ನಾನಿ ವೀಕ್ಷಿಸಿದವರೆಲ್ಲ ನಿರ್ದೇಶಕ ಸುಮಂತ್ ರ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ನಿರ್ದೇಶಕನ ಜಾಣ್ಮೆ, ಕಲಾವಂತಿಕೆ, ಚುರುಕುತನ ಹೊಂದಿದ್ದಾರೆ ಎಂದು ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಮಾತು. ಮೂಲತಃ ಬೆಂಗಳೂರಿಗೆ ಹೊಂದಿಕೊಂಡಿರುವ ಹಳ್ಳಿಯೊಂದರ ಸುಮಂತ್ ನಿಂತರೂ ಕುಂತರೂ ಸಿನಿಮಾವನ್ನೇ ಕನವರಿಸಿ ಅದಕ್ಕೆ ಸಜ್ಜುಗೊಂಡು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ, ಅವರ ಶ್ರಮದ ಪ್ರತಿಫಲವಾಗಿ ಇಂದು ನಾನಿ ಹಿಟ್ ಆಗಿದೆ ಅನ್ನೋದು ಚಿತ್ರದ ನಾಯಕ ನಟ ಮನೀಶ್ ಮಾತು.
ಈ ಚಿತ್ರದ ನಿರ್ದೇಶಕ ಸುಮಂತ್ ಎಂಬ ಚುರುಕಿನ ಹುಡುಗನ ಬಗ್ಗೆಯೂ ಕುತೂಹಲಗಳು ಸಹಜವಾಗಿಯೇ ಹುಟ್ಟಿಕೊಂಡಿವೆ. ರಾಘವೇಂದ್ರ ಗೊಲ್ಲಹಳ್ಳಿ ಎಂಬ ಒರಿಜಿನಲ್ ನಾಮಧೇಯವನ್ನು ಸುಮಂತ್ ಅಂತ ಬದಲಾಯಿಸಿಕೊಂಡು ಅದೃಷ್ಟ ಪರೀಕ್ಷೆಗಿಳಿದಿದ್ದ ಇವರು ಈಗ ಅದ್ಭುತ ಅಂಕಗಳನ್ನು ಪಡೆದು ಪಾಸ್ ಆಗಿದ್ದಾರೆ ಎನ್ನುತ್ತಾರೆ ಸ್ವತಃ ಚಿತ್ರ ತಂಡದವರು. ನಾನಿ ಸೂಪರ್ ಹಿಟ್ ಸಿನಿಮಾ ಆಗಿ ನೆಲೆ ನಿಂತಿರುವುದರಿಂದ ಸುಮಂತ್ ಭರವಸೆಯ ನಿರ್ದೇಶಕನಾಗಿ ಬೇರೂರುವುದು ಗ್ಯಾರೆಂಟಿ ಎಂಬುದು ಚಿತ್ರದ ನಿರ್ಮಾಪಕ ರಮೇಶ್ ಕುಮಾರ್ ಜೈನ್ ಅವರ ಅಭಿಪ್ರಾಯ.
ಸುಮಂತ್ ನ ಹಲವು ಇಂಟರೆಸ್ಟಿಂಗ್ ಸಂಗತಿಗಳು :
ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂದರೆ ಹತ್ತಾರು ಸಿನಿಮಾಗಳಲ್ಲಿ ಅಸಿಸ್ಟೆಂಟ್, ಅಸೋಸಿಯೇಟ್ ಗಳಾಗಿ ಕೆಲಸ ಮಾಡಿರಬೇಕೆಂಬ ಸಾಮಾನ್ಯ ಸಂಗತಿಯೊಂದಿದೆ, ಆದರೆ ಸುಮಂತ್ ಅದನ್ನು ಬ್ರೇಕ್ ಮಾಡಿದ್ದಾರೆ. ಬಹುಶಃ ಹೈಸ್ಕೂಲು ದಿನಗಳಲ್ಲಿಯೇ ಆಳವಾಗಿ ಬೇರೂರಿದ್ದ ನಿರ್ದೆಶಕನಾಗೋ ತುಡಿತ ಕನಸಿನ ಸಾಕಾರಕ್ಕಾಗಿ ಮತ್ತಷ್ಟು ವರ್ಷಗಳನ್ನು ಕಡಿತಗೊಳಿಸಲು ಒಪ್ಪಿಲ್ಲವೇನೋ. ಆದ್ದರಿಂದಲೇ ಓದನ್ನು ಪಿಯುಸಿಗೇ ಕಡಿತಗೊಳಿಸಿ ಕಥೆಯೊಂದನ್ನು ರೆಡಿ ಮಾಡಿದವರೇ ನೇರವಾಗಿ ಅಖಾಡಕ್ಕಿಳಿದಿದ್ದಾರೆ.
ಜುಲೈ ಒಂದರಂದು ತೆರೆ ಕಂಡಿದ್ದ ‘ನಾನಿ’ ಚಿತ್ರ ಯಶಸ್ವಿಯಾಗಿ ಐವತ್ತು ದಿನಗಳನ್ನು ಪೂರೈಸಿದೆ. ಚಿತ್ರವನ್ನು ಪ್ರೇಕ್ಷಕರು ಅಪಾರವಾಗಿ ಮೆಚ್ಚಿದ್ದಾರೆ. ನಾನಿ ಚಿತ್ರ ತಂಡ ತನ್ನ ಐವತ್ತನೇ ದಿನದ ಸಮಾರಂಭವನ್ನು ಆಚರಿಸಿಕೊಂಡಿದೆ. ಚಿತ್ರಕ್ಕಾಗಿ ದುಡಿದ ಎಲ್ಲ ತಂತ್ರಜ್ಞರಿಗೆ ಐವತ್ತನೇ ದಿನದ ನೆನಪಿನ ಕಾಣಿಕೆ ನೀಡುವ ಮೂಲಕ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ರಾಜಸ್ತಾನದಿಂದ ಬಂದರೂ ಕನ್ನಡಭಿಮಾನ ಹೊಂದಿರುವ ನಿರ್ಮಾಪಕ ರಮೇಶ್ ಕುಮಾರ್ ಜೈನ್ ಅವರೇ ಈ ಚಿತ್ರಕ್ಕೆ ಕಥೆಗಾರರೂ ಆಗಿರುವುದು ವಿಶೇಷ. ಇನ್ನು ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣವಂತೂ ಅದ್ಭುತ. ಹೊಸಬರಿಗೂ ಹೆಚ್ಚಾಗಿ ಅವಕಾಶ ಕೊಟ್ಟಿರುವ ಕಾರಣದಿಂದಲೇ ಹೊಸತನದೊಂದಿಗೆ ಮೂಡಿ ಬಂದಿದೆ. ಈಗ ಐವತ್ತು ದಿನಗಳನ್ನು ಪೂರೈಸಿ ದಾಖಲೆ ಬರೆದಿದೆ.
0 ಪ್ರತಿಕ್ರಿಯೆಗಳು