ಡಾ ಆಮೂರರರು ಎಚ್ಚೆಸ್ವಿ ಅವರ ಆನಾತ್ಮಕಥನ ಪುಸ್ತಕದ ಎರಡನೇ ಭಾಗ ‘ಅಕ್ಕಚ್ಚುವಿನ ಅರಣ್ಯಪರ್ವ’ವನ್ನು ಮೆಚ್ಚಿ ಬರೆದ ಟಿಪ್ಪಣಿ ಇಲ್ಲಿದೆ.
-ಡಾ|ಜಿ.ಎಸ್.ಆಮೂರ
“ಅನಾತ್ಮ”ಕಥನದ ಮೂಲಕವೇ “ಆತ್ಮ”ಕಥನ ಎನ್ನುವುದನ್ನು ಲಕನ್ ನಂಥ ಮನೋವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಜಗತ್ತು ಒಂದು ಕನ್ನಡಿ ಇದ್ದ ಹಾಗೆ-ಅದೊಂದು “ಮಾಯಾ”ಕನ್ನಡಿ ಎಂದು ನಂಬಿದವರೂ ಉಂಟು. ಆದರೆ ಈ ಕನ್ನಡಿಯಲ್ಲಿ ನೋಡಿದಾಗ ಮಾತ್ರ ನಮ್ಮ ಮುಖ ಪರಿಚಯವಾಗುತ್ತದೆ. ಮನುಷ್ಯನ ಏಕಾಂತ ಜೀವನದ-ಸ್ಮೃತಿ, ಕಲ್ಪನೆ, ಧ್ಯಾನ,ಶ್ರೀಮಂತಿಕೆಯೂ ಕೂಡ ಹೊರಜಗತ್ತನ್ನು ಬಹುಮಟ್ಟಿಗೆ ಅವಲಂಬಿಸಿರುತ್ತದೆ. ಹೀಗಾಗಿ ಎಚ್ಚೆಸ್ವಿಯವರ ಎರಡೂ ಅನಾತ್ಮಕಥನಗಳು ಮೆಚ್ಚುಗೆಗಳಿಸುತ್ತವೆ. ಆತ್ಮಕಥನದ ಮೂಲಕ ಒಬ್ಬ ಲೇಖಕ ತನ್ನ ಬದುಕು-ವ್ಯಕ್ತಿತ್ವಗಳ ಅರ್ಥ, ಸೂತ್ರ, ಅನನ್ಯತೆಗಳನ್ನು ಶೋಧಿಸ ಹೊರಟಾಗ ಅವನಿಗೆ ಈ ಶೋಧದ ಹೊರಗಿನ ಅನುಭವ ಪ್ರಸ್ತುತವಾಗದಿರುವುದರಿಂದ ಅದು ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ.
ಎಚ್ಚೆಸ್ವಿ ಅವರ ಅನಾತ್ಮಕಥನಗಳು ಈ ಅಪಾಯದಿಂದ ಪಾರಾಗಿವೆ. ಹೀಗಾಗಿ ಅವುಗಳಲ್ಲಿ ಲೇಖಕನ ವ್ಯಕ್ತಿತ್ವ ಅನಿವಾರ್ಯವಾಗಿ ಮೂಡಿಬರುವುದಲ್ಲದೆ ಶಿವರಾಮ ಕಾರಂತರ “ಹಳ್ಳಿಯ ಹತ್ತು ಸಮಸ್ತರು”, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ “ನಮ್ಮೂರ ರಸಿಕರು”-ಮೊದಲಾದ ಕಥನಗಳಲ್ಲಿ ಇದ್ದಂತೆ ಬಾಹ್ಯ ಜಗತ್ತೂ ಪ್ರತಿಫಲಿತವಾಗುತ್ತದೆ. ಬದುಕನ್ನು ಒಂದು ವಿಸ್ಮಯವಾಗಿ ನೋಡುವ -ವೈಎನ್ಕೆ ಭಾಷೆಯಲ್ಲಿ-ವಂಡರ್ ದೃಷ್ಟಿಯಿದ್ದಾಗ ಮಾತ್ರ ಇದು ಸಾಧ್ಯ. ಕಾವ್ಯದಲ್ಲಿದ್ದಂತೆ ಗದ್ಯದಲ್ಲೂ-ಕಾವ್ಯ ಗದ್ಯದ ಈ ಭೇದ ಅಷ್ಟು ಅವಶ್ಯವೇ?- ಎಚ್ಚೆಸ್ವಿ ಸತತವಾಗಿ ಪ್ರಯೋಗಶೀಲರಾಗಿರುವುದು ಸಂತಸದ ವಿಷಯ. ಅನಾತ್ಮಕಥನಕ್ಕಾಗಿ ಅವರಿಗೆ ಅಭಿನಂದನೆಗಳು.







adbhutavada tippani.aamoorarige abhinandanegalu.