ಮೈಸೂರಿನ ರಂಗವಲ್ಲಿ ತಂಡ ಇದೇ ಜನವರಿ 30ನೇ ಗುರುವಾರ ಸಂಜೆ 7:30ಕ್ಕೆ ಬೆಂಗಳೂರಿನ ರಂಗಶಂಕರದಲ್ಲಿ ಹೆಸರಾಂತ ಲೇಖಕರುಗಳಾದ ಎ ಕೆ ರಾಮಾನುಜನ್ ಮತ್ತು ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಕಥೆಗಳನ್ನು ಆಧರಿಸಿದ ‘ಅಣ್ಣಯ್ಯನ ಮಾನವಶಾಸ್ತ್ರ’ ಮತ್ತು ‘ಮಾಯಾಮೃಗ’ ಈ ಎರಡು ನಾಟಕಗಳನ್ನು ಪ್ರದರ್ಶಿಸುತ್ತಿದೆ. ಆ ಪ್ರದರ್ಶನದ ಆಹ್ವಾನ ಮತ್ತು ಸಂಕ್ಷಿಪ್ತ ಕಥಾ ಪರಿಚಯ ನಿಮಗಾಗಿ :
ಅಣ್ಣಯ್ಯನ ಮಾನವ ಶಾಸ್ತ್ರ

ಕನ್ನಡದ ಸಣ್ಣ ಕಥೆಗಳಲ್ಲಿ ಅತ್ಯಂತ ವಿಶಿಷ್ಟವಾದ ಸ್ಥಾನ ಪಡೆದಿರುವ ಕಥೆ ಎ. ಕೆ.ರಾಮಾನುಜನ್ ಅವರ “ಅಣ್ಣಯ್ಯನ ಮಾನವ ಶಾಸ್ತ್ರ”. ಬುದ್ಧಿ ವಿದೇಶಿಯಾಗಿ, ಮನಸ್ಸು ಸ್ವದೇಶಿಯಾಗಿ ನಿರ್ಮಿಸುವ ದ್ವಂದ್ವವನ್ನು, ಪರಂಪರಾಗತವಾಗಿ ಬಂದ ಸಂಪ್ರದಾಯದ ನೆಲೆಗಟ್ಟಿನಲ್ಲಿ ವಿಶ್ಲೇಷಿಸುತ್ತಾ ಸಾಗುತ್ತದೆ. ದೂರದ ಚಿಕಾಗೋದಲ್ಲಿ ಕುಳಿತು, ತನ್ನ ದೇಶದ ಸಂಪ್ರದಾಯದ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ಹೊರಟ ಅಣ್ಣಯ್ಯ, ತನಗರಿವಿಲ್ಲದೆ, ತನ್ನ ಬದುಕಿನ ವೈಯಕ್ತಿಕ ಬದುಕಿನ ದುರಂತಗಳಿಗೆ ಮುಖಾಮುಖಿಯಾಗುತ್ತಾನೆ. ಈ ಕಥೆ ಇಂದಿನ ಜಾಗತೀಕರಣದ ಅಮಲಿನಲ್ಲಿ ತೇಲುತ್ತಿರುವ ಮನುಷ್ಯ ತನ್ನನ್ನು ತಾನು ಹೇಗೆ ಚಿತ್ರ ವಿಚಿತ್ರ ಸನ್ನಿವೇಶಗಳಿಗೆ ಒಡ್ಡಿಕೊಳ್ಳಬೇಕಾಗುತ್ತದೆ ಎಂಬ ಪರಿಸ್ಥಿತಿಯು ಹೆಚ್ಚು ಮಹತ್ವಪೂರ್ಣವೆನಿಸುತ್ತದೆ.
ಮಾಯಾಮೃಗ
ಕನ್ನಡ ಸಾಹಿತ್ಯದಲ್ಲಿ ತನ್ನ ವಸ್ತುವಿನಿಂದಾಗಿ ಮಾತ್ರವಲ್ಲದೆ, ಅದರ ಅಭಿವ್ಯಕ್ತಿಯ ರೀತಿಯಿಂದಲೂ ವಿಶಿಷ್ಟವಾದ ಸ್ಥಾನ ಪಡೆದಿರುವ ಕಥೆ ಮಾಯಾಮೃಗ. ಸಾವಿನ ನಿಗೂಢತೆಯನ್ನು ಅಮೂರ್ತ ದೃಷ್ಟಿಕೋನದಿಂದ ನೋಡುವ ಯತ್ನ “ಮಾಯಾಮೃಗ”, ಮನುಷ್ಯನ ಮನಸ್ಸಿನ ಅಪಾರ ಸಾಧ್ಯತೆಗಳನ್ನೂ, ನಂಭಿಕೆಗಳನ್ನೂ ಚೋದ್ಯ ಮಾಡುತ್ತಲೇ ವಿಶ್ವದ ನಿಗೂಢತೆಯನ್ನು ಭೇದಿಸಲಾಗದ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ. ಮೂಢ ನಂಬಿಕೆಗಳನ್ನು ಧಿಕ್ಕರಿಸಿ ವ್ಶೆಜ್ಞಾನಿಕ ದೃಷ್ಟಿಕೋನವನ್ನು ಸಮರ್ಥಿಸಲು ಹೊರಡುವ ಷಾ ಮತ್ತು ಚಂದ್ರು, ತಮ್ಮ ದ್ವಂದ್ವಗಳಲ್ಲೇ ಹಾಸ್ಯಾಸ್ಪದ ರೀತಿಗಳಲ್ಲಿ ಸಿಲುಕಿ, ತಮಗರಿವಿಲ್ಲದೆ ತಮ್ಮದೇ ಆಟದ ದಾಳಗಳಾಗುತ್ತಾರೆ.









0 Comments