ಕೊಲೆಯ ಹಿಂದಿನ ರಾತ್ರಿ, ಸೂರ್ಯ ಚಂದ್ರರ ಹಿಡಿದು..
ಜಿ ಎನ್ ಮೋಹನ್
ಎಸ್.ಕೆ. ಕರೀಂಖಾನ್ ಅವರ ಮುಂದೆ ಕೂತಿದ್ದೆ. ದಟ್ಟ ಕಾನನದ ನಡುವೆ ಆಕಾಶದಲ್ಲಿ ಹರಡಿದ್ದ ಬೆಳದಿಂಗಳನ್ನು ಹೊದ್ದುಕೊಂಡಿದ್ದ ನಾವು ಜೀರುಂಡೆಗಳ ಜೀರ್ ಜೀರ್ ದನಿಗೆ ಮಾರುಹೋಗಿದ್ದೆವು. ತುಂಬು ನಗೆಯ ಅಜ್ಜನಿಗೆ ಆ ಜೋಶ್ ಎಲ್ಲಿತ್ತೋ ತಾವು ಊರೂರು ಅಲೆದು ಸಂಗ್ರಹಿಸಿದ ಜಾನಪದ ಗೀತೆಗಳನ್ನು, ತ್ರಿಪದಿಗಳನ್ನು ನಮ್ಮ ಮುಂದೆ ಹರಡುತ್ತಾ ಹೋದರು. ಸಾಲು ಸಾಲಾಗಿ ಉಕ್ಕುತ್ತಿದ್ದ ಜಾನಪದ ಗೀತೆಗಳನ್ನು ಎದೆಯಲ್ಲಿ ತುಂಬಿಕೊಳ್ಳುತ್ತಾ ಕೂತಿದ್ದ ನಾನು ಒಂದು ಕ್ಷಣ ಬೆಚ್ಚಿಬಿದ್ದೆ. ಕರೀಂಖಾನ್ ಎತ್ತರದ ಕಂಠದಲ್ಲಿ ಹಾಡುತ್ತಿದ್ದರು-
ಎಮ್ಮೇಯ ಮೇಯ್ಸ್ಕೊಂಡು ಸುಮ್ಮಾನೆ ನಾನಿದ್ದೆ
ಹಾಳಾದೊವೆರೆಡು ಮೊಲೆ ಬಂದು/ನಮ್ಮಪ್ಪ
ಕಂಡೋರ್ಗೆ ನನ್ನ ಕೊಡುತಾನೆ
‘ಸಾರ್, ಮತ್ತೊಮ್ಮೆ ಹೇಳಿ’ ಎಂದೆ. ಅವರು ಹೇಳಿದ್ದು ನಾನೇ ಸರಿಯಾಗಿ ಕೇಳಿಸಿಕೊಂಡಿಲ್ಲವೇನೋ ಎನ್ನುವ ಆತಂಕ ನನ್ನೊಳಗಿತ್ತು. ಅವರು ಮತ್ತೆ ನನ್ನ ಕೈಗೆ ಅವರ ಸಿರಿಕಂಠದಿಂದ ಹಾಡನ್ನು ಮೊಗೆದುಕೊಟ್ಟರು. ‘ಹಾಳಾದೊವೆರೆಡು ಮೊಲೆ ಬಂದು..’ ಎನ್ನುವ ಸಾಲು ನನ್ನನ್ನು ಬೆಚ್ಚಿಬೀಳಿಸಿತ್ತು. ಅದುವರೆಗೆ ನಾನು ಯೌವ್ವನ ಅನ್ನುವುದು ಕನಸುಗಳ ಲೋಕಕ್ಕೆ ಇರುವ ಕೀಲಿಕೈ ಎಂದೇ ಭಾವಿಸಿದ್ದೆ. ಅಥವಾ ನನ್ನ ಯೌವ್ವನ ಹಾಗೆ ಶುರುವಾಗಿತ್ತು. ಆದರೆ ಇಲ್ಲಿ, ಈ ಹಾಡಿನಲ್ಲಿ ಯೌವ್ವನ ಎನ್ನುವುದು ಸಂಭ್ರಮವಾಗಿರಲಿಲ್ಲ. ಹಲವು ವಿಷಾಧಗಳನ್ನು ಹೊತ್ತು ತರುವುದರ ಸೂಚನೆಯಾಗಿತ್ತು. ಅದುವರೆಗೆ ಸಂಭ್ರಮ ಉಕ್ಕಿಸುತ್ತಿದೆ ಎಂದೇ ನಾನು ಭಾವಿಸಿದ್ದ ಜೀರುಂಡೆಗಳ ಸದ್ದು ನನಗೆ ಈಗ ಒಂದು ನೋವಿನ ರಾಗವಾಗಿ ಕೇಳುತ್ತಿತ್ತು.
ಹಾಗೆ, ಥೇಟ್ ಹಾಗೆಯೇ ಇನ್ನೊಮ್ಮೆ ನಾನು ಬೆಚ್ಚಿಬಿದ್ದದ್ದು ‘ಹೇಳತೇವ ಕೇಳ’ ಎನ್ನುವ ಕೃತಿ ಹೊರತರಲು ಲೇಖನಗಳನ್ನು ಆಯುತ್ತಾ ಕೂತಾಗ. ದೆಹಲಿಯಲ್ಲಿ ಆದ ಘೋರ ಅತ್ಯಾಚಾರ ಮೊತ್ತಮೊದಲ ಬಾರಿಗೆ ಇಡೀ ದೇಶವನ್ನು ತಲ್ಲಣಿಸಿ ಹಾಕಿತ್ತು. ‘ಕೊಲೆಯ ಹಿಂದಿನ ರಾತ್ರಿ ಸೂರ್ಯ ಚಂದ್ರರ ಹಿಡಿದು ಹಣದ ಪೆಟ್ಟಿಗೆಯಲ್ಲಿ ಕೂಡಿಟ್ಟರೋ… ಭಾರತದ ಭಾವುಟವ ಸುತ್ತಿ ಬಾಯಿಗೆ ತುರುಕಿ ಕಿತ್ತುಕೊಂಡರು ಅವಳ ಮಾತುಗಳನ್ನ…’ ಎನ್ನುವಂತೆ ದೇಶ ಗರಬಡಿದು ಕೂತಿತ್ತು. ಆಗ ಹೊರಟದ್ದು ಮಹಿಳೆಯರ ಎದೆಯಾಳದ ದನಿಗಳು. ತಮ್ಮ ಒಡಲಲ್ಲಿ ಅದುವರೆಗೂ ಬಚ್ಚಿಟ್ಟುಕೊಂಡ ಕಥೆಗಳು, ತಮ್ಮ ಮನಸ್ಸಿನ ಮೇಲೆ ಮಾಸಲಾಗದಂತೆ ಕೆತ್ತಿದ ವಿಕೃತ ಬರೆಗಳು, ಇಷ್ಟುದಿನ ಎಲ್ಲಿದ್ದರೋ ಅವರು, ಹೆಂಗಿದ್ದರೋ ಅವರು, ಆದರೆ ಈ ಬಾರಿ ಮೌನದ ಚಿಪ್ಪೊಡೆದು ಬಂದರು. ಅಂತಹ ಮೌನದ ಪರದೆಯನ್ನು ಸರಿಸಿ ಬಂದ ಮಾತುಗಳನ್ನು (avadhimag.online) ಪುಸ್ತಕ ರೂಪದಲ್ಲಿ ತರಲು ಆಯುತ್ತಾ ಕುಳಿತಾಗಲೇ ನಾನು ಮತ್ತೆ ಬೆಚ್ಚಿಬಿದ್ದದ್ದು. ‘ಅಮ್ಮ ನನಗೆ ಒಂದು ಚಾಕು ಕೊಟ್ಟಳು’ ಎನ್ನುವ ಸಾಲುಗಳು ನನ್ನನ್ನು ಹಾಗೆ ಕಟ್ಟಿನಿಲ್ಲಿಸಿತ್ತು.
ನಾಲ್ಕನೆಯ ತರಗತಿಗೆ ಹೋಗಲು ಸಜ್ಜಾಗುತ್ತಿರುವ ಹುಡುಗಿಗೆ ಅಮ್ಮ ಏನೇನು ತೆಗೆಸಿಕೊಡಬಹುದು? ಪಾಟಿ, ಪುಸ್ತಕ, ಬಟ್ಟೆ,ಬ್ಯಾಗ್.. ಆದರೆ ಅವರೊಬ್ಬರಿದ್ದರು ಈ ಎಲ್ಲದರ ಜೊತೆಗೆ ಒಂದು ಚಾಕುವನ್ನೂ ತೆಗೆದುಕೊಟ್ಟರು. ‘ನಿನ್ನ ಬ್ಯಾಗಿನ ಬದಿಯ ಪಾಕೆಟ್ ನಲ್ಲಿರಲಿ’ ಎಂದು ಕಿವಿಮಾತು ಹೇಳಿದ್ದರು. ಆಷ್ಟೇ ಅಲ್ಲ ಅದೇನಾದರೂ ತುಕ್ಕು ಹಿಡಿದುಬಿಟ್ಟಾತು ಎಂದು ಪ್ರತೀ ವಾರ ತೆಗೆದು ಎಣ್ಣೆ ಸವರಿ ಹರಿತವಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಹುಡುಗಿ ಎಂಟನೇ ತರಗತಿಗೆ ಬಂದಾಗ ಹಳೆಯ ಚಾಕುವಿನ ಜಾಗಕ್ಕೆ ಹೊಸದೊಂದು ಚಾಕು ಬಂತು. ಹತ್ತನೆಯ ತರಗತಿಯವರೆಗೆ ಪ್ರತೀದಿನಾ ಅದೂ ಸಹಾ ಸ್ಕೂಲ್ ಗೆ ಹೋಗಿ ಬರುತ್ತಿತ್ತು. ‘ಕಾಲ ಕಳೆದಂತೆ ಅಮ್ಮ ಕೊಟ್ಟ ಚಾಕುವಿನ ಅರ್ಥ ತಿಳಿಯುತ್ತಿತ್ತು. ದಿನ ಸರಿದಂತೆ ಆ ಚಾಕು ಒಂದು ರೀತಿಯಲ್ಲಿ ನನ್ನ ಬಾಡಿಗಾರ್ಡ್ ಆಗಿತ್ತು’ ಎಂದು ಚಿತ್ರಾ ಸಂತೋಷ್ ಬರೆಯುತ್ತಾರೆ.
ಅಮ್ಮ ಕೊಟ್ಟ ಚಾಕು, ಹೇಳಿಕೊಟ್ಟ ಪಾಠವನ್ನು ಓದುತ್ತಿರುವಾಗಲೇ ಆ ಇನ್ನೊಂದು ಅನುಭವವೂ ಕಣ್ಣಿಗೆ ಬಿತ್ತು. ಬಿ ವಿ ಭಾರತಿ ನಿರೂಪಿಸಿದ ತನ್ನ ಗೆಳತಿಯ ಕಥೆ. ಅದು ಅಮ್ಮ ಹೇಳಿಕೊಡದ ಪಾಠ, ಐದು ವರ್ಷದ ಪುಟಾಣಿಯನ್ನು ನೆಂಟರ ಹುಡುಗನೊಬ್ಬ ಕೆಟ್ಟದಾಗಿ ನಡಿಸಿಕೊಂಡಿದ್ದ. ಆ ಮಗು ನೇರಾನೇರಾ ತನ್ನ ತಾಯಿಯ ಹತ್ತಿರ ಆದದ್ದೆಲ್ಲವನ್ನೂ ತೋಡಿಕೊಂಡಿತ್ತು. ವಿಷಯ ತಿಳಿದ ತಾಯಿ ತಲ್ಲಣಿಸಿ ಹೋದಳು. ಗೆಳತಿಯ ಬಳಿ ಇದನ್ನೆಲ್ಲಾ ತೋಡಿಕೊಳ್ಳುತ್ತಿದ್ದಾಗ ಆಕೆಯ ಅಮ್ಮ ಅದಕ್ಕೆ ಕಡಿವಾಣ ಹಾಕಲು ಹೊರಟರು. ಮಗುವಿಗೆ ಹೀಗಾದದ್ದು ಎಲ್ಲರಿಗೂ ಗೊತ್ತಾದರೆ ಹೇಗಪ್ಪಾ ಎನ್ನುವ ಆತಂಕ ಅವರದ್ದು. ಹಾಗೆ ಅವರು ಬಾಯಿ ಕಟ್ಟಲು ಹೊರಟದ್ದೇ ತಡ ಮಗುವಿನ ತಾಯಿ ಸ್ಫೋಟಿಸಿಯೇಬಿಟ್ಟಳು ‘ಹಾಗೆ ಮಾಡಿ ಮಾಡಿಯೇ ನಮ್ಮ ಬಾಯನ್ನು ಆಗಲೂ ಹೀಗೇ ಮುಚ್ಚಿಸಿಬಿಟ್ಟೆ’ ಎಂದು. ಆ ಮಗುವಿಗಾದ ಅನುಭವವೇ ಅವಳ ತಾಯಿಗೂ ಆಗಿತ್ತು.
ಅಮ್ಮ ಹೇಳಿಕೊಟ್ಟ ಹಾಗೂ ಹೇಳಿಕೊಡದ ಪಾಠದ ಮಧ್ಯೆ ಇವತ್ತು ಜಗತ್ತು ಹೊಯ್ದಾಡುತ್ತಿದೆ. ಮಿಠಾಯಿ ಕೊಳ್ಳಲು ಹೋದ ಹುಡುಗಿ ಅಂಗಡಿಯವನ ಆಟಕ್ಕೆ ತಲ್ಲಣಿಸಿ ಹೋಗಿದ್ದಾಳೆ. ಬಸ್ ನಲ್ಲಿ ಕೂತವಳ ಮೈಯನ್ನು ಇನ್ನಾರೋ ಸವರುತ್ತಿದ್ದಾರೆ. ರಸ್ತೆಯಲ್ಲಿ ಹಕ್ಕಿಯಂತೆ ಹಾರುತ್ತಿದ್ದವಳ ಬೆನ್ನನ್ನು ಬೈಕ್ ನಲ್ಲಿ ಹಿಂಬಾಲಿಸಿ ಬಂದ ಅವರು ಸವರಿ ಹೋಗಿದ್ದಾರೆ. ಪಾರ್ಕ್ ನಲ್ಲಿ ಜಾಗಿಂಗ್ ಗಿಳಿದು ಹಿತಗಾಳಿಯನ್ನು ಒಳಗೆಳೆದುಕೊಳ್ಳುತ್ತಿರುವವಳನ್ನು ಅನಾಮತ್ತಾಗಿ ಪೊದೆಗಳ ಹಿಂದೆಯಿಂದ ಬಂದ ಆತ ತುಟಿ ಕಚ್ಚಿ ಓಡಿದ್ದಾನೆ. ಕಾರು ಕಲಿಸಲು ಬಂದ ಅಮ್ಮನ ಗೆಳೆಯ ಮೈ ಸವರಿದ್ದಾನೆ. ಮ್ಯಾಚ್ ನೋಡಲು ಬರುವ ಅಪ್ಪನ ಗೆಳೆಯ ಲುಂಗಿ ಬಿಚ್ಚುತ್ತಾನೆ. ಬಸ್ ನಲ್ಲಿ ಹೆಂಗಸರ ಮಧ್ಯೆಯೇ ನಿಲ್ಲುವಾತ ಸಿಕ್ಕಲ್ಲೆಲ್ಲ ತಾಗಿಸುತ್ತಾನೆ. ಮಹಿಳಾ ಹಾಸ್ಟೆಲ್ ನ ಬಾಥ್ ರೂಂನಲ್ಲಿ ಇಣುಕಿ ನೋಡುವವರು, ಹಾದಿಯಲ್ಲಿ ನಿಂತು ಮರ್ಮಾಂಗ ತೋರಿಸುವವರು, ಬಸ್ಸಿನಲ್ಲಿ ಅಪ್ಪನ ಜೊತೆ ಪಯಣಿಸುತ್ತಿದ್ದರೂ ಎದೆಗೆ ಕೈ ಹಾಕುವವರು, ಪುಸ್ತಕ ಕೊಟ್ಟು ಬಲಾತ್ಕಾರ ನಡೆಸಲು ಮುಂದಾದ ಲೈಬ್ರರಿಯನ್, ಲೋನ್ ಕೊಟ್ಟು ದೇಹ ಕೇಳಿದ ಬ್ಯಾಂಕ್ ಮ್ಯಾನೇಜರ್, ನನ್ನ ಹಿಂದೆ ಬಂದು ನಿಲ್ಲು ಎನ್ನುವ ಬಸ್ ಡ್ರೈವರ್… ಹೀಗೆ ಎಷ್ಟೊಂದು ಕಥೆಗಳು ಹೊರಬೀಳುತ್ತಿವೆ. ಅಮ್ಮ ಹೇಳಿಕೊಟ್ಟ ಹೇಳಿಕೊಡದ ಪಾಠದ ನಡುವಿನ ಲೋಕದಲ್ಲಿ..
ಈ ಮಧ್ಯೆಯೇ ಅಮೀರ್ ಖಾನ್ ತನ್ನ ಎದುರು ಕೂತ ನೂರಾರು ಪೋಷಕರನ್ನು ನೇರಾ ನೇರಾ ಕೇಳಿದ್ದ ‘ಸತ್ಯಮೇವ ಜಯತೆ’ ಯಲ್ಲಿ. ನಿಮ್ಮ ಪ್ರಕಾರ ನಿಮ್ಮ ಮಗು ಲೈಂಗಿಕ ದೌರ್ಜನ್ಯಕ್ಕೆ ಈಡಾಗುವುದು ಯಾರಿಂದ ಗೊತ್ತಾ? ಪೋಷಕರ ಕೊಟ್ಟ ಉತ್ತರಗಳು ಮನೆಯ ಕೋಣೆಯ ಒಳಗೆ ನಡೆಯುವ ದೌರ್ಜನ್ಯದ ಬಗ್ಗೆ ಅವರಿಗೆ ಅರಿವೇ ಇಲ್ಲಎನ್ನುವುದನ್ನು ಸಾರಿ ಹೇಳುತ್ತಿತ್ತು. ಗ್ರಾಫ್ ಬಿಡಿಸಿಟ್ಟ ಅಮೀರ್ ಖಾನ್ ನಮ್ಮ ಮನೆಯೊಳಗೇ, ನಮ್ಮ ಬಗಲಲ್ಲಿ, ನಮ್ಮ ನೆರೆಯಲ್ಲಿ, ನಮ್ಮ ಬಂಧುವಿನಲ್ಲಿಯೇ ಒಬ್ಬ ಅತ್ಯಾಚಾರಿಯಿದ್ದಾನೆ ಎಂದು ಸಾರಿದ್ದ. ನನ್ನ ಕೈಯಲ್ಲಿದ್ದ ಪ್ರತಿಯೊಂದು ಲೇಖನವೂ ಇದು ಹೌದು ಎಂದು ಸಾರುತ್ತಿತ್ತು.
ಮುಂಬೈನಲ್ಲಿ ಜರುಗಿದ ಸಾಕ್ಷ್ಯಚಿತ್ರ ಉತ್ಸವದಲ್ಲಿ ಕುಳಿತಿದ್ದೆ. ಚಿತ್ರ ‘ಮೆಮೋರೀಸ್ ಆಫ್ ಫಿಯರ್’ ಮಧುಶ್ರೀ ದತ್ತ ಎನ್ಎಸ್ ಡಿಯಲ್ಲಿ ನಾಟಕ ಕಲಿತವರು. ಅದರ ಜೊತೆಗೆ ‘ಮಜ್ಲಿಸ್’ ಎಂಬ ಸಂಸ್ಥೆ ಕಟ್ಟಿ ಮಹಿಳೆಯರ ಮನಹೊಕ್ಕು ನೋಡದವರು. ಅವರ ಚಿತ್ರ ಮುಗಿಯುವ ವೇಳೆಗೆ ನಾನು ನಿಟ್ಟುಸಿರಾಗಿ ಕೂತಿದ್ದೆ. ಅವರು ಭಯದ ನೆನಪುಗಳ ಕರಾಳ ಕಥೆ ಹೇಳಿದ್ದರು. ಲೈಂಗಿಕ ದೌರ್ಜನ್ಯದ ಪರಿಣಾಮಗಳನ್ನು ಸದ್ದಿಲ್ಲದೆ ಬಿಡಿಸಿಟ್ಟಿದ್ದರು. ಆದರೆ ಅದು ಸದ್ದು ಮಾಡಿತ್ತು. ಅದನ್ನು ನೋಡಿದ ಹಲವರು ತಮ್ಮ ಬಾಲ್ಯ ಕಾಲದ ಶೋಧಕ್ಕೆ ತೊಡಗಿದ್ದರು. ಇದರಲ್ಲಿ ಉತ್ತರಗಳನ್ನು ಹುಡುಕಿಕೊಂಡರು. ತಾವೊಬ್ಬರೇ ಅನುಭವಿಸುತ್ತಿದ್ದ ಭಾರದ ಹೊರೆಯನ್ನು ಇಳಿಸಿಕೊಂಡರು. ಅಂದಿನಿಂದ ಇಂದಿನವರೆಗೆ ಎಷ್ಟೊಂದು ಜನ ಹೇಗೆಲ್ಲಾ ಅನುಭವಿಸಿದ ಕರಾಳ ನೆನಪುಗಳ ಗಂಟನ್ನು ಹೊತ್ತು ಸಾಗಿದ್ದಾರೆ. ಅದನ್ನು ಇಳಿಸಿಕೊಳ್ಳುವ ದಾರಿ ಹುಡುಕುತ್ತಿದ್ದಾರೆ. ಪ್ರೊ.ಬಿ.ಎ.ವಿವೇಕ ರೈ ಅವರು ಒಂದು ಲೇಖನ ಬರೆದಿದ್ದರು. ‘ಬಿಚ್ಚಬೇಕಾದ ಕಟ್ಟಡಗಳು, ಆಲಿಸಬೇಕಾದ ದನಿಗಳು’ ಅಂತ. ಹಾಗೆ, ಥೇಟ್ ಹಾಗೆಯೇ ಈಗ ದಶಕಗಳ ಕಾಲ ಅವಮಾನದ, ಭಯದ, ತಲ್ಲಣದ, ನೋವಿನ ಹೊರೆ ಹೊತ್ತವರ ಮನಸ್ಸಿನ ಕಟ್ಟಡಗಳನ್ನು ಬಿಚ್ಚಬೇಕಿದೆ. ಅವರ ಒಳಗಿನ ದನಿಗಳನ್ನು ಆಲಿಸಬೇಕಾಗಿದೆ.
‘ ಈ ರಾತ್ರಿ ಎಚ್ಚರಾಗಿರೋಣ’ ಎನ್ನುವ ನಾಟಕ ಒಂದಿತ್ತು. ಕೋಮುಗಲಭೆ ತಡೆಯುವ ಬಗ್ಗೆ. ಅದರಲ್ಲಿ ಪ್ರತಿಯೊಬ್ಬ ಮಹಿಳೆಯೂ ಪಣ ತೊಡುತ್ತಾಳೆ. ಈ ರಾತ್ರಿ ನಾನು ಎಚ್ಚರಾಗಿರುತ್ತೇನೆ. ನನ್ನ ಗಂಡ, ಮಗ, ಸಹೋದರ ಹೊರಗೆ ಹೋಗದಂತೆ ಎಚ್ಚರಾರುತ್ತೇನೆ. ಮನೆಗೆ ಬೆಂಕಿ ಹಚ್ಚುವ, ಪೆಟ್ರೋಲ್, ಸೀಮೆ ಎಣ್ಣೆ ಸುರಿಯುವ, ಇರಿದು ಕೊಲ್ಲುವ, ಲೂಟಿ ಮಾಡುವ ನನ್ನ ಗಂಡ, ನಮ್ಮ ಸಹೋದರ, ನನ್ನ ಬಂಧು ಹೊರಹೋಗದಂತೆ ಎಚ್ಚರಾಗಿರುತ್ತೇನೆ ಎಂದು. ‘ಹೇಳತೇವ ಕೇಳ’ಕ್ಕೆ ಎರಡು ಮಾತು ಬರೆಯುತ್ತಾ ನಾನು ಬರೆದೆ. ‘ಅತ್ಯಾಚಾರದ ವಿಚಾರದಲ್ಲೂ ಇದೇ ರೀತಿಯ ಪಣ ತೊಡಬೇಕು. ಈ ರಾತ್ರಿ, ಈ ಹಗಲು, ಪ್ರತಿ ರಾತ್ರಿ, ಪ್ರತಿ ಹಗಲು, ನನ್ನ ಗಂಡ, ನನ್ನ ಸಹೋದರ, ನನ್ನ ಬಂಧು ಪುರುಷ ಮೃಗವಾಗಿ ಬದಲಾಗದಿರುವಂತೆ ಎಚ್ಚರಾಗಿರೋಣ.’
ಇದೆಲ್ಲಾ ಬರೆಯುವಾಗಲೇ ಕವಯತ್ರಿ ಛಾಯಾ ಭಗವತಿ ಬರೆದ ಕವನ ಕಣ್ಣಿಗೆ ಬಿತ್ತು- ಪ್ರಯಾಣಿಕ ಇವತ್ತಿಗೂ ಅವರಿವರ ಎದೆ ಸವರುತ್ತಲೇ ಇದ್ದಾನೆ ! ಆ ಅವರಿವರಲ್ಲಿ ನಾವು, ನಮ್ಮ ಸಹೋದರರ, ನಮ್ಮ ಬಂಧು, ನಮ್ಮ ಒಳಗೆ ಇಲ್ಲದಿರಲಿ..
(ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದ ಬರಹ)









ಹಲವು ದಶಕಗಳ ಮೂಕ ರೋದನಕ್ಕೆ ದನಿಯಾದ ಅವಧಿಗೆ ಧನ್ಯವಾದಗಳು!
ಅತ್ಯಾಚಾರದ ಘಟನೆ ನಡೆದ ನಂತರ ಕೆಲವು ದಿನಗಳ ನಂತರ ಎಲ್ಲವೂ ಸುಮ್ಮನಾಯಿತಲ್ಲ ಅಂದುಕೊಂಡಿರುವಾಗಲೇ ಇಂತಹ ೊಂದು ಪ್ರಯತ್ನ ನೋಡಿ ಸಂತೋಷವಾಯಿತು.ಕಡೆಯ ಸಾಲಿನಲ್ಲಿರುವಂತೆ ನಮ್ಮ ಸುತ್ತಮುತ್ತಲಿನದನ್ನು ನಿಯಂತ್ರಿಸಿದರೆ ಬಹು ದೊಡ್ಡ ಕೆಲಸವಾಗುತ್ತದೆ.ಧನ್ಯವಾದಗಳು ಸಾರ್….ನಿಮ್ಮೊಂದಿಗಿದ್ದೇವೆ.
ಮೋಹನ್ ಅವರೆ, ನೀವು ಕರೀಂಖಾನರೊಡನೆ ಮತ್ತೊಮ್ಮೆ ಹೇಳಿ ಅಂದಂತೆ ನಾನು ಓದಿದ್ದೇನು ಅನ್ನುವುದನ್ನು ಅರಗಿಸಿಕೊಳ್ಳಲು ಆ ಸಾಲು ನಾನು ಮತ್ತೊಮ್ಮೆ ಓದಿದೆ. ಹಾಳಾದೊವೆರಡು ಮೊಲೆ ಬಂದು|ಈ ಸಾಲಿನ ಬಗ್ಗೆ ಅಕ್ಷರಗಳಲ್ಲಿ ಹೇಳಲು ಪದಗಳೇ ಸಿಗುತ್ತಿಲ್ಲ ನಂಗೆ. ಹಸಿ ವಾಸ್ತವವನ್ನು ಜನಪದೀಯರು ದಿಟ್ಟತನದ ಹಸಿನುಡಿಯಲ್ಲಿ ಕಟ್ಟಿಕೊಟ್ಟಿದ್ದಾರೆ!
ಅನುಪಮಾ ಪ್ರಸಾದ್.
ಅಭಿನಂದನೆಗಳು ಸರ್, ಈ ಪುಸ್ತಕ ಸಾವಿರಾರು ಮಹಿಳೆಯರ ಮನ ತಲುಪಿ ಪ್ರತಿ ಮಹಿಳೆಯೂ ಎಚ್ಚರವಾಗಲಿ. ಅವಳ ಎಚ್ಚರಿಕೆ ಪ್ರತಿಯೊಬ್ಬ ಅತ್ಯಾಚಾರಿಯ ಎದೆ ನಡುಗಿಸಲಿ.
dinanityada hengasara melina avahelanavannu nodi, keli tale jumuguduthide. Yaru idannu sarimaduvavaru?.
ನಮ್ಮ ಮನೆಯೊಳಗೇ ನಮ್ಮ ಬಗಲಲ್ಲೇ ನಮ್ಮ ನೆರೆಯಲ್ಲಿ ನಮ್ಮ ಬಂಧುವಿನಲ್ಲಿಯೇ ಒಬ್ಬ ಅತ್ಯಾಚಾರಿಯಿದ್ದಾನೆ ಈ ಮಾತು ನೂರಕ್ಕೆ ಇನ್ನೂರರಷ್ಟು ದಿಟ…ಮುಖವಾಡಗಳ ಹಿಂದಿರೋ ನಿಜವಾದ ಮುಖ ಬಹಳಷ್ಟು ಸಾರಿ ಕಾಣಿಸೋದೇ ಇಲ್ಲ…ಒಳ್ಳೆಯವರಂತೆ ಪ್ರಗತಿಪರರಂತೆ ಸೋಗು ಹಾಕುತ್ತಿರುತ್ತಾರೆ…ಅದನ್ನೇ ಜನ ನಂಬಿಕೊಂಡಿರುತ್ತಾರೆ…ನಿಜವಾಗಿಯೂ ಪ್ರತಿಯೊಬ್ಬ ಗಂಡಸಿನ ಅಸಲಿ ಬಣ್ಣ ಗೊತ್ತಾಗೋದು ಆತ ಒಬ್ಬನೇ ಬೇರೊಬ್ಬಳು ಹುಡುಗಿ/ಹೆಂಗಸಿನ ಜೊತೆ ಇದ್ದ/ಇರಬೇಕಾದ ಸಂದರ್ಭಗಳಲ್ಲಿ, ಅಂಥ ಸನ್ನಿವೇಶಗಳಲ್ಲಿ ಆತ ಹೇಗೆ ನಡೆದುಕೊಳ್ಳುತ್ತಾನೆ ಎನ್ನುವುದರ ಮೇಲೆ…ಗುಂಪಿನಲ್ಲಿ ಸಮಾಜದ ಎದುರು ಜಾಗೃತವಾಗಿರೋ ಎಷ್ಟೋ ಗಂಡಸರು ಒಬ್ಬರೇ ಇದ್ದಾಗ ತಮ್ಮ ನಿಜವಾದ ಬುದ್ಧಿಯನ್ನು ತೋರಿಸುವುದು ನಾಚಿಕೆಗೇಡಿನ ಸಂಗತಿ…ಅಂಥವರಿಗೆ ಆತ್ಮಸಾಕ್ಷಿ ಚುಚ್ಚೋದಿಲ್ವಾ? ಅಂಥವರು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳಲಿ.