ವಿಜಯನಗರ ಬಿಂಬ (ರಿ)
ರಂಗ ಶಿಕ್ಷಣ ಕೇಂದ್ರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ
ಅರ್ಪಿಸುವ
ಶೂದ್ರಕ ಮಹಾ ಕವಿಯ ಮೃಚ್ಛಕಟಿಕಾ ನಾಟಕದ ಕನ್ನಡಾನುವಾದ
ಮಣ್ಣಿನ ಬಂಡಿ
ಅನುವಾದ : ಪ್ರೊ ಬಿ.ಚಂದ್ರಶೇಖರ್
ನಿರ್ದೇಶನ : ಡಾ ಎಸ್.ವಿ.ಕಶ್ಯಪ್
ಬುಧವಾರ ಸಂಜೆ ೭.೩೦ಕ್ಕೆ

ಪ್ರಾಚಿನ ಭಾರತದ ಮಹಾನ್ ಸಂಸ್ಕೃತ ನಾಟಕಕಾರ ಶೂದ್ರಕ ಮಹಾಕವಿ ವಿರಚಿತ ಸಂಸ್ಕೃತ ನಾಟಕ ‘ಮೃಚ್ಛಕಟಿಕ’ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ನಾಟಕಗಳಲ್ಲಿ ಒಂದು. ಪ್ರಪಂಚದ ಅನೇಕ ಭಾಷೆಗಳಿಗೆ ಅನುವಾದಗೊಂಡು ಅಸಂಖ್ಯಾತ ಪ್ರದರ್ಶನಗಳನ್ನು ಕಂಡಿದೆ, ಕಾಣುತ್ತಿದೆ. ಬಹುತೇಕ ಎಲ್ಲಾ ಭಾರತಿಯ ಭಾಷೆಗಳಲ್ಲಿ ಅನುವಾದಗೊಂಡು ವಿವಿಧ ಅವತರಣಿಕೆಗಳಲ್ಲಿ ನಾಟಕ ಹಾಗೂ ಚಲನಚಿತ್ರವಾಗಿ ಮೂಡಿಬಂದಿದೆ.
ವಿದ್ವಾಂಸರ ಅಭಿಪ್ರಾಯದಂತೆ, ಬಹುಶಃ ಕ್ರಿಸ್ತಪೂರ್ವದ ಪ್ರದ್ಯೋತ ರಾಜವಂಶಕ್ಕೆ ಸೇರಿದ ಪಾಲಕ ರಾಜನ ಕಾಲದ ಪ್ರಸಿದ್ಧ ಉಜ್ಜಯಿನಿ ನಗರದ ಜನಜೀವನವೇಈ ನಾಟಕದ ವಸ್ತು.
ಪಾಲಕ ರಾಜನ ದುರಾಡಳಿತ ಮತ್ತು ಅವನ ಭಾವಮೈದುನ ಶಕಾರನ ದಬ್ಬಾಳಿಕೆಗೆ ನೊಂದ, ಬದಲಾವಣೆಯ ನಿರೀಕ್ಷೆಯಲ್ಲಿರುವ ಜನತೆ. ದಂಗೆಯೆದ್ದಿರುವ ಗುಂಪಿನ ನಾಯಕ ಆರ್ಯಕ ಮತ್ತು ಅರಸೊತ್ತಿಗೆಯ ನಡುವಿನ ಕದನ, ಅರಾಜಕತೆ, ಮೇರೆ ಮೀರಿದ ಅಕೃತ್ಯ ನಡೆಸುವ ದುರಾಚಾರಿಗಳು ಮತ್ತು ಅವರೊಡನೆ ಶಾಮೀಲಾದ ಅಧಿಕಾರಿಗಳು. ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ವರ್ತಕ ವಂಶದ ಸದಾಚಾರ ಸಂಪನ್ನ, ಎಲ್ಲವನ್ನೂ ದಾನ ಮಾಡಿ ನಿರ್ಗತಿಕನಾಗಿರುವ ಗೃಹಸ್ಥ ಚಾರುದತ್ತನಿಗೆ,ನಗರದ ಪ್ರಸಿದ್ಧ ದೊರೆಸಾನಿ ವಸಂತ ಸೇನೆಯ ಮೇಲೆ ಒಲವು. ವಸಂತಸೇನೆಗೂ ಚಾರುದತ್ತನ ಮೇಲೆ ಪ್ರೀತಿ. ಇವರಿಬ್ಬರ ಪ್ರೀತಿಗೆ ಧೂರ್ತ ಸಂಸ್ಥಾನಕ ಶಕಾರ ಖಳನಾಯಕ. ವಸಂತಸೇನೆಗೆ ಅವನೆಂದರೆ ತಿರಸ್ಕಾರ. ವಸಂತಸೇನೆಯನ್ನು ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುವ ಶಕಾರ ಕಡೆಗೆ ಹತಾಶೆಯಿಂದ ಕೊಲೆಗೂ ಹೇಸುವುದಿಲ್ಲ. ಮುಂದಿನ ಕಥೆ ಕುತೂಹಲಕರ ಹಾಗೂ ರಂಜನೀಯ
ಅಂದಿನ ಸಮಕಾಲಿನ ಸಿದ್ಧ ಸೂತ್ರಗಳನ್ನು ಉಲ್ಲಂಘಿಸುವ ಈ ನಾಟಕ, ಅನಿರೀಕ್ಷಿತ ಘಟನಾ ಸರಣಿಗಳಿಂದ ಮತ್ತು ಪಾತ್ರ ಚಿತ್ರಣದಿಂದ ಚೆಂದವಾಗಿ ಕಾಲ,ದೇಶಗಳ ಗಡಿ ದಾಟಿ ಇಂದಿಗೂ ಪ್ರಸ್ತುತವಾಗಿ ಆಪ್ತವಾಗುತ್ತದೆ ತನ್ಮೂಲಕ ಶೂದ್ರಕನ ಕ್ರತು ಶಕ್ತಿಯನ್ನು ತೋರುತ್ತದೆ
ಈ ನಾಟಕದ ಕೆಲವು ಸಶಕ್ತ ಅನುವಾದಗಳಲ್ಲಿ ಪ್ರೊ. ಬಿ. ಸಿ.ಯವರ ‘ಮಣ್ಣಿನ ಬಂಡಿ’ ಮುಖ್ಯವಾದುದು

3ನೇ ಶತಮಾನದಲ್ಲಿ ಶೂದ್ರಕ ಮಹಾಕವಿಯಿಂದ ರಚಿತವಾಗಿರುವ ಈ ನಾಟಕ ಆಗಿನ ಮತ್ತು ಈಗಿನ ಕಾಲದ ಎಲ್ಲ ಸಿದ್ಧ ಮಾದರಿಗಳನ್ನು ಒಡೆದುಹಾಕುವ ಪ್ರಯತ್ನ ಮಾಡುತ್ತದೆ. ಶೀಲವಂತ ಗಣಿಕೆ, ಧನಿಕನಾಗುವ ಧರ್ಮಿಷ್ಟ, ಕಳ್ಳತನ ಮಾಡುವ ಬ್ರಾಹ್ಮಣ, ಪ್ರಾಮಾಣಿಕನಾದ ವಿಟ, ಅನ್ಯಾಯ ಮಾಡುವ ನ್ಯಾಯಾಧೀಶ, ಹೀಗೆ ಹಲವಾರು ಪಾತ್ರಗಳು ಕಾಣಿಸಿಕೊಂಡು, ಭಾರತೀಯ ರಂಗಭೂಮಿಯಲ್ಲಿಯೇ ಅಲ್ಲದೆ, ವಿಶ್ವರಂಗಭೂಮಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
ಮಣ್ಣಿನ ಬಂಡಿ ಮೇಲೆ ಚಿನ್ನವ ಹೇರಿ, ನ್ಯಾಯ ನೀತಿ ಮೇಲೆ ಸಿರಿಯ ಸವಾರಿ ಹೆಚ್ಚುದಿನ ನಡೆಯದು ಎಂಬ ಆಶಯ ಈ ನಾಟಕದ್ದು.
ಪ್ರೇಮಕಥೆಯ ಅಂತರಾಳದಲ್ಲಿ ಬದಲಾವಣೆಯನ್ನು ಬಯಸುವ, ಅನ್ಯಾಯದ ವಿರುದ್ಧ ಬಂಡೇಳುವ ರಾಜಕೀಯ ಕಥೆಯೂ ಹೌದು.
ಹೀಗೆ ಈ ನಾಟಕ ಕೌಟುಂಬಿಕ, ಸಾಮಾಜಿಕ, ರಾಜತಾಂತ್ರಿಕ ನೆಲೆಗಳಲ್ಲಿ ಸಂಚರಿಸಿ , ಮಣ್ಣಿನ ಬಂಡಿ ಓಡುತ್ತಾ ಪ್ರೀತಿ ಎಲ್ಲೆಡೆ ಹರಡಲಿ ಎಂದು ಆಶಿಸುತ್ತದೆ.






avadhi thandakke dhanyavadagalu.avadhi thandakku aahavana