ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಂಪಿ ಯೂನಿವರ್ಸಿಟಿಗೆ ಇನ್ನೊಂದು ಸರ್ಚ್ ಕಮಿಟಿ!

ಅಮಾಸೆ ಟೈಮ್ಸ್. ಕನ್ನಡ ಟೈಮ್ಸ್ ಪತ್ರಿಕೆಯನ್ನು ರೆಗ್ಯೂಲರ್ ಆಗಿ ಓದುವವರಿಗೆ ಈ ಅಮಾಸೆ ಟೈಮ್ಸ್ ರುಚಿ ಗೊತ್ತಿರುತ್ತದೆ. ಇದರ ಆರೋಗ್ಯಕರ ಕೀಟಲೆ ಖುಷಿ ಕೊಡುವಂಥದ್ದು. ಇದರ ರುಚಿಯನ್ನು ಅವಧಿಯ ಓದುಗರಿಗೂ ಬಡಿಸೋಣ ಎಂಬ ಆಸೆ.

* * *

xclaimpt.gif ರಾಜ್ಯಪಾಲ್ರು ಯಾವ ಅಪಾಯಿಂಟ್ಮೆಂಟೂ ಸರಿಯಾಗಿ ಮಾಡ್ತಾ ಇಲ್ಲ; ಹರಾನಂದ್ ಗಾಳಿ ಥರದೋರು ಸೂಟ್ ಕೇಸ್ ತುಂಬಾ ಗಾಳಿ ತುಂಬ್ಕೊಂಡ್ ಬಂದ್ರೆ ಮಾತ್ರ ಕೆಲ್ಸ ಮಾಡ್ತಾರೆ. ಬರೇ ದೇವೇಗೌಡ್ರು ಹೇಳಿದ್ದು ಮಾತ್ರ ಕೇಳ್ತಾರೆ -ಎಂದು ಕಾಂಗ್ರೆಸ್ ಸಾಹಿತಿಗಳು, ವೀಸಿ ಆಗೋ ಕ್ಯಾಂಡಿಡೇಟ್ ಗಳು ಗಲಾಟೆ ಮಾಡಿದರಷ್ಟೆ.

ಇದೇ ಸಂದರ್ಭವೆಂದು ಹಂಪಿ ಸೈಡ್ ರೈಟರುಗಳೆಲ್ಲ ಸೇರಿ ಮುರಿಗೆಪ್ಪನೋರು ವೀಸಿ ಆದದ್ದರ ವಿರುದ್ಧ ಕೂಡ ಒಂದು ಗೊಣಗಾಟದ ಮನವೀನ ರಾಜ್ಯಪಾಲರಿಗೆ ಒಗೆದೇಬಿಟ್ಟರಂತಲ್ಲ ಕಾಮ್ರೇಡ್!

ಈ ಮನವಿ ಓದಿದ ರಾಜ್ಯಪಾಲರು, “ಹಾಳಾಗೋಗ್ಲಿ, ಆ ವೀಸಿ ಅದೇನೇನು ರೀಸರ್ಚ್ ಮಾಡಿದಾರೆ ಅಂತ ಕಂಡುಹಿಡಿಯೋಕೆ ಒಂದು ಸ್ಪೆಷಲ್ ಸರ್ಚ್ ಕಮಿಟಿ ಮಾಡ್ರೀ-ಮತ್ತೆ ಆ ಹಂಪನಾ ಅಧ್ಯಕ್ಷತೇಲೇ! ಯಾಕೇಂದ್ರೆ ಕರ್ನಾಟಕದಲ್ಲಿ ಮುರಿಗೆಪ್ಪನೋರ ಸಮಗ್ರ ಸಾಹಿತ್ಯದ ಬಗ್ಗೆ ಕಂಪ್ಲೀಟ್ ರೀಸರ್ಚ್ ಮಾಡಿರೋರು ಅವರೊಬ್ರೇ!” ಎಂದು ಷರಾ ಬರೆದರಂತೆ.

*

ಕಸಾಪ ಸರ್ವಸದಸ್ಯರ ಸಭೇಲಿ ೧ ಕೇಜಿ ಫೆವಿಕಾಲ್ ಸ್ಯಾಂಕ್ಷನ್!

xclaimpt.gif“ಕರ್ನಾಟಕದಿಂದ ಬೇರೆ ಭಾಷೆಯೋರನ್ನ ಓಡಿಸಿ” ಎಂದು ಕರ್ನಾಟಕದ ಬಾಲ್ಸ್ ಠಾಕ್ರೆ ಚಂಪಾಂಜಿಯವರು ಕರೆ ಕೊಟ್ಟ ತಕ್ಷಣ ಕೋಡಿಹಳ್ಳಿ ರಾಮಣ್ಣ, ನಲ್ಲೂರ್ ಮುಂತಾದ ಸಾಹಿತ್ಯ ನಾಯಕರು ಸಾಹಿತ್ಯ ಪರಿಷತ್ ಸುತ್ತ ಜಮಾಯಿಸಿದ ಸುದ್ದಿ ತಿಳಿದು ಅಮಾಸೆ ಅಲ್ಲಿಗೆ ಜಂಪ್ ಹೊಡೆದ.

ಆ ಸಾಹಿತ್ಯ ಜಂಗುಳಿ ಕಂಡ ತಕ್ಷಣ “ಶಭಾಶ್! ನನ್ನ ವಿರೋಧಿ ಗುಂಪಿನಿಂದ ಕೂಡ ನನ್ನ ಹೇಳಿಕೆಗೆ ಬೆಂಬಲ ದೊರೆಯಾಕ್ ಹತ್ತೇತಿ” ಎಂದುಕೊಂಡು ಕಷ್ಟಪಟ್ಟು ನಗುತ್ತ ಚಂಪಾಂಜಿ ಕಾರಿನಿಂದ ಇಳಿದರಷ್ಟೆ?

ತಕ್ಷಣ “ಮೊದಲು ನಮ್ಮ ಸಾಹಿತ್ಯ ಪರಿಷತ್ ಕುರ್ಚೀನ ನಮಗೆ ಬಿಟ್ಟು ಮೊದಲು ಧಾರವಾಡದ ಕಡೆ ಹೊರಡ್ರೀ” ಎಂದು ಸಾಹಿತಿಗಳು ಕೂಗೇಬಿಟ್ಟರು!

“ಇದ್ಯಾಕೋ ರಿವರ್ಸ್ ಆಯಿತಲ್ಲ” ಎಂದು ಪೆಚ್ಚಾದರೂ “ಛೆ ಛೆ ಕನ್ನಡಿಗರೆಲ್ಲ ಒಂದೇ ಅಲ್ಲವೆ! ಕುಂತು ಮಾತಾಡೊಣು” ಅಂತ ಚಂಪಾಂಜಿ ನಗಲೆತ್ನಿಸಿದರೆ, “ಭಾರತೀಯರೆಲ್ಲ ಒಂದೇ ಅಲ್ಲ ಅಂತ ತಾವು ಫತ್ವಾ ಹೊರಡಿಸಿದ ಮೇಲೆ ಕನ್ನಡಿಗರೆಲ್ಲ ಒಂದೇ ಅಂತ ಹೆಂಗಾಗುತ್ತೆ?  ಧಾರವಾಡದೋರು ಧಾರವಾಡಕ್ಕೆ ಹೊರಡೋದು ಸರಿ ಅಲ್ಲವೇ ಕಾಮ್ರೇಡ್?”

-ಈ ಥರಾ ಸಾಹಿತಿಗಳ ಗಲಾಟೆ ನಡೀತಾ ಇರುವಾಗಲೇ ಪರಿಷತ್ತಿನೊಳಕ್ಕೆ ನುಸುಳಿದ ಚಂಪಾಂಜಿ ಹಿಂಬಾಗಿಲಿನಿಂದ ಸರ್ವಸದಸ್ಯರ ಸಭೆ ಕರೆದೇಬಿಟ್ಟರಂತಲ್ಲ! ಸಭೆ ಶುರುವಾದ ತಕ್ಷಣ ಒಂದು ಕೇಜಿ ಫೆವಿಕಾಲ್ ಸ್ಯಾಂಕ್ಷನ್ ಮಾಡಿಸಿಕೊಂಡು ಇನ್ನೊಂದು ವರ್ಷ ಯಾರೂ ಕೀಳದ ಹಾಗೆ ಕಸಾಪ ಕುರ್ಚಿಗೆ ಅಂಟಿಕೊಂಡು, ಕುರ್ಚಿ ಸಮೇತ ವಾಕಿಂಗ್ ಮಾಡುತ್ತಿದ್ದ ದೃಶ್ಯವನ್ನು ಅಮಾಸೆ ಫೋಟೋಗ್ರಾಫರ್ ಕ್ಲಿಕ್ಕಿಸದೆ ಬಿಡುತ್ತಾನೆಯೇ? 

‍ಲೇಖಕರು avadhi

25 February, 2008

2 Comments

  1. Tina

    ಮಾನ್ಯ ಅಮಾಸೆ ಟೈಮ್ಸ್ ಸಂಪಾದಕರೆ,
    ನಿಮ್ಮ ಸುದ್ದಿಗಳನ್ನು ಓದುತ್ತಿದ್ದರೆ ಫ್ಯೂನೆರಲ್ಲಿನಲ್ಲಿದ್ದರು.
    ಕನ್ನಡ ಟೈಮ್ಸಿನಲ್ಲಿ ಮೊಟ್ಟಮೊದಲು ನೋಡುವದೆ ನಿಮ್ಮ ಸುದ್ದಿಗಳನ್ನ.
    ಆಮೇಲೇ ಬಾಕಿ ವಿಷಯ.
    ಅವಧಿಗೆ ಧನ್ಯವಾದಗಳು.
    -ಟೀನಾ.

  2. Tina

    ಮಾನ್ಯ ಅಮಾಸೆ ಟೈಮ್ಸ್ ಸಂಪಾದಕರೆ,
    ನಿಮ್ಮ ಸುದ್ದಿಗಳನ್ನು ಓದುತ್ತಿದ್ದರೆ ಫ್ಯೂನೆರಲ್ಲಿನಲ್ಲಿದ್ದರು ನಗು ಉಕ್ಕುವದು ಗ್ಯಾರಂಟಿ!
    ಕನ್ನಡ ಟೈಮ್ಸಿನಲ್ಲಿ ಮೊಟ್ಟಮೊದಲು ನೋಡುವದೆ ನಿಮ್ಮ ಸುದ್ದಿಗಳನ್ನ.
    ಆಮೇಲೇ ಬಾಕಿ ವಿಷಯ.
    ಅವಧಿಗೆ ಧನ್ಯವಾದಗಳು.
    -ಟೀನಾ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading