
ಸಂವರ್ತ ‘ಸಾಹಿಲ್’
ಅಖಿಲ ಕರ್ನಾಟಕ ಪ್ರಥಮ ಯುವ ಕವಿ ಸಮ್ಮೇಳನದ ಆಯೋಜಕರಲ್ಲಿ ಒಬ್ಬರಾದ ಕುಮಾರ್ ಎನ್ನುವವರಿಗೆ ತಾರೀಖು ೮ ಡಿಸೆಂಬರ್ ೨೦೧೫ ರಂದು ಬರೆದ ಪತ್ರ. ಈ ಪತ್ರವನ್ನು ಕುಮಾರ್ ಅವರಿಗೆ ರವಾನಿಸಿದ ಮರುಕ್ಷಣದಲ್ಲಿಯೇ ಸಮ್ಮೇಳನಾಧ್ಯಕ್ಷರಾದ ಆರಿಫ್ ರಾಜ ಮತ್ತು ಆಯೋಜಕರಲ್ಲಿ ಮತ್ತೊಬ್ಬರಾದ ನಟರಾಜ್ ಹುಳಿಯಾರ್ ಅವರಿಗೆ ಫಾರ್ವರ್ಡ್ ಮಾಡಲಾಗಿತ್ತು.
ಈ ಪತ್ರವನ್ನು ಕೆಲವು ಸ್ನೇಹೊತರೊಂದಿಗೆ ಹಂಚಿಕೊಂಡಿದ್ದೆ. ಈಗ ಈ ಕಾರ್ಯಕ್ರಮದ ಸುತ್ತ ಎದ್ದಿರುವ ವಿವಾದ ಈ ಪತ್ರವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವಂತೆ ಮಾಡಿದೆ.
ಧನ್ಯವಾದ.
***
ನಮಸ್ತೆ ಕುಮಾರ್ ಅವರಿಗೆ
ಆಹ್ವಾನ ಪತ್ರಿಕೆ ಕಳುಹಿಸಿದಕ್ಕಾಗಿ ಧನ್ಯವಾದ.

ರಂಗೋತ್ರಿಯ ಕೆ ಎಚ್ ಕುಮಾರ್
ಅಖಿಲ ಕರ್ನಾಟಕ ಪ್ರಥಮ ಯುವ ಕವಿ ಸಮ್ಮೇಳನ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಆದರೆ ಮೂರು ಮುಖ್ಯ ಕಾರಣಗಳಿಗಾಗಿ ನಾನು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿಲ್ಲ. ಅದನ್ನು ನಿಮಗೆ ಆದಷ್ಟು ಸ್ಪಷ್ಟವಾಗಿ ವಿವರಿಸಲು ಈ ಪತ್ರ ಬರೆಯುತ್ತಾ ಇದ್ದೇನೆ.
ಮೊದಲೆನೆಯದಾಗಿ, ಚಿತ್ರೀಕರಣದ ಸಂದರ್ಭದಲ್ಲಿ ಬೆನ್ನು ಮತ್ತು ಕಾಲಿನ ನೋವು ಉಂಟಾಗಿ ನಾನು ಈಗಷ್ಟೇ ಬೆಡ್ ರೆಸ್ಟ್ ಮುಗಿಸಿ ಮತ್ತೆ ಕಾಲ ಮೇಲೆ ನಿಂತಿದ್ದೇನೆ. ಬಸ್ ಪ್ರಯಾಣ ವೈದ್ಯಕೀಯ ಕಾರಾನಗಲಿಗಾಗಿ ನನಗೆ ನಿಷೇದಿಸಲಾಗಿದೆ.
ಎರಡನೆಯದಾಗಿ, ನೀವು ನನಗೆ ಏಳನೇ ಡಿಸೆಂಬರ್ ಅಂದು ಫೋನ್ ಮಾಡಿ ಕಾರ್ಯಕ್ರಮ ನಡೆಸುತ್ತಿರುವ ವಿಷಯ ತಿಳಿಸಿ, “ನಿಮ್ಮ ಹೆಸರನ್ನು ಆಮಂತ್ರನದಲ್ಲಿ ಹಾಕಿದ್ದೇವೆ, ನೀವು ಬರಲೇ ಬೇಕು,” ಎಂದಿರಿ. ನಾನು ತಕ್ಷಣ, “ನನಗೆ ಬರಲು ಕಷ್ಟ. ಅದು ಇಷ್ಟು ತಡವಾಗಿ ತಿಳಿಸಿದರೆ,” ಎಂದಾಗ ನೀವು “ಇಲ್ಲ ಸಾರ್ ಬರಲೇ ಬೇಕು,” ಎಂದು ಹೇಳಿದಿರಿ. ಆಗ ನಾನು ನಿಮ್ಮಲ್ಲಿ ಆಹ್ವಾನ ಪತ್ರಿಕೆಯನ್ನು ಮೇಲ್ ಮಾಡಿ ಎಂದು ನನ್ನ ಇ-ಮೇಲ್ ಐ.ಡಿ. ನಿಮಗೆ ಎಸ್.ಎಂ.ಎಸ್. ಮೂಲಕ ಕಳುಹಿಸಿದಾಗ ನೀವು ಆಹ್ವಾನ ಪತ್ರಿಕೆ ಕಳುಹಿಸಿದಿರಿ.
ನಾನು ತೀರ ಗೌರವಾರ್ಹ ಇಲ್ಲ ಪ್ರತಿಷ್ಟಿತ ವ್ಯಕ್ತಿ ಅಲ್ಲದಿದ್ದರೂ ನನ್ನು ಕೇಳದೆ ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಿ ಆ ಬಳಿಕ ನನಗೆ ಅದನ್ನು ತಿಳಿಸುವುದು ತೀರ ಅವಮಾನಕಾರಿ ಅಲ್ಲದಿದ್ದರೂ ಅನುಚಿತ ಎಂದು ನನಗೆ ತೀವ್ರವಾಗಿ ಅನ್ನಿಸುತ್ತದೆ. ನೀವು ಯಾವುದೋ ಕಾರಣಕ್ಕೆ ವ್ಯಕ್ತಿಗತ ಪರಿಚಯ ಇಲ್ಲದ ನನ್ನನ್ನು “ಇವರು ನಮ್ಮವರು” ಎಂದು ಭಾವಿಸಿದ್ದರೆ ಅದು ಸಂತೋಷದ ವಿಷಯವೇ ಆದರೆ ಆ ಕಾರಣಕ್ಕೆ ತಾವು ನನ್ನ ಲಭ್ಯತೆಯ ಕುರಿತು ವಿಚಾರಿಸದೆ ನನ್ನ ಹೆಸರನ್ನು ಆಮಂತ್ರಣದಲ್ಲಿ ಪ್ರಕಟಿಸಿ ಪರೋಕ್ಷವಾಗಿ ನನ್ನ ಮೇಲೆ ಒತ್ತಡ ಹೇರಿದರೆ ಅದು ಸ್ವೀಕರಿಸಲಾಗದ ಸಂಗತಿ.
ಇನ್ನು ಮುಖ್ಯವಾಗಿ ಮೂರನೆಯದಾಗಿ, ನಾನು ಕನ್ನಡ ಭಾಷೆಯಲ್ಲಿ ಕಾವ್ಯ ಬರೆಯುತ್ತಿರುವ ಬರಹಗಾರ ಅಲ್ಲ. ಕನ್ನಡ ಭಾಷೆಗೆ ಕೆಲವು ಕಾವ್ಯಗಳನ್ನು ಅನುವಾದ ಮಾಡಿದ್ದೇನೆ. ಬಿಟ್ಟರೆ ಖಯಾಲಿಗೆ ನಾಲ್ಕೈದು ಕನ್ನಡ ಕವಿತೆಗಳು ಬರೆದಿದ್ದೇನೆ. ಹೀಗಿರಲು ನೀವು ಆಯೋಜಿಸುತ್ತಿರುವ ಅಖಿಲ ಕರ್ನಾಟಕ ಪ್ರಥಮ ಯುವ ಕವಿ ಸಮ್ಮೇಳನದಲ್ಲಿ ಆಹ್ವಾನಿತ “ಕವಿ” ಆಗಲು ನಾನು ಖಂಡಿತವಾಗಿಯೂ ಅನರ್ಹ. ಕನ್ನಡ ಭಾಷೆಯಲ್ಲಿ ಕಾವ್ಯೋತ್ಪತ್ತಿ ಮಾಡುತ್ತಿರುವ ಹಲವಾರು ಯುವ ಕವಿಗಳು ಇರುವಾಗ ನನ್ನನ್ನು ಆಹ್ವಾನಿಸಿ ವೇದಿಕೆ ನೀಡುವುದು ಬಹಳ ನಿಷ್ಠೆಯಿಂದ ಪ್ರೀತಿಯಿಂದ ಕನ್ನಡ ಕಾವ್ಯ ಕಟ್ಟುತ್ತಿರುವ ಯುವ ಕವಿಗಳ ಬಗ್ಗೆ ತೋರಿದ ಅಸಡ್ಡೆ ಆಗಿದೆ ಎಂದು ಅನಿಸುತ್ತಿದೆ.
ಈ ಕಾರಣಗಳಿಗಾಗಿ ನಾನು ಈ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಚಿಸುತ್ತಿಲ್ಲ/ ಆಗುತ್ತಿಲ್ಲ. ನನ್ನ ‘ಕಾರಣಗಳು’ ಉಡಾಫೆಯವು ಎಂದು ನಿಮಗನ್ನಿಸಿದರೆ “ಯುವ” ಮನಸ್ಸನ್ನು ದಯಮಾಡಿ ಕ್ಷಮಿಸಿ.
ಕಾರ್ಯಕ್ರಮಕ್ಕೆ ನನ್ನ ಶುಭ ಹಾರೈಕೆಗಳು.
ಇತಿ ನಿಮ್ಮ ಪ್ರೀತಿಯ
ಸಂವರ್ತ ‘ಸಾಹಿಲ್’





ಸಾಹಿತ್ಯ ಎನ್ನುವುದು, ಕವಿ ಸಮ್ಮೇಳನ ಎನ್ನುವುದು, ನೀರಿನಂತೆ ಸಮಾಜವನ್ನು ಶುದ್ಧಗೊಳಿಸುವ ಕೆಲಸ ಮಾಡಬೇಕಾದುದು, ಇದ್ಯಾಕೆ ಹೀಗಾಗುತ್ತಿದೆ ಇಲ್ಲಿ,,,,
ಯಾಕೆ ನೀರನ್ನು ಕಲುಷಿತ ಮಾಡುತ್ತಿದ್ದಾರೆ !! 🙁 🙁
ಯಾರಿಗೂ ಸತ್ಯದ ಮೇಲೆ ಅಥವಾ ಜೊತೆಗೆ ಇರಲು ಅಗತ್ಯವಿಲ್ಲದ ಕಾರಣ