ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಬ್ಬ ಹೇಮಮಾಲಿನಿ…

ಕ್ಲಿಕ್ಕಿಸಿ :).  ಆಗ ಒ೦ದು ಛಾಯೆಯ೦ತಿದ್ದ ಈಕೆ ಆ ಲೇಖನಕ್ಕೆ ಇನ್ನೂ ಹಲವರು ಪ್ರತಿಕ್ರಯಿಸುತ್ತಾ ಹೋದ೦ತೆ ನಮ್ಮ ಮನಸ್ಸಿನಲ್ಲಿ ಬೆಳೆಯುತ್ತಾ ಹೋದಳು. ಅವರ ಪ್ರತಿಕ್ರಿಯೆಗಳು ಇಲ್ಲಿವೆ… ಈ ಲೇಖನ ಆ ಹೇಮಮಾಲಿನಿಗಾಗಿ… ಮಹದೇವ ಹಡಪದ್ : ಪ್ರೀತಿಯಿಂದ ಬದುಕು ಸಂತೃಪ್ತಿ ಪಡೆಯಿತು ನೋವೆಂಬ ಮದ್ದನ್ನೇ ತನ್ನದಾಗಿಸಿಕೊಂಡಿತು ಕೊನೆಗೆ ಮದ್ದಿಲ್ಲದ ನೋವನ್ನೇ ಪಡೆಯಿತು ಅದೇ ಧಾರವಾಡದ ಕಡಪಾ ಮೈದಾನದ ಮುಂದಿನ ಪುಟಪಾತ್ ಮೇಲೆ, ನಾಲ್ಕು ವರ್ಷದ ಹಿಂದೆ (ಆ ದಿವಸ ನಾನು ಕಿತ್ತೂರಿನ ಹತ್ತಿರದ ಬೀಡಿ ಗ್ರಾಮಕ್ಕೆ ಹೋಗಲು ತಯಾರಾಗಿ ಬಂದಿದ್ದೆ, ಶಾರದಾ ದಾಬಡೆಯವರು ಬರುವುದನ್ನು ಕಾಯುತ್ತ ನಿಂತಿದ್ದಾಗ…) ನಾನೊಂದು ದೃಶ್ಯ ಕಂಡಿದ್ದೆ. ಹೊಟ್ಟೆಯನ್ನು ನೆಲಕ್ಕಂಟಿಸಿ ಕಂವುಚಿ ಮಲಗಿದ್ದ ಒಬ್ಬ ಮಾನಸಿಕ ಅಸ್ವಸ್ಥ ಹೆಣಮಗಳು ಯಾರೋ ಕೊಟ್ಟು ಹೋಗಿದ್ದ ದೋಸೆ ಒಂದನ್ನು, ತನ್ನಂತೆ ಹಸಿದುಕೊಂಡು ಜುಬ್ಲೀ ಸರ್ಕಲ್ಲಿನ ಆ ಮೂಲೆ ಈ ಮೂಲೆ ತಿರುಗುತ್ತಿದ್ದ ನಾಯಿಗೆ ಸಮಪಾಲು ಮಾಡಿ ಹಾಕಿ ತಾನೂ ತಿನ್ನುತ್ತಿದ್ದಳು. ಮತ್ತೊಂದು ಸಲ ಧಾರವಾಡ ರಂಗಾಯಣ ಸುರುವಾತಿಗೆ ನಾನೂ ಅಲ್ಲಿ ಸ್ವಿಡಿಷ್ ಪ್ರಾಜೆಕ್ಟನಲ್ಲಿ ಕೆಲಸಮಾಡುತ್ತದ್ದಾಗ -ಅದೇ ಊರಿನ ಕಾಲೇಜು ವಿದ್ಯಾರ್ಥಿಗಳು ಹೇಮಾಮಾಲಿನಿ ಎಂದು ಕಾಡಿಸುವ ಮೋಡಕಾ ಆಯುವ ಹುಚ್ಚಿಯೊಬ್ಬಳು ಬಸವರಾಜ ರಾಜಗುರು ಬಯಲು ರಂಗಮಂದಿರದ ಹಿಂದಿನ ಅಕ್ಕಮಹಾದೇವಿ ಕಲ್ಯಾಣಮಂಟಪದ ಒಂದು ಮೂಲೆಯಲ್ಲಿ ಚಳಿಗೆ ಗಡಗಡ ನಡಗುತ್ತ ಕುಳಿತಿದ್ದಳು. ಆಗ ಅಲ್ಲಿಗೆ ಮಾನಸಿಕ ಅಸ್ವಸ್ಥ ತಾಯಿಯೊಬ್ಬಳು ತನ್ನ ಎರಡು ಎಳೆ ಕಂದಮ್ಮಗಳನ್ನು ಕರೆದುಕೊಂಡು ಬಂದಿದ್ದಳು. ಆ ಮಕ್ಕಳು ಚಳಿಗೆ ನಡಗುವುದನ್ನು ನೋಡಿದ ಈ ಹೇಮಾಮಾಲಿನಿ ತನ್ನ ಮೈಮೇಲಿದ್ದ ಶರ್ಟ ಬಿಚ್ಚಿಕೊಟ್ಟಿದ್ದಳು. (ನಂತರ ಹೆಗ್ಗೊಡಿನ ಜೀವನ್ ತನ್ನ ಹಳೆಯ ಶರ್ಟನ್ನ ಹೇಮಾಮಾಲಿನಿಗೆ ಕೊಟ್ಟ) ಈ ಎರಡು ಘಟನೆ ನನ್ನನ್ನ ಆಗಾಗ್ಗೆ ಕಾಡುತ್ತವೆ ಸಾರ್. ನಿಮ್ಮ ಲೇಖನ ಓದಿದ ಮೇಲೆ ಆ ಎರಡು ಕತೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಆದರೆ ವ್ಯವಸ್ಥೆಯ ಅಹಂಕಾರದ ಜೊತೆಗಿರುವ ನಾವು ನೂರೆಂಟು ತೆರನಾಗಿ ಯೋಚಿಸಿ ನಮ್ಮಲ್ಲಿದ್ದದ್ದನ್ನು ಹಂಚಿಕೊಳ್ಳುತ್ತೇವೆ. ಆದರೆ ಆ ಇಬ್ಬರು ಮಾನಸಿಕರು ಮದ್ದಿಲ್ಲದ ನೋವನ್ನೆ ಪಡೆದವರು ಎಂಥಾ ಉದಾತ್ತ ಸಜ್ಜನರು ಅಲ್ಲವಾ ? ಲಕ್ಷ್ಮೀಕಾಂತ ಇಟ್ನಾಳ : ಮೊನ್ನೆ ದಿನನಿತ್ಯದಂತೆ ನಮ್ಮ ಆಫೀಸಿನ ಹತ್ತಿರ ಒಂದು ಗೂಡಂಗಡಿ ಚಹಾ ಅಂಗಡಿಯಲ್ಲಿ ಚಹ ಕುಡಿಯಲೆಂದು ಚಹ ಕೈಯಲ್ಲಿ ಹಿಡಿದು ಅಂಗಡಿಯ ಮುಂದೆ ನಿಂತಿದ್ದೆ. ಅಲ್ಲಿಯೇ ಸಮೀಪದಲ್ಲಿ ಚಿಂದಿ ಆಯುತಿದ್ದ ಹೇಮಾಮಾಲಿನಿಯನ್ನು ನೋಡಿ ಅಂಗಡಿಯವನಿಗೆ ಅವಳಿಗೂ ಚಹ ಕೊಡು ಎಂದೆ. ಅಂಗಡಿಯವ ಅವಳನ್ನು ಕರೆದು ‘ಚಹ ಕುಡಿಬಾ ಬೇ’ ಎಂದು ಕರೆದ. ಅಂಗಡಿಯ ಹತ್ತಿರ ಬಂದು ‘ಯಾರೂ ನೀನ ಚಹ ಕೊಡಾಕತ್ತೀಯೋ ಇಲ್ಲಾ ಯಾರರ ಕೊಡಸಾಕತ್ತ್ಯಾರೋ’ ಅಂದಳು. ಅಂಗಡಿಯವ ನನ್ನತ್ತ ಕೈ ತೋರಿಸಿ, ಆ ಸರ್ ಹೇಳ್ಯಾರು ನೋಡವಾ ಅಂದ. ಅವರು ಏನ ಹೇಳ್ಯಾರು ಅಂದಳು, ನಿನಗ ಚಹ ಕೊಡಲು ಹೇಳ್ಯಾರು ಅಂದ. ಹಾಗಂದರ ನನಗ ಒಂದು ಪ್ಲೇಟ್ ಇಡ್ಲಿ ಕೊಡು ನಂತರ ಚಹ ಕೊಡು. ಅಂದಳು ಆದರೆ ಇಡ್ಲಿ ರೊಕ್ಕ ನಾ ಕೊಡತೇನಿ ಅಂದಳು. ನಾನು ಅವಳಿಂದ ದುಡ್ಡು ತೊಗೊಬ್ಯಾಡ ಅಂದು ತಾಕೀತು ಮಾಡಿ ಅವನಿಗೆ ನೂರರ ನೋಟು ಕೊಟ್ಟು ಅವಸರವಿದ್ದುದರಿಂದ ಚಿಲ್ಲರೆ ಆ ಮೇಲೆ ತೆಗೆದುಕೊಳ್ಳುವೆ ಎಂದು ಹೇಳಿ, ನನ್ನ ಕೆಲಸಕ್ಕೆ ಹೋದೆ. ಮರುದಿನ ಅಂಗಡಿಗೆ ಹೋದಾಗ ನನಗೆ ಕೇವಲ ಅವಳ ಹಾಗೂ ನನ್ನ ಚಹದ ಬಿಲ್ ಅಷ್ಠೇ ಮುರಿದು ದುಡ್ಡು ಕೊಟ್ಟ. ಯಾಕೆ ಎಂದು ಕೇಳಿದ್ದಕ್ಕೆ ಅವಳು ಒಪ್ಪದೇ ಒತ್ತಾಯ ಮಾಡಿ ತನ್ನ ಇಡ್ಲಿ ದುಡ್ಡು ಕೊಟ್ಟೇ ಹೋದಳು ಸರ್ ಎಂದ.ಅವಳ ಸ್ವಾಭಿಮಾನ ಮೆಚ್ಚತಕ್ಕದ್ದಲ್ಲವೇ?. ತಾವು ಬರೆದ ಮಾನವೀಯ ಲೇಖನ ನಿಜವಾಗಿಯೂ ಮನ ಕಲಕಿತು. ತಮಗೆ ಧನ್ಯವಾದಗಳು.  ]]>

‍ಲೇಖಕರು G

25 July, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading