ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೈದೇಹಿಯವರ ಅಡುಗೆ ಪಾತ್ರೆ ಖಾಲಿ ಮಾಡಿಸಿಯೇ ಬಂದ್ವಿ..

vaidehi3

ದೀಪದ ಮಲ್ಲಿ 

ನೆತ್ತಿ ಸುಡುವ ಮಧ್ಯಾಹ್ನ ದಿಢೀರನೆ ಫೋನ್ ಮಾಡಿ ‘ಮೇಡಂ ಮಣಿಪಾಲದಲ್ಲಿದ್ದೀವಿ, ಬರಬಹುದಾ ಭೇಟಿಗೆ?’ ಅಂದೆ..

ಅವರೆಂದ್ರು ‘ಎಷ್ಟು ಮಂದಿ ಇದ್ದೀರಿ? ‘
‘…..30’
ಕ್ಷಣ ಮೌನ…. ಮತ್ತೆ ‘ಹಾ..ಬನ್ನಿ..ಬನ್ನಿ..’

5 ನಿಮಿಷದಲ್ಲಿ ನುಗ್ಗಿ ಹೋದ ನಮ್ಮ ಕಂಡು,
‘ಈಗ ಸಂತೋಷವಾಯ್ತು.. ಉದ್ದದ ಜಗಲಿ ಕಟ್ಟಿಸಿದ್ದೂ ಸಾರ್ಥಕವಾಯ್ತು’
ಆಮೇಲೆಲ್ಲಾ ಆಡಿದ್ದೂ.. ಹಾಡಿದ್ದೂ.. ಕುಡಿದದ್ದೂ..

ಬರುವಾಗ ಮೆಲ್ಲನೆ ಹೇಳಿದ್ರು..
‘ಎಂಥ ಬೇಸರ ಮಾಡ್ಬೇಡಿ.. ಏನೂ ತಿಂಡಿ ಊಟ ಮಾಡ್ಲಿಲ್ಲ.. ಸ್ವಲ್ಪ ಮುಂಚೆ ಗೊತ್ತಿದ್ರೂ ಎಂಥದಾದ್ರೂ ಮಾಡ್ತಿದ್ದೆ..’
ಹೀಗಂದವರು ಕನ್ನಡದ ಹಿರಿಯ ಸಾಹಿತಿ ವೈದೇಹಿ

vaidehi1

vaidehi6

 

vaidehi4

ತೇಜಸ್ವಿನಿ ಹೆಗಡೆ

ವೈದೇಹಿ ಮೇಡಮ್ ಕುರಿತು ಬಹು ಆಪ್ತವಾಗಿ ಬರೆದ ಜೋಗಿ ಅವರ ಸ್ಟೇಟಸ್ ನೋಡಿ, ಮೂರುವರುಷದ ಹಿಂದೆ ನಾವು ವೈದೇಹಿಯವರ ಮನೆಗೆ ಹೋಗಿದ್ದೆಲ್ಲಾ ನೆನಪಾಗಿ ಮನಸು ಪ್ರಫುಲ್ಲವಾಯ್ತು.

ಅದರಲ್ಲೂ ಜೋಗಿಯವರು ಬರೆದಿರುವಂತೇ “ಸಾಮಾನ್ಯವಾಗಿ ಲೇಖಕರನ್ನು ಭೇಟಿಯಾದ ನಂತರ ಅವರ ಮೇಲೆ ಅದೇ ಪ್ರೀತಿ, ಗೌರವ ಉಳಿದಿರುವುದಿಲ್ಲ. ಆದರೆ ಹತ್ತಿರದಿಂದ ನೋಡಿದ ಮೇಲೆ ಗೌರವ ಇಮ್ಮಡಿಸುವಂಥ ವ್ಯಕ್ತಿತ್ವ ವೈದೇಹಿಯವರದ್ದು.” – ಇದು ನೂರಕ್ಕೆ ನೂರು ಸತ್ಯ!

ಅವರನ್ನು ಮನೆಗೆ ಹೋಗಿ ನೋಡುವವರೆಗೂ, ನಾನೆಂದೂ ಅವರನ್ನು ಮುಖತಃ ಭೇಟಿಯಾಗಿರಲೇ ಇಲ್ಲಾ. ನನ್ನ ಪ್ರಥಮ ಕಥಾಸಂಕಲನ “ಕಾಣ್ಕೆ”ಯಲ್ಲೂ, ಎರಡನೆಯ ಕಥಾಸಂಕಲನ “ಸಂಹಿತಾ”ದಲ್ಲೂ ಅವರನ್ನು ಸ್ಮರಿಸಿದ್ದೇನೆ. ಅತಿ ಸರಳತೆಯುಲ್ಲೂ ಬದುಕಿನ ಅತಿ ಕ್ಲಿಷ್ಟತೆಯನ್ನು, ಸಂಕೀರ್ಣತೆಯನ್ನು ಹೇಗೆಲ್ಲಾ ಹೇಳಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ ವೈದೇಹಿ ಮೇಡಮ್ ಅವರ ಕಥೆಗಳು!

vaidehi5ಅವರ “ಹಕ್ಕಿಲ್ಲದವರು” ಕಥೆ ನನ್ನ ಆಲ್ ಟೈಮ್ ಫೇವರೇಟ್! ಅವರ ಸಮಗ್ರ ಸಂಕಲನವೇ ನನ್ನಲ್ಲಿದೆ. ನಾನು ಮೊತ್ತ ಮೊದಲ ಕಥೆ ರಚಿಸಿದ್ದೇ ಅವರ ಕಥೆಗಳನ್ನೋದಿ ಪ್ರೇರಿತಳಾಗಿ! ಅದರಲ್ಲೂ ನಮ್ಮ ಆಡು ನುಡಿಗಳನ್ನು, ಮನೆ, ಊರಿನ ಭಾಷೆಯನ್ನು ಅದೆಷ್ಟು ಚೆನ್ನಾಗಿ ಬಳಸಿಕೊಂಡು, ಆ ಪರಿಸರವನ್ನು ಎಲ್ಲರಿಗೂ ಆಪ್ತಗೊಳಿಸಬಹುದೆಂಬುದನ್ನು ಕಲಿತವಳು ನಾನು.

ಒಂದು ತರಹ ಅವರು ನನ್ನ ದ್ರೋಣಾಚಾರ್ಯ, ನಾನು ಏಕಲವ್ಯ ಎನ್ನಬಹುದು. ಹಾಂ.. ಆದರೆ ಈ ಏಕಲವ್ಯೆ ಅವರ ಮನೆಗೆ ಹೋದಾಗ, ಗುರುವೇ ನನಗೆ ಅವರ ಹರಿವ ಲಹರಿ ಅನ್ನೋ ಪುಸ್ತಕವನ್ನಿತ್ತು, ಹೋಳಿಗೆ ತಿನ್ನಿಸಿ, ಮಗಳು ಅದಿತಿಯ ಜೊತೆ ಮುದ್ದಾಡಿ ಬೀಳ್ಕೊಟ್ಟಿದ್ದಾರೆ!

ಮೊದಲ ಭೇಟಿಯೇ ಆಗಿದ್ದರೂ, ಅದೆಷ್ಟೋ ದಿನಗಳ ಪರಿಚಯವಿರುವಂತೇ ಆತ್ಮೀಯತೆ, ಪ್ರೀತಿ ತೋರಿ ಮತ್ತಷ್ಟು ಇನ್ನಷ್ಟು ಆಪ್ತರಾಗಿ ಬಿಟ್ಟಿದ್ದಾರೆ. “ಹೇಳೆ.. ಎಂತ? ಆರಾಮಿದ್ದೀಯಾ?” ಎಂದು ಅವರು ಅಪರೂಪಕ್ಕೆ ವಿಷಯವಿದ್ದಾಗ ಪೋನಾಯಿಸಿದಾಗಲೂ ಕೇಳುವ ಆ ಧಾಟಿಗೇ ಸೋಲುತ್ತೇನೆ. ತೀರಾ ಹತ್ತಿರದ ಬಂಧುವೋ, ನೆರ ಹೊರೆಯವರೋ ಮಾತನಾಡಿಸುವ ರೀತಿ… ಅಷ್ಟು ಸರಳತೆ, ನೇರವಂತಿಕೆ.

ಅವೆಲ್ಲಾ ಈಗ ಜೋಗಿಯವರ ಪೋಸ್ಟ್ ನೋಡಿ ಇನ್ನಷ್ಟು ಹಸಿರಾಗಿ ಖುಶಿ ತಂದವು. ವೈದೇಹಿ ಅವರ ಕಥೆಗಳಷ್ಟೇ ನನ್ನ ಕಾಡಿದ್ದು ತುಳಸಿ ವೇಣುಗೋಪಾಲ್ ಅವರ ಜುಗಲಬಂಧಿ ಹಾಗೂ ಮುಂಜಾವಿಗೆ ಕಾದವಳು ಕಥಾಸಂಕಲನಗಳು. ಅಂತೆಯೇ ಇತ್ತೀಚಿಗೆ ಓದಿದ ಮಿತ್ರಾ ವೆಂಕಟರಾಜ್ ಅವರ “ಹಕ್ಕಿ ಮತ್ತು ಅವಳು” ಕಥಾಸಂಕಲನವೂ ಎಷ್ಟೋ ರಾತ್ರಿಗಳ ನಿದ್ದೆಯನ್ನು ಕಸಿದಿದೆ!

‍ಲೇಖಕರು Admin

6 February, 2016

2 Comments

  1. Tejaswini Hegde

    ವೈದೇಹಿ ಮೇಡಮ್ ಅವರ ಬರಹಗಳಂತೇ ಅವರಿದ್ದಾರೆ.. ಅವರಂತೇ ಅವರ ಬರಹಗಳಿವೆ! ಹಾಗಾಗಿಯೇ ಅವರು ಎಲ್ಲರ ಅಚ್ಚು ಮೆಚ್ಚಿನ ಲೇಖಕಿಯಾಗಿದ್ದಾರೆ. (Y)

  2. ಪದ್ಮಶ್ರೀ

    ಅವರ ಹೆಸರಿಗೆ ತಕ್ಕ ವ್ಯಕ್ತಿ ತ್ವ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading