ಚೇತನಾ ತೀರ್ಥಹಳ್ಳಿ
ಚಂದಮಾಮನ ಕಣ್ಣು. ಜೇನು ಜೇನು ದನಿ.
ಅವಳ ಎಲ್ಲ ಮೊಂಡಾಟಗಳೂ ಅವಂಗೆ ಅಕ್ಕರೆ.
ಅವಳು ಕೇಳಿದ್ದೆಲ್ಲ ಗಳಿಗೆಯೊಳಗೆ ಅಂಗೈಲಿ, ಕಾಲ ಬುಡದಲ್ಲಿ.
ಪ್ರೀತಿಯೊಂದನ್ನ ಬಿಟ್ಟು…
ಅಂವ ಪ್ರೀತಿ ಅಂತ ತಿಳಕೊಂಡದ್ದರ ವಾರಸುದಾರರು
ಊರು ತುಂಬಾ…. ಕೇರಿ ತುಂಬಾ!

ಅವಳಿಗೋ, ನಗು ಬೇಕು. ಮಾತು ಬೇಕು.
ಮಾತಲ್ಲಿ ಹುಣ್ಣಿಮೆ ತುಂಬಿ, ತುಳುಕುತ್ತ ಹೇಳಿದಳು:
“ನಿನ್ನೀ ಸವಲತ್ತು- ಸಡಗರಗಳೊಂದೂ ಬೇಕಿಲ್ಲ.
ಮುತ್ತಂಥ ನಾಲ್ಕು ಮಾತಾಗಿ ಬಾ… ”
ಊಹೂಂ. ಅಂವ ಬರಲಿಲ್ಲ.
ಕಾಡು ಪಾರಿವಾಳಗಳಿಗೆ ಕಾಳು ಹಾಕುತ್ತ ಕುಂತುಬಿಟ್ಟ.
* * *
ಜೀವಂತಿಕೆಯ ಹುಡುಗಿ. ಜೀವನ ಪ್ರೀತಿಯ ಹರೆಯ.
ಮತ್ತೀಗ ತಲೆ ತಗ್ಗಿಸಿ ನೆಲ ಕೆರೆಯುತ್ತ ಕೇಳಿದಳು:
“ನಂಗೆ ಅಂವ ಬೇಕು!
“ನಿನ್ನ ಹಾಗೆ ಮೂಕನಲ್ಲದ, ಕಲ್ಲನ್ನೂ ಕರೆದು ಮಾತಾಡಿಸ್ತಾನಲ್ಲಾ ಅಂವ.
ನಿನ್ನ ಹಾಗೆ ಗುಮ್ಮನಲ್ಲದ, ಸುಮ್ಮಸುಮ್ಮನೆ ನಗ್ತಾನಲ್ಲಾ ಅಂವ.
ನನ್ನ ಚಿಕ್ಕಪುಟ್ಟ ತಪ್ಪಿಗೂ ಬಯ್ದು ರೇಗಿಸ್ತಾನಲ್ಲಾ, ಜಗಳಾಡ್ತಾನಲ್ಲಾ,
ದಿನಗಟ್ಟಲೆ ಮಾತು ಬಿಡ್ಲಿಕ್ಕೆ ಹೆಣಗಿ, ಸೋತು ಸುಣ್ಣವಾಗ್ತಾನಲ್ಲಾ,
ಅಂವ.
“ನನ್ನ ಮೊಬೈಲಿನ ಕರೆನ್ಸಿಯಷ್ಟನ್ನೂ ಹುರಿದು ಮುಕ್ತಾನಲ್ಲಾ,
ಊರಾಚೆ ದೂರದಲ್ಲಿದ್ದೂ, ಮಗ್ಗುಲಲ್ಲಿ ನಾಚಿಕೊಳ್ತಾ ಚೆಂದವಾಗಿ ಮಲಗಿದ್ದೀ
ಅಂದು ಕೆಂಪೇರಿಸ್ತಾನಲ್ಲಾ…
ಅಂವ ಬೇಕು ನಂಗೆ!”


Tumba chennagide. ava bega sigli anta haraisutini. i like the poem. please write some more