ನೀನಾಸಂ ತನ್ನ ಮರು ತಿರುಗಾಟದಲ್ಲಿ ಪ್ರದರ್ಶಿಸಿದ ನಾಟಕ ‘ನೀರಿನ ನಿಲುತಾಣ’
ಇದು ನೀರಿನ ನಿಲುತಾಣ ಅಲ್ಲ ನಮ್ಮ ಸಹನೆಯನ್ನು ಕೆಣಕಿದ ತಾಣ ಎನ್ನುವ ರೀತಿಯ ಪ್ರತಿಕ್ರಿಯೆಗಳು ಬಂದಿದ್ದವು
‘ಅವಧಿ’ಯಲ್ಲಿ ಈ ಎಲ್ಲವೂ ಪ್ರಕಟವಾಗಿದೆ.
ಈಗ ಅಭಯಸಿಂಹ ತಮ್ಮ ಭಿನ್ನ ನೋಟವನ್ನು ಇಲ್ಲಿ ಮಂಡಿಸಿದ್ದಾರೆ
ನಿಮ್ಮ ಪ್ರತಿಕ್ರಿಯೆಗೂ ಸ್ವಾಗತ
ನಾಟಕ ನನ್ನ ಮಾಧ್ಯಮವಲ್ಲ. ಆದರೂ ಅವಧಿಯಲ್ಲಿ ನಡೆಯುತ್ತಿರುವ ಚರ್ಚೆಗೆ ನನ್ನ ಅಭಿಪ್ರಾಯ ಸೇರಿಸಲೇ ಬೇಕು ಅನಿಸುತ್ತಿದೆ. ಹಾಗಾಗಿ ನಾಲ್ಕು ಮಾತು ನಾನು ನೀರಿನ ನಿಲುತಾಣ ಅರ್ಥೈಸಿದಂತೆ.
ನಾಟಕದ ಹಿನ್ನೆಲೆ ಗೊತ್ತಿಲ್ಲದೆಯೂ ನಾಟಕ ನನ್ನನ್ನು ತಟ್ಟಬೇಕು, ನಾನು ಒಬ್ಬ ಸಾಮಾನ್ಯ ಪ್ರೇಕ್ಷಕ ಎಂಬ ಮಾತು ಓದಿದೆ. ಹೌದು, ಆ ಮಾತು ಸತ್ಯ. ಆದರೆ, ‘ನೀರಿನ ನಿಲುತಾಣ’ ನಾಟಕ ನನ್ನನ್ನು ಸ್ವತಂತ್ರವಾಗಿಯೇ ತಟ್ಟಿತು. ಆದರೆ ನನ್ನಲ್ಲಿ ಅದು ಹುಟ್ಟಿಸಿದ ಅರ್ಥ ನಾಟಕಕಾರ ಉದ್ದೇಶಿಸಿದ ಅರ್ಥವಾಗಲೇ ಬೇಕೆಂದಿಲ್ಲ ಎಂದು ನನ್ನ ನಂಬಿಕೆ. ಯಾವುದೇ ಕೃತಿಯಾದರೂ, ಅದು ನಮ್ಮ ಪೂರ್ವಾಗ್ರಹಗಳ, ನಮ್ಮ ಮನೋವಿಕಾರಗಳ ಉಳಿಪೆಟ್ಟಿಗೆ ಸಿಕ್ಕಿ ಹೊಸ ರೂಪಪಡೆದು ಸ್ಮೃತಿಯಲ್ಲಿ ಉಳಿಯುತ್ತದೆಯಷ್ಟೇ? ಕೃತಿ ಇಂಥಾ ಅವಕಾಶವನ್ನು ಹೆಚ್ಚು ಕಲ್ಪಿಸಿದಷ್ಟೂ ಕೃತಿಯ ಸಾರ್ಥಕತೆ ಅಲ್ಲಿದೆ ಎಂದು ನನ್ನ ಭಾವನೆ. ಅಂದು ಅಕಸ್ಮತ್ತಾಗಿ ನನ್ನ ಮನೆಗೆ ಬಂದಿದ್ದ ನೇಪಾಲೀ ಚಿತ್ರನಿರ್ದೇಶಕನನ್ನೂ ಅವನ ಮಡದಿಯನ್ನೂ ನಾನು ನೀನಾಸಂ ಮೇಲಿನ ಪ್ರೀತಿಗೆ ನಾಟಕ ತೋರಿಸಲು ಕರೆದೊಯ್ದಿದ್ದೆ. “ಅಯ್ಯೋ! ಕನ್ನಡ ಬರೋದಿಲ್ಲ!” ಎಂದರೂ ನಾಟಕಕ್ಕೆ ನನ್ನೊತ್ತಾಯಕ್ಕೆ ಅವರು ಬಂದರು. ಅದೃಷ್ಟಕ್ಕೆ ನಾಟಕದಲ್ಲಿ ಮಾತೇ ಇರಲಿಲ್ಲ. ಇಡೀ ನಾಟಕವನ್ನು ಗಾಢವಾಗಿ ನೋಡಿದ ಅವರಿಗೆ ಇಡೀ ನಾಟಕ ನೇಪಾಲದ ಸಮಸ್ಯೆಗಳನ್ನೇ ಕುರಿತಾಗಿ ಮಾತಾಡಿದಂತಾಯಿತಂತೆ! ರಾಜಸ್ಥಾನದವನೊಬ್ಬನಿಗೆ ಇದು ಕೇವಲ ಅವನೂರಿನ ನೀರಿನ ಸಮಸ್ಯೆಯಂತೆ ಕಂಡರೂ, ವಿಜ್ಞಾನಿಯೊಬ್ಬನಿಗೆ ಇದು ೨೦೨೦ನೇ ಇಸವಿಯಲ್ಲಿ ಗ್ಲೋಬಲ್ ವಾರ್ಮಿಂಗಿನಿಂದಾಗಿ ಉಧ್ಭವಿಸಬಹುದಾಗ ಸಂದರ್ಭದಂತೆ ಕಂಡರೂ, ಎಲ್ಲವೂ ಕೃತಿಯ ಗೆಲುವೆಂದೇ ನಾನು ನಂಬುವವನು.
ಇನ್ನು ನಾಟಕದಲ್ಲಿ ಸಂಗೀತವನ್ನು ಬಿಟ್ಟು ಸದ್ದನ್ನು ಸಮರ್ಥವಾಗಿ ಬಳಸಿಕೊಂಡದ್ದನ್ನು ನಾನು ಬಹಳ ಸಂತೋಷಪಟ್ಟೆ. ಉಡುಪಿಯ ಸೆಖೆಯಲ್ಲಿ ಬೆವರಿಳಿಸಿದವರ ಬಗ್ಗೆ ಖಂಡಿತಾ ಕರುಣೆಯಿದ್ದರೂ, ನಾಟಕದಲ್ಲಿನ ಶಬ್ದದ ಕುರಿತಾಗಿನ ಜಾಗರೂಕತೆ ನನಗೆ ಬಹಳ ಮೆಚ್ಚಿಗೆಯುಂಟು ಮಾಡಿತು. ಇಂದು ನಮ್ಮ ಮುಖ್ಯವಾಹಿನಿ ಸಿನೆಮಾ ಬಿಡಿ, ಬಹುತೇಕ ಸದಭಿರುಚಿಯ ಸಿನೆಮಾಗಳಲ್ಲೂ ಧ್ವನಿಸಂಯೋಜನೆ ಎಂಬ ಮಾತೇ ಇಲ್ಲ! ಧ್ವನಿ ಕಟ್ಟಿಕೊಡುವ ಪ್ರಪಂಚದ ಬಗ್ಗೆ ದೊಡ್ಡ ಉಪೇಕ್ಷೆಯೇ ಇರುವ ಇಂಥಾ ಸಂದರ್ಭದಲ್ಲಿ, ನೀರಿನ ಹರಿಯುವಿಕೆಯ ಧ್ವನಿ, ಅದು, ನಾಟಕದ, ನಟರ ಚಲನೆಯೊಡನೆ ಸ್ಪಂದಿಸುವ ರೀತಿ, ಸಂಗೀತ ಬಂದಾಗ ಅದರ ಲಯದೊಡನೆ ಬೆರೆಯುವ ಪರಿ, ಹೀಗೆ ಬಹಳ ಆನಂದ ನೀಡಿತು. ಒಂದು ಬಣ್ಣವನ್ನು ತನ್ನ ಕುಂಚದಲ್ಲಿ ಹಿಡಿದು, ಬೇರೆ ಬೇರೆ ಬಣ್ಣಗಳೊಡನೆ ಭಿನ್ನ ಪ್ರಮಾಣಗಳಲ್ಲಿ ಅದನ್ನು ಸೇರಿಸುತ್ತಾ ಮಾಯೆಯನ್ನು ರೂಪಿಸುವ ಚತುರ ಕಲಾವಿದನಂತೆ ನಾಟಕಕಾರ ನನಗಿಲ್ಲಿ ಕಂಡರು. ಇದಕ್ಕಾಗಿ ಅವರಿಗೆ ನನ್ನ ಮೊದಲ ಅಭಿನಂದನೆ.
ನಾಟಕದ ಒಂದು ಪ್ರಮುಖ ಅಂಗ ಅದರ ಅತಿವಿಲಂಬಿತ ಲಯ. ಇದು ನನಗೆ ಬಹಳ ಕುತೂಹಲ ಕೆರಳಿಸಿದ ಇನ್ನೊಂದು ಅನುಭವ. ಸಾಧಾರಣವಾಗಿ ನಾಟಕದಲ್ಲಿನ ತಿರುವುಗಳನ್ನು ನಾವು ಕಥೆಯಲ್ಲಿನ ತಿರುವುಗಳ ಮೂಲಕ ಗ್ರಹಿಸುತ್ತೇವೆ. ಇದು ನಾಟಕದ ಓಟದ ವೇಗವನ್ನೂ ನಿರ್ಧರಿಸುತ್ತದೆ. ಆದರೆ ಇಲ್ಲಿ ಅದು ಇನ್ನೂ ಮೂಲಕ್ಕೆ ಹೋಗಿ ನಟನೊಬ್ಬನ ಒಂದೊಂದು ಸಣ್ಣ ಚಲನೆಯಿಂದಲೇ ನಿರ್ಧಾರವಾಗುತ್ತಿರುತ್ತದೆ. ಇದು ಚಲನೆಯ ಕುರಿತಾದ ಹೊಸ ಆವಿಷ್ಕರಣ ಎಂದು ನನಗನಿಸಿತು. ನಾಟಕದ ಮೊದಲಲ್ಲಿ ಬರುವ ಹೆಣ್ಣು ಒಮ್ಮೆ ಬಾಯಿಗಡ್ಡ ಕೈಯಿಟ್ಟು ಹಿಂದೆ ತಿರುಗಿ ನೋಡುತ್ತಾಳೆ. ಇದು ಯಾಕೆಂದು ಆ ವೇಳೆಗೆ ಅರ್ಥವಾಗದಿದ್ದರೂ, ಅಲ್ಲೇ ಒಂದು ಕಥೆ ಆರಂಭವಾಗುತ್ತದೆ. ನಾಟಕದ ಅಡಿಪಾಯ ಅಲ್ಲೇ ಆರಂಭವಾಗುತ್ತಾ ಹೋಗಿ, ನಾಟಕ ಒಂದು ವೃತ್ತವಾಗಿ, ದಿನ ರಾತ್ರಿಯಾಗಿ ಮರುಮುಂಜಾನೆಯಾದಾಗ ಮತ್ತೆ ಅದೇ ಹುಡುಗಿ ಅಂತೆಯೇ ಬಂದು ಮತ್ತೆ ಬಾಯಿಗಡ್ಡ ಕೈಹಿಡಿದು ಹಿಂದೆ ನೋಡಿದಾಗ ಅವಳು ಆರಂಭ ಮಾಡಿದ್ದ ಕಥೆಯ ಹೊಸ ಹೊಳೆಯಲಾರಂಭಿಸುತ್ತದೆ. ಇನ್ನು ಅತಿವಿಲಂಬಿತ ಲಯ ಮಾತ್ರ ಇತ್ತು, ಅದು ಏಕತಾನತೆಯನ್ನು ತಂದಿತು ಎನ್ನುವ ಮಾತಿಗೆ ಬಂದರೆ, ಇಲ್ಲ! ನಾಟಕದಲ್ಲಿನ ಲಯ ಏಕತಾನತೆಯದ್ದಾಗಿರಲಿಲ್ಲ. ಅತಿವಿಲಂಬಿತ ಲಯವನ್ನು ತುಂಡರಿಸುವ, ಗಡಿಯಾರದ ಚಲನೆಯನ್ನು ಮೀರಿಸುವ, ಏಕತಾನತೆಯನ್ನು ತುಂಡರಿಸುವ ಹಲವು ಸ್ಪೋಟಗಳು ನಾಟಕದಲ್ಲಿದ್ದವು. ಮೊದಲಿಗೆ ಬರುವ ಹುಡುಗಿಯೇ, ನೀರನ್ನು ಕುಡಿಯಲು ತನ್ನ ಕೆಂಪು ಗ್ಲಾಸನ್ನು ಮುಂದೆ ಚಾಚುವಾಗ, ರಂಗಭೂಮಿಗೆ ಬಂದ ಮೊದಲಿಬ್ಬರು ಪ್ರಯಾಣಿಕರು ಫಕ್ಕನೆ ತಿರುಗಿ ವೇದಿಕೆಯ ಮೂಲೆಯಲ್ಲಿರುವ ಹುಡುಗಿಯನ್ನು ನೋಡುವಾಗ, ಶೂ ಬದಲಿಸಿ ನೋಡುವ ಪ್ರಯಾಣಿಕ ಶೂ ಬಿಸಾಡಿ ಸಂಗೀತ ಆರಂಭವಾದಾಗ, ಹೀಗೆ ನಾಟಕ ಅನೇಕ ಬಾರಿ ತನ್ನ ಲಯವನ್ನು ಬದಲಿಸಿ, ಅತಿವಿಲಂಬಿತ ಲಯಕ್ಕೆ ಹೊಸ ವೇಗವನ್ನು ಕೊಡುತ್ತಿರುತ್ತದೆ. ಹೀಗಾಗಿ “ನಾಟಕ ಗಡಿಯಾರದ ಚಲನೆಯಂತೆ ಅತಿವಿಲಂಬಿಲ ಲಯದಲ್ಲಿದೆ” ಎಂದು ಮೊದಲೇ ಘೋಷಿಸುವ ನಾಟಕಕಾರರ ಮಾತೇನಿದ್ದರೂ, ಇಡೀ ನಾಟಕ ಒಂದು ಸಂಗೀತ ಕಛೇರಿಯಂತೆಯೇ ಅತಿವಿಲಂಬಿತ ಆಲಾಪದೊಡನೆ ಸಣ್ಣಪುಟ್ಟ ಇತರ ವೇಗಗಳನ್ನೂ ಬಳಸಿಕೊಳ್ಳುತ್ತಾ, ಲಯ ಕಂಡುಕೊಳ್ಳುತ್ತದೆ.
ಬುದ್ಧಿಹರಿದಾಗಿನಿಂದಲೂ ನೀನಾಸಂ ನಾಟಕಗಳನ್ನು ನೋಡಿ ಬೆಳೆದವನು ನಾನು. ನೀನಾಸಂ ಛಾಪಿನ ನಾಟಕಗಳು ಎಂದು ಹೇಳಿಕೊಳ್ಳುವಷ್ಟು ವೃತ್ತಿಪರತೆ, ಒಂದು ಮಟ್ಟಿನ ಅತಿಗುಣಮಟ್ಟದ ಏಕತಾನತೆ ಇರುತ್ತಿತ್ತು ತಿರುಗಾಟದ ನಾಟಕಗಳಲ್ಲಿ. ಒಂಥರಾ ಕಮರ್ಷಿಯಲ್ ಸಿನೆಮಾ ನೋಡಿದಷ್ಟೇ ಗಮ್ಮತಲ್ಲಿ ನಾನು ನೀನಾಸಂ ನಾಟಕಗಳನ್ನು ನೋಡುತ್ತಿದ್ದೆ. ಮರುತಿರುಗಾಟದೊಡನೆ ಆರಂಭಿಸಿದ ಪ್ರಯೋಗಾತ್ಮಕ ಪ್ರದರ್ಶನಗಳಿಂದ ನೀನಾಸಂ ತನ್ನ ಹೊಸಮುಖದ ತಿರುಗಾಟದ ಒಂದು ಅಧ್ಬುತ ಕೃತಿ, ‘ನೀರಿನ ನಿಲುತಾಣ’ ಎಂದು ನನ್ನ ಅನಿಸಿಕೆ. ನಿರ್ದೇಶಕರಿಗೆ, ಕಠಿಣ ಪರಿಶ್ರಮ ಹಾಕಿ ನಟಿಸಿದ ನಟರಿಗೆ, ಇಂಥಾ ಅನುಭವವೊಂದನ್ನು ನೀಡಿದ್ದಕ್ಕಾಗಿ ನಾನು ಆಭಾರಿ.








Ninne dharawadkke hogidde. Ee nataka nodabekendaroo samayawiralilla. Eega ella comment galannu odtidre nataka nodabekenisuttade.