ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಖಪುಟದ ಹಿಂದಿನ ಸರ್ಕಸ್

ಒಂದು ಮುಖಪುಟ ನೋಡಿದಾಗ ಆಹಾ! ಎನಿಸುತ್ತದೆ. ಆದರೆ ಆ ಮುಖಪುಟದ ಹಿಂದೆ ಎಷ್ಟೆಲ್ಲಾ ಸರ್ಕಸ್ ನಡೆಯುತ್ತದೆ ಎಂಬುದು ಎಷ್ಟೋ ಬಾರಿ ಗೊತ್ತೇ ಆಗುವುದಿಲ್ಲ. ಹಾಗಾಗಿ ನಮ್ಮೆಲ್ಲರ ಪ್ರೀತಿಯ ಮಣಿಕಾಂತ್ ಪುಸ್ತಕದ ಮುಖಪುಟ ರೂಪುಗೊಂಡ ಕಥೆ ಇಲ್ಲಿದೆ. ಛಾಯಾಗ್ರಾಹಕ ಡಿ ಜಿ ಮಲ್ಲಿಕಾರ್ಜುನ್ ಆ ಸಾಹಸ ಬಣ್ಣಿಸಿದ್ದಾರೆ.
-ಮಲ್ಲಿಕಾರ್ಜುನ.ಡಿ.ಜಿ.
ಮಲ್ಲಿ ಕಣ್ಣಲ್ಲಿ

“ಡಿಯರ್ ಮಲ್ಲಿಕ್, ನನ್ನ ಪುಸ್ತಕ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಕವರ್ ಪೇಜಿಗೆ ಫೋಟೋ ಕಳಿಸಿಕೊಡಿ” ಎಂದು ಮಣಿಕಾಂತ್ ಮೆಸೇಜ್ ಮಾಡಿದ್ದರು. ನನ್ನ ಸಂಗ್ರಹದಲ್ಲಿದ್ದ ಒಂದು ಫೋಟೋ ಇಮೇಲ್ ಮಾಡಿದೆ.
m1
 
 
 
 
 
 
 
 
ತಕ್ಷಣ ಮಣಿಕಾಂತ್, “ಇದು ಬೇಡ. ತಾಯಿ ಮಗು ಇರುವ ಚಿತ್ರ ಬೇಕು. ಸಾಧ್ಯವಾದರೆ ತೆಗೆದು ಕಳಿಸಿ” ಎಂದು ಮೆಸೇಜ್ ಮಾಡಿದರು.
ಏನು ಮಾಡುವುದೆಂದು ಅಂಗಡಿಯಲ್ಲಿ ಕುಳಿತು ಯೋಚಿಸುತ್ತಿದ್ದಾಗ ಗೆಳೆಯ ವೆಂಕಟರಮಣ ಬಂದ. ನನ್ನ ತಲೆಯಲ್ಲಿದ್ದ ಹುಳು ತೆಗೆದು ಅವನ ತಲೆಯಲ್ಲಿ ಬಿಟ್ಟೆ. ಅವನು ಒಂದು ಉಪಾಯ ಹೇಳಿದ. ಅವರ ಮನೆ ಅಕ್ಕಪಕ್ಕದವರೆಲ್ಲ ಬಹಳ ಆತ್ಮೀಯರು. ಭಾನುವಾರದಂದು ಎಲ್ಲರೂ ಟೇರೇಸ್ ಮೇಲೆ ಸೇರುತ್ತಾರೆ. ಮೂರೂ ಮನೆಯ ಮಕ್ಕಳಿಗೆಲ್ಲ ಕೈತುತ್ತಿನ ಊಟ.
“ಭಾನುವಾರ ರಾತ್ರಿ ಬನ್ನಿ. ನಿಮಗೆ ಯಾವ ತಾಯಿ ಮಗು ಇಷ್ಟವಾದರೆ ಅವರ ಫೋಟೋ ತೆಗೀರಿ. ಜೊತೆಯಲ್ಲಿ ಆಕಾಶದಲ್ಲಿರುವ ಚಂದ್ರನೂ ಫೋಟೋದಲ್ಲಿ ಬೀಳಲಿ. ಚೆನ್ನಾಗಿರುತ್ತೆ” ಎಂದು ಹೇಳಿದ. ಫೋಟೋ ತೆಗೆದು ಮಾಣಿಕಾಂತ್ ಗೆ ಕಳಿಸಿದೆ.
m2
 
 
 
 
 
 
 
 
 
 
“ಇದಲ್ಲ ಮಲ್ಲಿಕ್. ನನ್ನ ಲೇಖನದಲ್ಲಿ ಬರೋದು ಗಂಡುಮಗು. ಆ ಲೇಖನ ನನ್ನ ಬ್ಲಾಗಲ್ಲಿದೆ, ಓದಿ” ಎಂಬ ಮೆಸೇಜ್ ಬಂತು.
ಇದೇ ಗುಂಗಿನಲ್ಲಿದ್ದಾಗ ಒಮ್ಮೆ ಗೆಳೆಯ ನಾಗಭೂಷಣ್ ಹೆಂಡತಿ ಮಗನೊಂದಿಗೆ ಮಾತ್ರೆ ಕೊಳ್ಳಲು ನನ್ನ ಅಂಗಡಿಗೆ ಬಂದರು. ಅವರಿರುವುದು ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ. ಅವರು ವರದನಾಯಕನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು. ಅವರ ಪತ್ನಿ ವೀರಾಪುರ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ. ಅವರ ಮಗ ಐದು ವರ್ಷದ ಮಧುಸೂದನ್. ಅವರನ್ನು ನೋಡುತ್ತಿದ್ದಂತೆಯೇ ನನ್ನ ಕಲ್ಪನೆ ಗರಿಗೆದರಿತು.
ನಾಗಭೂಷಣ್ ಗೆ ಸೂಕ್ಷ್ಮವಾಗಿ ವಿಷಯ ತಿಳಿಸಿದೆ. ಅವರು ಸಮ್ಮತಿ ಸೂಚಿಸಿದರು. “ನಿಮ್ಮ ಮನೆಯವರಿಗೆ ಮತ್ತು ಮಗನಿಗೆ ಹೇಳಬೇಡಿ. ಹೇಳಿದರೆ ಫೋಟೋಗಾಗಿ ಡ್ರೆಸ್ ಮಾಡಿಕೊಂಡು ಪೋಸ್ ಕೊಡಲು ಶುರುಮಾಡಿದರೆ ಆಗ ನೈಜತೆಯಿರುವುದಿಲ್ಲ” ಎಂದು ಹೇಳಿದೆ.
ಒಂದು ಭಾನುವಾರ(ಅವರಿಬ್ಬರಿಗೂ ರಜವೆಂದು) ಬೆಳೆಗ್ಗೆ ಅವರ ಮನೆಗೆ ಹೋದೆ. ಅವರ ಮನೆಯಲ್ಲಿ ದೋಸೆ ಮಾಡಿದ್ದರು. ನಾನೂ ತಿಂದೆ. ನಾಗಭೂಷಣ್ ರ ಪತ್ನಿ ಮಗನಿಗೆ ತಿನ್ನಿಸುವಾಗ ಫೋಟೋ ತೆಗೆದೆ. ಅಮ್ಮನನ್ನು ಕೂಸುಮರಿ ರೀತಿ ಹಿಡಿದಿದ್ದ. ಆ ಫೋಟೋ ಮಣಿಕಾಂತ್ ಗೆ ಕಳಿಸಿದೆ.
m31
 
 
 
 
 
 
 
 
 
 
“ಚೆನ್ನಾಗಿದೆ ಮಲ್ಲಿಕ್. ಇನ್ನೂ ಸ್ವಲ್ಪ ಇಂಪ್ರೂವ್ ಮಾಡೋಕಾಗುತ್ತ ನೋಡಿ. ಯಾರು ನೋಡಿದರೂ ತಮ್ಮ ತಾಯಿ ತಿನ್ನಿಸಿದ್ದು ನೆನಪಾಗಬೇಕು. ತಾಯಿಯ ಮುಖವೂ ಸ್ವಲ್ಪ ಕಾಣುವಂತಿರಲಿ. ಭಾವನೆಗಳು ಮುಖ್ಯ” ಎಂಬ ಮೆಸೇಜ್ ಬಂತು.
ಈಗೇನು ಮಾಡುವುದು? ಸ್ವಲ್ಪ ದಿನ ಸುಮ್ಮನಾದೆ. ಪುನಃ ನಾಗಭೂಷಣ್ ಸಿಕ್ಕಾಗ ಹೇಳಿದೆ,
“ಇನ್ನೊಂದೇ ಒಂದು ಬಾರಿ ಫೋಟೋ ತೆಗೆಯುವೆ. ಬೇಜಾರು ಮಾಡಿಕೊಳ್ಳಬೇಡಿ” ಎಂದು. “ಪರವಾಗಿಲ್ಲ, ಮೊಹರಂ ಹಬ್ಬದ ದಿನ ರಜ ಇದೆ. ಮದ್ಯಾಹ್ನ ಬಂದುಬಿಡಿ” ಅಂದರು.ಹನುಮಂತಪುರಕ್ಕೆ ಹೋದೆ. ನಾನು ಹೋಗುತ್ತಿದ್ದಂತೆಯೆ, “ಬೇಗ ಬನ್ನಿ. ಹಿತ್ತಲಲ್ಲಿ ನಮ್ಮವರು ಮಧುಗೆ ತಿನ್ನಿಸುತ್ತಿದ್ದಾರೆ. ಫೋಟೋ ತಕ್ಕೋಳ್ಳಿ” ಎಂದರು ನಾಗಭೂಷಣ್. ಆ ದೃಶ್ಯ ನೋಡುತ್ತಿದ್ದಂತೆ ನನಗೆ ನನ್ನ ಬಾಲ್ಯ ನೆನಪಿಗೆ ಬಂತು. ಚಕಚಕನೆ ಕ್ಲಿಕ್ಕಿಸಿದೆ. ಅಷ್ಟರಲ್ಲಿ ಅವರದೂ ತಿನ್ನಿಸಿದ್ದು ಮುಗಿದಿತ್ತು. “ಚೆನ್ನಾಗಿ ಬಂತಾ? ಇನ್ನೊಮ್ಮೆ ತೆಗೀತೀರಾ? ಮತ್ತೆ ತಿನ್ನಿಸಲು ಹೇಳಲಾ?” ಅಂದರು ನಾಗಭೂಷಣ್. “ನಂಗೆ ಸಾಕು” ಎನ್ನುತ್ತಾ ಮಧು ಆಡಲು ಓಡಿದ. ಹಿಡಿಯಲು ಹೋದ ನಾಗಭೂಷಣ್ ಗೆ “ಬಿಟ್ಬಿಡಿ ಸರ್. ಬಲವಂತ ಮಾಡುವುದು ಬೇಡ. ಅದು ಚೆನ್ನಾಗೂ ಬರಲ್ಲ” ಎಂದು ಹೇಳಿ ಅವರ ಮನೇಲಿ ಪೊಂಗಲ್ ತಿಂದು ಬಂದೆ.
m4
 
 
 
 
 
 
 
 
 
 
ಮಣಿಕಾಂತ್ ಗೆ ತೆಗೆದಿದ್ದ ಫೋಟೋಗಳನ್ನು ಸಿಡಿಯಲ್ಲಿ ಹಾಕಿ ಕೊರಿಯರ್ ಮಾಡಿದೆ.
“ಅದ್ಭುತವಾಗಿದೆ ಮಲ್ಲಿಕ್. ನನ್ನ ಮನಸ್ಸಿನಲ್ಲಿದ್ದ ಕಲ್ಪನೆಗೆ ತಕ್ಕಂತೆ ಫೋಟೋ ಕಳಿಸಿದ್ದೀರಿ” ಎಂದು ಮಣಿಕಾಂತ್ ರಿಂದ ಸರ್ಟಿಫಿಕೇಟ್ ಬಂತು. ನನಗೆ ದೊಡ್ಡ ಪರೀಕ್ಷೆ ಪಾಸಾದಂತಾಗಿತ್ತು.
m51
ಮಣಿಕಾಂತ್ ಗೆ ಶುಭಹಾರೈಕೆಗಳು.

‍ಲೇಖಕರು avadhi

20 April, 2009

5 Comments

  1. nagathihalliramesh

    chitra kandaaga avvana kai tutta nenapu
    mymanavaraliside

  2. srputtur

    ಕಲೆ ಮ್ಯಾಜಿಕ್ ಅಲ್ಲ.ಎಲ್ಲ ಮುಖಪುಟಗಳ ಹಿಂದೆ ಇಂತಹ ಕತೆ ಇದ್ದೇ ಇರುತ್ತದೆ.

  3. ಕಂಡಕ್ಟರ್ ಕಟ್ಟಿಮನಿ 45E

    ಮುಖಪುಟ ಮಣಿಕಾಂತ್ ಅಧ್ಬುತ ಬರಹಕ್ಕೆ ಸೂಕ್ತಹೊಂದಿಕೆಯಾಗಿದೆ…
    ಕಂಡಕ್ಟರ್ ಕಟ್ಟಿಮನಿ 45E

  4. srujan

    amma nenapige bandlu..
    mane kuda haage ide.
    malli neenu great nijavaglu.
    srujan

  5. ಹಾಲ್ಸ್, ಹುಬ್ಬಳ್ಳಿ...

    ನಿಮ್ಮ ಶ್ರಮ ಮುಖಪುಟಕ್ಕೆ ಮೆರಗು ತಂದಿದೆ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading