ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕೃತಿ ‘ಮೌನದಿಬ್ಬನಿ‘
‘ಋತುಗಾನ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಜಬೀವುಲ್ಲಾ ಎಂ ಅಸದ್ ಅವರು ಬರೆದ ಬೆನ್ನುಡಿ ಇಲ್ಲಿದೆ.
ಸಾಹಿತ್ಯಕ್ಕೆ ಎಲ್ಲವನ್ನು ಮರೆಸುವ ಶಕ್ತಿ ಇದೆ. ಯಾರದೋ ಕವಿತೆಯ ಸಾಲು, ಯಾರೋ ಕಟ್ಟಿ ಕೊಟ್ಟ ಕಾದಂಬರಿ ಪಾತ್ರ, ಓದಿದ ಕಥೆ ಆ ಹೊತ್ತಿಗೆ ಎದುರಲ್ಲಿರುವ ಕನ್ನಡಿಯೊಳಗಿನ ನಮ್ಮದೇ ಬಿಂಬದಂತೆ ತೋರುತ್ತದೆಯಲ್ಲ, ಎಷ್ಟು ವಿಚಿತ್ರ ಇದೆಲ್ಲಾ….!
ಹೀಗೆ… ಬರಹವನ್ನು ಧ್ಯಾನದೋಪಾದಿಯಲ್ಲಿ ಆಚರಿಸುವ ಶ್ರೀಮತಿ ವಿಜಯಲಕ್ಷ್ಮಿ ಅವರು ತಮ್ಮ ಬರವಣಿಗೆಯಲ್ಲಿ ಭಾವಕುಸುಮಗಳಂದದಿ ಹೃದಯಗಳನ್ನು ಬೆಸೆಯುವ ಮುಖಾಂತರ ನೈಜ ವಸ್ತು, ಸರಳ ಭಾಷೆ, ಸಹಜ ಅಭಿವ್ಯಕ್ತಿಯಿಂದ ಅಷ್ಟೇ ಶ್ರದ್ಧೆ ಮತ್ತು ಮುತುವರ್ಜಿಯಿಂದ ಸಾಹಿತ್ಯ ಕೃಷಿಯಲ್ಲಿ ನಿರತರಾದವರು. ಅದಕ್ಕೆ ಈಗಾಗಲೇ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಪ್ರಕಟವಾಗಿರುವ ಈವರೆಗಿನ ಅವರ ಹದಿನಾರು ಕೃತಿಗಳೇ ಸಾಕ್ಷಿ.

ಸದಾ ಹೊಸತನಕ್ಕಾಗಿ ಹಂಬಲಿಸುವ ವಿಜಯಲಕ್ಷ್ಮಿಯವರು ಪ್ರಸ್ತುತ ಕೃತಿಯಾದ “ಮೌನದಿಬ್ಬನಿ”ಯ ಮುಖೇನ ಹೃದಯಗಳ ಪಿಸುಮಾತುಗಳನ್ನು ಕೇಳಿಸಲು ಸನ್ನದ್ಧರಾಗಿದ್ದಾರೆ. ಬದುಕಿನ ಯಾವುದೋ ಅಸಂಗತ ತಿರುವಿನಲ್ಲಿ ದೂರವಾದ ಮನಸ್ಸುಗಳೆರಡು ಹಲವು ವರ್ಷಗಳ ಬಳಿಕ ಮತ್ತೆ ಸೇರಿದಾಗ ಗತಕಾಲದ ಸವಿನೆನಪ ನವಿಲೊಂದು ಅಕಾಲಿಕ ಮಳೆಗೆ ಗರಿಬಿಚ್ಚಿ ಕುಣಿದಂತೆ… ಒಂಟಿತನದ ನಿರಸ ಬದುಕಿನ ಕಿರುಬೆರಳ ಹಿಡಿದು ಒಂದಷ್ಟು ದೂರ ಹೆಗಲಿಗೆ ಹೆಗಲಾನಿಸಿ ಸುಮ್ಮನೆ ಜೊತೆಗೂಡಿ ನಡೆದಂತೆ… ನಡು ವಯಸ್ಸು ದಾಟಿದ ಗೆಳೆಯರಿರ್ವರು ಹಿಂದೆ ಜೊತೆಗೂಡಿ ಕಂಡ ಕನಸುಗಳನ್ನು ಮೆಲುಕು ಹಾಕುವ, ಬದುಕಿನ ಆಕಸ್ಮಿಕ ತಿರುವುಗಳಲ್ಲಿ ಕಳೆದುಕೊಂಡ ಪ್ರೀತಿ, ನೆಮ್ಮದಿಯನ್ನು ಮತ್ತೆ ಹುಡುಕುವ, ಮರಳಿ ಪಡೆಯುವ ಹಂಬಲದ ಪ್ರಯತ್ನದ ಹಂತದಲ್ಲಿ ಒಂದು ಲಾಂಗ್ ಡ್ರೈವ್ ನ ನೆಪದಲ್ಲಿ ಮುರಿದ ಮನಸ್ಸುಗಳನ್ನು ಮತ್ತೆ ಜೋಡಿಸುವ, ದೂರವಾಗಿದ್ದ ನೆರಳುಗಳನ್ನು ಒಂದಾಗಿಸುವ ಇರಾದೆಯಿಂದ ಕಾಲಾಂತರದಿಂದ ಮೌನವಾಗಿದ್ದ ಹೃದಯಗಳನ್ನು ಮತ್ತೆ ಮಾತಾಗಿಸುವ ಹೆಣ್ಣು-ಗಂಡುಗಳಿಬ್ಬರ “ಮೌನ ಸಂಭಾಷಣೆ” ಈ ಕೃತಿಯ ವಸ್ತುವಾದರೆ, ಇಲ್ಲಿ ಮೂಲ ದ್ರವ್ಯ ಪ್ರೇಮವಾಗಿದೆ.
ಇಬ್ಬರೂ ಮಾತೇ ಆಡದೆ ಮೌನದ ತೆರೆಯ ಹಿನ್ನೆಲೆಯಲ್ಲಿ ಹೃದಯಗಳೇ ಪಿಸುಗುಡುವ ಟೆಲಿಪತಿಯ ರೂಪದ ಆಪ್ತ ಸಂವೇದನೆ ಓದುಗರಿಗೆ ಕಾಡದಿರದು.
ಒಳಿತನ್ನು ಕೋರುತ…






0 Comments