ಕವಿ ರಮೇಶ್ ಆರೋಲಿ ಅವರಿಗೆ ನಾಡಿನ ಪ್ರತಿಷ್ಟಿತ ಪುತಿನ ಕಾವ್ಯ ಪ್ರಶಸ್ತಿ ಘೋಷಿಸಲಾಗಿದೆ

ಜುಲುಮೆ
(ಸ್ಪೇನ್ ನ ಬರ್ಸಿಲೋನದಲ್ಲಿ ಕರ್ಲೋಸ್ ಎಂಬ ಬಡ ಚಮ್ಮಾರ ತನ್ನ ವೃತ್ತಿ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ. ತನ್ನ ದೇಶದ ರಾಜಕುಮಾರನನ್ನೂ ನೋಡಿರದ ಆತ ಸುತ್ತಲಿನ ಬಡ ಕೂಲಿ-ಕಾಮರ್ಿಕರಿಗೆ ಕಡಿಮೆ ಬೆಲೆಗೆ ಚಪ್ಪಲಿ/ಬೂಟು ಮಾರಿ ಜೀವನ ಸಾಗಿಸುತ್ತಿದ್ದ.
ಇದು ತಿಳಿದ ಆ ಪ್ರಾಂತದ ಫ್ರೆಂಚ್ ದೊರೆ ಕರ್ಲೋಸ್ ಬಳಿ ಬಂದು ಬಂಗಾರದ ನಾಣ್ಯ, ರಾಜ ವೈಭೋಗದ ಆಸೆ ತೋರಿ ಆಸ್ಥಾನದ ಮುಖ್ಯ ಚಮ್ಮಾರನಾಗಲು ಕೇಳಿಕೊಳ್ಳುತ್ತಾನೆ. ಆದರೆ ಕರ್ಲೋಸ್ ಆ ಆಮಂತ್ರಣವನ್ನು ನಿರಾಕರಿಸಿ ಅಲ್ಲಿಯ ದಿನಗೂಲಿಗಳೇ ತನ್ನ ದೊರೆಗಳೆಂದು ಹೇಳುವುದರೊಂದಿಗೆ ದೊರೆಯ ವಿರೋಧ ಕಟ್ಟಿಕೊಳ್ಳುತ್ತಾನೆ.
ಮನುಷ್ಯನ ಶ್ರಮವನ್ನು ಕೊಳ್ಳಬಹುದೆ ಹೊರೆತು ಮನುಷ್ಯನನ್ನಲ್ಲ ಎಂಬ ನೀತಯುಳ್ಳ ಈ ಜನಪದ ಕತೆಯೇ ಈ ಕಾವ್ಯದ ವಸ್ತು)
ಜುಲುಮೆ
ಉತ್ತುತ್ತ ಉರಿಯಲ್ಲಿ ಊರಾಚೆ ಕೆರೆಯಲ್ಲಿ
ಉತ್ತರ ನಾಡಿನ ಗಡಿಯಲ್ಲಿ ಕಾಣಿರೊ
ಮುತ್ತಂಥ ಮೆಟ್ಟಿನ ಮಲ್ಲಯ್ಯನ
*
ಭೂಮಿ ಗುಡಿಸುವವರ ಬಾನು ಬಳಿಯುವವರ
ಪಾದ ಹಸನಾಗಿ ಇರಲೆಂದು ಮಾಡ್ಯಾನೆ
ನಾಡೊಪ್ಪೊ ಜೋಡ ಮಲ್ಲಯ್ಯ
*
ಹರಗಿದ್ದು ನೆಲವಲ್ಲ ಒರಗಿದ್ದು ತೆನೆಯಲ್ಲ
ಬಿಟ್ಟಿ ಚಾಕರಿಗೆ ಕೊನೆಯಿಲ್ಲ ಮಲಶೆಟ್ಟಿ
ನಾಯಿಚೂರಿಗೆಲ್ಲ ದೊರೆಮಲ್ಲ
*
ದೊರೆಶೆಟ್ಟಿಗೀಕೆ ಕೊನೆ ಕೂಸ ಸರಸೀಗೆ
ಕಾಲಡಿ ಆಣಿಗಾಯ ಕಾಡಿತ್ತ
*
ಸೂರ್ಯಂಗೆ ಮುಗಿದಾರೊ ಚಂದ್ರಂಗೆ ನಮಿಸ್ಯಾರೊ
ಅಷ್ಟ ದಿಕ್ಕೀಗೆ ಹುಡಿಕ್ಯಾರೊ ಕೈ ಮದ್ದು
ಕಾಣದೆ ಬರಿಗೈಲೆ ಬಂದಾರೊ
*
ಕಟ್ಟು ಕುಲಕಿಲ್ಲ ಕೆಟ್ಟು ಬಗೆಯೋದಿಲ್ಲ
ಮೆಟ್ಟು ಮಾಡೋರ ಮನೆತನಕ ನಡಿಬೇಕ
ಹುಟ್ಟುಗಾಲಿಲೆ ಗಿಳಿಯೊಂದ ಹೇಳಿತು
*
ಗುರುತು ಹೇಳಲು ಬ್ಯಾಡ ಮರೆತು ದೊರೆಗೂಸೆ
ಮದ್ದಿನ ಹೆಸರು ಮೆಟ್ಟೆಂಬುದ ಅರಿತು
ಗುಟ್ಟಾಗಿ ಪಡೆದುಕೊ ಜೋಡೊಂದ
*
ತಿಂದಿದ್ದು ಮದ್ದಲ್ಲ ಕಂಡಿದ್ದು ಕಲ್ಲಲ್ಲ
ಕಾಲು ಬ್ಯಾನಿಗೆ ನಿದಿರಿಲ್ಲ ಹಗಲಲ್ಲಿ
ಕುಂಟುತ್ತ ನಡೆದಾಳೊ ದಾರೀಲಿ
*
ಅಲೆಯುತ್ತ ನಡೆದಾಳೊ ಅಳಲು ನುಡಿದಾಳೊ
ಮಾವಿನಕೆರೆ ದಂಡೆ ತಲುಪ್ಯಾಳೊ ಮಂದಿಯ
ಮಲ್ಲಯ್ಯನ ಜೋಪಡಿ ಕೇಳ್ಯಾಳೊ
*
ಮುತ್ತಿನರಮನೆಯಲ್ಲ ಕತ್ತಿ ಹಿಡಿದವರಿಲ್ಲ
ಸುತ್ತ ಗುಡಿಸಲು ಕೊನೆಯಲ್ಲಿ ಸಿಕ್ಕೀತು
ಶಿವನು ಮೆಚ್ಚಿದ ಜೋಪಡಿ
*
ಅರಳಿ ಮರದ ನೆರಳು ಅಳತೆಗೆ ಬೆರಳು
ಅವಳಿ ಆತನ ಕೈಯಲ್ಲಿ ಚರ್ಮವು
ಚಿತ್ತಾರದುಂಗುಟ ಮೆಟ್ಟಲ್ಲಿ
*
ಕತ್ತು ಹೊರಳಲಿಲ್ಲ ಚಿತ್ತ ಕದಲಲಿಲ್ಲ
ಸುತ್ತ ಪರಪಂಚದರಿವಿಲ್ಲ ದುಡಿಮೇಲಿ
ದೂರಾಯ್ತು ದು:ಖವು ಬೆವರಲ್ಲಿ
*
ಕಾವು ಕಾಣದ ಕಾಲು ಬಿಸಿಲು ತಟ್ಟದ ಬಾಲೆ
ಸರಿಸಿಯು ಒಣಗಿದ ಬರಿ ನಾಲೆ ಕೇಳಿದಳು
ಜೋಡೊಂದ ಹಿಮ್ಮಡಿ ಉರಿಜ್ವಾಲೆ
*
ಊರೆಲ್ಲ ಅಲೆದಾಳೊ ಚಮ್ಮಾರ ಬೇಡ್ಯಾಳೊ
ಕಾದ ನೆಲವೆಲ್ಲ ಅಂಗಾರ ಬ್ಯಾಸಿಗೆ
ಸಹಿಸೋಂತ ಮೆಟ್ಟಿನ ಜೋಡೊಂದ
*
ರೆಕ್ಕೆ ಕಾಲು ಗಿಣಿಗೆ ಖಾಲಿಪಂಜರ ದಣಿಗೆ
ರೊಕ್ಕದ ಚಿಂತಿಲ್ಲ ಮಲ್ಲಯ್ಯ ಜೋಡೊಂದ
ಮಾಡಯ್ಯ ಕುದುರೆ ಚರ್ಮದಿ
*
ಹದಿಹರೆಯ ಕಾಲಿಗೆ ಕುದುರೆ ಜೋಡಾದರೆ
ಹಡೆದವ್ವರೆಲ್ಲ ಹೆದರ್ಯಾರೊ ಚಮ್ಮಾಳಿಗೆ
ಆಗದು ಕುದುರೆ ಚರ್ಮದಿ
*
ಜಿಗಿ ಜಿಗಿವ ಜಿಂಕೆ ಚರ್ಮದಿ ಮಲ್ಲಯ್ಯ
ಚೆಂದಾದ ಜೋಡೊಂದ ಆದೀತ ಬಿಂದಿಗೆ
ಬಿರಬಿರನೆ ನೀರೊತ್ತು ತಂದೇನಾ
*
ಜಿಗಿವ ಪರಿ ಕಂಡು ಊರೆಲ್ಲ ಎಲೆ ನಾರಿ
ಜೀರಿಗೆ ತಿಂದು ಉಗಿದಾರ ಮಲ್ಲಯ್ಯನ
ಜೀವಕ್ಕೆ ಕುತ್ತು ತಂದಾರ
*
ಸದ್ದಿಲ್ಲದೇನೆ ಕದ್ದು ಮೇಯುವೆ ಕಬ್ಬು
ಮದ್ದಾನೆ ಚರ್ಮ ಆದೀತ ಮಲ್ಲಯ್ಯ
ನಡೆವ ದಾರಿನೆ ಕಡಿದ್ಹಂಗ
*
ಜಂಬಾದ ನಾರಿ ನಾ ಕಟುಕನೇನಾ
ಜಂಬುರಾಯನ ಕೊಂದೇನಾ ಕುಲದೇವ
ಜಾಂಬವಂತನು ಮೆಚ್ಚಾನು
*
ಮರಳುಗಾಡಿನ್ಯಾಗ ಕರವೊಡ್ಡಿ ಬೇಡಿದರೆ
ಒಡಲ ನೀರುಯ್ಯುವ ಒಂಟೆಯ ತೊಗಲಲಿ
ಹೊಲಿದು ಕೊಡುವೇಯ ಜೋಡೊಂದ
*
ಬಾಯಾರಿ ಬಂದಾರೆ ನೀರುಣಿಸಿ ಕಳುಸೇನು
ನಿಗಿ ನಿಗಿ ಬಿಸಿಲಾಗ ನಿಂದೇನಾ ನಾರಿ
ನಡಿ ನಡಿ ಮುಂದಿನ ಕೇರಿಗೆ
*
ಕೊಟ್ಟು ಕುದಿಯಲು ಬ್ಯಾಡ ಮೆಟ್ಟಿಲ್ಲ ಎನಬ್ಯಾಡ
ಉಟ್ಟುಡುಗೆ ಒಡ್ಡಾಣ ನಿಡೇನ ಹೋಗಲಿ
ನುಣುಪಿನ ನರಿ ಚರ್ಮ ಆದೀತಾ
*
ಗುಂಡು ಹೊಡೆಯಲಾರೆ ಬಾಣ ಬಿಡಲಾರೆ
ಬಂಡೆಣ್ಣೆ ಬದುಕದು ತರವಲ್ಲ ತೆಗಿಯೆ
ಮನೆದೇವ ಹರಳಯ್ಯ ಒಪ್ಪಾನು
*
ಮಾತು ಮಾತಿಗು ಮನೆದೇವನೆಂಬ
ಓತಿಕ್ಯಾತನ ತರಲ್ಯಾಕ ತರಾವರಿ
ಮಾತಾಡಿ ಮಾಡಿದ ಕಸುಬೇನ
*
ಕುಲದೇವನೆಂಬೋನು ನೆಲದೊಡೆಯನೆಂಬುದ
ಕುಳಿತುಂಡ ಕುಲಕೆತ್ತ ತಿಳಿದೀತ ಎಲೆ ಕುಲತಿ
ಕೇಡು ಕುಲದ್ಹಾಡು ನಾಯಿ ಮೊಲೆಜೋಡು
*
ಒಡಲೆಲ್ಲ ಕೊಳಿಗೇರಿ ಒಲೆಯಲ್ಲ ಹೊಲಿಗೇರಿ
ಕರದಲ್ಲಿ ಕೆರದ ಚಾಕರಿ ಆದರು
ಕರೆದುಕೊಳ್ಳುವ ಪರಿ ಅಚ್ಚರಿ
*
ತಿಂಬೋನಲ್ಲ ಹೊಲೆಯ ಅಂಬೋನು ಅರಿಯೆ
ಅಂಬಿಗನಿಗೆ ನೀರೆತ್ತ ಹೊಲೆಯೆ ಅಂಬಾ
ಎಂದುಲಿವ ಕೂಗೆತ್ತ ಹೊಲೆಯೆ
*
ಕಾಲಾಗ ಉರಿಯೆಚ್ಚಿ ನಾಲಿಗಿ ಉರಿಯಾಗಿ
ಮರೆತಾಳು ಮದ್ದಿನ ಕರಾರು ಸರಸಿಯು
ತಾನ್ಯಾರನೆಂಬುದ ಸಾರ್ಯಾಳೊ
*
ಓಣಿ ಓಡಿ ಬಂತು ಕೇರಿ ಕೇಳುತ ನಿಂತು
ದರ್ಪದ ದೊರೆಮಗಳ ದನಿ ಕೇಳಿ ಖುದ್ದು
ಅರಮನೆ ನೆರೆದಿತ್ತು ಕೆರೆದಂಡೇಲಿ
*
ಆಳು ಮಕ್ಕಳು ಸರಿದು ಓಳಾಗಿ ನಿಂತರು
ಮಲಶೆಟ್ಟಿ ಮಗಳೆಡೆಗೆ ಬಂದಾನೊ ಗಳಿಗೆ
ಮಂದಿ ಮೌನದಿ ನಿಂತಾರು
*
ಕಣ್ಣು ಖಾರದ ಉಂಡೆ ಕಾಲು ಹೆಬ್ಬಂಡೆ
ಕೆಕ್ಕರಿಸಿ ಮಲ್ಲಯ್ಯನ ಕಂಡಾನೊ ಮಲಶೆಟ್ಟಿ
ಬಲ್ಲೆಯಾ ತಾನ್ಯಾರು ಎಂದಾನೊ
*
ದೊರೆತಾನ ದುರಾಯ್ತು ಗೌಡಿಕೆ ಗುಡಿಸೋಯ್ತು
ಬಂದಾರೆ ಮನೆತನಕ ದೊರೆತಾನು ದೊರೆಕೀತ
ದೊರೆ ದೊರೆ ತಾನೆಂಬ ದುರುಳಂಗೆ
*
ಅವಳಿ ಕೈ ಬಿಡಲಿಲ್ಲ ತೆವಳಿ ಬದುಕಲಿಲ್ಲ
ಗಟ್ಟಿಗ ಮಲ್ಲಯ್ಯ ತಂದಾನೆ ತಾನೆ
ಬಂದವನ್ಯಾರಾದರೆಂದಾನೆ
*
ದುರುದುರು ನೋಡ್ಯಾನೆ ದೊರೆ ಕತ್ತಿ ಬೀಸ್ಯಾನೆ
ಮಲ್ಲಯ್ಯ ಕುತ್ತಿಗೆ ತೆಗೆದಾನೆ ಮರುಚಣ
ಕುಸಿದ ಕೇಕೆ ಅಳಲು ಕೇಳ್ಯಾನೆ
*
ಹಗಲಲ್ಲೆ ಕತ್ತಲು ಕೆರೆಯಲ್ಲ ನೆತ್ತಾರು
ನಡುಗಿದ ಮಂದಿ ಸುತ್ತಲೂ ಕಂಡಾರು
ಹಾರಿತು ರುಂಡ ಎತ್ತಲೊ
*
ಚಿತ್ಕಾರದನಿ ಕೇಳಿ ಚೀರ್ಯಾವೊ ಅಳಿಲು
ದಿಕ್ಕು ಪಾಲಾಗಿ ಹಕ್ಕಿಯು ಹಾರಿತು
ರೆಕ್ಕೆ ನಾಯಿಯು ರುಂಡ ಒಯ್ಯಿತು
*
ಆದದ್ದು ಅರಿವಿಲ್ಲ ಕಾದಿದ್ದು ಒಳಿತಲ್ಲ
ಕತ್ತಿ ಹಿಡಿದವಗೆ ಖಬರಿಲ್ಲ ಕೂಸು
ಕಣ್ಣೆದುರೆ ಕುಸಿದಾಗ ಕಸುವಿಲ್ಲ
*
ಪಾದಾದುರು ಏರಿ ಮೊಣಕಾಲು ಮೀರಿ
ಕಾದ ಮೈಕುಲುಮೆ ಕಾವೇರಿ ಸರಸಿಗೆ
ಜಗವೊಂದು ಉರಿಚೆಂಡು ಕಣ್ಣಿಗೆ
*
ಧರೆಗೆ ದೊಡ್ಡವನೆಂಬ ದೊರೆಯೊಬ್ಬನಿಲ್ಲ
ಗರಿಕೆ ಮ್ಯಾಲಿನ ಕಿರೀಟ ಸ್ಥಿರವಲ್ಲ ದೊರೆಯೆ
ಉದುರಿ ಬೀಳುವ ಜೀವ ಉಳಿಸೀಕೊ
*
ಮಡದಿಯ ದನಿ ಕೇಳಿ ಮಡುಗಟ್ಟಿದ ಶೆಟ್ಟಿ
ಮರುಕಾದಿ ಮಗಳೆಡೆಗೆ ನೋಡ್ಯಾನೊ ಕಡೆತನಕ
ಹಿಡಿಯೇನು ಕತ್ತಿ ಎಂದಾನೊ
*
ಹಿಂದಿಲ್ಲ ಮುಂದಿಲ್ಲ ಮಲ್ಲಯ್ಯನೆಂಬುವಗೆ
ಕಲ್ಲೆದೆಯ ಮಲಶೆಟ್ಟಿ ಕೊಂದಾನೊ ನಾಡೆಲ್ಲ
ನೆತ್ತಾರು ಮಳೆಯ ತಂದಾನೊ
*
ಪಾಪದ ಮಳೆ ಸುರಿದು ಪಾದಾವು ಸರಿದು
ಕೇರಿ ಗುಡಿಸಲು ಸೇರ್ಯಾವೊ ಕಣ್ಣಾರೆ
ಹರಿದ ನೆತ್ತರು ಮಡವು ಕಂಡಾವೊ
*
ನೆತ್ತಾರು ಮಳೆಯಲ್ಲಿ ಸುತ್ತಾರು ಜನರಿಲ್ಲ
ಹೆತ್ತವರತ್ತು ಕರೆದಾರೊ ಸರಸಿಯ
ಹೊತ್ತೊಯ್ದು ಗುಡಿಸಲಲಿಟ್ಟಾರೊ
*
ಉರಿಉರಿ ಗಂಟಲು ಉರಿಯೆಚ್ಚಿ ಗಂಟಲು
ಬೊಗಸೆ ನೀರನು ಬೇಡ್ಯಾಳೊ ಕಣ್ಣಲ್ಲಿ
ನೆತ್ತಾರ ಹನಿಯ ಮೂಡ್ಯಾವೊ
*
ಆ ಮನಿ ಈ ಮನಿ ನಡುಮನಿ ಕಡೆಮನಿ
ಎಲ್ಲಾ ಮನಿ ಕೊಡಪಾನ ತಂದಾರೊ ಬಾಯ್ತೆರೆದು
ಕುಡಿ ಮಗಳೆ ನೀರ ಎಂದಾರೊ
*
ನೀರೆಲ್ಲ ರಗುತಾಯ್ತು ಕೊಡಪಾನ ಕೆಂಪಾಯ್ತು
ಹಳ್ಳ ಕೆರೆ ಬಾವಿ ಇಂಗೋಯ್ತು ತಂಬಿಗೆ
ನೀರೆಂಬುದಂತು ಮಾಯಾಯ್ತು
*
ಗಂಡ ಹೆಂಡರು ಸೇರಿ ಮುಂಡಾದ ಬಳಿ ಸಾರಿ
ಕಂಡ ದೇವರಿಗೆ ಮುಗಿದಾರೊ ಕೆರೆದಂಡೆ
ಕೊನೆಯ ಬಂಡೆಗೆ ಬಂದಾರೊ
*
ಆ ಮಾರಿ ಈ ಮಾರಿ ಊರಿಗೆ ಉಗಿ ಮಾರಿ
ಉಗಿದುಗಿದು ಅತ್ತು ಕೇಳ್ಯಾರೊ ಕೈ ಮುಗಿದು
ಉಳಿಸಿಕೊಡು ಜೀವ ಎಂದಾರೊ
*
ಉತ್ತುತ್ತ ಊರೆಲ್ಲ ಕತ್ತಾಲಾಗೊ ಹೊತ್ತು
ಮಲ್ಲಪುರಗುಡ್ಡಕ್ಕೆ ಹೋಗಿರಿ ಮಲ್ಲಯ್ಯನ
ಕಲ್ಲೆಂದ ಬಾಯಿಂದ ಹರಸಿರಿ
*
ಕಲ್ಲೆಂದ ಬಾಯಿಂದ ಮಲ್ಲಯ್ಯನ ಹರಿಸಿ
ಮುಂಡಕ್ಕೆ ಹೆಂಡತಿ ಮಾಡೀರಿ ಮಗಳ
ಗಂಡನ ಮನೆಗಿತ್ತು ನಡೆಯೀರಿ
*
ಅಂದಿದ್ದು ಅರಿವಾಯ್ತು ಕೊಂದದ್ದು ತಪ್ಪಾಯ್ತು
ಎಂದಿಗೂ ನಾ ನಿನ್ನ ಮಗನಯ್ಯಾ ತಂದೆ
ಜೀವ ಕೂಡಿಸು ನಿನ್ನಿಛ್ಚೆಯೆಂದೆ
*
ಕರವೊಡ್ಡಿ ಬೇಡಲು ಕಣಗಿಲೆ ನೀಡಲು
ಜೀವ ಪಡೆದಾವೊ ಇಡುದೇಹ ಒಡನೆ
ಗಂಧ ಸುರಿದಾವೊ ಮೋಡ ಸಮನೆ
*
ಚೌಡಿಕೆ ಹಾಡೀತು ಬುಡುಬುಡಿಕಿ ನಕ್ಕೀತು
ಹಲಗೆ ಶಬುದಕ್ಕೆ ಹಗಲಾಯ್ತು ನಾಯಿಚೂರು
ನಿನ್ನೆದಲ್ಲ ಹಳತು ಹೊಸದಾಯ್ತು
*
ರಾತ್ರಿ ಕಂಡ ರಗುತ ಬೆಳಗಾನ ನೀರಾಯ್ತು
ಹಳ್ಳ ಬೆಳ್ಳಾನೆ ಬೆಳ್ಳಕ್ಕಿ ಆಯಿತು
ಮಲ್ಲಯ್ಯನ ಪವಾಡ ಬಯಲಾಯಿತು
*
ಉತ್ತುತ್ತ ಊರಲ್ಲಿ ಕೆರೆದಂಡೆ ಮನಿಯಲ್ಲಿ
ಉತ್ತಮರ ಕುಲದಾಗೆ ಹುಟ್ಟೇನಾ ಮೆಟ್ಟಿನ
ಮಲ್ಲಯ್ಯ ಮೆಚ್ಚಿನ ಮಗನೇನಾ
___________________________________________________
ಟಿಪ್ಪಣಿ :
ನಾಯಿಚೂರು :
ಹಿಂದೊಮ್ಮೆ ದಂಡನಾಯಕನೊಬ್ಬ ಈಗಿನ ರಾಯಚೂರು ಪ್ರಾಂತ್ಯದಲ್ಲಿ ವಾಯು ವಿಹಾರಕ್ಕೆ ಬಂದಾಗ ಮೊಲವೊಂದು ನಾಯಿಯನ್ನು ಬೆನ್ನಟ್ಟಿದ ದೃಶ್ಯ ಕಂಡನಂತೆ. ಕುತೂಹಲಕ್ಕೆ ಹೊಗಿ ನೋಡಿದರೆ ಮೊಲ ನಾಯಿಯನ್ನು ಚೂರಾಗಿ ಹರಿದು ಬಿಟ್ಟಿತ್ತಂತೆ. ನಾಯಿ ಸತ್ತ ಆ ಸ್ಥಳ ಕೋಟೆ ಕಟ್ಟಲು ಸೂಕ್ತಯೆನಿಸಿ; ಕೋಟೆ ಕಟ್ಟಿಸಿ ಅದಕ್ಕೆ ನಾಯಿಚೂರು ಎಂದು ಹೆಸರಿಟ್ಟನಂತೆ.
ಉಗುಳು ಮಾರಿ ದೇವರು :
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿರುವ ಈ ದೇವರಿಗೆ ಉಗುಳುವ ಮೂಲಕ ನಮಿಸುವುದು ಇಲ್ಲಿಯ ವಿಶೇಷ.






ಅಬಿನಂದನೆಗಳು ಸರ್. ತುಂಬಾ ಮನಮುಟ್ಟುವಂತೆ ಬರೆದಿದ್ದೀರಿ
ಸಂಗೀತ