ನವಿರು ಬರವಣಿಗೆ, ಖಡಕ್ ಅಭಿಪ್ರಾಯಗಳ ಕವಯತ್ರಿ ವಿನಯಾ ವಕ್ಕುಂದ ಈ ಭಾರಿಯ ಛಂದ ಪುಸ್ತಕ ಬಹುಮಾನ ಗೆದ್ದುಕೊಂಡಿದ್ದಾರೆ. ವಿಶೇಷ ಎಂದರೆ ಕವಯತ್ರಿ ವಿನಯಾ ಗೆದ್ದಿರುವುದು ಕಥೆಗಾಗಿ ಇರುವ ಬಹುಮಾನವನ್ನು. ಬರೀ ಕವಿತೆ ಬರೆಯುತ್ತೇನೆ ಎಂದೇ ಎಲ್ಲರಿಗೆ ನಂಬಿಸಿ ಬಿಟ್ಟಿದ್ದ ವಿನಯಾ ಗುಟ್ಟಾಗಿ ಬರೆದ ಕಥೆಗಳು ಈಗ ಛಂದ ಕಾರಣದಿಂದ ಬೆಳಕಿಗೆ ಬರಲು ಸಜ್ಜಾಗಿದೆ.
ವಿನಯಾರ ‘ಊರ ಒಳಗಣ ಬಯಲು’ ಹಸ್ತಪ್ರತಿ ಬಹುಮಾನಕ್ಕೆ ಆಯ್ಕೆಯಾಗಿದೆ. ನೇಮಿಚಂದ್ರ ಈ ಒಳ್ಳೆಯ ಆಯ್ಕೆ ಮಾಡಿಕೊಟ್ಟಿದ್ದಾರೆ. ೭೦ ಕಥೆಗಾರರು ಭಾಗವಹಿಸಿದ್ದ ಈ ಸ್ಪರ್ಧೆ ಕನ್ನಡ ಇತ್ತೀಚೆಗೆ ಕಂಡ ಪ್ರತಿಷ್ಟಿತ ಸ್ಪರ್ಧೆಗಳಲ್ಲೊಂದು. ಪುಸ್ತಕ ಪ್ರಕಟ ಮಾಡಿ 5 ಸಾವಿರ ಹಣವನ್ನೂ ಕೈಗಿಡುವ ಛಂದ ಮಾರ್ಚ್ ನಲ್ಲಿ ಪುಸ್ತಕ ಬಿಡುಗಡೆ ಮಾಡಲಿದೆ.
‘೨೦೦೨ ರಿಂದ ಕಥೆ ಬರೆದಿದ್ದೆ. ಅಲ್ಲಿ ಇಲ್ಲಿ ಇದ್ದದ್ದನ್ನು ಒಟ್ಟು ಮಾಡಿ ಇನ್ನಷ್ಟು ಸೇರಿಸಿ ಸಂಕಲನಕ್ಕೆ ಸಜ್ಜಾಗಿದ್ದೇನೆ’ ಎನ್ನುತ್ತಾರೆ ವಿನಯಾ. ಕಡಲ ತಡಿಯ ಗೋಕರ್ಣದಲ್ಲಿ ಬೆಳೆದ ಕಥೆಗಳು ಸಾಗರದಂತೆ ಆರ್ಭಟಿಸುತ್ತದೋ, ಇಲ್ಲ ಅಲ್ಲಿನ ಹಸಿರಿನಂತೆ ನಿಧಾನ ಮನಸ್ಸನ್ನು ಆವರಿಸಿ ನಿಲ್ಲುತ್ತದೋ ಕಾದು ನೋಡೋಣ. ವಸುದೆಂದ್ರರ ಈ ಖರ್ಚು ಮಾಡುವ ಹುಚ್ಚಿಗೆ ಮತ್ತೆ ಅಭಿನಂದನೆ. ಈ ಭಾರಿಯ ಕಥಾ ಹಸ್ತಪ್ರತಿಯನ್ನು ಆಯ್ಕೆ ಮಾಡಿದವರು ನೇಮಿಚಂದ್ರ.






ಪುಸ್ತಕ ಯಾವಾಗ ಬಿಡುಗಡೆಯಾಗುತ್ತದೆ?