ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗಿದೆ ‘ವ್ಯಾನಿಟಿ ಬ್ಯಾಗ್’

‎”ಸಂಚಾರಿ” ಯ ಹೆಗಲಲ್ಲಿ ವೈದೇಹಿಯ “ವ್ಯಾನಿಟಿ ಬ್ಯಾಗ್’”!

ಮಾರ್ಚ್ ೮, ೨೦೧೨ ರಂದು ರಂಗಶಂಕರದಲ್ಲಿ ಸಂಜೆ ೭.೩೦ಗೆ ನಾಟಕ “ವ್ಯಾನಿಟಿ ಬ್ಯಾಗ್.”

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಈ ಬಾರಿ ಸಂಚಾರಿ ಥಿಯೇಟರ್ ವೈದೇಹಿಯವರ ಕವನಗಳನ್ನು ದೃಶ್ಯಕ್ಕೆ ಅಳವಡಿಸುವ ಒಂದು ಸಾಹಸಕ್ಕೆ ಕೈ ಹಾಕಿದೆ.

ವೈದೇಹಿ ಕನ್ನಡದ ಪ್ರಮುಖ ಕವಯಿತ್ರಿ. ಬುದ್ಧಿ ಭಾವದ ಅಪೂರ್ವ ಸಂಗಮವಾದ ವೈದೇಹಿಯ ಕವನಗಳ ಕೇಂದ್ರ ಬಿಂದು ಹೆಣ್ಣು. ಸಂಚಾರಿ ಥಿಯೇಟರ್ ಪ್ರಯೋಗದ “ವ್ಯಾನಿಟಿ ಬ್ಯಾಗ್”ವೈದೇಹಿಯ ಕಾವ್ಯಲೋಕದ

ವಿವಿಧ ನೆಲೆಗಳನ್ನು ಅನಾವರಣಗೊಳಿಸುತ್ತಾ ಆ ಮೂಲಕ ಹೆಣ್ಣಿನ ಚಿತ್ತ ಚಿತ್ತಾರದ ಅನೂಹ್ಯ ಸಂಗತಿಗಳನ್ನು

ಹೆಣ್ಣಿಗೆ ಮಾತ್ರ ಅನುಭವಗಮ್ಯವಾಗುವ ಹಲವು ಅಮೂರ್ತ ಪ್ರಸಂಗಗಳನ್ನು, ಅವಳ ಭಾವ ಪ್ರಪಂಚದ ಹಲವು ಸೂಕ್ಷ್ಮ ನೇಯ್ಗೆಗಳನ್ನು ದೃಶ್ಯ ರೂಪಕದಲ್ಲಿ ಕಾಣಿಸುತ್ತದೆ. “ನೋಡಬಾರದು ಚೀಲದೊಳಗನು” ಎನ್ನುವ

ವೈದೇಹಿಯವರ ಮಾತನ್ನೇ ವಿಸ್ತರಿಸುತ್ತಾ, “ನೋಡಲಾಗದ” ಆ ಬ್ಯಾಗಿನ ವ್ಯಾನಿಟಿಯ ಒಳಗಿರುವ ವಸ್ತು

ಪ್ರಪಂಚವನ್ನು ವೈದೇಹಿಯವರ ಕಾವ್ಯಲೋಕದ ಹಲವು ಪ್ರಸಂಗಗಳ ಮೂಲಕ ಪ್ರಸ್ತುತಪಡಿಸಲಾಗುತ್ತದೆ.

ವ್ಯಾನಿಟಿ ಬ್ಯಾಗ್ ನ ರೂಪಕದಲ್ಲಿ ಹೆಣ್ಣಿನ ಅಂತರಂಗದ ಒಳನೋಟಗಳಿಗೆ ಸರ್ಚ್ ಲೈಟ್ ಬೀರಿ, ಹೆಣ್ಣಿನ ವಿಶ್ವರೂಪ ದರ್ಶನ ಮಾಡಿಸುವ ವೈದೇಹಿಯವರ ಪ್ರಯತ್ನವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಮಹದಾಶೆಯ ಹಂಬಲ ಸಂಚಾರಿ ಥಿಯೇಟರ್ ದು.

 

ವ್ಯಾನಿಟಿ ಬ್ಯಾಗ್ ಎಂಬ ಈ ಸ್ತ್ರೀಲೋಕದ ಕ್ಯಾನ್ ವಾಸ್ ನಲ್ಲಿ ಹೆಣ್ಣಿನ ಅಂತರಂಗದ ಪಿಸು ಮಾತು, ಮುತ್ತಿನಂತಹ ಗೀಚು ಕೊಟ್ಟು ಮಾಯವಾದವನು ಮಾಡಿದ ಗಾಯದ ನೋವು, ನಿತ್ಯದ ಅನ್ನಕ್ಕಾಗಿ ಬೆರಣಿ ತಟ್ಟುವ ಹುಡುಗಿ, ಆ ಕಾಯ ಕಷ್ಟದ ಬಾಲೆಯ ಎದೆನೋವು, ತನ್ನದೆನ್ನುವ ಆಸ್ತಿಯೇ ಇರದ ಹೆಣ್ಣು ಬರೆವ

ಉಯಿಲು, ತ್ರಿಲೋಕ ಸಂಚಾರಿಯಾದ ಶಿವಗೆ, ಸೇವೆ ಮಾಡುತ್ತಲೇ ನಾನೆಷ್ಟನೆಯ ನಾರಿ? ಎಂದು ಲೇವಡಿ

ಮಾಡುತ್ತಾ ಬಿಕ್ಕುವ ಆರ್ದ್ರ್ಗಗರ್ವದ ಗೌರಿಯ ತಲ್ಲಣ, ಒಂದಕೊಂದಕೆ ಅರ್ಥಾರ್ಥವಿಲ್ಲದೆಯೂ, ಅರ್ಥವಾಗದ

ಭಾಷೆಯ ನಡುವೆಯೂ ಜೀವಿಸುವ ಜೋಡಿಗಳ ವಾಸ್ತವಿಕತೆ- ಒಟ್ಟಾರೆಯಾಗಿ “ನಿತ್ಯ ಮೂಡುತ ನಿತ್ತ್ಯ ಮುಳುಗುತ ಕಷ್ಟ ಸುಖಗಳ ಬೆಟ್ಟ ಕಡಲಲಿ ನಿತ್ಯ ಸುಡುತಿಹ ಸೂರ್ಯಳಾಗಿ ಪ್ರಜ್ವಲಿಸುತ್ತಿರುವ ಹೆಣ್ಣಿನ

ಮನಸ್ಸಿನ ಒಳ್ಲಲೋಕವನ್ನು ಪ್ರತಿನಿಧಿಸುವ ರೂಪಕವಾದ ವ್ಯಾನಿಟಿ ಬ್ಯಾಗಿನಲ್ಲಿ ವೈದೇಹಿಯ ಎಲ್ಲ ಪ್ರಮುಖ ಕವನ್ಗಳನ್ನು ಅಡಗಿಸಿಟ್ಟಿರುವುದು ಈ ರಂಗಪ್ರಯೋಗದ ವಿಶೇಷ.

 

‍ಲೇಖಕರು G

4 March, 2012

1 Comment

  1. ಕಾಣಿಕ್ಯರಾಜು

    ಹೆಣ್ಣಿನ ಮರ್ಮವನ್ನರಿತು, ಹೆಣ್ಣೊಳಗಿನ ಲೋಕದೃಷ್ಟಿಗೆ ಸರ್ಚ್ ಲೈಟ್ ಹಾಕಿನೋಡಿ ಅರ್ಥಮಾಡಿಕೊಳ್ಳವಲ್ಲಿ ಈ ’ವ್ಯಾನಿಟಿಬ್ಯಾಗ್’ ಸಹಾಯಕವಾಗಬಹುದು. ಹೆಣ್ಣು ಹೆಣ್ಣನ್ನೇ ಯಾವ ಯಾವ ಆಯಾಮದಲ್ಲಿ ಹಾಗೂ ಯಾವ ಲೋಕದದೃಷ್ಟಿಕೋನದಿಂದ ಬೇರೆ ಬೇರೆ ಸ್ಥರಗಳ ಹೆಣ್ಣಿನ ಅನುಭವದ ಅಂತಸ್ತಿಗೆ ಜಾಣ್ಮೆಯ ಒಳವುಗಳನ್ನು ಕೊಡಲು ಸಾಧ್ಯ ಎಂದು ತೋರಿಸಿಕೊಡುವುದರಲ್ಲಿ ವೈದೇಹಿಯವರ ಪಾತ್ರ ಹಿರಿದು ಎನ್ನಬಹುದು.ಆದರೆ ಪ್ರಸ್ತುತ ಕಾಲಮಾನಕ್ಕೆ ಅದನ್ನೆ ಒರೆಹಚ್ಚಿ ನೋಡುವುದು ಎಷ್ಟು ಸಮಂಜಸ ಎನ್ನುವುದು ಪ್ರಶ್ನೆಯಾಗಿ ಉಳಿಯುತ್ತದೆ. ಇದಲ್ಲದೆ ಇಂಥ ಪ್ರಯತ್ನಗಳಿಗೆ ನಮ್ಮ ಇಂದಿನ ಪೀಳಿಗೆ ದೃಷಿಕೋನ ಹಾಯಿಸದಿರುವುದು ಬೇಸರವೆನಿಸುತ್ತದೆ. ಇವೆಲ್ಲಾ ಇದ್ದರೂ ಇಂಥಹ ದಾಪುಗಾಲುಗಳು ಹೆಣ್ಣಿನ್ನು ಅರ್ಥೈಸಲು ಹಾಗೂ ಉದ್ಧಾರ ಮಾಡಲು ಹಲವರನ್ನು ಪ್ರೇರೆಪಿಸುವುದರಲ್ಲಿ ಉತ್ತೇಜನಕಾರಿಯಾಗಿರುತ್ತದೆ ಎಂದೆನಿಸುತ್ತದೆ. ಕಾಲ ಕಾಲಕ್ಕೆ ಇಂಥಹ ಕಥೆ,ಕವನ,ರಂಗಕಲೆ ಹಾಗೂ ನಾಟಕಗಳಲ್ಲಿ ಒಳಹೊಕ್ಕು ’ಸ್ತ್ರಿಲೋಕದ’ಅರಿವು ನಮ್ಮ ಸಮಾಜದಲ್ಲಿನ ಬದಲಾವಣೆಗೆ ನಾಂದಿಯಾಡಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading