ಈ ಮೊದಲು ಹೇಳಿದಂತೆ ರಾಯಚೂರು ನನ್ನ ಹುಟ್ಟೂರು. ಜನ್ಮ ನೀಡಿದ ನೆಲದ ಬಗ್ಗೆ ಏನೇ ಅಂದರೂ ಏನೋ ಒಂದು ವ್ಯಾಮೋಹ. ನನಗೆ ಜನ್ಮ ನೀಡಿದ್ದು ರಾಯಚೂರು, ಬದುಕು ಕಟ್ಟಿಕೊಟ್ಟದ್ದು ಕೂಡ್ಲಿಗಿ. ಹೀಗಾಗಿ ಈ ಎರಡೂ ಊರುಗಳೆಂದರೆ ನನಗೆ ತುಂಬಾ ವ್ಯಾಮೋಹ.
ನನ್ನ ಹುಟ್ಟೂರಿನಲ್ಲೊಂದು ಕೃತಿ ಬಿಡುಗಡೆಯಾಗಬೇಕೆಂಬುದು ನನ್ನ ಬಹುದಿನಗಳ ಬಯಕೆ. ಆತ್ಮೀಯರೂ, ಹಿತೈಷಿಗಳೂ, ಹಿರಿಯರಾದ, ರಾಯಚೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರೂ (ಅಭಿವೃದ್ಧಿ) ಆಗಿರುವ ಮಲ್ಲಿಕಾರ್ಜುನಸ್ವಾಮಿ ಗುರುಗಳಿಗೆ ಕೇಳಿದಾಗ ಅವರು ಅತ್ಯಂತ ಸಂತಸದಿಂದ ಪ್ರತಿಕ್ರಿಯಿಸಿದರು.
ಇದೇ ವಿಷಯಕ್ಕೆ ಕೆಲದಿನಗಳ ಹಿಂದೆ ರಾಯಚೂರಿಗೆ ಹೋದಾಗ ಅಲ್ಲಿನ ಸಾಹಿತ್ಯ ಪರಿಷತ್ ಪದಾಧಿಕಾರಿಗಳನ್ನು ಪರಿಚಯಿಸಿದರು.
ಈ ಮೊದಲೇ ಆತ್ಮೀಯರಾಗಿರುವ ಖ್ಯಾತ ಗಜಲ್ ಕವಿ ಯುವ ಮಿತ್ರ ಚಿದಾನಂದ ಸಾಲಿ ಈ ಕುರಿತು ಸಂತಸ ವ್ಯಕ್ತಪಡಿಸಿದರು. ಪರಿಷತ್ತಿನ ಅಧ್ಯಕ್ಷರಾದ ಮಲ್ಲಿಕಾರ್ಜುನಸ್ವಾಮಿ ಶಿಖರಮಠ, ಸಾಹಿತಿಗಳಾದ ವೀರಹನುಮಾನ್, ಮಹಾಂತೇಶ್ ಮಸ್ಕಿ, ಹರಿನಾಥಬಾಬು ಇತರೆ ಸನ್ಮಿತ್ರರು ಸಮ್ಮತಿಸಿ ಕೃತಿ ಬಿಡುಗಡೆಗೆ ಕೈ ಜೋಡಿಸಿದರು. ಇವರೆಲ್ಲರನ್ನೂ ಎಷ್ಟು ನೆನೆದರೂ ಕಡಿಮೆಯೇ. ಇವರೆಲ್ಲರ ಸಹಕಾರದಿಂದ ಇದೇ ಶನಿವಾರ ದಿ.29.02.2020ರಂದು ನನ್ನ ಗಜಲ್, ದ್ವಿಪದಿ, ಹೈಕುಗಳಿಂದ ಕೂಡಿರುವ “ಲಹರಿ” ಕೃತಿ ಬಿಡುಗಡೆಯಾಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಬಸವಪ್ರಭು ಪಾಟೀಲ್ ವಹಿಸಲಿದ್ದಾರೆ. ಕೃತಿಯನ್ನು ಹಿರಿಯರಾದ ಮಲ್ಲಿಕಾರ್ಜುನಸ್ವಾಮಿ ಗುರುಗಳು ಬಿಡುಗಡೆ ಮಾಡಲಿದ್ದಾರೆ. ಕೃತಿಯನ್ನು ಕುರಿತು ಮಹಾಂತೇಶ್ ಮಸ್ಕಿ ಮಾತನಾಡಲಿದ್ದಾರೆ.
ಮೈಸೂರಿನ ರೂಪಾ ಪ್ರಕಾಶನದವರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ. ಈ ಪ್ರಕಾಶನದಿಂದ ಪ್ರಕಟಗೊಳ್ಳುತ್ತಿರುವುದು ಇದು ಮೂರನೇ ಕೃತಿ. ಪ್ರಕಾಶನದ ಯು.ಎಸ್.ಮಹೇಶ್ ಅವರಿಗೆ ಧನ್ಯವಾದಗಳು.
ದಯವಿಟ್ಟು ಬನ್ನಿ, ಪಾಲ್ಗೊಳ್ಳಿ.
– ಸಿದ್ಧರಾಮ ಕೂಡ್ಲಿಗಿ







0 Comments