ಅಬ್ಬೂರು ಶ್ರೀನಿವಾಸ್
ಮೂಡನಂಬಿಕೆಯ ಜನರ ನಡುವೆ ವೈಚಾರಿಕ ಹಿನ್ನೆಲೆಯಲ್ಲಿ ಶಾಸ್ತ್ರ – ಸಂಪ್ರದಾಯಗಳಿಗೆ ಸಗಣಿ ಮೆತ್ತಿದ ಅಪರೂಪದ ಸರಳ ಮದುವೆಯೊಂದನ್ನ ನಿಮ್ಮ ಮುಂದೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ಈಗಾಗಲೇ ನಾವು ಕೇಳಿ ಅರಗಿಸಿಕೊಳ್ಳಲಾಗದ 1972 ರ ಅಬ್ಬೂರು ಕೆಂಪಮ್ಮ ಕಾಳೇಗೌಡ ನಾಗವಾರರವರ ಸಾಲಿನ ಮದುವೆಯನ್ನೇ ಮರೆಮಾಚುವಂತ ದಲಿತ ಸಮುದಾಯದ ಮತ್ತೊಂದು ಆದರ್ಶ ಜೋಡಿ ಎಂದರೆ ಸವಿತ. ಕೆ ಮತ್ತು ಅ.ಶಿ. ಬಾಲಚಂದ್ರನ್ ಅವರ ಮದುವೆ.
33 ವರ್ಷಗಳ ತರುವಾಯ ಅಂದರೆ 8/5/2005 ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು ಗ್ರಾಮದ ಬಡಕುಟುಂಬದಲ್ಲಿ ಜನಿಸಿದ ದಲಿತ ಸಮುದಾಯದ ಈ ಜೋಡಿ ವೈದಿಕ ಹಿನ್ನೆಲೆಯ ಹಿಂದೂ ಸಂಪ್ರದಾಯಗಳಾದ ದಿನ, ಘಳಿಗೆ, ಜಾತಕ, ಸಮಯ, ಆಚಾರ-ವಿಚಾರಗಳನ್ನು ಧಿಕ್ಕರಿಸಿ “ಸರ್ಕಾರಿ ಹಿರಿಯ ಪ್ರಾರ್ಥಮಿಕ ಪಾಠಶಾಲೆಯ ಆವರಣದಲ್ಲಿ ಅಮಾವಾಸ್ಯೆಯಂದು ಹುಣಸೆ ಮರದ ಕೆಳಗೆ ಗಂಡು-ಹೆಣ್ಣು ಕಾಲುಗಳಿಗೆ ಚಪ್ಪಲಿಯನ್ನ ತೊಟ್ಟು” ಸಾಹಿತಿಗಳಾದ ಸು.ತ ರಾಮೇಗೌಡ, ಬಾನಂದೂರು ನಂಜಪ್ಪ, ಕೂಟಗಲ್ ಶಿವನಂಜಯ್ಯರಂತಹ ಸಾಹಿತಿಗಳ ಆಶೀರ್ವಾದದೊಂದಿಗೆ ತಾಳಿ ಕಟ್ಟುವುದರ ಮೇರೆಗೆ ಮದುವೆ ಆಗುತ್ತಾರೆ.

ಮದುವೆ ವಿಚಾರವನ್ನು ಮೂರು ದಿನ ಮುಂದೆಯೇ ಕನ್ನಡಪ್ರಭ, ವಿಜಯವಾಣಿ, ಬಯಲು ಸೀಮೆ, ರೇಷ್ಮೆಸೀಮೆ ಹಾಗೂ ಸ್ಥಳೀಯ ಪತ್ರಿಕೆಗಳಿಗೆ ಸುದ್ದಿಯನ್ನು ತಿಳಿಸಿರುತ್ತಾರೆ, ಇಂತಹ ಮದುವೆ ಹೇಗೆ ನಡೆಯಬಹುದು ಎನ್ನುವ ಕುತೂಹಲದಿಂದ ಅಬ್ಬೂರು ಗ್ರಾಮದ ಜನರ ಸಾಕ್ಷಿಯೊಂದಿಗೆ ಅಕ್ಕಪಕ್ಕದ ಹಳ್ಳಿಯ ಹಾಗೂ ನಗರದ ಜನರು ಉಳ್ಳಂತೆ ಸುಮಾರು ಮೂರು ಸಾವಿರಕ್ಕೂ ಅಧಿಕ ಜನ ಬಂದು ಸೇರಿರುತ್ತಾರೆ. ಇದರಂತೆ ತನ್ನ ತಂದೆ ತಾಯಿಯವರ ಮಾರ್ಗದರ್ಶನದಲ್ಲಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಯಾಗಿ ಬೆಚ್ಚಿ – ಬೆರಗಾಗುವಂತೆ ಮದುವೆಯಾಗುತ್ತಾರೆ.
ಪ್ರತಿಭಾವಂತ ವಿದ್ಯಾರ್ಥಿಯಾದ ಅ.ಶಿ. ಬಾಲಚಂದ್ರನ್ ರವರು Bsc, DMLT ಓದಿದ್ದು ಹೆಸರಂತ ಡಾಕ್ಟರ್ ಗುರುವಪ್ಪರ ಮಗನಾದ ಡಾಕ್ಟರ್ ಲೋಕನಂದ ರವರ ಆಸ್ಪತ್ರೆಯಲ್ಲಿ ರಕ್ತಪರೀಕ್ಷ ನಾಗಿ ಕಾರ್ಯನಿರ್ವಹಿಸುತ್ತ, ತನ್ನ ಸಂಗಾತಿಯಾದ ಸವಿತ. ಕೆ ರವರು ಪಿಯುಸಿ ಓದಿದ ವಿದ್ಯಾವಂತೆಯಾಗಿರುತ್ತಾರೆ, ಸಂಬಂಧಗಳ ಮಾತುಗಳಿಗೆ ಧಿಕ್ಕರಿಸಿ ತನ್ನ ತಂದೆ ಹೇಗೆ ಶನಿವಾರದಂದು ಮದುವೆಯಾದರೋ ಅವರ ರೂಡಿಯಲ್ಲಿ ಇವರ ವಿವಾಹ ನಡೆಯುತ್ತದೆ.
ಇಂತಹ ಸುದ್ದಿ ಪ್ರಜಾವಾಣಿ, ವಿಜಯ ಕರ್ನಾಟಕ ಹಾಗೂ ಈಟಿವಿ, ಕಸ್ತೂರಿ ಟಿವಿಗಳಲ್ಲಿ ಪ್ರಸಾರವಾಗುತ್ತದೆ. ಬಾಲಚಂದ್ರನ್ ರವರು ನಾಟಕ ಕಲಾವಿದರಾಗಿ, ಗಾಯಕರಾಗಿ, ಗ್ರಾಮಪಂಚಾಯಿತಿಯ ಸದಸ್ಯರಾಗಿ ಹೆಸರು ಮಾಡಿದಂತಹ ತಳವರ್ಗದ ಅಪರೂಪದ ಸರಳ ವ್ಯಕ್ತಿಯಾಗಿದ್ದಾರೆ. ಕಳೆದ ತಿಂಗಳಿಗೆ ಮದುವೆಯಾಗಿ 17ನೇ ವಸಂತಕ್ಕೆ ಕಾಲಿಟ್ಟು 3 ಮಕ್ಕಳೊಂದಿಗೆ ಸುಖಜೀವನವನ್ನು ನಡೆಸುತ್ತಿದ್ದಾರೆ.
ಇಂಥವರ ಆದರ್ಶಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಲಿ ಎಂದು ವಂದಿಸುತ್ತಾ….







0 Comments