ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತೀಶ ಕುಲಕರ್ಣಿ ಕಂಡಂತೆ ‘ಪ್ಯಾರಿ ಪದ್ಯ’

ಸತೀಶ ಕುಲಕರ್ಣಿ

ಕವಿತೆ ಉಟ್ಟರೂ ಬತ್ತಲೆ
ಉಂಡರೂ ಹಸಿವು

ಕವಿ ಎ.ಎಸ್. ಮಕಾನದಾರರ ಪ್ಯಾರಿ ಪದ್ಯ ಸಂಕಲನದ ಕವಿತೆಗಳನ್ನು ಓದಿದ ನಂತರ ಕೆ.ಎಸ್. ಎನ್. ರ ಮೇಲಿನ ಸಾಲುಗಳು ನೆನಪಾದವು.

ಪ್ರೀತಿ ಮೋಹ, ವಿರಹ ವಿಲಿವಲಿಯ ಹತ್ತಾರು ಮುಖಗಳು ಇಲ್ಲಿಯ ಛೋಟಾ ಛೋಟಾ ಪ್ಯಾರಿ ಪದ್ಯಗಳಲ್ಲಿವೆ. ಉರ್ದು ಮತ್ತು ಹಿಂದಿ ಪ್ರೇಮ ಭಾಷೆಯ ಪದಗಳೇ ಇಲ್ಲಿನ ಕವಿತೆಗಳ ಶೀರ್ಷಿಕೆಗಳು. ಪ್ಯಾರಿ, ಚಾಂದನಿ, ಸನಮ, ದಿಲ್ರುಬಾ, ದಿವಾನಿ, ಮಾಷೂಕ್, ಆಶಿಕ್, ಮೆಹಬೂಬಾ, ಸಜನಿ, ಯಾರಬ್…. ಹೀಗೆ ಹೆಸರುಗಳು.

ಒಂದು ಕವಿತೆಯಲ್ಲಿ ಹಲವು ತುಂಡು ತುಂಡು ಜೋಡು ಜೋಡು ಸಾಲುಗಳ ಹೆಣಿಕೆ ಪ್ಯಾರಿ ಇಡೀ ಸಂಕಲನದ ಸ್ಥಾಯೀ ಭಾವ. ಪ್ಯಾರಿ ಪದ್ಯದ ಸಂಕಲನದ ಹೆಸರಿಗೆ ಸಖಿ ಚಲ್ಲಿದ ಕಾವ್ಯ ಗಂಧ ಎಂಬ ಟ್ಯಾಗ ಲೈನ. ಹಲವು ಸುಂದರ ಮನಮೋಹಕ ಸಾಲುಗಳು ಓದ ಸಿಗುತ್ತವೆ. ಒಂದಿಷ್ಟು ಅರ್ಥತಂತು ಜೋಡಣೆಯ ಗೊಂದಲ, ಅಲ್ಲಲ್ಲಿ ಸ್ವಲ್ಪ ವಾಚ್ಯವೆನಿಸುವ ಸಾಲುಗಳೂ ಇವೆ.

ಮೋಹ ಮರುಕು, ಅಲ್ಲಲ್ಲಿ ಜೀವನದ ಕಟು ಸತ್ಯಗಳ ಹೇಳುವ ಸಾಲುಗಳು, ಗಝಲ್ಲಿನ ಗುಜರಿ ಅನ್ನಬಹುದಾದ ಕವಿತೆಗಳಿವು. ಕಾವ್ಯ ಪ್ರೀತಿಗೆ ಒಂದಿಷ್ಟು ಪ್ಯಾರಿಯ ಸುಂದರ ಸಾಲುಗಳನ್ನು ನಾನು ಗುರ್ತಿಸಿ ಕೊಟ್ಟಿರುವೆ.

ನಾವು ಸಂದಿಸುವುದು
ನೆನಪಿನ ಆಳದೊಳಗೊ?
ಹೃದಯದ ಆಳದೊಳಗೊ?
*

ನೀನು ಸೂಜಿ
ನಾನು ದಾರ
ಹೊಲಿಯೋಣ ಗಡಿಗಳನು
*

ಆರಿದ ದೀಪ ಉರಿಸು, ಉರಿವ ದೀಪ ಆರಿಸದಿರು
ಜಗದ ಕತ್ತಲೆ ಕಳೆಯಲು ಸಮೆ ಬೇಕಾಗಿಹುವುದು
*

ಕಾರುಣ್ಯದ ಜಾಡಿನಲ್ಲಿ ಹೊರಟವನಿಗೆ
ಜಾಡ ಮಾಲಿ ದೇವರಾಗಿ ಕಂಡ
*

ಹರಿದ ವೀಣೆಯ ತಂತಿ ಕಟ್ಟಬಹುದು
ಕಟ್ಟ ಬಹುದೇ ಸುಟ್ಟ ಕನಸುಗಳ
*

ಸುಟ್ಟುಕೊಂಡ ಬದುಕಿಗೆ
ಇದ್ದಿಲು ಆಗುವ ಭಾಗ್ಯವೂ ಸಿಗಲಿಲ್ಲ
*

ಕುಂಡದಲಿ ಅರುಳುವ ಹೂವು
ಎದೆಯಲ್ಲಿ ಅರಳುವ ಸಾಕಿ
ಇಬ್ಬರನೂ ಸಲಹುವೆ ಸಾಕಿ
*

ಮನೆಯ ತುಂಬ ಕಿಟಕಿ ಬಾಗಿಲು ಬೆಳಕಿಂಡಿ
ಬೆಳಕಿಗಾಗಿ ಇನ್ನೂ ಹಪಾಹಪಿ ನಿಂತಿಲ್ಲ
*

ಕತ್ತಲೆಂಬ ಕಲಾವಿದ
ಬೆಳಕ ಶಿಲೆ ಕೆತ್ತಿದ
*

ಕಾಡದಿರು ಕನಸೆ
ದಟ್ಟಾರಣ್ಯದಲಿ ದಿಕ್ಕು ತಪ್ಪಿದ
ಪಯಣಿಗ ನಾನು
*

ನಾನು ಉರಿವ ಕೆಂಡ
ನೀನು ಬೀಸುವ ತಂಗಾಳಿ
*

ಬದುಕು ಹಸನಾಗಲು
ವ್ಯಸನ ಬಿಡು ತಮ್ಮ
*

ಕಡಲ ಕಿನಾರೆ ನಿನ್ನೂರು
ಕಣ್ಣೀರ ಕಡಲು ನನ್ನೂರು
*

ಪ್ರೇಮಿ ಸತ್ತರೆ
ಗೋರಿಯಲಿ ಹೂಳುವಿರಿ
ಪ್ರೀತಿ ಸತ್ತರೆ?

ಇವೆಲ್ಲ ನನ್ನನ್ನು ತಟ್ಟಿದ ಪ್ಯಾರಿ ಪ್ಯಾರಿ ಸಾಲುಗಳು. ಧಾವಂತದ ಈ ದಿನಗಳಲ್ಲಿ ಏಕಾಂತಕ್ಕೆ ಬೆಳಕು ಚೆಲ್ಲುವ ರೀತಿಯವು.

‍ಲೇಖಕರು Avadhi

25 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading