ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಮಶಾನದೊಳಗಿನ ಬದುಕಿನ ಕವರೇಜ್..

ಸ್ಮಶಾನ ಮತ್ತು ಮೌನ..

ಬದುಕು ಸಾವಿನ ನಡುವಿನ ಪಯಣ

ಸ್ಮಶಾನದೊಳಗಿನ ಬದುಕಿನ ಕವರೇಜ್ ನೆನಪು

ಪತ್ರಿಕೋದ್ಯಮದ ಇಷ್ಟು ವರ್ಷಗಳ ಪಯಣದಲ್ಲಿ ಸಾಗಿಬಂದಾಗ ಕವರೇಜ್ ಮಾಡಿದ ವಿಷಯಗಳು ಹಲವು. ಹಾಗೇ ಹಲವು ಬಾರಿ ಸವಾಲುಗಳು, ಅವಮಾನಗಳು ತಾರತಮ್ಯವನ್ನು ಎದುರಿಸಿದ್ದೇನೆ ಎಂದು ಪ್ರಾಮಾಣಿಕವಾಗಿ ಹೇಳಬೇಕಾಗುತ್ತದೆ.

ಈ ವೃತ್ತಿಗೆ ಬಂದ ಹೊಸ ಮನಸ್ಸುಗಳಿಗೆ ಏನೋ ಮಾಡಬಹುದೆಂಬ ನಿರೀಕ್ಷೆಯನ್ನು ತುಂಬಿದ್ದು ಇದೆ. ಕೆಲವೊಮ್ಮೆ ನಂಬಿದವರೇ ಮೋಸ ಮಾಡಿದಾಗ ನೋವನ್ನುಂಡದ್ದು ಇದೆ. ಕೈಹಿಡಿದು ಮೇಲೆ ಎತ್ತಿದವರು ಯಾವುದೇ ಕನಿಷ್ಟ ಕೃತಜ್ಞತೆಯಿಲ್ಲದೆ ಮುಂದೆ Jyothi column low resಸಾಗುವ ಭರದಲ್ಲಿ ಎಲ್ಲವನ್ನು ಮರೆತದ್ದು ಕಣ್ಣ ಮುಂದಿದೆ. ಹಾಗೆಂದ ಮಾತ್ರಕ್ಕೆ ಸಹಾಯಹಸ್ತ ಚಾಚಿ ಬಂದವರಿಗೆ ಸಹಾಯ ಮಾಡೋದನ್ನು ನಿಲ್ಲಿಸೋಕೆ ಸಾಧ್ಯವಿಲ್ಲ. ಯಾವುದೇ ಫಲಾಪೇಕ್ಷೆಯಿಲ್ಲದೆ ಸಹಾಯ ಮಾಡೋದು ಮಾನವ ಧರ್ಮ ಎಂದು ನಂಬಿದವಳು ನಾನು.

ವೃತ್ತಿಗೆ ಬಂದು 12 ವರ್ಷಗಳೇ ಕಳೆದುಹೋಯಿತು. ಬಹುಷಹ ಸ್ವಾಭಿಮಾನಕ್ಕೆ ಆದ್ಯತೆ ನೀಡಿದ ನಾನು ಅತ್ಯಂತ ಕಷ್ಟಗಳನ್ನು ಕಂಡ ದಿನಗಳು. ಸಂಸ್ಥೆ ಸಂಬಳವನ್ನು ಕೊಡದಿದ್ದರು ಅದು ಮುಚ್ಚಲೇ ಬಾರದೆಂದು ರಾತ್ರಿ ಹಗಲೆನ್ನದೆ ದುಡಿದ ದಿನಗಳು.

ನಿರೂಪಣೆ, ಕವರೇಜ್ ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ ದಿನಗಳವು. ಆದರೆ ಆ ಬದ್ಧತೆಗೆ ಯಾವುದೇ ಜಾಗವಿಲ್ಲವೆಂದು ಕೊನೆಗೆ ತಿಳಿದಾಗ ಕಣ್ಣು ಒದ್ದೆಯಾಗಿತ್ತು. ಒಂದು ಪುಟ್ಟ ತಂಡ ಚಾನೆಲ್ ಒಂದನ್ನು ನಿಭಾಯಿಸಬಹುದಾದ ದೊಡ್ಡ ಸವಾಲನ್ನು ನಿಭಾಯಿಸೋದು ಹೇಗೆ ಅನ್ನುವುದನ್ನು ಎದುರಿಸಿಯು ಆಗಿತ್ತು. ಆದರೆ ದೊಡ್ಡವರ ಲೆಕ್ಕಾಚಾರವೇನೆಂಬುದನ್ನು ತಿಳಿಯದ ಮನಸ್ಥಿತಿ ನಮ್ಮದಾಗಿತ್ತು .

ಇನ್ನೊಮ್ಮೆ ಅನುಭವಿಸಿದ ಅವಮಾನ ನನ್ನನ್ನು ಬಹಳವಾಗಿ ಕುಗ್ಗಿಸಿತ್ತು. ಅಷ್ಟು ವರ್ಷಗಳ ಅನುಭವದ ನಂತರ ಪ್ರಾಮಾಣಿಕರನ್ನು ನಡೆಸಿಕೊಂಡ ಬಗೆ ತೀರಾ ಕೆಟ್ಟದೆನಿಸಿತು. ಆದರೆ ಯಾವುದು ಶಾಶ್ವತವಲ್ಲ ಅನ್ನೋ ಸತ್ಯದ ಅರಿವು ಇತ್ತು.

ಈ ಘಟನೆಗಳು ನಡೆದು ಹೋಗಿ ಮೂರ್ನಾಲ್ಕು ವರ್ಷಗಳು ಕಳೆದುಹೋಯಿತು. ಸವಾಲುಗಳಲ್ಲೇ ಹೆಚ್ಚಿನ ವರ್ಷ ಕಳೆದ ನನಗೆ  ಸವಾಲುಗಳು ಇಷ್ಟವಾಗಿದ್ದು ನಿಜ. ಹಾಗೇ ಮೊದ ಮೊದಲು ಆದ ಅವಮಾನಗಳು ಕುಗ್ಗಿಸಿದ್ರೆ ಮತ್ತೆ ಈ ಅವಮಾನಗಳನ್ನೇ ಸವಾಲುಗಳನ್ನಾಗಿ ಪರಿವರ್ತಿಸುವ ಶಕ್ತಿ ಬಂದಿದ್ದು ನಿಜ. ಮುಂದೆ ಸಾಗಿದಾಗ ಹಿಂದೆ ಎಳೆಯುವ, ಸ್ವಾಭಿಮಾನದಿಂದ ಮುಂದೆ ಸಾಗಿದಾಗ ಇಷ್ಟ ಪಡದ ಮನಸ್ಸುಗಳ ಮಧ್ಯೆ ಕೆಲಸ ಮಾಡಿದ  ಆ ದಿನಗಳು ಮತ್ಯಾಕೋ ನೆನಪಾದವು. ಹೀಗಾದಾಗಲೆಲ್ಲಾ ಬಾತ್ ರೂಮ್ ಗೆ ಓಡಿ ಮುಖ ಮುಚ್ಚಿ ಹರಿಸಿದ ಕಂಬನಿ ಯಾರಿಗು ಕಂಡಿಲ್ಲ. ಕೆಲವೊಮ್ಮೆ ಕಂಡಾಗ ನಾನು ದುರ್ಬಲೆ ಅನ್ನಿಸಿರಬಹುದು. ಆದರೆ ಈಗ ಅದನ್ನು ಮೀರಿ ಬೆಳೆದಾಗಿದೆ. ಈಗ ಕಂಬನಿ ಹರಿಸುವವರ ಕಂಬನಿ ಒರೆಸಿ ಸಾಂತ್ವನ ಮತ್ತು ಧೈರ್ಯ ಹೇಳುವ ಸರದಿ ನನ್ನದು. ಸತ್ಯದ ಪಥದಲ್ಲಿ ಸಾಗುವಾಗ ಯಾವ ಹೆಜ್ಜೆಗಳು ಜೊತೆಗಿಲ್ಲದಿದ್ದರು ನಿಮ್ಮೆರೆಡು ಹೆಜ್ಜೆಗಳು ಹಿಂಬಾಸಿದರೆ ಸಾಕಲ್ವೇ ?

ಒಂದಂತು ಸ್ಪಷ್ಟ. ಕಷ್ಟಪಡುವವರ ಜೊತೆ ಸ್ಪರ್ಧೆ ಒಡ್ಡಲು ಸಾಧ್ಯವಾಗದಿರುವಾಗ ವೈಯಕ್ತಿಕ ತೇಜೋವಧೆ ಮಾಡುವ ಶಕ್ತಿಗಳು ಇದ್ದೇ ಇರುತ್ತವೆ.  ಇಂತಹ ಕಹಿ ಅನುಭವಗಳನ್ನು ಹಲವು ಬಾರಿ ಎದುರಿಸಿದ್ದೇನೆ ಈ  ಹಿಂದೆ. ಮತ್ತು ಇದು ಎಲ್ಲ ಕ್ಷೇತ್ರಗಳಿಗು ಅನ್ವಯಿಸುತ್ತದೆ.

ಇಂತಹ ಭಾವನಾತ್ಮಕ ವಿಚಾರಗಳು ಯಾಕೋ ಹಿಂಬಾಲಿಸಿ ಕಾಡಿ ನೆನಪಾಗಿ ಇದೀಗ ಅಕ್ಷರ ರೂಪದಲ್ಲಿ ರೂಪ ಪಡೆದು ಮನಸ್ಸು ಸ್ವಲ್ಪ ಹಗುರಾದಂತಿದೆ. ಈಗ ಇದು ಕಹಿ ನೆನಪಷ್ಟೇ…

ಮತ್ತೀಗ ನೆನಪಾದ ಒಂದು ಕವರೇಜ್ ಬಗ್ಗೆ ಬರೆಯಬೇಕೆನಿಸಿದೆ,

ಅದು ಯಾವುದು ಅಂತ ಕೇಳ್ತೀರಾ? ಹೌದು ನಾ ಹೇಳಹೊರಟ್ಟಿದ್ದು ಸಾವಿನ ಕುರಿತ ಕವರೇಜ್. ಅಂದ್ರೆ ಸ್ಮಶಾನದೊಳಗಿನ ಬದುಕಿನ ಚಿತ್ರಣ.

ಹರೀಶ್ಚಂದ್ರಘಾಟ್ ಈ ಕಡೆ ರಸ್ತೆ. ಬಸ್ಸು ಕಾರು, ಬೈಕ್, ಜನ . ಹೀಗೆ ಜೀವಂತ ಬದುಕಿನ ಚಿತ್ರಣ. ಇನ್ನು ರಸ್ತೆಯ ಆ ಕಡೆ ಸಾವು. ಶವ.ಸುಡಲು ರೆಡಿಯಾದ ಕಟ್ಟಿಗೆ. ಇನ್ನೊಂದೆಡೆ ವಿದ್ಯುತ್ ಚಿತಾಗಾರ.

ಶವ ಸುಡುವವರ ಮನೋಸ್ಥಿತಿ ಕುಟುಂಬ ಹೇಗಿರುತ್ತದೆ ಅನ್ನೋ ಬಗ್ಗೆ ಕುತೂಹಲ ಇರಿಸಿಕೊಂಡು ಕಾರ್ಯಕ್ರಮ ಮಾಡಲು ಸಿದ್ಧರಾಗಿದ್ದೆವು. ನಿಜ ಸಾವೆನ್ನುವುದು ಸದಾ ಕಾಡುತ್ತಲೇ ಇರುತ್ತದೆ. ಎಲ್ಲವು ಆಗಿರುವ ನಾವು ಏನು ಇಲ್ಲದಂತೆ ಹಿಡಿ ಬೂದಿಯಾಗಿಸುವ ಸಾವು ಕೆಲವರಿಗೆ ಭಯ, ಯೋಗಿಗಳಿಗೆ ಖುಷಿಯ ವಿಷಯ.

coffinರೀಶ್ಚಂದ್ರಘಾಟ್ ಒಳಗೆ ಮೈಕ್ ಹಿಡಿದು ಹೆಣವೊಂದು ( ಸತ್ತ ವ್ಯಕ್ತಿ ಯಾರು ಗೊತ್ತಿಲ್ಲ ಹಾಗಾಗಿ ಹೆಸರು ಗೊತ್ತಿಲ್ಲ) ಸುಡುತ್ತಿರುವಾಗ ಮಾತಾಡಲು ಆರಂಭಿಸಿದೆ. ಪಟ್ ಎಂಬ ಸದ್ದು ಬಂತು. ಬುರುಡೆ ಒಡೆಯೋ ಸದ್ದಂತೆ ಅದು. ಹಾಗೆ ಹೆಣ ಸುಡುವ ಹರೀಶ್ಚಂದ್ರನ ( ಸುಮ್ಮನೆ ಹರಿಶ್ಚಂದ್ರನೆಂದು ಬರೆದೆ ಹೆಸರು ನೆನಪಿಲ್ಲ) ಜೊತೆ ಮಾತಾಡತೊಡಗಿದೆ. ಸ್ಮಶಾನದೊಳಗಡೆ ಮನೆ ಮಾಡಿಕೊಂಡಿದ್ದ ಆತನಿಗೆ ಯಾವ ಭಯವಿಲ್ಲವಂತೆ. ಈ ಕೆಲಸ ಮಾಡಿ ಮಾಡಿ ವಿರಕ್ತನಾದಂತಿತ್ತು ಆತನ ಕಣ್ಣಗಳು. ಕಡ್ಡಿಯಂತಿತ್ತು ಕೃಶ ದೇಹ.

ರಾತ್ರಿ ಈ ಸ್ಮಶಾನದಲ್ಲಿ ಹಾಕಿ ಹೋಗುವ ಲಿಂಬೆಹುಳಿ, ಕುಂಕುಮದ ಬಗ್ಗೆ ಪ್ರಶ್ನಿಸಿದ್ರೆ ಅದ್ಯಾವುದು ಗೊತ್ತಿಲ್ಲ. ಯಾವ ಮಾಟನು ಇಲ್ಲ ಮಂತ್ರಾನು ಇಲ್ಲ ಎಂದ ಆಗಷ್ಟೇ ಪರಿಚಿತನಾಗುತ್ತಿದ್ದ ಅಪರಿಚಿತ ವ್ಯಕ್ತಿ.

ಆಗ ಮತ್ತೊಂದು ಹೆಣ ಬಂತು. ಕೆಲವರ ಕಣ್ಣಲ್ಲಿ ನೀರು ಇನ್ನು ಕೆಲವರು ಲೋಕಾಭಿರಾಮ ಮಾತಾಡುತ್ತಿದ್ರು.

ಬದುಕು ಹೀಗೆ. ರಸ್ತೆಯ ಮೇಲೆ ಬದುಕ ಚಿತ್ರಣ. ಸ್ಮಶಾನದೊಳಗೆ ಸಾವಿನ ಚಿತ್ರಣ. ಹಳ್ಳಿಯಲ್ಲಿ ಸಾವಾದಾಗ ತಿಂಗಳಾದರು ಚರ್ಚೆಗೆ ಬರುತ್ತಿದ್ದ ಸಾವಿನ ವಿಚಾರ, ಪೇಟೆಯಲ್ಲಿ ಬೇಗ ಮರೆತುಹೋಗುತ್ತದೆ. ವ್ಯಾವಹಾರಿಕ ಜೀವನ, ಸ್ಪರ್ಧಾತ್ಮಕ ಜಗತ್ತಿನ ಹಿಂದೆ ಓಡುವ ನಮಗೆ ಸಾವಿಗೆ ಸಿದ್ಧರಾಗಲು ಪುರುಸೊತ್ತಿಲ್ಲ. ಸಾವಿಗೆ ಸಿದ್ಧರಾಗೋದೆಂದ್ರೆ ಮನ ಶುದ್ಧೀಕರಣ ಮಾಡೋದು.

ಹೀಗೆ ವಾದವನ್ನು ಮಾಡಿದ್ರೆ ಸಾವಿನ ನಂತ್ರ ಏನೆಂದು ತಿಳಿದೋರ್ಯಾರು? ಸ್ವಲ್ಪ ಸುಮ್ಮನಿರಿ ಇರುವಷ್ಟು ದಿನಾ ಮಜಾಮಾಡಿ ಅಂತ ವಾದ ಮಾಡೋರು ಇದ್ದಾರೆ. ಹಾಗಾಗಿ ಈ ಕುರಿತಂತೆ ವಾದ ಮಾಡೋದನ್ನು ನಿಲ್ಲಿಸಿದ್ದೇನೆ..

ಹಾಗೆ ಈ ಕವರೇಜ್ ವೇಳೆ ಕಂಡ ಒಂದು ಫ್ರೇಮ್ ನೆನಪಾಯಿತು. ಅದು ಸ್ಮಶಾನದೊಳಗೆ ನೆಮ್ಮದಿಯಿಂದ ನಿದ್ದೆಗೆ ಜಾರಿದ ಒಂದು ಮುಖ…

ಬರುವ ವಾರ ಮತ್ತೊಂದು ಕವರೇಜ್ ನ ನೆನಪಿನೊಂದಿಗೆ ಬರ್ತೀನಿ…

ಅಲ್ಲಿವರೆಗು ಟೇಕ್ ಕೇರ್…

ಜ್ಯೋತಿ ..

‍ಲೇಖಕರು Admin

24 October, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading