ಶುಭನುಡಿಯೆ ಶಕುನದ ಹಕ್ಕಿ..

ರಾಜಕುಮಾರ್ ಮಡಿವಾಳರ್
ಅದು ಅವರ ಸಾಕ್ಷಚಿತ್ರ ಅಂತಿರೋ? ಡಾಕ್ಯುಮೆಂಟರಿ ಅಂತಿರೋ? ಕಿರುಚಿತ್ರ ಅಂತಿರೋ? ಒಟ್ಟು ಅಂತದ್ದೊಂದರ ಶೂಟಿಂಗ್
ಆಗ ಬೇಂದ್ರೆ ತಮ್ಮ ಮನೆ ಹತ್ತಿರದಲ್ಲಿನ ಮರದ ಮೇಲಿನ ಮಂಗ ಒಂದನ್ನ ಕರೀತೇನಿ ನೀವು ಶೂಟಿಂಗ್ ತಗೋರಿ ಅಂದ್ರಂತೆ ಎಲ್ಲರೂ ಖುಷಿಯಿಂದ ಆ ದೃಶ್ಯದ ಸೆರೆಗಾಗಿ ಕಾತುರದಲ್ಲಿ ಕಾದರು. ಬೇಂದ್ರೆ ಮರಾಠಿಯಲ್ಲಿ ” ಯ್ಯಾ ಯ್ಯಾ ಇತ ಯ್ಯಾ…” ಅಂದಿದ್ದೆ ತಡ ಮಂಗ ಬಂದು ಅವರ ಅಂಗೈಯೊಳಗಿನ ಶೆಂಗಾ ತೆಗೆದುಕೊಂಡು ಹೋದದ್ದು ಅದು ಈಗಲೂ ಆ ಚಿತ್ರದಲ್ಲಿ ನೋಡಬಹುದು.
ಮಾತು ಇದಲ್ಲ! ಆ ದೃಶ್ಯವನ್ನ ಇನ್ನೊಮ್ಮೆ ಶೂಟ್ ಮಾಡ್ತಿವಿ ಮತ್ತೊಮ್ಮೆ ಆ ಮಂಗ್ಯಾನ ಕರೀರಿ ಅಂತ ಬೇಂದ್ರೆ ಅವರನ್ನ ಕೇಳಿದಾಗ ” ತಮ್ಮಾ ನೀ ಹೇಳಿದಂಗ ಕುಂಡ್ರಾಕ, ನಿಂಡ್ರಾಕ, ಓದಾಕ, ಮಾತಾಡಾಕ ಅದು ಬೇಂದ್ರೆ ಅಲ್ಲೋ ಅದು “ಬಂದರ್” ಅದ” ಅಂದರಂತೆ ಇಡಿ ತಂಡ ನಗು!
ಇದನ್ನ ಅವರ ಒಡನಾಟದ ಗೆಳೆಯರಿಂದಲೇ ಕೇಳಿದ್ದೇನೆ, ಓದಿದ್ದೇನೆ, ಮೊನ್ನೆ ಒಬ್ಬರು ಆ ಶೂಟಿಂಗಲ್ಲಿ ಭಾಗಿಯಾಗಿದ್ದವರೂ ” ಬೇಂದ್ರೆ ಮತ್ತ ಮತ್ತ ಮಂಗ್ಯಾನ ಕರದ್ರು ಟೇಕು ರೀ ಟೇಕು ಎಲ್ಲಾ ತಗೊಂಡ್ವಿ” ಅಂದ್ರು ಆ ಮಾತು ಕೇಳಿ ಈ ಮಾತು ಹೇಳಬೇಕಾತು!
ಬೇಂದ್ರೆ ಕರದಿದ್ರ ಮಂಗ್ಯಾ ಮತ್ತ ಬರ್ತಿದ್ದಿಲ್ಲಾ ಅಂತಲ್ಲಾ
“ಸಿಂಗಾರ ಸೊಳ್ಳಿ ಹಂಗ ಕಿವಿಗಲ್ಲ ಕಚ್ಚೆನ” ಒಂದು ಯಕಃಶ್ಚಿತ ಸೊಳ್ಳೆಗೂ ಶೃಂಗಾರ ಒದಗಿಸಿದ ಬೇಂದ್ರೆ ಸಕಲ ಜೀವಿಗಳ ಜೊತೆ ಒಡನಾಟ ಇಟ್ಟುಕೊಂಡಿದ್ದರೆ ಹೊರತು ಅವುಗಳ ಜೊತೆ, ಅವುಗಳ ಜೀವ ವೈವಿಧ್ಯ- ವಿಧಾನಗಳ ಜೊತೆ ಆಟ ಆಡುತ್ತಿರಲಿಲ್ಲ..ಯಾರ-ಯಾವ ಸ್ವತಂತ್ರಕ್ಕೂ ಭಂಗ ಬೇಂದ್ರೆ ಆಗಿರಲಿಲ್ಲ..
ಕೊನೆಗೆ- ಅವರೇ ಹೇಳುವಂತೆ “ಜನ ದಡ್ಡ್ರಿಲ್ಲೋ ದಡ್ಡರನ್ನಾಗಿ ಮಾಡೋ ಜನಾನ ಭಾಳ ಅದಾರ ಜ್ವಾಕಿ”…..





0 Comments