ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಚಿನ್ ತೀರ್ಥಹಳ್ಳಿ ಕಂಡ ‘ಹುಣ್ಸ್‌ಮಕ್ಕಿ ಹುಳ’

ಸಚಿನ್ ತೀರ್ಥಹಳ್ಳಿ

ಬದುಕನ್ನ ಅತ್ಯಂತ ಪ್ರಾಮಾಣಿಕವಾಗಿ ಬದುಕಿದವರಿಗೆ ಮತ್ತು ಆತ್ಮ ವಿಶ್ವಾಸದಿಂದ ಎದುರಿಸಿದವರಿಗೆ ಮಾತ್ರ ತಮ್ಮ ಬದುಕಿನ ಕತೆಯನ್ನ ಇದ್ದಕ್ಕಿದ್ದ ಹಾಗೆ ಹೇಳಲು ಸಾಧ್ಯ. ವಿನುತಾ ವಿಶ್ವನಾಥ್ ಅತ್ಯಂತ ಸಣ್ಣ ವಯಸ್ಸಿನಲ್ಲಿ ಅದನ್ನು ಸಾಧಿಸಿದ್ದು ನನಗಂತೂ ಅಚ್ಚರಿ ಮೂಡಿಸಿದೆ.

ನಮ್ಮ ಬದುಕಿನ ಕತೆಗಳನ್ನ ಮತ್ತು ಅನುಭವಗಳನ್ನ ಇದ್ದಕಿದ್ದ ಹಾಗೇ ಹೇಳಲು ಧೈರ್ಯ ಸಾಲದೇ ನಾವು ಕತೆ ಕಾವ್ಯ ಬರೆಯುತ್ತ, ಆ ನೋವನ್ನು ನೆನಪನ್ನೂ ಮರೆಯಲು ಮತ್ತು ಅನಾಥ ಪ್ರಜ್ಞೆಯ ಜೊತೆಗೇ ಬಾಳಲು ಕಲಿಯಲು ಪ್ರಯತ್ನಿಸುತ್ತಿರುತ್ತೇವೆ. ಆದರೆ ವಿನುತಾ ತಮ್ಮ ಬಾಲ್ಯದ ಸಂಕಷ್ಟಗಳನ್ನ, ಬಡತನದ ಕತೆಗಳನ್ನ, ದುರಾದೃಷ್ಟದ ಸಂಗತಿಗಳನ್ನ, ಯವ್ವೌನದ ದೃಷ್ಟಾಂತಗಳನ್ನ ಯಾವ ಮುಚ್ಚುಮರೆಯಿಲ್ಲದೆ ಅತ್ಯಂತ ಪ್ರಾಮಾಣಿಕವಾಗಿ, ಮುಗ್ಧತೆಯಿಂತ ತಮ್ಮ ಸರಳ ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸಿದ್ದು ನನ್ನನ್ನು ಆರ್ದ್ರನನ್ನಾಗಿಸಿತು.

ಅವರ ಭಾವ ಪ್ರಪಂಚ ಮತ್ತು ನನ್ನ ಭಾವ ಪ್ರಪಂಚ ಹೆಚ್ಚೂ ಕಡಿಮೆ ಒಂದೇ ಆಗಿದ್ದರಿಂದ್ದಲೋ ಏನೋ ಈ ಅನುಭವ ಕಥನವನ್ನ ಓದುತ್ತಾ ಇದು ನನ್ನ ಕತೆಯೋ ಹೌದು ಎಂಬಂತೆ ಭಾಸವಾಗಿದ್ದೇ ಈ ಕ್ರತಿಯ ಹೆಗ್ಗಳಿಕೆ. ಮಲೆನಾಡಿನ ಹುಡುಗಿಯರು ತಮ್ಮ ಬದುಕಿನ ವೃತ್ತಿಯ ಕತೆಗಳನ್ನ ಯಾಕೆ ಜಗತ್ತಿಗೆ ಹೇಳಬಾರದು ಎಂಬಂತೆ ಸವಾಲು ಹಾಕುವ ದಾಟಿಯಲ್ಲಿ ವಿನುತಾ ಇದನ್ನು ಬರೆದಿದ್ದಾರೆ.

ಪ್ರಕೃತಿದತ್ತ ಮುಗ್ಧತೆಯೇ ಈ ಕ್ರತಿಯ ಜೀವಾಳ. ಇಲ್ಲಿ ಲೇಖಕಿ ತಮ್ಮ ಬಾಲ್ಯದ ಬಡತನ ಕತೆಯನ್ನ, ಅಸಫಲ ಪ್ರೇಮದ ಸಂಗತಿಯನ್ನ, ಮಹಾನಗರ ದಯಪಾಲಿಸುವ ಅನಾಥ ಪ್ರಜ್ಞೆಯನ್ನ, ಬದುಕು ಮತ್ತೆ ಮತ್ತೆ ಜೀವಂತವಾಗಿರಲು ಹುಮ್ಮಸ್ಸು ತುಂಬುವ ಸನ್ನಿವೇಶಗಳನ್ನ ಯಾವ ಮುಚ್ಚುಮರೆಯಿಲ್ಲದೆ ತನ್ನ ಖಾಸ ಸ್ನೇಹಿತನಿಗೋ ಬಂಧುವಿಗೋ ಹೇಳುವಂತೆ ತಮ್ಮ ಬದುಕಿನ ಕತೆಯನ್ನ ಹೇಳಿದ್ದಾರೆ. ಇದು ತನ್ನ ಬದುಕನ್ನ ತಾನೇ ರೂಪಿಸಿಕೊಳ್ಳಬೇಕು ಅಂತ ಹಂಬಲಿಸುವ ಪ್ರತಿಯೊಂದು ಹುಡುಗಿ ಕೂಡ ಓದಬೇಕಾದ ಪುಸ್ತಕ.

ನಿಜ ಹೇಳಬೇಕೆಂದರೆ ಬಾಲ್ಯದ ಅವಮಾನ, ಯವ್ವೌನದ ಪ್ರೀತಿ, ಅದನ್ನು ದಕ್ಕಿಸಿಕೊಳ್ಳಲು ಮಾಟ ಮಂತ್ರವನ್ನೂ ಕೂಡ ನಂಬುವ ಮೂಢ ಹುಡುಗಿ, ರಂಗಪ್ರಪಂಚದಲ್ಲಿ ತನ್ನ ವಾಸ್ತವವನ್ನು ಮರೆಯುವ ನಟಿ, ಆಕೆಯನ್ನ ಕೈಹಿಡಿದು ನಡೆಸುವ ವಿಧಿ, ಕೊನೆಗೂ ಪ್ರೀತಿಯ ಆಸರೆ ಸಿಗುವ ಅದ್ರಷ್ಟ.. ಇದೆಲ್ಲಾ ಒಂದು ಘನವಾದ ಕಾದಂಬರಿಯ ಸರಕು.

ವಿನುತಾ ಅದೆಲ್ಲವನ್ನೂ ನಿರಾಕರಿಸಿ ನನ್ನ ಕತೆ ಇಷ್ಟೇ ಅಂತ ಅತ್ಯಂತ ನೇರವಾಗಿ ಸರಳೀಕರಿಸಿ ಹೇಳಿದ್ದು ನನ್ನನ್ನು ಭಾವುಕನನ್ನಾಗಿಸಿತು. ಅವರ ಭಾಷೆ, ಅನುಭವ, ಪರಿಸರ, ಪಾತ್ರಗಳನ್ನೆಲ್ಲಾ ನೋಡುವಾಗ ನನ್ನ ಬಾಲ್ಯದ ಗೆಳತಿಯೋ ಸಹಪಾಠಿಯೋ ತನ್ನ ಕತೆಯನ್ನ ಹೇಳುತ್ತಿರುವಂತೆ ಅನಿಸಿತು.

ನಾವು ತುಂಬಾ ಮುಗ್ಧರು, ಜಗತ್ತು ನಮ್ಮ ಮುಗ್ಧತೆಯನ್ನ ದುರುಪಯೋಗ ಮಾಡಿಕೊಳ್ಳುತ್ತಿದೆ ಅಂತ ನಮಗೆ ಗೊತ್ತಾಗುತ್ತಿರುವಾಗ ನಮಗೆ ಬೇಸರವಾಗುತ್ತದೆ. ನಾವೇಕೆ ಇಷ್ಟೊಂದು ಮುಗ್ಧರು ಅಂತ ರೇಜಿಗೆ ಹುಟ್ಟುತ್ತದೆ. ಆದರೆ ಯೂನಿವರ್ಸ್ ಮಾತ್ರ ಮುಗ್ಧರನ್ನ ಹುಡುಕಿ ಹುಡುಕಿ ಅವರಿಗೆ ತನ್ನಿಂದ ಕೈಲಾದಷ್ಟು ಸಹಾಯ ಮಾಡುತ್ತದೆ.. ಅದು ಯಾಕೆ, ಹೇಗೆ ? ಅಂತ ಕೇಳುವುದೇ ಅಪರಾಧ. ವಿನುತಾ ಅವರ ಬರಹ ಓದುತ್ತಿದ್ದರೆ ಆ ಯೂನಿವರ್ಸಿನ ಕತೆ ಮತ್ತೆ ನೆನಪಾಯಿತು. ವಿನುತಾ ಮತ್ತಷ್ಟು ಬರೆಯಲಿ ಅನ್ನುವುದೇ ಈ ಕ್ಷಣಕ್ಕೆ ನನಗೆ ಹೇಳಲು ಉಳಿದಿರುವುದು.

ಅವರಿಗೆ ನನ್ನ ಪ್ರೀತಿ ಮತ್ತು ಅಕ್ಕರೆ.

‍ಲೇಖಕರು Avadhi

3 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading