ಚಳಿಯ ರಾತ್ರಿ-‘ಥರ ಥರ’
-ವಿನಾಯಕ ರಾಮ್ ಕಲಗಾರು
ನಟ ಗಣೇಶ್ ನಡೆದರೂ ಸುದ್ದಿಯಾಗುತ್ತೆ. ಸುಮ್ಮನಿದ್ದರೂ ಫ್ಲ್ಯಾಷ್ ನ್ಯೂಸ್ ಆಗುತ್ತದೆ. ಆದರೆ ಆತ ಅಂದು ಚಳಿಗಾಳಿಗೆ ಸಿಕ್ಕಿ ಪಟ್ಟಪಾಡು ಅಷ್ಟಿಷ್ಟಲ್ಲ. ಆದರೆ ಅದು ಇಂದು ಸುದ್ದಿಯಾಗಿದೆ. ಏಕೆಂದರೆ ಗಣೇಶ್ ಇಂದು ಗೋಲ್ಡನ್ ಸ್ಟಾರ್ ಅದೇನೆಂಬುದು ಇಲ್ಲಿದೆ.
ಬಿಸಿಬಿಸಿ ಬೋಂಡ ತಿನ್ನುತ್ತಾ, ಕಾಫಿ ಕುಡಿಯುತ್ತಾ, ಎರಡೆರಡು ಹೊದಿಕೆ ಹೊದ್ದುಕೊಂಡು ಬೆಚ್ಚಗೆ ಮನೆಯಲ್ಲಿ ಕುಳಿತು ಚಳಿ ಚೆಂದ ಎನ್ನುವುದೇನೋ ಸರಿ. ಆದರೆ ಒಂದಲ್ಲ ಒಂದು ಬಾರಿ ಕೊರೆವ ಚಳಿಗೆ ನಿರಾಯುಧರಾಗಿ ಸಿಕ್ಕು ಒದ್ದಾಡಿರುತ್ತೇವೆ ಅಲ್ಲವೇ? ಅಂಥ ಅನುಭವ ಹೇಳಿ ಎಂದು ಕೇಳಿದಾಗ ನಟ ಗಣೇಶ್ ನಮ್ಮ ಈ ‘ಚಳಿಗಾಲದ ಅಧಿವೇಶನ’ದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಚಳಿ ಹುಡುಗಾಟವಲ್ಲ!

ಅವು ಕಾಮಿಡಿ ಟೈಮ್ ದಿನಗಳು. ಅಂದು ಚುಮುಚುಮು ಚಳಿ. ಎದೆಯಲ್ಲಿ ಐಸ್ ಇಟ್ಟ ಅನುಭವ ನೀಡುವ ಚಿಲ್ಡ್ ಗಾಳಿ. ತೆಳಗಿನ ಟೀ ಶಟರ್್, ಪ್ಯಾಂಟ್ನಲ್ಲಿದ್ದೆ. ಕೈ ಥರಥರ ನಡುಗುತ್ತಿತ್ತು. ಗುಟ್ಟಳ್ಳಿ ಸಮೀಪದ ಬಸವನಗುಡಿ ರಸ್ತೆಯಲ್ಲಿ 60 ಕಿ.ಮೀ. ವೇಗದಲ್ಲಿ ಬೈಕ್ ಓಡುತ್ತಿತ್ತು. ಭಾನುವಾರವಾದ್ದರಿಂದ ಇಡೀ ಬೆಂಗಳೂರು ನಿದ್ರಾವಸ್ಥೆ ತಲುಪಿತ್ತು. ರಸ್ತೆ ಖಾಲಿ ಖಾಲಿ. ಅಲ್ಲಲ್ಲಿ ಶ್ವಾನದೇವ ತನ್ನ ಖಯಾಲಿ ಶುರುಮಾಡಿದ್ದ. ಕೈ ನಡುಕ ಹೆಚ್ಚಾಯಿತು. ಎದೆಬಡಿತ ಅದಕ್ಕೆ ಸರಿಯಾಗಿ ತಾಳ ಹಾಕಿತ್ತು.
ಬೈಕ್ ಇದ್ದಕ್ಕಿದ್ದಂತೆ ಧಸಕ್ ಅಂತ ನಿಂತಿತು. ಏನೋ ನೆನಪಾಗಿ, ಆ ಚಳಿಯಲ್ಲೂ ಹಣೆ ಒಮ್ಮೆ ಬಿಸಿಯಾಯಿತು. ಬೆವರಿನ ಹನಿ ಬೆನ್ನ ಒದ್ದೆ ಮಾಡಿತು. ಪಕ್ಕದ ರೂಮಿನ ಗೆಳೆಯ ನಾಗಶೇಖರ (ಅರಮನೆ ನಿದರ್ೇಶಕ) ಹಿಂದಿನ ದಿನ ಬೈಕ್ ಒಯ್ದಿದ್ದ. 2ಲೀ. ಪೆಟ್ರೋಲ್ನಲ್ಲಿ ಒಂದೂವರೆ ಖಾಲಿ ಮಾಡಿದ್ದ.
ಏನು ಮಾಡಬೇಕು ಎಂದೇ ತೋಚಲಿಲ್ಲ. ನಾಯಿಗಳು ತಮ್ಮ ಪಾಡಿಗೆ ತಾವು ರಾಗ ಎಳೆಯುತ್ತಿದ್ದವು. ಇದೆಯಲ್ಲಾ ನಟರಾಜ ಸವರ್ಿಸ್…ತಳ್ಳು ಶಿವಾ ತಳ್ಳು… ಮನೆ ಬರಲು ಇನ್ನೂ 1 ಕಿ.ಮೀ. ಇತ್ತು. ಚಳಿ ಮಹಾರಾಜ ನನ್ನ ಅಸಹಾಯಕತೆ ನೋಡಿ, ಹೀಯಾಲಿಸುತ್ತಿದ್ದ. ಹೇಗೋ ಗಾಡಿ ದೂಡಿಕೊಂಡು ಅಂತೂ ಇಂತು ಮನೆ ತಲುಪಿದೆ. ಮನೆಯಲ್ಲಿ ನನ್ನನ್ನು ಬಿಟ್ಟರೆ ಮತ್ಯಾರೂ ಇರಲಿಲ್ಲ. ಅಪ್ಪ ಅಮ್ಮ ದೂರದ ನೆಲಮಂಗಲ ಸಮೀಪದ ಹಳ್ಳಿಯಲ್ಲಿದ್ದರು.
ಉಸ್ಸಪ್ಪಾ ಎಂದು ನಿಟ್ಟುಸಿರು ಬಿಟ್ಟು, ಪ್ಯಾಂಟ್ ಜೇಬಿಗೆ ಕೈ ಹಾಕಿದೆ. ಆದರೆ ಅಲ್ಲಿ ಕೀಲಿ ಕೈ ಇರಲಿಲ್ಲ. ಈ ಮಧ್ಯೆ ಮೈ ತನ್ನ ಪಾಡಿಗೆ ತಾನು ಮುಲುಮುಲು ಎನ್ನುತ್ತಿತ್ತು. ಮತ್ತೊಮ್ಮೆ ಎಲ್ಲಾ ಕಿಸೆಗಳನ್ನೂ ತಡಕಾಡಿದೆ. ಏನಾಗಿರಬಹುದು ಎಂದು ಯೋಚಿಸುವಷ್ಟರಲ್ಲಿ ಐದು ನಿಮಿಷದ ಹಿಂದೆ ನಡೆದಿದ್ದು ನೆನಪಿಗೆ ಬಂತು… ಬೈಕ್ ದೂಡಿಕೊಂಡು ಬರುವಾಗ ಚಳಿಗಾಳಿ ಕಿವಿಗೆ ಅಪ್ಪಳಿಸುತ್ತಿತ್ತು. ಜೇಬಿನಲ್ಲಿದ್ದ ಕಚರ್ಿಫ್ ತೆಗೆದು, ಕಿವಿ ಸಮೇತ ತಲೆಗೆ ಸುತ್ತಿಕೊಂಡೆ. ರಸ್ತೆಯಲ್ಲಿ ಏನೋ ಬಿದ್ದ ಸಪ್ಪಳ ಕೇಳಿಸಿತ್ತು. ಚಳಿಯ ಹೊಡೆತಕ್ಕೆ ಹೈರಾಣಾಗಿದ್ದ ನಾನು ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ….. ನೆನಪಾಗಿದ್ದೇ ತಡ, ಮತ್ತೆ ರಸ್ತೆಗಿಳಿದು ಕೊನೆಗೂ ಕೀಲಿ ಕೈ ಹುಡುಕಿ ತಂದೆ. ಹಿಂದಿರುಗುವಾಗ ಸಾಲುಗಟ್ಟಿ ನಿಂತಿದ್ದ ರಸ್ತೆ ದೀಪಗಳಿಗೆ ಥ್ಯಾಂಕ್ಸ್ ಹೇಳಿದೆ. ಮರುದಿನ ಎದ್ದು ಮುಖ ತೊಳೆಯಲೂ ಶಕ್ತಿ ಇರಲಿಲ್ಲ. ಬೆಳಗಾಗುವಷ್ಟರಲ್ಲಿ ಚಳಿಜ್ವರ ಆವರಿಸಿಬಿಟ್ಟಿತ್ತು….!
ಮುಂಗಾರುಮಳೆಯನ್ನಾದರೂ ಸಹಿಸಿಕೊಳ್ಳಬಹುದು. ಈ ಚಳಿಯ ಜತೆ ಮಾತ್ರ ಚೆಲ್ಲಾಟ, ಹುಡುಗಾಟ ಆಡುವುದು ಕಷ್ಟ!





0 Comments