ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇ ರಾಮ್….!

ಎಸ್ ಆರ್ ರಾಮಕೃಷ್ಣ ಎಂಬ ಹೆಸರೇ ಹಲವು ಹವ್ಯಾಸಗಳ ಒಂದು ಸುಂದರ ಕೊಲಾಜ್. ಸಂಗೀತ, ಕವಿತೆ, ಅನುವಾದ, ಪತ್ರಿಕೋದ್ಯಮ ಎಲ್ಲವನ್ನೂ ಹದವಾಗಿ ಮಿಳಿತಗೊಳಿಸಿದರೆ ಮೂಡಿ ಬರುವ ಹೆಸರೇ ಎಸ್ ಆರ್ ರಾಮಕೃಷ್ಣ.

ಅಯ್ಯೋ ರಾಮಾ.. ಎಂಬ ನಿಟ್ಟುಸಿರು ನಮ್ಮದಲ್ಲ. ಸ್ವತಹ ಅವರದ್ದೇ. ದಿನನಿತ್ಯದ ಸುದ್ದಿಗೆ ವ್ಯಂಗ್ಯದ ಲೇಪ ನೀಡುವ ರಾಮಕೃಷ್ಣ ತಮ್ಮ ಅಂಕಣಕ್ಕೆ ಕೊಟ್ಟ ಹೆಸರು- ಅಯ್ಯೋ ರಾಮ. ಮಿಡ್-ಡೇ ಆಂಗ್ಲ ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿರುವ ರಾಮಕೃಷ್ಣ ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿದ್ದು ಕೆಲ ಕಾಲ ಪತ್ರಿಕೋದ್ಯಮವನ್ನು ಭೋದಿಸಿದವರು. ಡೆಕ್ಕನ್ ಹೆರಾಲ್ಡ್ ನಲ್ಲಿದ್ದಾಗ ಇಡೀ ಸಾಹಿತ್ಯ ಲೋಕವೇ ತುದಿಗಾಲಲ್ಲಿ ನಿಂತು ಈ ಪತ್ರಿಕೆಯನ್ನು ಓದುವಂತೆ ಮಾಡಿದವರು. 

ಸಂಗೀತ ಇವರ ಉಸಿರು. ಬಹುಶಃ ಸಂಗೀತಕ್ಕಾಗಿಯೇ ಮೀಸಲಾದ ಮೊದಲ ವೆಬ್ ಸೈಟ್- ಮ್ಯೂಸಿಕ್ ಮ್ಯಾಗಸಿನ್ ರೂಪಿಸಿದವರು. ಈಗ ಮ್ಯೂಸಿಕ್ ಮಿಂಟ್ ಎಂಬ ರೆಕಾರ್ಡಿಂಗ್ ಸ್ಟುಡಿಯೋ ಹೊಂದಿದ್ದಾರೆ. ಅದರ ಬ್ಲಾಗ್ ಇದೆ.

‘ರಾಮ್ಕಿ’ ಎಂದೇ ಪ್ರೀತಿಯಿಂದ ಕರೆಯಲ್ಪಡುವ ರಾಮಕೃಷ್ಣ ‘ಆಹಾ ಪ್ರೀತಿ’ ‘ನಿನ್ನ ನೆನಪು’ಸಿ ಡಿ ಗೆ ಸಂಗೀತ ಉಣಬಡಿಸಿದವರು. ಭಾಗೇಶ್ರೀ ಕವಿತೆಗಳಿಗೆ ಇಂದಿನ ರಾಗದ ಟಚ್ ನೀಡಿದವರು. ‘ನೆನಪಾದಳು ಶಾಕುಂತಲೆ’ ನಾಟಕಕ್ಕೆ ಇವರು ಕೊಟ್ಟ ಸಂಗೀತ ಇನ್ನೂ ಹಲವರ ಮನದಲ್ಲಿ ಗುನುಗುನಿಸುತ್ತಿದೆ. ಟಿ ವಿ ಧಾರಾವಾಹಿಗಳಿಗೆ ಸಂಗೀತ ನೀಡಿದ್ದಾರೆ.  ಜಯಂತ ಕಾಯ್ಕಿಣಿ ಅವರ ‘ಕಡಲ ತೀರದ ಭಾರ್ಗವನಿಗೆ ನಮಸ್ಕಾರ’ ‘ಬೇಂದ್ರೆ ಮಾಸ್ತರ್ ಗೆ  ನಮಸ್ಕಾರ’ ಧಾರಾವಾಹಿಗಳ ಟೈಟಲ್ ಮ್ಯೂಸಿಕ್ ಇವರದ್ದು.

ಕನ್ನಡ ಸಾಹಿತ್ಯ ಇವರಿಗೆ ಅನೇಕ ಕಾರಣಕ್ಕಾಗಿ ಋಣಿಯಾಗಿದೆ. ಕನ್ನಡದ ಹತ್ತು ಹಲವು ಮುಖ್ಯ ಕೃತಿಗಳನ್ನು ಅನುವಾದಿಸಿದವರು. ಹಲವು ಸಾಹಿತಿಗಳನ್ನು ಇಂಗ್ಲಿಶ್ ನ  ಬೆಳಕಲ್ಲಿ ನಿಲ್ಲಿಸಿದವರು. ಸಾಹಿತಿಗಳನ್ನು ಪರಿಚಯಿಸಿದವರು.

ಕೆ ವಿ ಸುಬ್ಬಣ್ಣ, ಚಂದ್ರಶೇಖರ ಕಂಬಾರ, ಸಿದ್ಧಲಿಂಗಯ್ಯ, ವಿವೇಕ ಶಾನಭಾಗ್ ಅವರ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ, ವಿಮರ್ಶಿಸಿದ್ದಾರೆ, ವ್ಯಾಖ್ಯಾನ ನೀಡಿದ್ದಾರೆ. ರಾಮ್ಕಿ ಈಗ ಅವರ ಎಲ್ಲಾ ಸಾಹಸಗಳನ್ನು ಒಟ್ಟುಗೂಡಿಸಿ ಒಂದು ಗೂಡು ಕಟ್ಟಿದ್ದಾರೆ. ಅದರ ಹೆಸರೇ-ರಾಮ್ಸ್ ಹೋಮ್. ಭೇಟಿ ಕೊಡಿ. ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ತಿಳಿಯಬಯಸುವವರಿಗೆ ಕಳಿಸಿಕೊಡಿ. ಈ ಸಾಹಸ ಚೆನ್ನಾಗಿದ್ದರೆ srramakrishna@gmail.com ಮೈಲ್ ಮಾಡಿ. 

‍ಲೇಖಕರು avadhi

9 April, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading