ಜಿ ಪಿ ಬಸವರಾಜು ಅವರು ಬರೆದ ಲೇಖನಕ್ಕೆ ರಮೇಶ್ ಗುರುರಾಜ ರಾವ್ ಅವರ ಪ್ರತಿಕ್ರಿಯೆ
ರಮೇಶ್ ಗುರುರಾಜ ರಾವ್
ಖಂಡಿತಾ ನಮ್ಮೊಳಗೇ ಎಚ್ಚರ ಮೂಡಿಸುವ ಲೇಖನ…
ನನ್ನಂಥ ಸಣ್ಣವನ ಅನಿಸಿಕೆ ಇಷ್ಟು…. ರಂಗಶಂಕರದಲ್ಲಿ 49 ರೂಪಾಯಿಗಳಿಗೆ ಕೂಡ ನಾಟಕ ಪ್ರದರ್ಶನ ಉಂಟು… ಆಯಾ ರಂಗತಂಡಗಳು ನಿರ್ಧರಿಸುವ ಪ್ರವೇಶ ಧನಕ್ಕೆ ರಂಗಶಂಕರದ ಮಧ್ಯಸ್ಥಿಕೆ ಇಲ್ಲವೆಂದು ನನ್ನ ಅಭಿಪ್ರಾಯ… ನಾನು ತಪ್ಪಾಗಿ ತಿಳಿದಿದ್ದಲ್ಲಿ ದಯವಿಟ್ಟು ಸರಿಪಡಿಸಿ. ಇನ್ನು ಅಲ್ಲಿಯ ನಿಯಮಕ್ಕೂ ಮಾಲ್ ಗಳಲ್ಲಿ ಸಿನೆಮಾ ನೋಡುವವರು ಸೂಪರ್ ಮಾರ್ಕೆಟ್ ಮೂಲಕವೇ ಹಾದುಹೋಗಬೇಕೆಂಬ ಕೊಳ್ಳುಬಾಕತನದ ಹುನ್ನಾರವನ್ನು ನಿಯಮದ ರೀತಿ ಮಾಡುವುದಕ್ಕೂ ಎಲ್ಲೋ ಹೋಲಿಕೆ ಮಾಡಿದ್ದೀರಿ ಎನ್ನಿಸುತ್ತದೆ. ಹಾಗಿದ್ದಲ್ಲಿ, ಅದು ಸರಿಯಲ್ಲವೆಂದು ನನ್ನ ಭಾವನೆ. ರಂಗಶಂಕರದಲ್ಲಿ ನಿಯಮಗಳು ಇರುವುದು ಜನರ ಅನುಕೂಲಕ್ಕಾಗಿ ಜೊತೆಗೆ ಕಲಾವಿದರ ಅನುಕೂಲಕ್ಕಾಗಿ ಕೂಡ… ಅಲ್ಲಿ ಇರುವುದು ಇಂಟಿಮೇಟ್ ಥಿಯೇಟರ್ ಮಾದರಿಯ ರಂಗಭೂಮಿ. ಹೀಗಾಗಿ, ಅಲ್ಲೇ ನಾಟಕ ನೋಡುತ್ತಾ ಕುರುಕಲು ತಿಂಡಿಗಳನ್ನು ತಂದು ತಿನ್ನುವುದು, ಶಬ್ದ ಮಾಡುವುದು, ಪ್ರದರ್ಶನದ ಮಧ್ಯೆ ಓಡಾಡುವುದು ಮಾಡಿದಾಗ, ಅಲ್ಲಿ ರಂಗದ ಮೇಲಿರುವ ಕಲಾವಿದರಿಗೂ ಹಿಂಸೆಯೇ… ನಾನು ರಂಗಶಂಕರವನ್ನು ವಹಿಸಿಕೊಂಡು ಮಾತಾಡುತ್ತಿಲ್ಲ. ಅಲ್ಲಿರುವ ನಿಯಮಗಳ ಬಗ್ಗೆ ಹೇಳುತ್ತಿದ್ದೇನೆ ಅಷ್ಟೇ.

ಚಿತ್ರ ಕೃಪೆ: ಅಶೋಕ್ ಉಚ್ಚಂಗಿ
ರಂಗಾಯಣದ ವನರಂಗಕ್ಕೂ ರಂಗಶಂಕರದ ಇಂಟಿಮೇಟ್ ಥೀಯೇಟರ್ ಮಾದರಿಗೂ ಹೋಲಿಕೆ ಸರಿಯಲ್ಲವೆಂದು ನನ್ನ ಅನಿಸಿಕೆ. ಮೇಷ್ಟ್ರು ವನರಂಗ ಮಾಡಿದ ಕಾನ್ಸೆಪ್ಟ್ ಮತ್ತು ಸಂಕೇತ್ ತಂಡ ಮಾಡಿದ ರಂಗಶಂಕರದ ಮಾದರಿ ಸಂಪೂರ್ಣವಾಗಿ ವಿಭಿನ್ನ..
ಇನ್ನು, ಸಂಗೀತ ಸಮ್ಮೇಳನಗಳ ಬಗ್ಗೆ ಹೇಳಿದ್ದೀರಿ. ಅದರಲ್ಲಿ ಒಂದು ಹೆಸರು ನನಗೆ ಎದ್ದು ಕಂಡಿದ್ದು ಗುರುರಾವ್ ದೇಶಪಾಂಡೆ ನೆನಪಿನ ಅಹೋರಾತ್ರಿ ಸಂಗೀತ ಉತ್ಸವ. ಏಕೆಂದರೆ ಈ ಉತ್ಸವಕ್ಕೆ ನಾನು ಪ್ರತಿ ವರ್ಷ ತಪ್ಪದೆ ಹೋಗುತ್ತೇನೆ. ನೀವು ಹೇಳಿದಂತೆ ಅಲ್ಲಿ ಉಚಿತ ಪ್ರವೇಶವೇ. ಆದರೆ ಅಲ್ಲಿ ವೇದಿಕೆಯ ಗೋಡೆಯ ಮೇಲೆ ಗಮನಿಸಿದ್ದೀರಾ ? ಕೆನರಾ ಬ್ಯಾಂಕ್, ಮತ್ತಿತರ ಸಂಸ್ಥೆಗಳು ಪ್ರಾಯೋಜಿಸಿರುವ ಬಗ್ಗೆ ದೊಡ್ಡ ದೊಡ್ಡ ಬ್ಯಾನರ್ ಗಳು ಇರುತ್ತವೆ. ನಿಜವೇ. ಪಂಡಿತ್. ವಿನಾಯಕ ತೊರವಿಯವರು ಕೆಲಸ ಮಾಡುತ್ತಿದ್ದ ಕೆನರಾ ಬ್ಯಾಂಕ್ ಸಹಾಯ ಮಾಡುತ್ತಿದೆ ಎಂದೇ ಇಟ್ಟುಕೊಂಡರೂ, ಅಲ್ಲಿ ದೂರುದ್ದೇಶ ಇಲ್ಲವೇ ? ಖಂಡಿತಾ ಇದೆ. ತಮ್ಮ ಬ್ಯಾಂಕಿನ ವಿವಿಧ ಯೋಜನೆಗಳಿಗೆ ಅಲ್ಲಿಗೆ ಬರುವವರ ಗಮನ ಸೆಳೆಯುವ ಉದ್ದೇಶ ಖಂಡಿತಾ ಉಂಟು.
ಇಷ್ಟೆಲ್ಲಾ ಹೇಳಿ, ನಾನು ನಿಮ್ಮ ವಿಚಾರ ಸರಣಿಯನ್ನು ಒಂದು ಮಟ್ಟಕ್ಕೆ ಒಪ್ಪುತ್ತೇನೆ. ನೀವು ಹೇಳಿದ ಕೆಲವು ವಿಷಯಗಳಿಗೆ ನನ್ನ ಅನಿಸಿಕೆಯನ್ನು ಹಂಚಿಕೊಳ್ಳಬೇಕೆನಿಸಿತು. ಹೀಗಾಗಿ ನನ್ನ ಈ ಬಡಬಡಿಕೆ






0 Comments