ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸವಿತಾ ನಾಗಭೂಷಣ ಅವರ ‘ದರುಶನ’..

ದರುಶನ

-ಅಮಾಸ

ಯಾವ ಊರಿಗೆ ಹೋದರೂ

ನನ್ನೂರು ನೆನಪಾಗುವುದು

ನನ್ನತನ ನನ್ನ ನುಡಿ

ನನ್ನೊಡನೆ

ಬಾಳುವುದು ಬೆಳಗುವುದು,

ಅದೊಂದು ಅಕ್ಕರೆಯ ಜಗತ್ತು. ಆಶೆ-ಭಾಷೆಗಳೆರಡನ್ನು ಹೊಸೆದು ಬದುಕುವ ಅಂತಃಕರಣದ, ಮಾನವೀಯ ಅನುಕಂಪದ ತುಂಬಿದೊಡಲಿನ ತವಕ ತಲ್ಲಣಗಳನ್ನ ಆಪ್ತವಾದ ಆವರಣವೊಂದರಲ್ಲಿ ನೆಯ್ದು – ಪ್ರತಿಮೆ ಉಪಮೆಗಳನ್ನು ಸಂಕ್ಷಿಪ್ತವಾಗಿ ಸರಳ ವಿಧಾನದ ನುಣ್ಗತಿಯಲ್ಲಿ ಕಟ್ಟಿಕೊಡುವ ಸವಿತಾ ನಾಗಭೂಷಣ ಅವರ ಶೈಲಿ ದರುಶನದಲ್ಲೂ ಗಡಿ ದಾಟಿಲ್ಲ. ‘ಜಾತ್ರೆಯಲ್ಲಿ ಶಿವ’ ಟೋಟೆಮ್ ಆಗಲಾರದೇ ಹೀಗೆ ಬಂದು ಹಾಗೆ ಹೋಗಿ ಬಿಡುತ್ತಾನೆ. ಕಣ್ಮರೆಯಾಗುವವರೆಗೂ ಕಾಣುವ ಅವನ ಚೇತನ ಮಾತ್ರ ನೆನಪಾಗಿ ಉಳಿದುಬಿಡುತ್ತದೆ.

ಗಣಪಹಸಿದಿದ್ದಾನೆ

ಗಿರಿಜೆಗೆ ಖಾಯಿಲೆ…

ಹೆಂಡತಿ-ಮಕ್ಕಳಿಗಾಗಿ

ಶಿವನಲ್ಲದೆ ಭವಿ ಅಳುವನೆ ?!

ಎಂಬ ಮಾತು ಬೆರಗುಗೊಳಿಸಿದರೂ ವಿಚಿತ್ರವಾದ ನಾಟಕೀಯ ಭಾವಕ್ಕೆ ಮನಸೋತು ಬಿಡುತ್ತದೆ. ಸಾಕ್ಷಾತ್ ಶಿವ !! ಅನ್ನುವ ಉದ್ಘಾರ ಹೊರಡುತ್ತದೆ. ದರುಶನದ ಮುವ್ವತ್ತೆಂಟು ಕವನಗಳಲ್ಲೂ ಹಗೂರಾದ ವಿನೀತ ಭಾವಲಹರಿ ಹದಗೊಂಡು ಮಂದ್ರದಲ್ಲಿ ಲಯವಾಗಿ ನುಡಿಯುವ ಮೆಲು ಮಾತಿನ ಧಾಟಿಯಿವೆ. ಬೀಜವಾಗಿ, ಕುಸುಮವಾಗಿ, ಆವಿಯಾಗಿ, ಬೂದಿಯಾಗಿ ಎಲ್ಲಿಂದ ಎಲ್ಲಿಗೋ ನಡೆದಾಡಲು ಕರೆದೊಯ್ದು ತೀರಿಲ್ಲದ ಆಶೆಯ ತೀರದಲ್ಲಿ ತಂದುಬಿಡುತ್ತವೆ. ತಾನು ಸೃಜಿಸಿಕೊಳ್ಳುವ ಸ್ಮೃತಿಯ ಜೊತೆಗಿನ ಒಡನಾಟವೆಂಬುದು ಒಳ-ಹೊರ ಜಗತ್ತು ಏಕಾಗಿ ನೋಡುವ ಕ್ರಮದಲ್ಲಿ ರೂಪುಗೊಳ್ಳುತ್ತದೆ. ಉದಯದ ಮಾಗಿಯ ಬಿಸಿಲು ಅಂಗಕ್ಕೆ ಹಿತವಾಯಿತ್ತು ಎಂಬ ಮಾತಿನಂತೆ ಓದುಗನ ಪ್ರಜ್ಞೆಯನ್ನು ಇಂಬುಗೊಳಿಸುವ ತಾಕತ್ತಿಗೆ ತೆರೆದುಕೊಳ್ಳುವ ಮೊದಲು ಲಯದ ಮೋಡಿಯ ಸಾರ್ವತ್ರಿಕ ಗುಣವನ್ನು ತೋರ್ಪಡಿಸುವ ಹಾಗೆ ಕಂಡರೂ ಆಳದಲ್ಲಿ ವಾಸ್ತವದ ನಿಜ ದರುಶನಕ್ಕೆ ಅಣಿಗೊಳಿಸುತ್ತವೆ. ಸಶಕ್ತಗೊಳಿಸುವುದೇನನ್ನು ? ಮಾನವ ಪ್ರೇಮವನ್ನು, ಭ್ರಾತೃತ್ವವನ್ನು, ಅಂತರಂಗವನ್ನು ಮತ್ತು ಬದುಕು ತುಂಡಿಲ್ಲದ ಏಕೋಚಲನೆ ಎಂಬ ಬದುಕಿನ ಸೂತ್ರವನ್ನು… ಬಜಾರು ಮನೆಯಾಗುವ, ಮನೆಯೇ ಮಾರ್ಕೇಟ್ ಆಗುವ ಈ ಹೊತ್ತಿನ ಎಲ್ಲ ಆತಂಕಗಳ ನಡುವೆ ನಿಟ್ಟುಸಿರ್ಗರೆವಂತೆ, ಎರಡರ ನಡುವಿನ ತೆಳುಗೆರೆಯಲ್ಲಿ ಸಮಾನತೆಯನ್ನು, ಸಾಂತ್ವನವನ್ನು ಹುಡುಕಿಕೊಳ್ಳುವ ಆಶಯದ ಮಾತುಗಳೇ ಹಾಡಾಗಿ ಮೂಡಿವೆ.

ಈಗ ಒರಟೊರಟಾಗಿರುವ ‘ರಾಮ-ಕೃಷ್ಣ-ಶಿವ’ ರು ಕೂಡಾ ಒಳಗಿಳಿದು ಮಮತೆಗೆ, ಪ್ರೀತಿಗೆ ಪಾತ್ರರಾಗಿಬಿಡುತ್ತಾರೆ. ಮಧ್ಯಾಹ್ನದ ಬಿಸಿಲು ಅಂಗಕ್ಕೆ ಕರಕಠಿಣವಾಯಿತ್ತು ಎಂಬಂತೆ-ತಾಯಿ, /ಇಲ್ಲೇ… ಇರುವೆ.. /ಸೂತ್ರ ಮತ್ತು ಲೋಕದಲಿ ಪುಟ್ಟಿದ ಬಳಿಕ.. /ಏನಾಗುವೆ ? ಹೇಳೊಲ್ಲ/ಇನ್ನು ರಾಧೆ ಇಲ್ಲ../ಮಗಳು ಮತ್ತಿತರ ಕೆಲ ಕವಿತೆಗಳು ಧ್ವನಿಯಾಗಿ ಮತ್ತೊಂದು ಲೋಕವನ್ನು ಅನಾವರಣಗೊಳಿಸುತ್ತವೆ. ಹೇಳದೇ ಉಳಿಯುವ ಮಾತುಗಳು, ಮೌನವಾಗಿ ಇರಲಾರದೆ ಚಿವುಟಿ ತಿದಿಗೆ ಕೊಂಚ ಉಸಿರು ಒತ್ತಿ ವರ್ತಮಾನಕ್ಕೆ ಕನ್ನಡಿಯಾಗುವುದು, ಉಭಯದ ಗೊಂದಲವನಳಿದು ಜಗತ್ತಿನ ಪಥದ ಗತಿಯೊಳಗಿನ ಮಾನವೀಯ ಮೌಲ್ಯಗಳ ಸಕೀಲು ಉದುರಿಸುವ ಕವನಗಳು ದರುಶನದಲ್ಲಿವೆ.

ಕತ್ತಲೆಯ ಕೊಂಬೆ ಸವರಿ

ನಕ್ಷತ್ರ ಎಲೆಗಳನೊಟ್ಟಿ ರಾಶಿಯಾಗಿಸಿ

ಹಾದಿ ಬೀದಿಯ ಸೂರ್ಯನಂತೆ ಬೆಳಗಿಸಿದ.

ಕಪ್ಪು ಮುಖ ಕೆಂಡಗಣ್ಣು

ಹಳದಿ ಹಲ್ಲು, ತಲೆಯೋ ಹೊರೆ ಹುಲ್ಲು

ಶಂಖ ಚಕ್ರ ಗದಾಪದ್ಮ?…

ಅಲ್ತಲ್ತು ಅಲ್ತಲ್ತು

ಗೋರೆ, ಪೊರಕೆ, ಸನಿಕೆ ಸಂಭೂಷಿತ-

ಅದ್ಭುತವಾದ ಅವತಾರಿ ಇವನು. ಇವನ ರೂಪಿನಲ್ಲಿ ಕಸುಬಿನ ಉಪಕರಣಗಳೇ ಆಹಾರ್ಯ. ಸಾತ್ವಿಕ ಕಳೆಯ ಇವನು ಮಡುಗಟ್ಟಿದ್ದ ಶತಶತಮಾನದ ಕೊಳೆ ತೆಗೆದು, ನಿಂತ ನೀರನು ಹರಿಸುವ, ಒಳಗಿನ ಮೂಲೆ ಮೂಲೆಯ ಗುಡಿಸಿ ನಿರ್ಮಲವಾಗಿಸುವ ಜಂಗಮತ್ವದ ಕುರುಹಾಗಿ ಕಾಣುತ್ತಾನೆ.

ತಂಗಳನ್ನವ ಉಂಡು, ಕಚ್ಚಿ ಬೀಡಿಯ ತುಂಡು

ಪೊರಕೆ, ಸನಿಕೆ ಹಿಡಿದ ಕೈಗಳನೆತ್ತಿ

‘ಮರಳಿ ಬರುವೆ’ ಎಂದು ಹೊರಟು ಹೋದ…

ಸ್ವಭಾವ ಸಹಜವಾದ ಆಧ್ಯಾತ್ಮದ ಆವರಣವನ್ನೂ ವಿಲೀನಗೊಳಿಸುವುದು ಈ ಕಾಲದ ದರ್ದಿನ ಬುದ್ಧ-ರಾಮ-ರಾಧೆ-ಕೃಷ್ಣ-ಶಿವ-ಅಲ್ಲಮ-ಗಾಂಧಿ-ಅಂಬೇಡ್ಕರ್ ಎಲ್ಲ ಆದರ್ಶೀಕೃತ ಮಾದರಿಗಳನ್ನು ಒಳಗೊಂಡ ಸಾಮಾನ್ಯನಲ್ಲಿ.

ಗಿರಿಯಲ್ಲೊಂದು ಜೀವ

ಗರಿಗೆದರಿ ನರ್ತಿಸಿತು;

ನೆಲದಲ್ಲೊಂದು ಭಾವ

ನವಿಲಂತೆ ವರ್ತಿಸಿತು

ದರ್ಶನದ ಅನುಭಾವ ಕಳೆಗಟ್ಟಿ ಜೀವಿಸುವ, ರಸವಾಗಿ ಹರಿಯುವ ಅವರ ಕವನಗಳಲ್ಲಿ ಇಂತಹುದೇ ರೂಪದ ಹಲವು ಭಾವಪ್ರಪಂಚದ ದರುಶನವಾಗುತ್ತದೆ.

‍ಲೇಖಕರು G

15 April, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading