
ಒಬಾಮ ಬಳಿ ಹನುಮಂತನ ಪೆಂಡೆಂಟ್
ಅವನ ಪರಮಾಪ್ತರಲ್ಲಿ ಇಂಡಿಯನ್ಸ್ ಸಂಖ್ಯೆ
ಸರಿಸುಮಾರು ಹದಿನೆಂಟು
ಕೆಲವೇ ತಿಂಗಳುರುಳಿದವು ನೋಡಿ
ನಾವು ಹಾಗೆ ಬೀಗಿ ಬೀಗಿ
ಕುಂಬಳಕಾಯಿಯಂತೆ ಊದಿ
ಎಲ್ಲ ಪೇಪರು,ಟಿವಿಯಲ್ಲು ಈ
ವಿಷಯವೇ ಟಾಂಟಾಂ
ನಮ್ಮ ಮನದಂಗಳದಿ ತದಿಗಿಣ ತೋಂ
ಸಂಬಂಧವಿಲ್ಲ ಸಾರಿಗೆಯಿಲ್ಲ
ಅನ್ಯಧರ್ಮದ ಅದರಲ್ಲೂ ಮಿಶ್ರತಳಿಯ
ಈ ಭೂಪ ಇರಿಸಿಕೊಳ್ಳಬಹುದೇ
ನಮ್ಮ ಭಜರಂಗಬಲಿಯ ಪೆಂಡೆಂಟು
ಇರಬಹುದೇ ಇದು ಒಂದು ಪಬ್ಲಿಸಿಟಿಯ ಸ್ಟಂಟು?
ಈ ಪ್ರಶ್ನೆ ಯಾರು ಕೇಳಿಕೊಂಡದ್ದಿಲ್ಲ
ಯಾವ ಸಂಘಟನೆಯ ವಿರೋಧದ ಸೊಲ್ಲಿಲ್ಲ
ಎಲ್ಲರೂ ಬೀಗಿದ್ದೆ ಆಕಾಶಕ್ಕೆ ಹಾರಿದ್ದೆ
ದೊಡ್ಡ ದೇಶದ ದೊಡ್ಡಣ್ಣನ ಬಳಿ
ನೆಲೆಸುವುದಾದರೆ ಭಜರಂಗಬಲಿ
ಸಹೃದಯತೆಯ ಪಾಠ ಹೇಳಿದ
ಚಾಪ್ಲಿನ್ ಏಕೆ ನೆಲೆಸಬಾರದು
ನಮ್ಮ ದೇವರ ಬಳಿ?
ಹಾಗಂತ ಹೇಮಂತ್ ಯೋಚಿಸಿದರೆ
ಪಬ್ಲಿಸಿಟಿ ಸ್ಟಂಟಾಗುತ್ತದೆ
ಜೋಗಿ ಬರೆದರೆ ಪರಸ್ಪರ
ತಂದಿಡುವ ಬುದ್ದಿ ಗೋಚರಿಸುತ್ತದೆ
ನನ್ನಂತ ಆ `ಅವಳು’ ಹೀಗೆ ಯೋಚಿಸುವುದೇ
ಶಿಕ್ಷಾರ್ಹವಾಗುತ್ತದೆ
ನಿಮಗೆ ಶಿಲಾಯುಗಕ್ಕೆ ಹೋಗಲು
ದಾರಿಯಾದರೂ ಇದೆ
ನಮಗೆ ಶಿಲೆಯಾಗುವುದೇ ಉಳಿದಿದೆ
ಹಾಗೂ ಭಯ ರಾಮ ಬರುವ
ಬದಲು ಅವನ ಸೇನೆ ಬಂದರೆ?

ಅಕ್ಷತಾ ಬರೆದ ಚಾಪ್ಲಿನ್ ಪದ್ಯ





very nice poem.
ಇನ್ನೂ ಮುಗಿದಿಲ್ಲವೇನ್ರಿ ಚಾಪ್ಲಿನ್ ಪ್ರಲಾಪ. ಟೈಮ್ಸ್ ಆಫ್ ಇಂಡಿಯಾಗೆ ಬಲಿಯಾಗಿರುವ ಮತ್ತೊಂದು ಜೀವ ಇದು! ಪಾಪ 🙂
ರಾಮ ಬರುವ ಮೊದಲೇ ಸೇನೆ ಬಂದರೆ ಕಲ್ಲು ಜೀವವಿರದ ಸುಂದರ ವಿಗ್ರಹವಾಗುತ್ತದೆ. ಅಥವಾ ರಾಮ ಮೊದಲು ಬಂದರೆ ಜೀವವಿರುವ ಸುಂದರ ಸ್ತ್ರೀಯಾಗುತ್ತದೆ.
ಆ ಹೇಮಂತ್ ಹೆಗಡೆ 32 ಲಕ್ಷ ಖರ್ಚು ಮಾಡಿ ಪ್ರತಿಮೆ ಮಾಡಿ ಪ್ರಚಾರ ಗಿಟ್ಟಿಸೋದಕ್ಕಿಂತ ಏನೂ ಮಾಡದೆ ಈ ಪರಿ ಪ್ರಚಾರ ಗಿಟ್ಟಿಸಿಕೊಂಡ ….
ಈಗ ಜಾಹಿರಾತು ಕೊಟ್ಟು ಪಬ್ಲಿಸಿಟಿ ಪಡೆಯೋದಕ್ಕಿಂತ ಬಿಟ್ಟಿ ಪಬ್ಲಿಸಿಟಿ ಆರಾಮಾಗಿ ಸಿಕ್ಕುತ್ತೆ.
ಅಕ್ಷತಾ ಅವರೆ,
ಖಂಡಿತ ಹೇಮಂತ್ ಅವರು ಯೋಚಿಸಿದ್ದು ಉತ್ತಮ ದೃಷ್ಟಿಕೋನದಿಂದಲ್ಲ. ಇದು ಮಾತ್ರ ಸತ್ಯ. ರಾಜಕೀಯ ಹಾಗೂ ಸ್ವಾರ್ಥ ಪ್ರಲೋಬನೆಯಡಿಯಲ್ಲಿಯೇ ಚಾಪ್ಲಿನ್ ಪ್ರತಿಮೆಯನ್ನು ಸ್ಥಾಪಿಸಲು ಮುಂದಾಗಿರುವುದು ಮೇಲ್ನೋಟಕ್ಕೇ ತಿಳಿದು ಬರುತ್ತದೆ. ಈ ಸತ್ಯ ಇದರೊಳಗೆ ಮುಳುಗಿ ಬೊಬ್ಬಿರಿಯುತ್ತಿರುವ ಎಲ್ಲರಿಗೂ ಗೊತ್ತು. ಆದರೂ ಅವರು ನೊಂದಿರುವಂತೆ, ಅವರಿಗೆ ಏನೋ ಮಹಾ ಅನ್ಯಾಯವಾಗುತ್ತಿರುವಂತೆ ಕೂಗುತ್ತಿದ್ದಾರೆ ಕೆಲವು ಜನ. ಇದು ನಿಜಕ್ಕೂ ಖಂಡನೀಯ. ಸತ್ಯವನ್ನು ಕೇವಲ ಬರಹದಿಂದಾಗಲೀ ಕೆಲವು ಬುದ್ಧಿಜೀವಿಗಳ, ಬುದ್ಧಿಜೀವಿಗಳಾಗಲು ಬಯಸುತ್ತಿರುವವರ ಲೇಖನಗಳಿಂದ ತಿಳಿಯಬೇಕೆಂದಿಲ್ಲ. ಸತ್ಯಾಸತ್ಯತೆಗಳು ಎಲ್ಲರಿಗೂ ತಿಳಿದಿದ್ದೇ ಆಗಿದೆ. ಹಿಂದುತ್ವಕ್ಕೆ ತುಂಬಾ ಸಂಕುಚಿತ ಅರ್ಥವನ್ನು ಕೊಟ್ಟು.. ಅದನ್ನು ಇಷ್ಟೇ ಎಂದು ಪರಿಗಣಿಸಿ ತಾತ್ಸಾರಿಸಿ, ಆ ಮೂಲಕ ತಾವು ಮಹಾನ್ ಮಾನವಾವಾದಿಗಳೆಂದು ಬೀಗುವ, ವಿಶಾಲ ಮನಃಸ್ಥಿತಿಯವರೆಂದು ಹೊಗಳಿಸಿಕೊಳ್ಳುವ ಅಭಿಲಾಶೆಯಿರುವ ಜನರಿಂದಲೇ ದೇಶ ಇಂದು ಈ ರೀತಿಯಾಗುತ್ತಿರುವುದು. ತುಂಬಾ ಖೇದಕರ ವಿಷಯವಿದು.
ರಾಮನೂ ಬರಲ್ಲ, ಸೇನೆಯೂ ಬರಲ್ಲ. ಎಲ್ಲ್ಲಾ ಸುದ್ದಿ ಗುಮ್ಮಗಳು! ನನಗೂ ಬುದ್ಧನಿಗಿಂತ ಸ್ವಲ್ಪ ಲೇಟಾಗಿ ಜ್ಞಾನೋದಯವಾಯಿತು 🙂
ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸೋದೇ ಮಾಧ್ಯಮಗಳ ಕೆಲಸ. ಅದನ್ನು ಸರಾಗವಾಗಿ ಮಾಡುತ್ತಿವೆ. ರಾಮನೋ, ರಾಮ ಸೇನೆಯೋ… ಮಂಗಗಳಾದದ್ದು ನಾವು, ಓದುಗರು!! ಆತುರದಲ್ಲಿ ಒಂದು ಕಮೆಂಟ್ ಬರೆದದ್ದಕ್ಕೆ ಈಗ ಪಶ್ಚಾತ್ತಾಪವಿದೆ.
ಅಕ್ಷತಾ ಅವರೇ,
ನಿಮ್ಮ ಪದ್ಯ, ಪದ್ಯದ ದಾಟಿಯಲ್ಲಿ ತುಂಬಾ ಚೆನ್ನಾಗಿ ಬಂದಿದೆ. ಅದೂ ಲಾಸ್ಟ್ ಪ್ಯಾರಾದಲ್ಲಿ ರಾಮ ಸೇನೆ ಪದವನ್ನು ಬಳಸಿದ ರೀತಿ.
ಆದರೆ ಅದರಲ್ಲಿ ಇರುವ ವಿಷಯ (ನಾನು ಅರ್ಥ ಮಾಡಿಕೊಂಡಂತೆ) ಅಷ್ಟು ಇಷ್ಟವಾಗಲಿಲ್ಲ. ಓಬಾಮ ಹತ್ರ ಇದ್ದ ಭಜರಂಗಬಲಿ ಮತ್ತು ದೇವಸ್ಥಾನದ ಬಳಿ ನಿರ್ಮಿಸಲು ಹೊರಟಿದ್ದ ಚಾರ್ಲಿ ಚಾಪ್ಲಿನ್ ಮೂರ್ತಿ ಇವೆರಡರ ಹೋಲಿಕೆಯೇ ಸರಿ ಅನ್ನಿಸಲಿಲ್ಲ. ಓಬಾಮಾದ್ದು ವೈಯಕ್ತಿಕ ಆಯ್ಕೆ. (ಅದನ್ನು ಸಹ ಪಬ್ಲಿಸಿಟಿ ಸ್ಟಂಟ್ ಅಂತ ಸುಮಾರು ಕಡೆ ಬರೆದಿದ್ದರು). ದೇವರ ಬಳಿ ಮೂರ್ತಿ ಸ್ಥಾಪಿಸುವುದಕ್ಕೆ ಅಲ್ಲಿನ ಸಮಾಜದ ಒಪ್ಪಿಗೆ ಬೇಕೆ ಬೇಕಾಗುತ್ತದೆ. ವೈಯಕ್ತಿಕವಾಗಿ ದೇವರ ಮೂರ್ತಿ ಜೊತೆಗೆ ಚಾಪ್ಲಿನ್ ಇಟ್ಟು ಕೊಂಡರೆ ಯಾರೂ ಏನೂ ಹೇಳುವುದಿಲ್ಲ. ನಮ್ಮ ರಾಜಕುಮಾರರನ್ನು ಎಷ್ಟೋ ಜನ ದೇವರ ಫೋಟೋ ಜೊತೆ ಪೂಜೆ ಮಾಡುವ ಕತೆ ಓದಿದ್ದೇನೆ.
ಶಿಲಾಯುಗ ಅಂತ ಅನ್ನೊದು ಅಷ್ಟು ಕೆಟ್ಟದ್ದೇ? ಎಲ್ಲರೂ ಇದನ್ನೇ ಉಪಮೆ ಆಗಿ ಬಳಸ್ತಾರಪಾ,
ನೀಲಾಂಜಲ ಶಿಲಾಯುಗದಲ್ಲಿ ಬೀಡಿ ಸಿಗರೇಟು ಹೊತ್ತಿಸಲು ಎರಡು ಕಲ್ಲುಗಳ ಅಗತ್ಯ ಇತ್ತು ಅದಕ್ಕೆ ಜನರಿಗೆ ಶಿಲಾಯುಗದ ಬಗ್ಗ ಅಸಮಧಾನ .ಈಗ ಬಿಡಿ ಲೈಟರ್ ಬೆಂಕಿಪೊಟ್ಟಣ ಇದೆ ಅಲ್ವ.
sogasaagide.