ಬಹುದೊಡ್ಡ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಮಾತನಾಡಿ, ಮೌಲಿಕ ಮತ್ತು ದರ್ಶನವೀಯುವ ಕೃತಿಗಳನ್ನು ಇವತ್ತಿನ ಸಾಹಿತ್ಯದ ಸಮಕಾಲೀನ ಸಂದರ್ಭದಲ್ಲಿ ಹೆಚ್ಚಳವಾಗಬೇಕಿದೆ. ಅಪ್‌ಡೇಟ್ ಮತ್ತು ವಿಜಡಂ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಅಮ್ಮ ಪ್ರಶಸ್ತಿಯ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ವೇದಿಕೆಯಲ್ಲಿದ್ದರು. ಡಾ.ಮಿರ್ಜಾ ಬಷೀರ, ಚೈತ್ರಾ ಶಿವಯೋಗಿಮಠ, ಸುಚಿತ್ರಾ ಹೆಗಡೆ, ಡಾ.ಸ್ವಾಮಿರಾವ ಕುಲಕರ್ಣಿ, ಡಾ.ಓಂಪ್ರಕಾಶ ಪಾಟೀಲ, ಶಶಿಕಲಾ ಮಕ್ತಾಲ್ ಯಾದಗಿರಿ, ಶೇಖ ಮಹೆಬೂಬ ಸೇಡಂ ಹಾಗೂ ನಾಗೇಶನಾಯಕ ಮಾತನಾಡಿದರು.

ಇದೇ ಸಂದರ್ಭದಲ್ಲಿ ದಿ.ನಾಗಪ್ಪ ಮಾಸ್ಟರ್ ಮುನ್ನೂರ್ ಅವರ ಸ್ಮರಣಾರ್ಥ ಇಬ್ಬರು ಬಡ ಹೆಣ್ಣುಮಕ್ಕಳಾದ ಶ್ರೀಮತಿ ಶಮೀಮಾ ಮತ್ತು ಪಾರ್ವತಿ ಚಂದಾಪುರ ಅವರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ಸುಕಿ ಸಾಂಸ್ಕೃತಿಕ ಸಂಸ್ಥೆಯ ಮುಖ್ಯಸ್ಥ ಕಿರಣ್ ಪಾಟೀಲ ಅವರು ಅಮ್ಮನ ಕುರಿತು ಹಾಡುಗಳನ್ನು ಹಾಡಿದರು. ಸಿದ್ದಪ್ರಸಾದರೆಡ್ಡಿ ಸ್ವಾಗತಿಸಿದರು. ವಿಜಯ ಭಾಸ್ಕರರೆಡ್ಡಿ ವಂದಿಸಿದರು. ಮಹಿಪಾಲರೆಡ್ಡಿ ಮುನ್ನೂರ್ ಕಾರ್ಯಕ್ರಮ ನಿರೂಪಿಸಿದರು.

‍ಲೇಖಕರು avadhi

28 November, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading