ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸವಿತಾ ಕೇಳುತ್ತಾರೆ- ಏನಾಗುತ್ತೆ?

ಸವಿತಾ ನಾಗಭೂಷಣ್ ಕನ್ನಡದ ಪ್ರಮುಖ ಕವಿ. ಅವರ ‘ದರುಶನ’ ಕವನ ಸಂಕಲನವನ್ನು ಲೋಹಿಯಾ ಪ್ರಕಾಶನ ಪ್ರಕಟಿಸಿದೆ.
ಯಾಕೋ ಕವಿತೆ ಬರೆಯುವ ಹಂಬಲ ಉಂಟಾಗುತ್ತಿಲ್ಲ..ಎಂದು ಸವಿತಾ ಶಾಕ್ ನೀಡಿದ್ದಾರೆ. ಅವರ ಒಂದು ಒಳ್ಳೆಯ ಕವಿತೆಯೊಂದಿಗೆ ಅವರ ಮಾತುಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ..

Hasana0003
‘ದರುಶನ’ ನನ್ನ ಐದನೆಯ ಕವನ ಸಂಕಲನ. 2002ರಲ್ಲಿ ಪ್ರಕಟವಾದ ‘ಜಾತ್ರೆಯಲ್ಲಿ ಶಿವ’ ಕವನ ಸಂಕಲನದ ತರುವಾಯ ಕಳೆದ ಏಳು ವರುಷಗಳಲ್ಲಿ ನಾನು ಬರೆದ ಕವಿತೆಗಳನ್ನು ಇಲ್ಲಿ ಒಟ್ಟು ಮಾಡಿ ನೀಡಿರುವೆ. ಕಳೆದ ಏಳು ವರ್ಷಗಳಲ್ಲಿ ನಾನು ಬರೆದದ್ದು ಕಡಿಮೆ.
ಇತ್ತೀಚಿನ ದಿನಗಳಲ್ಲಿ ಕವಿತೆಗಳನ್ನು ಬರೆಯುವ ಹಂಬಲ ಅದೇಕೋ ನನ್ನಲ್ಲಿ ಉಂಟಾಗುತ್ತಿಲ್ಲ! ‘ಜಾತ್ರೆಯಲ್ಲಿ ಶಿವ’ ಕವನ ಬರೆದ ನಂತರ ಏಕೋ ನನ್ನ ಲೇಖನಿ ಕವಿತೆಗಾಗಿ ಹಾತೊರೆಯುತ್ತಿಲ್ಲ. ಆದಾಗ್ಯೂ, ಅನ್ನದಷ್ಟೇ ಅಗತ್ಯವಾದ ವಸ್ತು ಈ ಕವಿತೆ ಎಂದು ನನಗನ್ನಿಸಿರುವುದರಿಂದ; ನಿತ್ಯದ ವಿದ್ಯಮಾನಗಳಿಗೆ ಸ್ಪಂದಿಸದೆ ಇರಲಾಗದೆ, ಆಯಾ ಸಂದರ್ಭಗಳ ಭಾವ ಲಹರಿಗಳಿಗೆ ಆಕಾರ ನೀಡುತ್ತಾ ಬಂದಿದ್ದೇನೆ.
ಇವುಗಳನ್ನು ಓದುಗರು ಹೇಗೆ ಸ್ವೀಕರಿಸುವರೋ ನಾನರಿಯೆ……..
ಏನಾಗುತ್ತೆ?
ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು
ಮದುವೆಯಾದರೆ ಏನಾಗುತ್ತೆ?
ಏನೂ ಆಗೊಲ್ಲ,
ಮುದ್ದಾದ ಎರಡು ಮಕ್ಕಳಾಗುತ್ತೆ!
ರಾಮನನ್ನು ಅಲ್ಲಾಹುವಿನ ಪಕ್ಕದಲ್ಲಿ
ಇಟ್ಟರೆ ಏನಾಗುತ್ತೆ?
ಏನೂ ಆಗೊಲ್ಲ,
ಶಕ್ತಿ-ಭಕ್ತಿ ಎರಡೂ ಹೆಚ್ಚಾಗುತ್ತೆ!
ಹಿಂದೂಸ್ಥಾನ-ಪಾಕಿಸ್ತಾನ
ಒಂದಾದರೆ ಏನಾಗುತ್ತೆ?
ಏನೂ ಆಗೊಲ್ಲ
ಅಶಾಂತಿ ಆತಂಕ ಕಮ್ಮಿಯಾಗುತ್ತೆ!
ಹೇಳು…. ಏನಾಗುತ್ತೆ, ಏನಾಗುತ್ತೆ?
ಹಿಂದೂಸ್ಥಾನ-ಪಾಕಿಸ್ತಾನ ಒಂದಾದರೆ ಏನಾಗುತ್ತೆ?
ಏನೂ ಆಗೊಲ್ಲ,
ಒಂದು ಹಳೆಯ ರೋಗ ವಾಸಿಯಾಗುತ್ತೆ!
-ಸವಿತಾ ನಾಗಭೂಷಣ್

‍ಲೇಖಕರು avadhi

21 May, 2009

3 Comments

  1. bhadravathi

    ತುಂಬಾ ಚೆನಾಗಿದೆ ಕವನ. ಪಾತ್ರ ಸ್ವಲ್ಪ ಅದಲು ಬದಲಾದರೆ ಏನಾಗಬಹುದು? ಹಿಂದೂ ಹುಡುಗಿ ಮುಸ್ಲಿಂ ತರುಣನನ್ನು ಮದುವೆಯಾದರೆ ಮನೆ ತುಂಬಾ ಮಕ್ಕಳಾಗಬಹುದೋ ( ಟಿಪಿಕಲ್ ಮುಸ್ಲಿಂ ಫ್ಯಾಮಿಲಿ ಥರ ) ಏನೋ, ಅಲ್ವ? ಇನ್ನು ಭಾರತ ಪಾಕ ಒಂದಾಗಲು ನಾಗಪುರ ಒಪ್ಪಲಿಕ್ಕಿಲ್ಲ.

  2. ಗುಬ್ಬಚ್ಚಿ ಕವಿ

    ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು
    ಮದುವೆಯಾದರೆ ಏನಾಗುತ್ತೆ?
    ಏನೋ ಆಗುತ್ತೆ –
    ಇಬ್ಬರೂ ಜಾತಿಗೆಡುತ್ತಾರೆ!!
    ರಾಮನನ್ನು ಅಲ್ಲಾಹುವಿನ ಪಕ್ಕದಲ್ಲಿ
    ಇಟ್ಟರೆ ಏನಾಗುತ್ತೆ?
    ಏನೋ ಆಗುತ್ತೆ –
    ಇಬ್ಬರೂ ಹೊಡೆದಾಡಿ ಸಾಯುತ್ತಾರೆ!!
    ಹಿಂದೂಸ್ಥಾನ-ಪಾಕಿಸ್ತಾನ
    ಒಂದಾದರೆ ಏನಾಗುತ್ತೆ?
    ಏನೋ ಆಗುತ್ತೆ –
    ಸಮಾಂತರ ರೇಖೆಗಳು ಅನಂತದಲ್ಲಿ ಕೂಡುತ್ತವೆ!!
    ಹೇಳು…. ಏನಾಗುತ್ತೆ, ಏನಾಗುತ್ತೆ?
    ಹಿಂದೂಸ್ಥಾನ-ಪಾಕಿಸ್ತಾನ ಒಂದಾದರೆ ಏನಾಗುತ್ತೆ?
    ಏನೋ ಆಗುತ್ತೆ –
    ಹಳೆಯ ರೋಗ ರೊಚ್ಚಿನಿಂದ ಮರುಕಳಿಸುತ್ತೆ!!

  3. ಜೈಕುಮಾರ್

    ಚಿಂತನೆಗಚ್ಚುವ ಉತ್ತಮ ಕವನವಿದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading