ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂವಿಧಾನ ಎನ್ನುವುದು ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’

ಬೊಳುವಾರು

ಬಾಲ್ಯದಲ್ಲಿ ಉಮ್ಮ ಕಲಿಸಿದ್ದು; ‘ಕುರಾನ್ ಗ್ರಂಥದಲ್ಲಿರುವುದೆಲ್ಲವೂ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಸಾರುವ ಪ್ರಶ್ನಾತೀತ ಅಂತಿಮಸತ್ಯಗಳು’ ಎಂದು.

ಮುಂದೆ, ಶಾಲೆಯಲ್ಲಿ ಮಾಸ್ತರು ಕಲಿಸಿದ್ದು; ‘ಸಂವಿಧಾನ ಗ್ರಂಥದಲ್ಲಿರುವುದೆಲ್ಲವೂ, ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂದು ಸಾರುವ ಪ್ರಶ್ನಾತೀತ ಅಂತಿಮಸತ್ಯಗಳು’ ಎಂದು.

ತೀರಿಕೊಳ್ಳುವ ಮೊದಲು ನನ್ನ ಅಬ್ಬ ಹೇಳಿದ್ದು, ‘ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳದಿರು’ ಎಂದು.

ಯಾರ ಮಾತನ್ನು ಅನುಸರಿಸಲಿ ಎಂದು ತೀರ್ಮಾನಿಸಲಾಗದೆ ಗೊಂದಲದಲ್ಲಿರುವೆ. ಸ್ವಂತ ಅಭಿಪ್ರಾಯಗಳನ್ನು ಪ್ರಕಟಿಸಿ, ಗುರುಹಿರಿಯರನ್ನು ಅವಮಾನಿಸಲಾರೆ; ಕ್ಷಮೆಯಿರಲಿ.

 

ದಮನಿತರಲ್ಲಿ ಜಾಗೃತಿ ಮೂಡಿಸಿದ ಬಹುಮಾನ್ಯ ಕೃತಿ

ಡಾ ಮಹಾಬಲೇಶ್ವರ ರಾವ್

ಯಾವುದೇ ಧರ್ಮ ಗ್ರಂಥ ಸೀಮಿತ, ಸಂಕುಚಿತ, ಅದು ಎಂದೋ ಒಂದು ಕಾಲದಲ್ಲಿ ಯಾರಿಂದಲೋ ರಚಿತವಾಗಿ ಇಂದಿಗೆ ಅಪ್ರಸ್ತುತ.

ಭಾರತದ ಸಂವಿಧಾನ ಈ ದೇಶದ ಹಲವು ಪ್ರಗಲ್ಭ ಕಾನೂನು ತಜ್ಞರ, ಸಾಮಾಜಿಕ , ಸಾಂಸ್ಕೃತಿಕ ಚಿಂತಕರ ಚಿಂತನೆಗಳ, ಮುಂಗಾಣ್ಕೆಗಳ ಸಾರಫಲ.

ಅದು ಈ ದೇಶದ ಸರ್ವರ ಸರ್ವತೋಮುಖ ಪ್ರಗತಿಯ ಕನಸು ಕಾಣುವ ಮೌಲಿಕ ದಸ್ತಾವೇಜು. ಅದು ಸ್ಥಿರವಲ್ಲ, ಸ್ಥಗಿತವಲ್ಲ. ಚಲನಶೀಲ. ಮೂಕ ಜನತೆಗೆ ಮಾತುಕೊಟ್ಟ, ದಮನಿತರಲ್ಲಿ ಜಾಗೃತಿ ಮೂಡಿಸಿದ ಬಹುಮಾನ್ಯ ಕೃತಿ.

ಈ ದೇಶ ಮತ ಹಾಗು ಮತಿ ಮೌಢ್ಯದಿಂದ ಬಿಡಿಸಿಕೊಳ್ಳಬೇಕಾದರೆ, ಪ್ರಜಾತಾಂತ್ರಿಕ ವ್ಯವಸ್ಥೆ ಬಲಗೊಳ್ಳಬೇಕಾದರೆ ನಾವು ಸಂವಿಧಾನವನ್ನು ನಿಜಕ್ಕೂ ಗೌರವಿಸಲೇಬೇಕು.

ನನಗೆ ಸಂವಿಧಾನ ಉಸಿರಾಟದಷ್ಟೇ ಮುಖ್ಯ

ಲತಾ ದಾಮ್ಲೆ

ಅದರಲ್ಲಿನ ನನ್ನನ್ನು ರಕ್ಷಿಸುವಂಥ ಸಂಹಿತೆಗಳು ನನ್ನ ಆತ್ಮವಿಶ್ವಾಸ. ನನ್ನ ಮತ್ತು ನನ್ನ ದೇಶದ ಎಲ್ಲ ಪ್ರಜೆಗಳೂ ಸ್ವಸ್ಥ ಸಂವಿಧಾನದಿಂದ ಸುಭದ್ರರು ಹಾಗೂ ಸುದೃಢರು.

ದೇಶದ ಪ್ರತಿಯೊಂದು ಕಾರ್ಯ ಸುಗಮವಾಗಿ ಸಾಗಿಸಲು ಸಹಾಯ ದೀಪಿಕೆಯಿದು.

ಭೇದಭಾವಗಳ ಸುಳಿವಿಲ್ಲದೆ, ಪ್ರತಿಯೊಂದು ಪ್ರಜೆಯ ಉತ್ಕೃಷ್ಟ ಹಕ್ಕುಗಳನ್ನು ಎತ್ತಿ ಹಿಡಿದು, ಜಗತ್ತಿಗೇ ಮಾದರಿಯಾಗಿದೆ ನಮ್ಮ ಸಂವಿಧಾನ. ಸರ್ಕಾರದ ರೀತಿ-ನೀತಿಗಳನ್ನು ತಿದ್ದಲು ನೆರವಾಗುವ ನಮ್ಮ ಸಂವಿಧಾನ ನನ್ನ ಹೆಮ್ಮೆ. ಇದರ ಕರ್ತೃಗೆ ಚಿರಋಣಿ.

‍ಲೇಖಕರು Avadhi GK

26 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading