ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೋಗುವ ಜರೂರಾದರು ಏನಿತ್ತು?

ವಿದ್ಯಾಸಾಗರ್ ಸಮರ್ಥ್  

ಕೋವಿಡ್ ವರದಿ ಪಾಸಿಟಿವ್ ಬಂದ ದಿನವೇ ತೀವ್ರ ಆಘಾತಕ್ಕೊಳಗಾಗಿ ನನಗೆ ಫೋನ್ ಮಾಡಿದ್ದಳು, ಸುಮಾರು ಒಂದೂವರೆ ತಾಸು ಮಾತನಾಡಿ ಅವಳಿಗೆ ಸಂತೈಸಿದ್ದೆ. ಲೆಕ್ಕವಿಲ್ಲದಷ್ಟು ಸಮಸ್ಯೆ, ಸಂದರ್ಭಗಳಲ್ಲಿ ನನ್ನನ್ನು ಸಂತೈಸುತ್ತಿದ್ದವಳಿಗೆ ಕೋವಿಡ್ ನ ಫೋಬಿಯಾ ಸಂಪೂರ್ಣವಾಗಿ ಆವರಿಸಿಬಿಟ್ಟಿತ್ತು. 

ಕೆಲಸ ಮತ್ತು ಬದುಕಿನ ಅನಿವಾರ್ಯತೆ ಆಕೆಯನ್ನು ದೂರದ ದೆಹಲಿಯಲ್ಲಿರುವಂತೆಯೇ ಮಾಡಿತ್ತು. ಕಳೆದೈದು ವರ್ಷಗಳಿಂದ ಕೆಲಸ, ಓದು, ಬರಹ, ಗಾರ್ಡನಿಂಗ್, ಸಂಗೀತ ಹೀಗೆ ಹಲವಾರು ರೀತಿಯಲ್ಲಿ ತೊಡಗಿಸಿಕೊಂಡಿದ್ದರೂ ಸಹಿತ ಖಾಲಿತನ ಅವಳನ್ನು ಬಿಡದೇ ಕಾಡುತ್ತಿತ್ತು. ಎಷ್ಟೋ ಬಾರಿ why does the feeling of emptiness occupy so much space? ಎಂದು ಕೇಳುತ್ತಿದ್ದಳು, ಉತ್ತರಿಸಲಾಗದೆ ಅದು ಇದು ಸಬೂಬು ನೀಡಿ ಅವಳ ಮಾತನ್ನು ಬೇರೆಡೆಗೆ ಎಳೆಯುತ್ತಿದ್ದೆ.

ಕೋವಿಡ್ ಜೊತೆಗೆ ಮೌನ, ಖಾಲಿತನ ಮತ್ತು ಭಾವನೆಗಳು ತೀವ್ರ ಏರುಪೇರಾಗಿ ಆಕೆಯನ್ನು ಮತ್ತಷ್ಟು ಕುಗ್ಗಿಸಿಬಿಟ್ಟಿದ್ದವು.

ಎರಡು ದಿನಗಳ ನಂತರ ಬೆಳ್ಳಂಬೆಳಗ್ಗೆಯೇ ‘ಯಾಕೋ ಸಣ್ಣ ಮಟ್ಟಿಗಿನ ಉಸಿರಾಟ ಸಮಸ್ಯೆಯಾಯಿತು, ಆಸ್ಪತ್ರೆಗೆ ದಾಖಲಾಗಿದ್ದೇನೆ ಹೆದರಬೇಡ’ ಎಂದು ವಾಟ್ಸಾಪಿನಲ್ಲಿ ಸಂದೇಶ ಕಳುಹಿಸಿದ್ದಳು. ನೋಡಿದ ತಕ್ಷಣವೇ ಫೋನ್ ಮಾಡಿದೆ, ಕರೆಯನ್ನು ಡಿಸ್ಕನೆಕ್ಟ್ ಮಾಡಿ ‘ನಗುವ ಎಮೋಜಿಗಳ ಜೊತೆಗೆ ‘Miss you around here’ ಎಂದು ಸಂದೇಶ ಕಳುಹಿಸಿದಳು. ನನ್ನ ಪಾಲಿಗೆ ಅದೇ ಕಡೆಯ ಸಂದೇಶವಾಗಿತ್ತು.

ಸಮಯ ಕಳೆದಂತೆ ಆಕೆಯ ದೇಹದ ಆಮ್ಲಜನಕದ ಮಟ್ಟ ಕುಸಿದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿ ಮಾರನೆಯ ದಿನ ಅದಾಗಲೇ ಬದುಕನ್ನು ಮುಗಿಸಿ ಅರ್ಜೆಂಟಾಗಿ ಹೊರಟೇ ಬಿಟ್ಟಿದ್ದಳು…

ಪ್ರತೀ ಬಾರಿ ದೆಹಲಿಗೆ ಹೋದಾಗಲೆಲ್ಲ ಕಣ್ಣಿಗೆ ಕಟ್ಟುವಂತೆ ವಿಶಿಷ್ಟ ರೀತಿಯಲ್ಲಿ ರಾಜಧಾನಿಯನ್ನು ಪರಿಚಯಿಸುತ್ತಿದ್ದಳು. ದರಿಯಾಗಂಜಿನ ಭಾನುವಾರದ ಪುಸ್ತಕ ಮಾರುಕಟ್ಟೆ ಮತ್ತು ಮಾಂಸಾಹಾರದ ಕಡುಬಯಕೆಗಳನ್ನು ತೃಪ್ತಿಪಡಿಸುತ್ತಿದ್ದ ಪುರಾನಿ ದಿಲ್ಲಿಯಲ್ಲಿ ನಾವು ನಡೆದದ್ದೇ ದಾರಿ. ನಮ್ಮಿಬ್ಬರ ಮುನಿಸೂ ಸಹ ಅಲ್ಲೆಲ್ಲೋ ಖಾನ್ ಮಾರ್ಕೆಟ್ಟಿನಲ್ಲಿದ್ದ ಇರಾನಿ ಚಹಾ ಅಂಗಡಿಯಲ್ಲಿ ಕೊನೆಗೊಳ್ಳುತಿತ್ತು.

Dear Rumanaa ಇಷ್ಟು ಬೇಗ ನಮ್ಮೆಲ್ಲರನ್ನೂ ಬಿಟ್ಟು ಹೋಗುವ ಜರೂರಾದರು ಏನಿತ್ತು ?

‍ಲೇಖಕರು Avadhi

10 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading