

ಬಿ ವಿ ಕಾರಂತರ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಹಾಗೂ ಪ್ರೇಮಾ ಕಾರಂತರ ಸೋಲಿಸಬೇಡ ಗೆಲಿಸಯ್ಯ ಎರಡೂ ಆತ್ಮ ಕಥನಗಳನ್ನು ಓದಿದವರಿಗೆ ಒಂದು çommon element ಅಲ್ಲಿ ಸಿಗುತ್ತದೆ. ಅದೇ ಎನ್ ಮಂಗಳಾ.
ಬಿ ಎಂ ಎಸ್ ಹಾಗೂ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗಿ ಸಮುದಾಯ ರಂಗ ತಂಡದ ಮೂಲಕ ಹಾದು ರಂಗಾಯಣ ತಲುಪಿಕೊಂಡಳು.
ಅಲ್ಲಿಂದ ಹೊಸದೇ ಇತಿಹಾಸ. ಕಾರಂತದ್ವಯರ ಒಡನಾಟದಲ್ಲಿ ಆಕೆ ತನ್ನೊಳಗಿನ ನಟಿಯನ್ನು ಕಂಡುಕೊಂಡಳು. ನಿರ್ದೇಶಕಿ ಅರಳುತ್ತಿದ್ದುದೂ ಆಕೆಗೆ ಗೊತ್ತಾಯಿತು. ರಂಗಾಯಣ ಸಾಕು ಎನಿಸಿದಾಗ ಹೊರಬಂದ ಆಕೆ ಧಾರಾವಾಹಿ, ಸಿನೆಮಾ ತೆಕ್ಕೆಗೆ ಜಾರದೆ ರಂಗಭೂಮಿಯನ್ನೇ ಆರಿಸಿಕೊಂಡಳು. ಹಾಗಾಗಿ ಹುಟ್ಟಿದ್ದು ಸಂಚಾರಿ ಥಿಯೇಟರ್. ಸಂಚಾರಿ ಥಿಯೇಟರ್ ನಲ್ಲಿ ಆಕೆ ಅಭಿನಯಿಸಿದ ಏಕವ್ಯಕ್ತಿ ಪ್ರದರ್ಶನ ಊರ್ಮಿಳೆ, ವೈದೇಹಿಯವರ ಕವಿತೆಗಳನ್ನು ಮಲ್ಲಿಗೆಯ ದಂಡೆಯಂತೆ ಪೋಣಿಸಿ ಕೊಟ್ಟ ವ್ಯಾನಿಟಿ ಬ್ಯಾಗ್, ವೆನಿಸಿನ ವ್ಯಾಪಾರ ಎಲ್ಲವೂ ಮಂಗಳಾ ಒಳಗಿನ ಹುಮ್ಮಸ್ಸಿಗೆ ಹಿಡಿದ ಕನ್ನಡಿ.
ಈಗ ಈ ಹುಡುಗಿ ಒಂದು ವಿಚಿತ್ರ ಎನ್ನಿಸುವ ಸಾಹಸಕ್ಕೆ ಕೈ ಹಾಕಿದ್ದಾಳೆ. ಗಾಂಧೀ ಬಜಾರಿನ ವಿದ್ಯಾರ್ಥಿ ಭವನ ಯಾರಿಗೆ ಗೊತ್ತಿಲ್ಲ? ಅಂತಹ ವಿದ್ಯಾರ್ಥಿ ಭವನವನ್ನೇ ನಾಟಕವಾಗಿಸಿಬಿಡಲು ಹೊರಟಿದ್ದಾಳೆ. ಆ ಮೂಲಕ ನಮ್ಮೊಳಗೇ ಒಂದು ನಗರವನ್ನು ಇಳಿಸಲು ಸಜ್ಜಾಗಿದ್ದಾಳೆ. ಈ ದಿನ ಅದರ ಮೊದಲ experiment. ಅಂದರೆ ವಿದ್ಯಾರ್ಥಿ ಭವನ್ ನ ಅಡುಗೆ ಕೋಣೆಯಲ್ಲಿ ದೋಸೆ ತಯಾರಾಗುವುದು ಕಾಣುವ ಹಾಗೆ ಈ ನಾಟಕ ಅಂತಿಮವಾಗಿ ರೂಪುಗೊಳ್ಳುವವರೆಗೆ ಒಂದೆರಡು ಪ್ರಯೋಗ ಪ್ರೇಕ್ಷಕರ ಎದುರೇ ಜರುಗುತ್ತದೆ. ಈ ದಿನ ಸಂಜೆ 6 ಕ್ಕೆ ಸುಚಿತ್ರಾದಲ್ಲಿ ಅದು ಬಿಚ್ಚಿಕೊಳ್ಳುತ್ತಿದೆ
ಅದಿರಲಿ ಸದಾ ಲವಲವಿಕೆಯ ಈ ಹುಡುಗಿಗೆ ಇಲ್ಲಿದೆ ಅವಧಿ ಕಟ್ಟಿಕೊಡುವ ದೋಸೆಯ ಸರಮಾಲೆ.















0 Comments