ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೇಘನಾ ಸುಧೀಂದ್ರ ಕಂಡ ʼಇತಿ ನಿನ್ನ ಅಮೃತಾʼ‌

ಮೇಘನಾ ಸುಧೀಂದ್ರ

ಇಬ್ಬರು ಪ್ರೇಮಿಗಳು ಟೀನೇಜಿನಿಂದ ಮಧ್ಯ ವಯಸ್ಸಿನವರೆಗೂ ಯಾವ ಸಂಕೋಲೆಗಳಲ್ಲೂ ಬಂಧಿಯಾಗದೇ ಬರಿ ಪತ್ರ ಬರೆದುಕೊಂಡು ಉತ್ಕಟವಾಗಿ ಪ್ರೀತಿಸುವುದು ಈ ಜೆನರೇಷನ್ನಿಗೆ ತೀರ ನಂಬೋದಕ್ಕೆ ಸಾಧ್ಯವಾಗದ ಸ್ಥಿತಿ. ಎಲ್ಲಾ ಟಕ ಟಕ ಎಂದು ಮುಗಿದು ಹೋಗುವ ಕಾಲದಲ್ಲಿರುವ ನಮಗೆ ಇತಿ ನಿನ್ನ ಅಮೃತಾ ಬಹಳ ಯೋಚನೆಗೆ ಹಚ್ಚಿಸುವ ನಾಟಕ. ಇದನ್ನ ನಾಟಕ ಅನ್ನಬಹುದೇ ಎಂಬ ಪ್ರಶ್ನೆಯನ್ನು ಕೆಲವರು ಎತ್ತಿದ್ದರು ಆದರೆ ಇದು ಮನಸನ್ನ ಬಹಳ ಕಲಕಿದ್ದಂತೂ ನಿಜ.

ಅಮೃತಾ ಮತ್ತು ಝುಲ್ಫಿಯ ಮಾತುಕತೆಗಳು ಅವರ ಪತ್ರ ವ್ಯವಹಾರ ಅಚ್ಚುಕಟ್ಟಾಗಿ ರಂಗದ ಮೇಲೆ ಬಂದಾಗ ಆಗಾಗ ನಗು, ಆಗಾಗ ವಿಷಾದ ಮತ್ತು ಮುಗಿದಾಗ ಕಣ್ಣಲ್ಲಿ ನೀರು ಬಂದಿದಂತೂ ಸತ್ಯ. ಅಮೃತಾ is mischievous, serious , talented and very very impulsive. ಝುಲ್ಫಿ ಬಹಳ ಸೀರಿಯಸ್ ಮತ್ತು ಅಪ್ಪನ ಮಾತಿಗೆ ಹೆದರಿಕೊಳ್ಳುವವ. ಇಂತಹ ವೈರುಧ್ಯಗಳಿರುವ ಬಾಲ್ಯದ ಗೆಳೆಯರ ಪತ್ರದ ವ್ಯವಹಾರ ಒಂದು ಉತ್ಕಟ ಪ್ರೇಮದ ಸ್ಠಿತಿ ತಲುಪಿದ್ದು ಕಡೆಗೆ ಅದು ಒಬ್ಬರಿಗೆ ತಂದೊಡ್ಡುವ ನೋವು ಬಹಳ ಚೆನ್ನಾಗಿ ಮೂಡಿ ಬಂದಿದೆ.

ಬರಿ ಪತ್ರ ಮುಖೇನ ನಡೆಯುವ ಈ ಲವ್ ಅದೆಷ್ಟು ಪ್ಯೂರ್ ಆಗಿತ್ತು ಎಂಬುದೇ ಆಶ್ಚರ್ಯ ಪಡುವಂಥದ್ದು. ‘ನಾಳೆ ಲಕ್ನೋದಲ್ಲಿ ಭೇಟಿಯಾಗುತ್ತೇನೆ’ ಎಂದರೆ ನಾಳೆಯ ಸಮಯ ಗೊತ್ತಿರುವುದಿಲ್ಲ ಆ ದಿನ ಪೂರ್ತಿ ಕಾಯುವುದು, ಸಂಧಿಸುವುದು ಇವೆಲ್ಲಾ ಊಹೆಗೂ ಮೀರಿದ್ದು. ‘ಯೂ ಆರ್ 10 ಮಿನಿಟ್ಸ್ ಲೇಟ್’ ಎಂದು ಹೇಳುವ ಓವರ್ ಪಂಕ್ಚುಯಲ್ ಲವರ್ಸಿಗೆ ಇದು ಸ್ವಲ್ಪ ಹುಬ್ಬೇರಿಸುವ ಸನ್ನಿವೇಶ.

ಇಬ್ಬರು ಪ್ರೇಮಿಗಳ ನಡುವೆ ಇರಬೇಕಾದ್ದದ್ದು ಹಾನೆಸ್ಟಿ. ತಪ್ಪು ಮಾಡಿದಾಗಲೂ, ಸರಿ ಮಾಡಿದಾಗಲೂ, ಜೀವನದ ಬೇರೆ ಬೇರೆ ಹಂತಗಳಿಗೆ ಹೋದಾಗಲೂ ಅದು ಬೇಡುವುದು ಅದನ್ನೇ. ಅಮೃತಾ ಮತ್ತು ಝುಲ್ಫಿ ಅಷ್ಟು ಟ್ರಾನ್ಸ್ಪರೆಂಟ್ ಆಗಿದ್ದರು. ಅವಳಿಗೆ ಮತ್ತೊಬ್ಬ ಹುಡುಗನ ಮೇಲೆ ಪ್ರೀತಿಯಾಗಿದ್ದು, ಅವನಿಗೆ ಮದುವೆ ಆಗಿದ್ದು, ಅವಳು ಡಿಪ್ರೆಷನ್ನಿಗೆ ಹೋದ್ದದ್ದು, ಇವನು ದೊಡ್ಡ ಸಾಹೇಬ ಆದ್ದದ್ದು ಎಲ್ಲಾ ಖುಲ್ಲಂಖುಲ್ಲಾ.

ಪ್ರೇಮಕ್ಕೆ ಇಷ್ಟು ಹಾನೆಸ್ಟಿ ಇದ್ದಿದ್ದಕ್ಕೆ ಅದು ಟೀನೇಜನ್ನು, ಮಿಡಲ್ ಏಜನ್ನು ದಾಟಿದ್ದು. ಅರುಂಧತಿ ನಾಗ್ ಅವರ ಅಭಿನಯ ಬಹಳ ಚೆನ್ನಾಗಿದೆ. ಅವರು ರಂಗದ ಮೇಲೆ 15 ವರ್ಷದ ಹುಡುಗಿಯಾಗುತ್ತಾರೆ, 25 ವರ್ಷದ ಇಂಪಲ್ಸೀವ್ ಚರಸ್ ಸೇದುವ ಬೆಡಗಿಯಾಗುತ್ತಾರೆ ಮತ್ತು ಡಿಪ್ರೆಸ್ಡ್ ಮಿಡಲ್ ಏಜ್ ವುಮೆನ್ ಆಗುತ್ತಾರೆ.

ಎಲ್ಲವೂ ಧ್ವನಿಯ ಬದಲಾವಣೆ ಮತ್ತು ಪತ್ರ ಓದುವ ರೀತಿಯಿಂದ. ತುಂಬಾ ದಿವಸಗಳ ನಂತರ ಒಂದು ಪಾತ್ರ ಮತ್ತು ಅದರ ಮಾತುಗಳು ನನ್ನನ್ನು ಕಾಡಿದ್ದು. ಈ ನಾಟಕದ ಬಗ್ಗೆ ಹೇಳಿದ್ದು ವಿಕಾಸ್ ಸರ್, ಟಿಕೆಟ್ ಮುಗಿದು ಹೋಗಿ ಪೇಚಾಡಿಕೊಳ್ಳುವಾಗ ಬಚಾವ್ ಮಾಡಿದ್ದು ಜೋಗಿ ಸರ್, ಕೇರ ಸರ್, ಪ್ರಿಯಾ ಮತ್ತು ಸುಶಾಂತನ ಜೊತೆ ನಾಟಕ ನೋಡಿ ಕಣ್ತುಂಬಿ ಬಂತು. ಅಮೃತಾಳ ಹಾಗೆ ಲವರ್ ಎಲ್ಲರಿಗೂ ಸಿಗಲಿ ಎಂದೇ ಆಶಿಸುತ್ತೇನೆ.

ಇಷ್ಟವಾದ ಸಾಲುಗಳು
1) ಡಾಕ್ಟರ್ ಮತ್ತು ವಕೀಲ ಈ ಇಬ್ಬರೂ ನನಗೆ ಸೇರುವದಿಲ್ಲ. ಏಕೆಂದರೆ ಇಬ್ಬರೂ ಮನುಷ್ಯನ ಅಸಹಾಯಕತೆಯನ್ನೇ ತಮ್ಮ ವೃತ್ತಿಯ ಬಂಡವಾಳವಾಗಿಸಿಕೊಂಡಿರ್ತಾರೆ..
2) ಯಾರು ಎಷ್ಟೇ ದೂರ ಹೋದ್ರೂ.. ಹಿಂದಿನ ದಿನಗಳನ್ನ ಹಿಂದಕ್ಕೆ ಬಿಡುವಷ್ಟು ದೂರ ಹೋಗಲಾರರು..
3) ಕಂಪಿಸುವ ಕೈಗಳು ಏನನ್ನೂ ಹಿಡಿದುಕೊಳ್ಳಲಾಗದು

ನಾಟಕ : ಇತಿ ನಿನ್ನ ಅಮೃತಾ
ರಚನೆ : ಜಯಂತ್ ಕಾಯ್ಕಿಣಿ
ನಿರ್ದೇಶನ : ಎಮ್ ಎಸ್ ಸತ್ಯು
ಪಾತ್ರಧಾರಿಗಳು : ಅರುಂಧತಿ ನಾಗ್, ಶ್ರೀನಿವಾಸ್ ಪ್ರಭು

‍ಲೇಖಕರು Avadhi

2 February, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading