ರಂಗ ಶಂಕರ ಆಯೋಜಿಸಿರುವ “ಕಂಬಾರರೊಂದಿಗೆ ರಂಗ ಯುಗಾದಿ” ಕಾರ್ಯಕ್ರಮದಲ್ಲಿ ಹೊಸಪೇಟೆಯ ಕನ್ನಡ ಕಲಾಸಂಘದ ಕಲಾವಿದರು ಡಾ. ಚಂದ್ರಶೇಖರ ಕಂಬಾರ ಅವರ “ಚಾಳೇಶ” ನಾಟಕವನ್ನು ಪ್ರದರ್ಶಿಸಲಿದ್ದಾರೆ.
ಮಾರ್ಚ್ ೧೮ ರಂದು ನಡೆಯಲಿರುವ ರಂಗ ಯುಗಾದಿ ಕಾರ್ಯಕ್ರಮದಲ್ಲಿ ಸಂಜೆ ೭.0೦ ಕ್ಕೆ ಈ ನಾಟಕವು ಪ್ರದರ್ಶನಗೊಳ್ಳಲಿದ್ದು ಹೆಸರಾಂತ ನಿರ್ದೇಶಕ ಧನಂಜಯ ಕುಲಕರ್ಣಿ ಇದನ್ನು ವಿನ್ಯಾಸಗೊಳಿಸಿ, ನಿರ್ದೇಶಿಸಿದ್ದಾರೆ. ಜನವರಿ ತಿಂಗಳಿನಲ್ಲಿ ಮುಂಬೈ ಕರ್ನಾಟಕ ಸಂಘದವರು ಆಯೋಜಿಸಿದ್ದ ಅಖಿಲ ಭಾರತ ಕನ್ನಡ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿತಗೊಂಡ ಈ ನಾಟಕವು ಪ್ರೇಕ್ಷಕರಿಂದ, ನಿರ್ಣಾಯಕರಿಂದ ಅಪಾರ ಮೆಚ್ಚುಗೆಗಳಿಸಿ ಐದು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.
ಇದೇ ತಂಡದ ಕಲಾವಿದರು ರಂಗ ಯುಗಾದಿ ಕಾರ್ಯಕ್ರಮವನ್ನು ಕಂಬಾರರ ರಂಗ ಗೀತೆಗಳನ್ನು ಹಾಡುವುದರ ಮೂಲಕ ಆರಂಭಿಸಲಿದ್ದಾರೆ.
ನಾಟಕದ ಕುರಿತು:
ಡಾ.ಚಂದ್ರಶೇಖರ ಕಂಬಾರ ಅವರ ಅತ್ಯಂತ ಅಪರೂಪದ ಅಸಂಗತ ನಾಟಕಗಳಲ್ಲೊಂದಾದ “ಚಾಳೇಶ” ಅನೇಕ ಸಂಕೀರ್ಣ ಅಂಶಗಳನ್ನೊಳಗೊಂಡಿದೆ.
ಅವಕಾಶವಾದಿತನ ಮತ್ತು ಊಳಿಗಮಾನ್ಯ ಪದ್ಧತಿ ನಮ್ಮ ಸಂಸ್ಕೃತಿಗೆ ಹೊಸದೇನಲ್ಲ. ಅವಕಾಶ ಸಿಕ್ಕಾಗೆಲ್ಲ ಅದನ್ನು ಅತ್ಯಂತ ಸಮರ್ಥ ರೀತಿಯಲ್ಲಿ ನಾವುಗಳು ಸಾಬೀತು ಪಡಿಸುತ್ತಲೇ ಬಂದಿದ್ದೇವೆ. ಡಾ. ಚಂದ್ರಶೇಖರ್ ಕಂಬಾರರ “ಚಾಳೇಶ” ನಾಟಕದಲ್ಲಿಯೂ ಸಹ ಅವರು ಪ್ರಮುಖವಾಗಿ ಚಿತ್ರಿಸಿರುವುದು ಇವೇ ಎರಡು ಅಂಶಗಳನ್ನು. ನಾಟಕದ ವಸ್ತು ಮೇಲ್ನೋಟಕ್ಕೆ ನೋಡಲು ತುಂಬ ತಮಾಷೆಯಾಗಿ ಕಂಡರೂ, ಅದರ ಒಳಹೊಕ್ಕು ನೋಡಿದಾಗ ಅದು ಬೇರೆಯಾದ ಪದರುಗಳನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಾಟಕದ ಪ್ರಮುಖ ಪಾತ್ರಧಾರಿ ಗೋವಿಂದ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸದಾ ಹೊಸ ಸುಳ್ಳುಗಳ ಅನ್ವೇಷಣೆಯಲ್ಲಿ ತೊಡಗಿಕೊಂಡಿರುತ್ತಾನೆ.
ತನ್ನ ಸುಳ್ಳುಗಳಿಗೆ ತನ್ನ ಹೆಂಡತಿ ಕಾಶಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾನೆ. ಒಂದು ಹಂತದಲ್ಲಿ ತಮಾಷೆಗೆಂದು ಹೇಳಿದ ಸುಳ್ಳು ಶಂಕರ, ಸರಸು ಮತ್ತು ಹುಶ್ಯ ಅವರ ಅವಕಾಶವಾದಿತನಕ್ಕೆ ಕಾರಣವಾಗಿ ನಿಲ್ಲುತ್ತದೆ. ಹೆಂಡತಿಯನ್ನು ಕಳೆದುಕೊಳ್ಳುವ ಗೋವಿಂದ, ಕೊನೆಗೆ ತನ್ನ ತನವನ್ನು ರಕ್ಷಿಸಿಕೊಳ್ಳಲು ಕೈಯಲ್ಲಿ ಬೆಲ್ಟು ಹಿಡಿದು ನಿಲ್ಲುವುದು ಸಾಂಕೇತಿಕವಾಗಿ ನಮಗೆ ಊಳಿಗಮಾನ್ಯ ಪದ್ಧತಿಯ ಕುರುಹಾಗಿ ಕಾಣುತ್ತದೆ. ನಮ್ಮ ಪ್ರಸ್ತುತ ರಾಜಕಾರಣವೂ ಸಹ ಇದಕ್ಕೆ ಹೊರತಾಗಿಲ್ಲ….
ನಾಟಕ: ಚಾಳೇಶ
ರಚನೆ: ಡಾ. ಚಂದ್ರಶೇಖರ ಕಂಬಾರ
ವಿನ್ಯಾಸ, ನಿರ್ದೇಶನ: ಧನಂಜಯ ಕುಲಕರ್ಣಿ
ದಿನಾಂಕ: ೧೮-೦೩-೨೦೧೨
ಸಮಯ: ಸಂಜೆ ೭.00







0 Comments