ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾನುಭೋಗರ ಮಗಳು

ರಜನಿ ಅಮ್ಮೆಂಬಳ

ಕೆ.ಎಸ್.ನರಸಿಂಹಸ್ವಾಮಿಯವರ “ಶಾನುಭೋಗರ ಮಗಳು” ಕವನದಲ್ಲಿ ಚಿತ್ರಣಗೊಂಡಿರುವ ಹುಡುಗಿ ನಮಗೆ ಬಲು ಗುರ್ತಿನವಳು. ತನ್ನ ಸಂಕೋಚದಿಂದ, ಕಡಿಮೆ ಮಾತುಗಳಿಂದ ಮತ್ತು ಇಷ್ಟವಿಲ್ಲದ್ದನ್ನು ಒಲ್ಲೆನೆಂಬ ನೇರವಂತಿಕೆಯಿಂದಲೇ ಮನಸ್ಸು ಗೆಲ್ಲುವ ಹುಡುಗಿ ಆಕೆ.

ತಾಯಿಯಿಲ್ಲದ ಆ ಹುಡುಗಿಯ ಬಗ್ಗೆ ಅಕ್ಕರೆಯಿಂದ ವರ್ಣಿಸುವ ಕವಿ, ತಾವರೆಕೆರೆಯ ಜೋಯಿಸರ ಮೊಮ್ಮಗ ಆಕೆಯನ್ನು ನೋಡಲು ಅವರ ಮನೆಗೆ ಬಂದಾಗಿನ ಪ್ರಸಂಗವನ್ನು ಹೇಳುತ್ತಾರೆ. ಆಕೆ ಕೋಣೆಯೊಳಗಿಂದಲೇ “ವೈದಿಕರ ಮನೆಯಲ್ಲಿ ಊಟ ಹೊತ್ತಾಗುತ್ತೆ, ಒಲ್ಲೆ” ಎಂದುಬಿಡುತ್ತಾಳೆ.

ಆದರೆ ನಿಜವಾಗಿಯೂ ಅವಳು ಈ ಸಂಬಂಧ ನಿರಾಕರಿಸಲು ಕಾರಣ ಅದಾಗಿರುವುದಿಲ್ಲ. ತನ್ನನ್ನು ನೋಡಲು ಬಂದಿದ್ದ ಆ ಗಂಡು, ಕೂದಲಿಗಿಂತ ಕಪ್ಪು ಎಂಬ ಕಾರಣದಿಂದಾಗಿ ಅವನನ್ನು ತಿರಸ್ಕರಿಸುತ್ತಾಳೆ. ಆದರೆ ಯಾರಿಗೂ ನೋವಾಗದಂಥ ಕಾರಣ ಹೇಳುವ ಜಾಣತನವನ್ನು ತೋರಿಸುತ್ತಾಳೆ.

ಈ ಹುಡುಗಿಯ ತಂದೆ ಶಾನುಭೋಗರು ಕೂಡ ಮಗಳ ಬಗ್ಗೆ ಬಲು ವಾತ್ಸಲ್ಯವುಳ್ಳವರು. ಅದಕ್ಕಿಂತ ಹೆಚ್ಚಾಗಿ ಅವಳ ಭಾವನೆಗಳ ಬೆಲೆಯನ್ನರಿತವರು. ಕವಿ ಹೇಳುತ್ತಾರೆ- “ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ.” ಅಲ್ಲಿಗೆ, ಅವಳ ಮಾತೇ ಅಂತಿಮ, ತಾನು ಮತ್ತೆ ಹೇಳುವುದಕ್ಕೆ ಏನೂ ಇಲ್ಲ ಎಂತಲೇ ಅವರ ಸೂಚನೆ.

ಹುಡುಗಿಯ ಇಷ್ಟ ಮತ್ತು ಇಂಗಿತವನ್ನು ಅರಿವ, ಪರಿಗಣಿಸುವ ಅಪ್ಪ-ಅಮ್ಮಂದಿರಿದ್ದರೆ ಮದುವೆಗಳು ವ್ಯವಹಾರವಾಗುವುದು ತಪ್ಪೀತು. ನಿಜ ಒಲವಿನ ಸಾಕ್ಷಿಯಲ್ಲಿ ಅಕ್ಷತೆಗಳು ಹೂವಾದಾವು. ಶಾನುಭೋಗರ ಮಗಳಂತೆ ಎಲ್ಲ ಹುಡುಗಿಯರೂ, ಸರಿಯಾದ ಗಂಡೊದಗಿ ಸುಖವಾಗಿರಲಿ. ಕವಿಯೇ ಆಶಿಸುವಂತೆ, ತಡವಾದರೂ ನಷ್ಟವಿಲ್ಲ.

‍ಲೇಖಕರು avadhi

26 March, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading